Advertisement

ಸುಮಲತಾ ಮೌನಕ್ಕೆ ಜಿಲ್ಲೆಯಲ್ಲಿ ಆಕ್ರೋಶ

11:35 AM Jul 01, 2019 | Team Udayavani |

ಮಂಡ್ಯ: ಲೋಕಸಭಾ ಚುನಾವಣೆ ವೇಳೆ ಮಂಡ್ಯ ರಾಜಕಾರಣದಲ್ಲಿ ಪ್ರಬುದ್ಧ ರಾಜಕಾರಣಿಯಂತೆ ಗೋಚರಿಸಿದ ಸುಮಲತಾ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಜಿಲ್ಲೆಯ ಜನರು ಅಸಮಾಧಾನ ಗೊಂಡಂತಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸುವ, ಸಂಕಷ್ಟಗಳಿಗೆ ದನಿಯಾಗುವ ಭರವಸೆ ನೀಡಿದ್ದ ಅವರು, ಸಂಸದೆಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಬದಲಾದಂತೆ ಕಂಡುಬರುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ.

Advertisement

ಸಂಸದೆಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸುಮಲತಾ ಅಂಬರೀಶ್‌ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ಅವರನ್ನು ಭೇಟಿಯಾಗಿ ರೈತರ ಸಮಸ್ಯೆ ಹಾಗೂ ನೀರಿನ ಅಗತ್ಯತೆ ಬಗ್ಗೆ ಮನವಿ ಸಲ್ಲಿಸಿದ್ದೇ ದೊಡ್ಡ ಸಾಧನೆ ಎಂದು ಭಾವಿಸಿದಂತಿದೆ.

ಜಿಲ್ಲೆಯಲ್ಲಿ ಬೆಳೆಗಳ ಪರಿಸ್ಥಿತಿ, ಕೆರೆ-ಕಟ್ಟೆ ಬರಿದಾಗಿರುವುದು, ಅಣೆಕಟ್ಟೆಯಲ್ಲಿರುವ ನೀರಿನ ಪ್ರಮಾಣ, ಮಳೆ ಕೊರತೆ ಸೇರಿದಂತೆ ಇನ್ನಿತರ ಅಂಶಗಳನ್ನು ಸದನದಲ್ಲಿ ಸಮರ್ಥವಾಗಿ ವಾದ ಮಂಡಿಸುವ ಪ್ರಯತ್ನವನ್ನು ಇದುವರೆಗೂ ನಡೆಸಿಲ್ಲ. ಇದು ಸಹಜವಾಗಿಯೇ ಜನರಲ್ಲಿ ಆಕ್ರೋಶ ಮೂಡಿಸಿದೆ.

ಪ್ರಜ್ವಲ್ ಜವಾಬ್ದಾರಿ: ಹಾಸನ ಲೋಕಸಭಾ ಕ್ಷೇತ್ರದ ಪ್ರಜ್ವಲ್ ರೇವಣ್ಣ ಅವರು ಕಾವೇರಿ ಹಾಗೂ ಹೇಮಾವತಿ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವಂತೆ ಸದನದಲ್ಲಿ ದನಿ ಎತ್ತುವ ಮೂಲಕ ಜವಾಬ್ದಾರಿ ಮೆರೆದಿದ್ದಾರೆ. ಯುವಕರಾಗಿ ಪ್ರಜ್ವಲ್ ರೈತರ ಸಂಕಷ್ಟವನ್ನು ಅರ್ಥೈಸಿಕೊಂಡು ಎಲ್ಲರ ಗಮನಸೆಳೆದಿದ್ದಾರೆ. ಬುದ್ಧಿವಂತ ರಾಜಕಾರಣಿಯಾಗಿರುವ ಸುಮಲತಾ ಅಂತಹ ಪ್ರಜ್ಞಾವಂತಿಕೆ ಮೆರೆಯದಿರುವುದು ಜನರಲ್ಲಿ ಬೇಸರ ಮೂಡಿಸಿದೆ.

ಜಿಲ್ಲೆಯ ರೈತರ ಸಂಕಷ್ಟದ ಅರಿವಿದ್ದರೂ ಸುಮಲತಾ ಮಂಡ್ಯ ಕಡೆ ಮುಖ ಮಾಡುತ್ತಿಲ್ಲ. ಬರಗಾಲದ ಪರಿಸ್ಥಿತಿಯೊಳಗೆ ರೈತರು ಸಿಲುಕಿ ನರಳುತ್ತಿದ್ದರೂ ಅವರ ಸಮಸ್ಯೆಗಳನ್ನು ಆಲಿಸುವ ಗೋಜಿಗೆ ಹೋಗಿಲ್ಲ. ರಾಜ್ಯದ ಜಲಸಂಪನ್ಮೂಲ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತುಕತೆ ನಡೆಸಿ ಮುಖ್ಯಮಂತ್ರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ನೀರಿನ ಬೇಡಿಕೆ ಮಂಡಿಸುವ ಕನಿಷ್ಠ ಪ್ರಯತ್ನಕ್ಕೂ ಮುಂದಾಗುತ್ತಿಲ್ಲ ಎಂಬ ಕೂಗು ಕೇಳಿಬರುತ್ತಿದೆ.

Advertisement

ಸೌಜನ್ಯ ಪ್ರದರ್ಶಿಸಲಿಲ್ಲ ಒಣಗುತ್ತಿರುವ ಬೆಳೆಗಳಿಗೆ ನೀರು ಹರಿಸಬೇಕೆಂಬ ಒತ್ತಾಯದೊಂದಿಗೆ ರೈತ ಮುಖಂಡ ದರ್ಶನ್‌ ಪುಟ್ಟಣ್ಣಯ್ಯ ಅವರು ಹತ್ತು ದಿನಗಳ ಕಾಲ ಮಂಡ್ಯದಲ್ಲಿ ರೈತಸಂಘದ ಕಾರ್ಯಕರ್ತರೊಂದಿಗೆ ಅಹೋರಾತ್ರಿ ಧರಣಿ ನಡೆಸಿದರು. ಆದರೆ, ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರ ಅಹವಾಲು ಆಲಿಸುವ ಸೌಜನ್ಯವನ್ನು ಸುಮಲತಾ ಪ್ರದರ್ಶಿಸಲಿಲ್ಲ. ಕಾಂಗ್ರೆಸ್‌ ನಾಯಕರಾದ ಎನ್‌.ಚಲುವರಾಯಸ್ವಾಮಿ, ರಮೇಶ್‌ ಬಂಡಿಸಿದ್ದೇಗೌಡ, ಎಚ್.ಬಿ.ರಾಮು ಸೇರಿದಂತೆ ಹಲವರು ಭೇಟಿ ನೀಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಆದರೆ, ಸುಮಲತಾ ರೈತರ ಹೋರಾಟಕ್ಕೆ ಟ್ವಿಟ್ಟರ್‌ನಲ್ಲಷ್ಟೇ ಬೆಂಬಲ ಸೂಚಿಸಿ ಮಂಡ್ಯಕ್ಕೆ ಬರದೆ ದೂರ ಉಳಿದರು.

ಹೊಣೆಗಾರಿಕೆ ಮರೆತ ಉಸ್ತುವಾರಿ : ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು ಅವರು ಜಿಲ್ಲೆಯ ಸ್ಥಿತಿ-ಗತಿಗಳ ಬಗ್ಗೆ ಚೆನ್ನಾಗಿ ಅರಿತಿದ್ದರೂ ಜವಾಬ್ದಾರಿ ಮರೆತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ವಿದೇಶಕ್ಕೆ ಹಾರಿದ್ದಾರೆ. ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ತಮ್ಮದೇ ಪಕ್ಷದ ಶಾಸಕರಿದ್ದರೂ, ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿದ್ದರೂ ಬೆಳೆಗಳ ಪರಿಸ್ಥಿತಿ, ನೀರಿನ ಕೊರತೆಯ ಬಗ್ಗೆ ಜಿಲ್ಲೆಯ ಶಾಸಕರೊಂದಿಗೆ ಚರ್ಚಿಸಿ ಸಿಎಂ ಬಳಿಗೆ ನಿಯೋಗ ಕರೆದೊಯ್ದು ವಾಸ್ತವಾಂಶವನ್ನು ಮನವರಿಕೆ ಮಾಡಿಕೊಡಬೇಕಿತ್ತು. ಆ ಹೊಣೆಗಾರಿಕೆಯನ್ನೇ ಮರೆತು ಜವಾಬ್ದಾರಿಯಿಂದ ನುಣುಚಿಕೊಂಡಿರುವ ಪುಟ್ಟರಾಜು ತಮಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ.

ಅಸಮಾಧಾನ; ರೈತಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಸಮಯದಲ್ಲೂ ಉಸ್ತುವಾರಿ ಸಚಿವರಾಗಿ ಅವರ ಬೇಡಿಕೆಗಳನ್ನು ಆಲಿಸಲಿಲ್ಲ. ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿ ಸಮಾಲೋಚಿಸುವ, ನೀರು ಬಿಡುಗಡೆಗೆ ಇರುವ ಅಡೆ-ತಡೆಗಳನ್ನು ಅರ್ಥೈಸಿಕೊಟ್ಟು ಸಮಾಧಾನಪಡಿಸುವ ಯಾವ ಪ್ರಕ್ರಿಯೆಯನ್ನೂ ನಡೆಸಲಿಲ್ಲ. ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಬೆಂಬಲಕ್ಕೆ ನಿಂತ ರೈತಸಂಘದ ನಾಯಕತ್ವದಲ್ಲೇ ಪ್ರತಿಭಟನೆ ನಡೆಯುತ್ತಿದ್ದು, ರಾಜಕೀಯ ಕಾರಣಕ್ಕಾಗಿ ಜೆಡಿಎಸ್‌ನ ಯಾವುದೇ ಶಾಸಕರು ಹಾಗೂ ಸಚಿವರು ಧರಣಿ ಸ್ಥಳಕ್ಕೆ ಭೇಟಿ ನೀಡಿಲ್ಲ. ಅಲ್ಲದೆ ಕಾವೇರಿ ವಿವಾದ ಸಂಪೂರ್ಣವಾಗಿ ಸಂಸದೆ ಸುಮಲತಾ ಅವರ ವ್ಯಾಪ್ತಿಗೆ ಒಳಪಟ್ಟಿದ್ದು ಅದಕ್ಕೂ ನಮಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಸೇಡಿನ ರಾಜಕಾರಣ: ಲೋಕಸಭಾ ಚುನಾವಣಾ ಪರಾಜಿತ ಅಭ್ಯರ್ಥಿ ನಿಖೀಲ್ , ಶಾಸಕ ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ಹಲವರು ಸುಮಲತಾ ಅವರನ್ನು ಗೆಲ್ಲಿಸಿದ್ದೀರಿ. ಅವರಿಂದಲೇ ಕೆಆರ್‌ಎಸ್‌ನಿಂದ ನೀರು ಹರಿಸಿಕೊಳ್ಳಿ ಎಂಬ ಅರ್ಥದಲ್ಲಿ ಹೇಳುತ್ತಾ ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿರುವುದು ಟೀಕೆಗೆ ಗುರಿಯಾಗಿದೆ.

ಇನ್ನು ಜಿಲ್ಲೆಗೆ ಏಳಕ್ಕೆ ಏಳು ಕ್ಷೇತ್ರಗಳಲ್ಲೂ ಜೆಡಿಎಸ್‌ ನಾಯಕರನ್ನೇ ಗೆಲ್ಲಿಸಿದ್ದರೂ ತೃಪ್ತರಾಗದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲೋಕಸಭಾ ಚುನಾವಣೆಯಲ್ಲಿ ಮಗನನ್ನು ಸೋಲಿಸಿದರು ಎಂಬ ಒಂದೇ ಕಾರಣಕ್ಕೆ ಜಿಲ್ಲೆಯ ಜನರ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಚುನಾವಣಾ ಪೂರ್ವದಲ್ಲಿ ಮೂರು ದಿನಕ್ಕೊಮ್ಮೆ ಮಂಡ್ಯದಲ್ಲೇ ಠಿಕಾಣಿ ಹೂಡುತ್ತಿದ್ದ ಸಿಎಂ ಚುನಾವಣಾ ಫಲಿತಾಂಶದ ನಂತರದಲ್ಲಿ ಅವರ ನೆರಳೂ ಜಿಲ್ಲೆಯ ಮೇಲೆ ಬೀಳದಂತೆ ನಡೆದುಕೊಳ್ಳುತ್ತಿದ್ದಾರೆ.

 

● ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next