ಹುಣಸೂರು: ಕೊಡಗಿನಲ್ಲಿ ಬೀಳುತ್ತಿರುವ ಜಡಿ ಮಳೆಯಿಂದಾಗಿ ಲಕ್ಷ್ಮಣತೀರ್ಥ ನದಿ ತುಂಬಿ ಹರಿಯುತ್ತಿದ್ದು, ಹನಗೋಡು ಅಣೆಕಟ್ಟೆ ಮೇಲೆ ಸಾಕಷ್ಟು ನೀರು ದುಮ್ಮಿಕ್ಕುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.
ನಾಲ್ಕು ವರ್ಷಗಳ ನಂತರ ಜೂನ್ನಲ್ಲಿ ಮೊದಲ ಬಾರಿಗೆ ನದಿಯಲ್ಲಿ ಪ್ರವಾಹ ಬರುತ್ತಿರುವುದು ರೈತರಲ್ಲಿ ಹರ್ಷ ತಂದಿದೆ. ಕೊಡಗಿನ ವಿರಾಜಪೇಟೆ ತಾಲೂಕಿನ ಕುಟ್ಟ ಬಳಿಯ ಇರುಪ್ಪುವಿನಲ್ಲಿ ಹುಟ್ಟಿ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನದೊಳಗಿಂದ ಹರಿದು ಬರುವ ಲಕ್ಷ್ಮಣತೀರ್ಥ ನದಿಗೆ ಅಡ್ಡಲಾಗಿ ಹನಗೋಡು ಬಳಿ ಅಣೆಕಟ್ಟೆ ಕಟ್ಟಲಾಗಿದೆ.
ಈ ಅಣೆಕಟ್ಟೆ ಮೇಲೆ ದುಮ್ಮಿಕ್ಕುತ್ತಿರುವ ನದಿ ನೀರನ್ನು ಕಣ್ತುಂಬಿಕೊಳ್ಳಲು ಜಡಿ ಮಳೆಯ ನಡುವೆಯೇ ಸಾಕಷ್ಟು ಮಂದಿ ನದಿ ಬಳಿ ಧಾವಿಸುತ್ತಿದ್ದಾರೆ. ಯುವ ಪಡೆಯಂತೂ ಫೋಟೋ ಕ್ಲಿಕ್ಕಿಸುವ ಜೊತೆಗೆ ಸೆಲ್ಪಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ.
ಹನಗೋಡು ಅಣೆಕಟ್ಟೆಯಿಂದ ಹುಣಸೂರು ಹಾಗೂ ಎಚ್.ಡಿ.ಕೋಟೆ ತಾಲೂಕಿನ 40 ಕೆರೆಗಳಿಗೆ ವಿಶಿಷ್ಟ ಸರಪಳಿ ಮಾದರಿಯಲ್ಲಿ ನೀರು ತುಂಬಿಸಲಾಗುತ್ತಿದೆ. ಈ ಅಣೆಕಟ್ಟೆಗೆ ಹನುಮಂತಪುರ ಹಾಗೂ ಉದ್ದೂರು ಮುಖ್ಯ ನಾಲೆಗಳಿವೆ.
ಕಾಲುವೆಗೆ ನೀರು ಹರಿಸಿ: ಈಗಾಗಲೆ ಅಣೆಕಟ್ಟು ತುಂಬಿರುವುದರಿಂದ ಮಂಗಳವಾರದಿಂದಲೇ ಕಾಲುವೆಯಲ್ಲಿ ನೀರು ಹರಿಸುವ ಮೂಲಕ ಕೆರೆ-ಕಟ್ಟೆಗಳನ್ನು ತುಂಬಿಸಬೇಕೆಂದು ಅಚ್ಚುಕಟ್ಟುದಾರ ರೈತರು ಹಾರಂಗಿ ಅಧಿಕಾರಿಗಳನ್ನು ಆಗ್ರಹಿಸಿದ್ದು, ಶಾಸಕ ವಿಶ್ವನಾಥ್ ಈ ಬಗ್ಗೆ ಅಧಿಕಾರಿಗಳಿಗೆ ಸೂಚಿಸಬೇಕೆಂದು ಒತ್ತಾಯಿಸಿದ್ದಾರೆ.