Advertisement

ಧಾರವಾಡ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಆಮ್ಲಜನಕ ದಾಹ

03:13 PM May 09, 2021 | Team Udayavani |

ವರದಿ :ಡಾ|ಬಸವರಾಜ ಹೊಂಗಲ್‌

Advertisement

ಧಾರವಾಡ: ರೆಮ್‌ಡೆಸಿವಿಯರ್‌ ಶಾಸಕರು, ಸಚಿವರ ಪ್ರಭಾವ ಬೀರುತ್ತಿರುವ ರೋಗಿಗಳ ಸಂಬಂಧಿಕರು, ಪ್ರಾಣವಾಯುವಿಗಾಗಿ ಕಾಯುತ್ತಿರುವವರು ನೂರಾರು ಕೋವಿಡ್‌ ಸೊಂಕಿತರು, ಹೊರ ಜಿಲ್ಲೆಯವರ ಭಾರ ಹೊರದೇ ಒದ್ದಾಡುತ್ತಿರುವ ಧಾರವಾಡ ಜಿಲ್ಲೆ, ಸ್ಥಳೀಯರಿಗೆ ಬೆಡ್‌ ಸಿಗದೇ ನಲುಗುತ್ತಿರುವ ಬಡವರು.

ಹೌದು. ಆಕ್ಸಿಜೆನ್‌ ಪೂರೈಕೆ ವಿಚಾರದಲ್ಲಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಸುಪ್ರಿಂಕೋರ್ಟ್‌ ತೀರ್ಪುಗಳು ಸದ್ಯಕ್ಕೆ ಚರ್ಚೆಯಲ್ಲಿವೆ. ಜಿಲ್ಲೆಯಲ್ಲಿ ಅತೀ ಈವರೆಗೂ 2300 ಕ್ಕೂ ಅಧಿಕ ಜನರಿಗೆ ಸರ್ಕಾರಿ-ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಕೆ ಸರಾಗವಾಗಿ ನಡೆದಿತ್ತು. ಆದರೆ ಕೋವಿಡ್‌ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತ ಸಾಗಿದ್ದು, ಇದು ಹೀಗೆ ಮುಂದುವರಿದರೆ ಇನ್ನೊಂದು ವಾರದಲ್ಲಿ ಜಿಲ್ಲೆಯಲ್ಲಿ ಆಕ್ಸಿಜೆನ್‌ಗೆ ಪರದಾಟ ಶುರುವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಸದ್ಯಕ್ಕೆ ಜಿಲ್ಲೆಯಲ್ಲಿ ಪ್ರತಿದಿನ 45 ಟನ್‌ ಆಕ್ಸಿಜನ್‌ ಪೂರೈಕೆ ಯಾಗುತ್ತಿದ್ದು, ಸದ್ಯಕ್ಕೆ ಜಿಲ್ಲೆಯಲ್ಲಿರುವ ಕೋವಿಡ್‌ ರೋಗಿಗಳಿಗೆ ಇದು ಸರಿಯಾಗುತ್ತಿದೆ. ಆದರೆ ಇಲ್ಲಿನ ಘಟಕಗಳಿಂದ ಅನಿವಾರ್ಯವಾಗಿ ಹೊರ ಜಿಲ್ಲೆಗಳಿಗೂ ಆಕ್ಸಿಜೆನ್‌ ಹೋಗುತ್ತಿದ್ದು, ಸ್ಥಳೀಯ ರೋಗಿಗಳು ಮಾತ್ರ ಪರದಾಡುವ ಸ್ಥಿತಿ ಬಂದಿದೆ.

ಹೊರ ಜಿಲ್ಲೆಯ ರೋಗಿಗಳು ಹೆಚ್ಚು : ಹುಬ್ಬಳ್ಳಿ-ಧಾರವಾಡ ಉತ್ತರ ಕರ್ನಾಟಕ ಭಾಗದ ಪ್ರಮುಖ ನಗರಗಳಾಗಿದ್ದು, ಇಲ್ಲಿ ಕಿಮ್ಸ್‌, ಎಸ್‌ ಡಿಎಂ, ಜಿಲ್ಲಾಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳ ಸಂಖ್ಯೆಯೂ ಅಧಿಕವಾಗಿದೆ. ಕಳೆದ ಬಾರಿ ಕೋವಿಡ್‌ ಸಂಕಷ್ಟದ ಸಮಯದಲ್ಲಿ ಸೋಂಕಿತರ ಸಂಖ್ಯೆ ಸಾವಿರ ಸಂಖ್ಯೆ ದಾಟಿರಲಿಲ್ಲ. ಹೀಗಾಗಿ ಎಲ್ಲವನ್ನೂ ಜಿಲ್ಲಾಡಳಿತ ಅಚ್ಚುಕಟ್ಟಾಗಿ ನಿಭಾಯಿಸಿ, ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಿತ್ತು. ಆದರೆ ಈ ಬಾರಿ ಎರಡು ಸಾವಿರಕ್ಕೂ ಅಧಿಕ ಬೆಡ್‌ಗಳನ್ನು ವ್ಯವಸ್ಥೆ ಮಾಡಿದರೂ ಇನ್ನೂ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಇದು ಹೀಗೆ ಮುಂದುವರಿದರೆ ಬೆಡ್‌ಗಳನ್ನು ಪೂರೈಸಬಹುದು. ಆದರೆ ಆಕ್ಸಿಜೆನ್‌ ಬೆಡ್‌-ವೆಂಟಿಲೇಟರ್‌ ಬೆಡ್‌ಗಳ ಕೊರತೆ ಎದುರಾಗುವುದು ಬಹುತೇಕ ಖಚಿತ ಎನ್ನಬಹುದು.

ಪ್ರಸ್ತುತ ಜಿಲ್ಲೆಯಲ್ಲಿರುವ ರೋಗಿಗಳ ಪೈಕಿ ಶೇ.35 ರೋಗಿಗಳು ಅಕ್ಕಪಕ್ಕದ ಜಿಲ್ಲೆಗಳಿಂದ ಬಂದವರೇ ಆಗಿದ್ದಾರೆ. ಇಲ್ಲಿ ಮಾನವೀಯತೆ ದೃಷ್ಟಿಯಿಂದ ಸಹಜವಾಗಿಯೇ ಅವರು ಕಿಮ್ಸ್‌ಗೆ ದಾಖಲಾಗಿದ್ದಾರೆ. ಕಾರಣ ಉತ್ತರ ಕರ್ನಾಟಕದಲ್ಲಿ ಇರುವುದು ಇದೊಂದೇ ದೊಡ್ಡ ಆಸ್ಪತ್ರೆ. ಎಲ್ಲಕ್ಕಿಂತ ಹೆಚ್ಚಾಗಿ ಬಡವರಿಗೆ ಸರ್ಕಾರಿ ಆಸ್ಪತ್ರೆಯೆಂದಿರುವುದು ಕಿಮ್ಸ್‌ ಮಾತ್ರ. ಆದರೆ ಆಯಾ ಜಿಲ್ಲೆಗಳಲ್ಲಿಯೇ ಹೆಚ್ಚಿನ ಆಕ್ಸಿಜೆನ್‌ ಬೆಡ್‌ಗಳ ವ್ಯವಸ್ಥಿತ ವೈದ್ಯಕೀಯ ಸೇವೆ ರೂಪುಗೊಳ್ಳದೇ ಹೋದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕಷ್ಟ ಎದುರಿಸಬೇಕಾಗುತ್ತದೆ ಎನ್ನುತ್ತಿದ್ದಾರೆ ಜಿಲ್ಲೆಯ ಹಿರಿಯ ವೈದ್ಯರು.

Advertisement

ರೆಮ್‌ಡೆಸಿವಿಯರ್‌ಗೆ ಸಚಿವರ ಶಿಫಾರಸ್ಸು: ಇನ್ನು ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಅತೀ ಅವಶ್ಯವಾಗಿ ಬೇಕಿರುವ ರೆಮ್‌ಡೆಸಿವಿಯರ್‌ ಇಂಜೆಕ್ಷನ್‌ ಕೊರತೆ ಈಗಲೂ ಮುಂದುವರಿದಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಇದರ ಪೂರೈಕೆ ನಡೆಯುತ್ತಿದ್ದು, ಅಲ್ಲಿ ಅಷ್ಟೇನು ತೊಂದರೆಯಾಗಿಲ್ಲ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಗಂಭೀರ ಸ್ವರೂಪದ ದೇಹಸ್ಥಿತಿ ಹೊಂದಿರುವ ಕೋವಿಡ್‌ ಸೋಂಕಿತರಿಗೆ ಇದರ ಪೂರೈಕೆ ವಿಳಂಬವಾಗುತ್ತಿದ್ದು, ಅವರೆಲ್ಲ ಆತಂಕದಲ್ಲಿದ್ದಾರೆ. ಅದಕ್ಕಾಗಿ ಸ್ಥಳೀಯ ರಾಜಕಾರಣಿಗಳು, ಶಾಸಕರು, ಸಚಿವರು ಸೇರಿದಂತೆ ಪ್ರಭಾವ ಬಳಸಿ ವೈದ್ಯರಿಗೆ ಒತ್ತಡ ಹಾಕಿ ರೆಮ್‌ ಡೆಸಿವಿಯರ್‌ ಇಂಜೆಕ್ಷನ್‌ ಪಡೆಯುತ್ತಿದ್ದಾರೆ.

ಸರ್ಕಾರದತ್ತ ಖಾಸಗಿ ಬೊಟ್ಟು: ಖಾಸಗಿ ಆಸ್ಪತ್ರೆಗಳು ಕಷ್ಟಪಟ್ಟು ರೋಗಿಗಳಿಗೆ ಉತ್ತಮ ಸೇವೆ ನೀಡುವ ಪ್ರಯತ್ನದಲ್ಲಿವೆ. ಆದರೆ ಸರ್ಕಾರದಿಂದ ಪೂರೈಕೆಯಾಗುವ ರೆಮ್‌ಡೆಸಿವಿಯರ್‌ ಸಮಯಕ್ಕೆ ಸರಿಯಾಗಿ ಪೂರೈಕೆಯಾಗದೇ ಹೋಗಿದ್ದರಿಂದ ರೋಗಿಗಳ ಸಂಬಂಧಿಕರಿಗೆ ಚೀಟಿ ಬರೆದುಕೊಟ್ಟು ರೆಮ್‌ಡೆಸಿವಿಯರ್‌ ನೀವೇ ತೆಗೆದುಕೊಂಡು ಬನ್ನಿ ಎಂದು ಹೇಳಿ ಕಳುಹಿಸುತ್ತಿವೆ. ಹಣವಿದ್ದವರು, ನಗರವಾಸಿಗಳು, ನೌಕರರು ಒಂದಿಷ್ಟು ಹಣ ಖರ್ಚು ಮಾಡಿ ಖಾಸಗಿ ಆಸ್ಪತ್ರೆಗಳಲ್ಲಿಯೇ ಹಾಗೂ ಹೀಗೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಹಳ್ಳಿಯ ಬಡವರು, ದುಡಿದು ತಿನ್ನುವವರು ಮಾತ್ರ ಹಳ್ಳಿಯ ವೈದ್ಯರನ್ನೇ ಅವಲಂಬಿಸಿಕೊಂಡು ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಲಾಕ್‌ಡೌನ್‌ ಗುಮ್ಮ: ಇನ್ನು ಈವರೆಗೂ ಜಾರಿಯಲ್ಲಿದ್ದ ಜನತಾ ಕರ್ಫ್ಯೂಗೆ ಬದಲು ಸರ್ಕಾರ ಮೇ 24ರವರೆಗೂ ಸಂಪೂರ್ಣ ಲಾಕ್‌ ಡೌನ್‌ ಹೇರಲು ಸಜ್ಜಾಗಿದ್ದು, ಜಿಲ್ಲೆಯ ಜನರಿಗೆ ಇದು ಮತ್ತಷ್ಟು ಆತಂಕವನ್ನುಂಟು ಮಾಡಿದೆ. ಅಗತ್ಯ ಸೇವೆಗಳೇನೇ ಇದ್ದರೂ ಕೂಡ ಜನರು ಸಣ್ಣ ಪುಟ್ಟ ತೊಂದರೆಯಲ್ಲಿ ನಿರ್ಭಿಡೆಯಿಂದ ಓಡಾಟ ನಡೆಸುವುದು ಕೊಂಚ ಕಷ್ಟವೇ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next