ಗೊಂಬೆಗಳ ಲವ್’ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ಗೊಂಬೆ ನಟಿ ಪಾವನಾ. ಕನ್ನಡ ಚಿತ್ರರಂಗದಲ್ಲಿ ಕಳೆದ ಹತ್ತು ವರ್ಷಗಳಿಂದ ಸಕ್ರಿಯರಾಗಿರುವ ಪಾವನಾ ಸದ್ಯ ಸಾಲು ಸಾಲು ಚಿತ್ರ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ “ಗೌಳಿ’ ಚಿತ್ರದ ಮೂಲಕ ಭಿನ್ನವಾಗಿ ತೆರೆ ಮೇಲೆ ಬಂದ ಪಾವನಾ ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಸ ಪಾತ್ರಗಳ ಮೂಲಕ ಬರಲು ಸಜ್ಜಾಗಿದ್ದಾರೆ.
ಹತ್ತು ವರ್ಷದ ಸಿನಿ ಜರ್ನಿ ಬಗ್ಗೆ ಹೇಳಿ?
ಹತ್ತು ವರ್ಷದ ನನ್ನ ಸಿನಿ ಜರ್ನಿ ಉತ್ತಮವಾಗಿತ್ತು. ಸಾಕಷ್ಟು ಏಳು ಬೀಳುಗಳಿಂದ ಕೂಡಿದ ಜರ್ನಿಯಲ್ಲಿ ಎಲ್ಲವನ್ನೂ ಸಮನಾಗಿ ಕಂಡಿದ್ದೇನೆ. ಭಿನ್ನ -ವಿಭಿನ್ನ ಪಾತ್ರಗಳು, ಕಥೆಗಳನ್ನು ಮಾಡಿದ್ದೇನೆ. ಸಿನಿ ಜರ್ನಿ ಬಗ್ಗೆ ಸಂತೋಷವಿದೆ. ಆದರೆ ತೃಪ್ತಿ ಇಲ್ಲ. ಯಾಕೆಂದರೆ ಸಾಧಿಸುವುದು ಬಹಳಷ್ಟಿದೆ. ಇಲ್ಲಿವರೆಗೆ ಮಾಡಿದ ಚಿತ್ರ ಹಾಗೂ ಪಾತ್ರಗಳು ನನಗೆ ಒಂದು ಗುರುತಿಸುವಿಕೆಯನ್ನು ನೀಡಿದೆ.
ನಿಮ್ಮ ಮುಂದಿನ ಚಿತ್ರಗಳು?
Related Articles
ಸದ್ಯ ನನ್ನ ನಟನೆಯ “ಪ್ರಭುತ್ವ’ ಸಿನಿಮಾ ಏಪ್ರಿಲ್ನಲ್ಲಿ ಬಿಡುಗಡೆಗೊಳ್ಳಲಿದೆ. “ಅಜ್ಞಾತವಾಸಿ’ ಎನ್ನುವ ಚಿತ್ರದ ಕೆಲಸಗಳು ಮುಗಿದಿದ್ದು ಆದಷ್ಟು ಬೇಗ ರಿಲೀಸ್ ಆಗಲಿದೆ. ಹಾಗೇ “ಮೆಹಬೂಬ’ ಅನ್ನುವ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದೇನೆ.
ನಿಮ್ಮ ಕನಸಿನ ಪಾತ್ರ?
ನಾನು ಪ್ರತಿಯೊಂದು ಚಿತ್ರಗಳನ್ನು ನೋಡಿದಾಗಲೂ ನಾನು ಈ ಪಾತ್ರ ಮಾಡಿದ್ದರೆ ಹೇಗಿರುತ್ತಿತ್ತು ಎನ್ನುವ ಕುತೂಹಲ ನನಗೆ ಇದ್ದೇ ಇರುತ್ತದೆ. ಹಾಗಾಗಿ ಎಲ್ಲಾ ಪಾತ್ರಗಳಲ್ಲಿ ಮಿಂಚುವಾಸೆ. ಕೇವಲ ಒಂದು ಪಾತ್ರ ಎಂದು ನನ್ನನ್ನು ನಾನೇ ಮಿತಿ ಗೊಳಿಸದೇ ಎಲ್ಲರ ರೀತಿಯಲ್ಲೂ ನನ್ನ ನಟನೆಗೆ, ಪಾತ್ರಕ್ಕೆ ಅವಕಾಶ ಸಿಗಬೇಕು ಎಂದು ಬಯಸುತ್ತೇನೆ. ಹಾಗಾಗಿ, ಒಂದು ಎರಡೂ ಅಲ್ಲಾ ಎಲ್ಲಾ ರೀತಿಯ ಪಾತ್ರಗಳಲ್ಲಿ ಅಭಿನಯಿಸಲು ನನಗೆ ಇಷ್ಟ.
2013 ರ ರಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದೀರಿ.
ಆದರೆ ಚಿತ್ರಗಳ ಸಂಖ್ಯೆ ಕಡಿಮೆ ಇದೆಯಲ್ಲ? ನಾನು 2013ರಿಂದ ಚಿತ್ರರಂಗದಲ್ಲಿದ್ದೇನೆ. ಇಲ್ಲಿವರೆಗೆ ಮಾಡಿರುವ ಚಿತ್ರಗಳ ಸಂಖ್ಯೆ ದೊಡ್ಡದಿಲ್ಲದಿರಬಹುದು, ಆದರೆ ಉತ್ತಮ ಚಿತ್ರಗಳನ್ನು ಮಾಡಿದ್ದೇನೆ. ಕ್ವಾಂಟಿಟಿಗಿಂತ ಕ್ವಾಲಿಟಿ ಚಿತ್ರಗಳು ನನಗೆ ಮುಖ್ಯ. ಉತ್ತಮವಾದ ಭಿನ್ನ ಪಾತ್ರಗಳನ್ನು ಮಾಡಿದ್ದೇನೆ. ನಾನು ಮಾಡಿರುವ ಪಾತ್ರಗಳನ್ನು ನೋಡಿ ಮತ್ತೂಂದು ಚಿತ್ರಕ್ಕೆ, ಮತ್ತೂಂದು ಪಾತ್ರಕ್ಕೆ ಆಫರ್ಗಳು ಬರುತ್ತಿವೆ. ಹಾಗೆಯೇ ಮುಂದೆಯೂ ಉತ್ತಮ ಚಿತ್ರಗಳನ್ನು ಮಾಡುವ ಆಸೆ ಇದೆ.
ಚಿತ್ರರಂಗದ ಬೆಳವಣಿಗೆ ಕುರಿತು ಏನು ಹೇಳ್ತೀರಿ?
ಚಿತ್ರರಂಗದ ಬೆಳವಣಿಗೆ ಕುರಿತು ಮಾತನಾಡುವಷ್ಟು ದೊಡ್ಡವಳು ನಾನಲ್ಲ . ಆದರೆ ಇಂದು ಚಿತ್ರರಂಗ ದೊಡ್ಡದಾಗಿ ಬೆಳೆದಿದೆ. ಪ್ಯಾನ್ ಇಂಡಿಯಾ ಚಿತ್ರಗಳ ಕಾನ್ಸೆಪ್ಟ್ ಕನ್ನಡ ಚಿತ್ರರಂಗವನ್ನು ಬೇರೆಡೆ ಕರೆದೊಯ್ದಿದೆ. ನನ್ನ ಪ್ರಕಾರ ಚಿತ್ರರಂಗದಲ್ಲಿ ಮಹಿಳಾ ಪಾತ್ರಗಳ ಕುರಿತು ಇನ್ನಷ್ಟು ಒತ್ತು ನೀಡಬೇಕಿದೆ. ಕೇವಲ ಒಂದು, ತಾಯಿ, ಅಕ್ಕ, ಪ್ರೇಯಸಿ, ಹೆಂಡತಿ ಎಂದು ಪಾತ್ರಗಳನ್ನು ರಚಿಸದೇ, ಮಹಿಳಾ ಪಾತ್ರಗಳಿಗೂ ಒಂದು ದೊಡ್ಡ ಕ್ಯಾನ್ವಸ್ ನೀಡುವ ಪಾತ್ರಗಳನ್ನು ಹೆಚ್ಚೆಚ್ಚು ಬರೆಯಬೇಕಾಗಿದೆ
ವಾಣಿ ಭಟ್ಟ