Advertisement

ಅತಿವೃಷ್ಟಿ-ಅನಾವೃಷ್ಟಿಗೆ ಕ್ರಮ: ದೇಶಪಾಂಡೆ

12:47 PM Aug 24, 2018 | |

ಶಹಾಪುರ: ಒಂದೆಡೆ ಅತಿವೃಷ್ಟಿ, ಇನ್ನೊಂದೆಡೆ ಅನಾವೃಷ್ಟಿ ಸಮಸ್ಯೆ ರಾಜ್ಯದಲ್ಲಿ ಎದುರಾಗಿದೆ. ಎಲ್ಲದಕ್ಕೂ ಪರಿಹಾರ ಒದಗಿಸುವ ಗುರುತರ ಜವಾಬ್ದಾರಿ ಸರ್ಕಾರಕ್ಕಿದ್ದು, ಈ ದಿಸೆಯಲ್ಲಿ ಆಡಳಿತ ಚುರುಕಾಗಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ತಿಳಿಸಿದರು.

Advertisement

ಯಾದಗಿರಿ ಜಿಲ್ಲೆಯ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಪ್ರವಾಹದ ಪರಿಸ್ಥಿತಿಯಿಂದ ಅತಿವೃಷ್ಟಿಯಾಗಿದ್ದು, ವಿಜಯಪುರ ಜಿಲ್ಲೆಯ ತಾಲೂಕು, ಯಾದಗಿರಿ ಜಿಲ್ಲೆಯ ತಾಲೂಕುಗಳು ಸೇರಿದಂತೆ ಚಿಕ್ಕಬಳ್ಳಾಪುರ, ರಾಯಚೂರು ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ.
 
ಮಳೆ ಅಭಾವದಿಂದ ಈ ಭಾಗದಲ್ಲಿ ತೊಗರಿ, ಹತ್ತಿ, ಹೆಸರು ಬೆಳೆ ಹಾಳಾಗಿದೆ. 2.16 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಶೇ. 80ರಷ್ಟು ಬಿತ್ತನೆಯಾಗಿದ್ದು, ಜುಲೈ, ಆಗಸ್ಟ್‌ ತಿಂಗಳಲ್ಲಿ ಮಳೆಯಾಗದೆ ರೈತರ ನಿರೀಕ್ಷೆ ಹುಸಿಯಾಗಿದೆ. ಬಿತ್ತಿದ ಬೆಳೆ ರೈತರ ಕೈಗೆಟುವುಕುವುದು ಕಷ್ಟಕರವಾಗಿದೆ ಎಂದು ಹೇಳಿದರು.

ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಪಾಟೀಲ, ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಸುರಪುರ ಶಾಸಕ ರಾಜುಗೌಡ, ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಸಮಸ್ಯೆ ಬಗ್ಗೆ ವಿವರವಾಗಿ ತಿಳಿಸಿದ್ದು, ಸದ್ಯದ ಮಟ್ಟಿಗೆ ಶಹಾಪುರ, ಸುರಪುರದಲ್ಲಿ ಬರದ ಲಕ್ಷಣ ಸ್ಪಷ್ಟವಾಗಿರುವುದು ಗೋಚರವಾಗಿದೆ ಎಂದರು.
 
ಆ. 29 ರೊಳಗೆ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾ ಧಿಕಾರಿಗಳು ಸೂಕ್ತ ಗಮನ ಹರಿಸಿ ರೈತರಿಗೆ ತೊಂದರೆಯಾಗದಂತೆ ಪಾರದರ್ಶಕ ವರದಿ ಸಲ್ಲಿಸಲಿದ್ದಾರೆ. ಕೇಂದ್ರದ ಮಾರ್ಗಸೂಚಿ ಅನುಸರಿಸಿ ಮುಖ್ಯಮಂತ್ರಿಗಳೊಡನೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. 165 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ: ಎನ್‌.ಡಿ.ಆರ್‌.ಎಫ್‌. ಗೈಡ್‌ಲೈನ್‌ ಪ್ರಕಾರ ಕೊಳವೆಬಾವಿಗಳ ದುರಸ್ತಿ, ಪೈಪ್‌ಲೈನ್‌ ಒತ್ತಡ ಪರೀಕ್ಷೆ, ಟ್ಯಾಂಕರ್‌ನಿಂದ ನೀರು ಸರಬರಾಜು, ಪೈಪ್‌ಲೈನ್‌ ದುರಸ್ತಿಗಾಗಿ ಜಿಲ್ಲಾಧಿಕಾರಿಗೆ ಸೂಕ್ತ ಅನುದಾನ ಬಿಡುಗಡೆ ಮಾಡುವ ಅವಕಾಶಗಳಿದ್ದು, ಅದನ್ನು ಬಳಸಿಕೊಂಡು ನೀರಿನ ಸಮಸ್ಯೆ ನೀಗಿಸಬೇಕು.ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ಅಡಿಯಲ್ಲಿ ಕುಡಿಯುವ ನೀರಿಗೆ ಅವಕಾಶ ನೀಡಲಾಗಿದೆ. ಜಿಲ್ಲಾಡಳಿತ, ಜಿಪಂ ಕುಡಿಯುವ ನೀರು ಕುರಿತು ಗಮನ ಹರಿಸಬೇಕು.  ನೀರು ಶುದ್ಧೀಕರಣ ಘಟಕಗಳನ್ನು ಸಮಗ್ರವಾಗಿ ವ್ಯವಸ್ಥಿತಗೊಳಿಸಿ ಆರಂಭಿಸಬೇಕು ಎಂದು ಸೂಚಿಸಿದರು.

ಭಾಗಶಃ ಮನೆಬಿದ್ದವರಿಗೂ ಸೂಕ್ತ ಪರಿಹಾರ ನೀಡಿ: ಪ್ರಕೃತಿ ವಿಕೋಪದಿಂದ ಭಾಗಶಃ ಮನೆ ಬಿದ್ದವರಿಗೆ ಕಾಟಾಚಾರದ ಹಣ ನೀಡಬೇಡಿ. ಅವರಿಗೂ ಮನೆ ನಿರ್ಮಿಸಿಕೊಳ್ಳಲು ಅನುಕೂಲವಾಗಲಿ, ಈಗಾಗಲೇ ಜಿಲ್ಲೆಗೆ 5 ಕೋಟಿ ರೂ. ಮೀಸಲಿಡಲಾಗಿದೆ. ಯೋಜನೆಗಳು ಬಡವರಿಗೆ ವರದಾನವಾಗಬೇಕು ಸರ್ಕಾರದ ನಿಯಮಗಳು ಪಾಲನೆಯಾಗಬೇಕು. ಭಾಗಶಃ ಮನೆ ಬಿದ್ದವರಿಗೂ ಶೇ.75 ರಷ್ಟು ಹಣ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
 
ಉದ್ಯೋಗ ಭರವಸೆ ಯೋಜನೆಗಳ ಅವಕಾಶ: ಹೈಕ ಭಾಗದ ಜನ ಗುಳೆ ಹೋಗುವುದನ್ನು ತಪ್ಪಿಸಲು ಕೃಷಿ ಕಾರ್ಮಿಕರಿಗೆ, ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿಯಲ್ಲಿ ಭರವಸೆಯ ಅಭಯ ನೀಡಬೇಕು. ಅನುದಾನದ ಸದ್ಬಳಕೆಯಾಗಬೇಕು. ಯೋಜನೆಗೆ ತಕ್ಕಂತೆ ರಾಜ್ಯದಲ್ಲಿ ಹಣಕಾಸಿನ ಸ್ಥಿತಿ ಉತ್ತಮವಾಗಿದ್ದು, ಅಧಿಕಾರಿಗಳು ಸೂಕ್ತ ನಿರ್ವಹಣೆ ಮಾಡುವ ಮೂಲಕ ನಾಗರಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಪಾಟೀಲ, ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಶಾಸಕ ವೆಂಕಟರೆಡ್ಡಿ ಮುದ್ನಾಳ, ಶಾಸಕ ರಾಜುಗೌಡ, ಜಿ.ಪಂ.ಅಧ್ಯಕ್ಷ ಬಸರಡ್ಡಿ ಪಾಟೀಲ ಅನಪೂರ, ಪ್ರಾದೇಶಿಕ ಆಯುಕ್ತ ಸುಬೋಧ ಯಾದವ್‌, ಜಿಲ್ಲಾಧಿಕಾರಿ ಕುರ್ಮಾರಾವ್‌, ಎಸ್‌ಪಿ ಯಡಾ
ಮಾರ್ಟಿನ್‌ ಮಾರ್ಬನಿಂಗ್‌ ಇದ್ದರು.

Advertisement

ಬೆಳೆವಿಮೆ ಯೋಜನೆ ತಾರತಮ್ಯ ಸರಿಪಡಿಸುವೆ 
ಇನ್ಸುರೆನ್ಸ್‌ ಕಂಪನಿಯವರು ಸಮಸ್ಯೆ ಸೃಷ್ಟಿ ಮಾಡುತ್ತಿರುವುದರಿಂದ ನಿಜವಾಗಿ ಬೆಳೆ ಹಾನಿಯಾದ ರೈತರಿಗೆ ಬೆಳೆವಿಮೆ ಸಿಗುತ್ತಿಲ್ಲ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವೆ. ಯಾದಗಿರಿ ಜಿಲ್ಲೆಯಲ್ಲಿ ಅಧಿಕಾರಿಗಳ ಕೊರತೆಯಿದ್ದು, ಸರಿದೂಗಿಸುವ ಪ್ರಯತ್ನ ಮಾಡುವೆ. ನೂತನ ತಾಲೂಕುಗಳು ರಚನೆಯಾದ ನಂತರ ಸಿಬ್ಬಂದಿ ನೇಮಕ ಸೇರಿದಂತೆ ಸಮರ್ಪಕ ಅನುದಾನ ಬಿಡುಗಡೆಯಾಗುತ್ತಿಲ್ಲ ಎನ್ನುವ ಕುರಿತು ಜನರಿಂದ ಬೇಸರ ವ್ಯಕ್ತವಾಗಿದ್ದು ನಿಜ. ಹೀಗಾಗಿ ಹೊಸ ತಾಲೂಕು ಕಾರ್ಯ ನನೆಗುದಿಗೆ ಬಿದ್ದಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮಕೈಗೊಳ್ಳುವೆ.
ಆರ್‌.ವಿ. ದೇಶಪಾಂಡೆ, ಕಂದಾಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next