Advertisement

ಔಟ್‌ ಆಫ್ ಔಟ್‌ ಸೀಕ್ರೆಟ್‌

03:23 PM Jan 30, 2018 | |

ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾರ್ಚ್‌ 23ರಿಂದ ಶುರುವಾಗುತ್ತಿದೆ. ಮಕ್ಕಳ ಪರೀಕ್ಷಾ ತಯಾರಿಯಲ್ಲಿ ಹೆತ್ತವರೂ ಜತೆಯಾಗುತ್ತಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅದೆಷ್ಟೇ ಚೆನ್ನಾಗಿ ಉತ್ತರ ಬರೆದರೂ ಮೌಲ್ಯಮಾಪಕರು ಏನಾದರೊಂದು ಚಿಕ್ಕ ತಪ್ಪನ್ನು ಹುಡುಕಿ, ಕನಿಷ್ಠ ಒಂದು ಅಂಕವನ್ನಾದರೂ ಕಡಿತ ಮಾಡಿಯೇ ತೀರುತ್ತಾರೆ. ಅಂಥದ್ದರಲ್ಲಿ ಕಳೆದವರ್ಷ ವಿದ್ಯಾರ್ಥಿಯೊಬ್ಬ ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 625, ಅಂದರೆ ಔಟ್‌ ಆಫ್ ಔಟ್‌ ಅಂಕಗಳನ್ನು ಗಳಿಸಿದ್ದು ಮಾತ್ರ ಯಾರೂ ಊಹಿಸಲಾಗದಂಥದ್ದು. ಎಸ್ಸೆಸ್ಸೆಲ್ಸಿ ಪರೀಕ್ಷೆ ಸನ್ನಿಹಿತವಾಗುತ್ತಿರುವ ಈ ವೇಳೆ ಔಟ್‌ ಆಫ್ ಔಟ್‌ ವಿದ್ಯಾರ್ಥಿ ರಂಜನ್‌ ತಮ್ಮ ಹಿಂದಿನ ವರ್ಷದ “ಸಕ್ಸಸ್‌ಫ‌ುಲ್‌ ಡಿಸ್ಟಿಂಕ್ಷನ್‌’ ಗುಟ್ಟನ್ನು “ಜೋಶ್‌’ ಮೂಲಕ ಹಂಚಿಕೊಂಡಿದ್ದಾರೆ…

Advertisement

ಸೂರ್ಯ ಹುಟ್ಟುವುದಕ್ಕೆ ಮುನ್ನ, ಬೆಳಗ್ಗಿನ ಜಾವ 5 ಗಂಟೆಯ ಆಸುಪಾಸು ದೈವೀಕ ಘಳಿಗೆ ಅಂತ ಹೇಳ್ತಾರೆ. ಈ ಸಮಯದಲ್ಲಿ ನಾವು ಮಾಡುವ ಕೆಲಸ ಕೈಗೂಡುತ್ತದೆ ಎಂದು ಹಲವರು ನಂಬುತ್ತಾರೆ. ಅದರ ಹಿನ್ನೆಲೆಯ ಕುರಿತು ನನಗೆ ಜಾಸ್ತಿ ಗೊತ್ತಿಲ್ಲ. ಆದರೆ, ಒಬ್ಬ ವಿದ್ಯಾರ್ಥಿಯಾಗಿ ಹೇಳುವುದಾದರೆ ಬೆಳಗ್ಗಿನ ಸಮಯ ಓದಲು ಹೇಳಿಮಾಡಿಸಿದ ಸಮಯ. ಆ ಹೊತ್ತಿನಲ್ಲಿ ಓದಿದ್ದು ತಲೆಯಲ್ಲಿ ಭದ್ರವಾಗಿ ಕೂರುತ್ತದೆ ಎನ್ನುವುದು ನನ್ನ ಅನುಭವಕ್ಕೆ ಬಂದಿರುವ ಸಂಗತಿ. ಕೆಲವರಿಗೆ ರಾತ್ರಿ ನಿದ್ದೆಗೆಟ್ಟು ಓದಿ ಅಭ್ಯಾಸವಿರುತ್ತೆ. ಇದರಿಂದ ಆರೋಗ್ಯಕ್ಕೆ ಪೆಟ್ಟು ಬೀಳ್ಳೋದು. ಬೆಳಗ್ಗೆ ಬೇಗ ಎದ್ದು ಓದುವುದರಿಂದ ಮನಸ್ಸು ಇಡೀ ದಿನ ಫ್ರೆಶ್‌ ಆಗಿ ಉಳಿಯುತ್ತೆ. ಮತ್ತು ಉಳಿದ ಕೆಲಸಗಳಿಗೂ ಹೆಚ್ಚಿನ ಸಮಯ ದೊರೆಯುತ್ತೆ.

ತ್ಯಾಗ ಮಾಡಬೇಕು…
ತ್ಯಾಗ ಅನ್ನೋದು ದೊಡ್ಡ ಪದ. ವಿದ್ಯಾರ್ಥಿಗಳಿಗೆ ಅನ್ವಯಿಸಿ ಹೇಳುವುದಾದರೆ, ಅವರು ಪರೀûಾ ಕಾಲದಲ್ಲಿ ಹಲವು ಸಂಗತಿಗಳನ್ನು ತ್ಯಾಗ ಮಾಡಬೇಕು. ಟಿ.ವಿ ನೋಡುವುದು, ಆಟ ಆಡುವುದು, ಕತೆ- ಕಾದಂಬರಿಗಳನ್ನು ಓದೋದು… ಇಂಥ ಹಲವು ಮನರಂಜನಾ ಸಂಗತಿಗಳಿಂದ ದೂರವಿದ್ದಷ್ಟೂ ಒಳ್ಳೆಯದು. ಪೂರ್ತಿಯಾಗಿ ಅಲ್ಲದಿದ್ದರೂ ಕಡಿಮೆ ಮಾಡಿಕೊಂಡರೆ ಒಳ್ಳೆಯದು. ಏಕೆಂದರೆ, ಇದರಿಂದ ಮನಸ್ಸು ಹಾದಿ ತಪ್ಪುವುದಿಲ್ಲ. ನನಗೂ ಕ್ರಿಕೆಟ್‌ ಎಂದರೆ ಇಷ್ಟ. ಆದರೆ, ಪರೀಕ್ಷೆಯ ಸಮಯದಲ್ಲಿ ಕ್ರಿಕೆಟ್‌ ನೋಡುವುದರಿಂದ ದೂರವಿದ್ದೆ. ಪರೀಕ್ಷೆಯ ಸಮಯದಲ್ಲಿ ಒಂಚೂರು ಮನರಂಜನೆ ಪಡೆಯುವುದು ತಪ್ಪಲ್ಲ. ಆದರೆ, ಅದಕ್ಕೂ ಒಂದು ಮಿತಿ ಹಾಕಿಕೊಂಡರೆ ಒಳ್ಳೆಯದು ಎಂಬುದಷ್ಟೇ ನನ್ನ ಅಭಿಪ್ರಾಯ. ಪರೀಕ್ಷೆ ಮುಗಿದ ಮೇಲೆ ಅವೆಲ್ಲವನ್ನೂ ಮಾಡಬಹುದಲ್ವಾ? ಮನಸ್ಸು ಯಾವಾಗಲೂ ಪಠ್ಯದ ಗುಂಗಿನಲ್ಲೇ ಇರುವುದರಿಂದ ಏಕಾಗ್ರತೆ ಸಾಧಿಸುವುದು ಸುಲಭ.

ಕಂಬೈನ್ಡ್ ಸ್ಟಡಿ ಬೇಕಾ?
ಪರೀಕ್ಷೆ ಬರೆಯುವಾಗ ನಮ್ಮ ಜೊತೆ ಯಾರೂ ಇರುವುದಿಲ್ಲ ಅಲ್ವಾ? ಹೀಗಾಗಿ ಓದೋವಾಗಲೂ ಒಬ್ಬರೇ ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಲೈಬ್ರರಿಯಲ್ಲಿ ಕೂತು ಬಹಳಷ್ಟು ಮಂದಿ ವಿದ್ಯಾರ್ಥಿಗಳು ಕಂಬೈನ್‌ ಸ್ಟಡಿ ಮಾಡುತ್ತಾರೆ. ಪರೀಕ್ಷೆಗೆ ತುಂಬಾ ದಿನಗಳು ಉಳಿದಿರುವಂತೆ ಕಂಬೈನ್‌x ಸ್ಟಡಿ ಮಾಡುವುದರಿಂದ ಲಾಭವಿದೆ. ಆದರೆ, ಪರೀಕ್ಷೆಗೆ ಕೆಲವೇ ದಿನಗಳಿವೆ ಎನ್ನುವಾಗ ಕಂಬೈನ್‌x ಸ್ಟಡಿ ಮಾಡಿದರೆ ಉಪಯೋಗವಾಗುತ್ತೆ ಎಂದು ನನಗೆ ತೋರುವುದಿಲ್ಲ. ಇದರಿಂದ ಗೊಂದಲಗಳು ಹೆಚ್ಚಬಹುದು, ಜೊತೆಗೆ ಕಾಲಹರಣವಾಗುವ ಸಾಧ್ಯತೆಯೂ ಇದೆ. ಆದ್ದರಿಂದ, ಪರೀಕ್ಷೆ ಹತ್ತಿರದಲ್ಲಿರುವಾಗ ಆದಷ್ಟೂ ಒಬ್ಬರೇ ಓದಿಕೊಂಡರೆ ಪ್ರಯೋಜನ ಹೆಚ್ಚು. ಅನುಮಾನಗಳಿದ್ದರೆ ಶಿಕ್ಷಕರಲ್ಲೋ, ಸ್ನೇಹಿತರಲ್ಲೋ ಕೇಳಿ ಬಗೆಹರಿಸಿಕೊಂಡುಬಿಡಿ.

ಪಠ್ಯಪುಸ್ತಕವೇ ಗುರು
ಮಾರ್ಕೆಟ್‌ನಲ್ಲಿ ಹಲವು ಟ್ಯೂಟರ್‌ ಪುಸ್ತಕಗಳು ಸಿಗುತ್ತವೆ. ನಾನು ಯಾವತ್ತೂ ಅವುಗಳನ್ನು ಅವಲಂಬಿಸಲಿಲ್ಲ. ನಾನು ನೆಚ್ಚಿಕೊಂಡಿದ್ದು ಶೈಕ್ಷಣಿಕ ಪಠ್ಯಪುಸ್ತಕವನ್ನು ಮಾತ್ರ. ಅದರಲ್ಲಿದ್ದುದನ್ನು ಒಂಚೂರೂ ಬಿಡದಂತೆ ಓದುತ್ತಿದ್ದೆ. ಅದರಲ್ಲಿ ಕೊಟ್ಟಿರುವ ಪದಗಳನ್ನೇ ಎಕ್ಸಾಕ್ಟ್ ಆಗಿ ನೆನಪಿಟ್ಟುಕೊಳ್ಳುತ್ತಿದ್ದೆ. ಈ ರೀತಿ ಮಾಡಿದಾಗ ನಮ್ಮ ಮೇಲೆ ನಮಗೇ ಆತ್ಮವಿಶ್ವಾಸ ಮೂಡುತ್ತದೆ. ಪ್ರಶ್ನೆಪತ್ರಿಕೆಯಲ್ಲಿ ಅದ್ಯಾವ ಪ್ರಶ್ನೆ ಬಂದರೂ ಉತ್ತರಿಸುವ ಧೈರ್ಯ ಬರುತ್ತದೆ. ಆಗ ಪರೀಕ್ಷೆಯನ್ನು ಎದುರಿಸುವುದು ಸುಲಭ. ಇನ್ನೊಂದು ಮುಖ್ಯವಾದ ಅಂಶವೆಂದರೆ, ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳ ಅಧ್ಯಯನ. ಇದರಿಂದ ಯಾವ ಯಾವ ವಿಭಾಗದಲ್ಲಿ ಯಾವ ಯಾವ ಅಧ್ಯಾಯಗಳಿಂದ ಎಂಥ ಪ್ರಶ್ನೆಗಳು ಬರುತ್ತವೆ ಎನ್ನುವ ಅಂದಾಜು ವಿದ್ಯಾರ್ಥಿಗಳಿಗೆ ಸಿಗುತ್ತೆ. ಪುನರಾವರ್ತನೆಗೊಂಡಿರುವ ಪ್ರಶ್ನೆಗಳ ಬಗ್ಗೆಯೂ ಗೊತ್ತಾಗುತ್ತೆ. ಅವೆಲ್ಲವನ್ನೂ ಓದಿಕೊಂಡರೆ ಮಾರ್ಕ್ಸ್ ಪಕ್ಕಾ.

Advertisement

ವರ್ಕೌಟ್‌ ಪುಸ್ತ
ನಾವು ತರಗತಿಯಲ್ಲಿ ಗುರುಗಳು ಹೇಳಿಕೊಟ್ಟಿದ್ದನ್ನು ನೋಟ್ಸ್‌ ಮಾಡಿಟ್ಟುಕೊಂಡಿರಬಹುದು. ಆದರೆ, ನೋಟ್ಸ್‌ಗಳ ಹೊರತಾಗಿ ನಮ್ಮ ಬಳಿ ವರ್ಕೌಟ್‌ ಪುಸ್ತಕ ಎಂಬುದೊಂದಿರಬೇಕು. ನಾವು ಓದಿಕೊಂಡದ್ದನ್ನು ಪುಟ್ಟದಾಗಿ ಪಾಯಿಂಟುಗಳ ರೂಪದಲ್ಲಿ ಅದರಲ್ಲಿ ಬರೆದಿಟ್ಟುಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು. ಡಯಾಗ್ರಾಮ್‌ಗಳು, ಗಣಿತ ಸೂತ್ರಗಳು, ಪ್ರಮೇಯಗಳು ಇವನ್ನು ಆ ಪುಸ್ತಕದಲ್ಲಿ ಬರೆದಿಡಬೇಕು. ಇದರಿಂದ ಮನನ ಮಾಡಿದಂತಾಗುವುದಲ್ಲದೆ ಪರೀಕ್ಷೆ ಹತ್ತಿರ ಬಂದಾಗ, ಕೊನೆಯ ಕ್ಷಣದಲ್ಲಿ ಇಡೀ ಪಠ್ಯಪುಸ್ತಕವನ್ನು ತಿರುವಿ ಹಾಕುವುದಕ್ಕೆ ಬದಲಾಗಿ ಅದೊಂದು ವಕೌìಟ್‌ ಪುಸ್ತಕವನ್ನು ನೋಡಿಕೊಂಡರೆ ಸಾಕು. ಮುಖ್ಯವಾದ ಅಂಶಗಳೆಲ್ಲವೂ ನೆನಪಿಗೆ ಬರುತ್ತವೆ.

ಹೀಗಿತ್ತು ರಂಜನ್‌ ದಿನಚರಿ…
ತುಂಬಾ ಡೀಸೆಂಟ್‌ ಮತ್ತು ಸಿನ್ಸಿಯರ್‌ ಹುಡುಗ ರಂಜನ್‌. ಎಂಥಾ ಚಿಕ್ಕಪುಟ್ಟ ಸಂಶಯಗಳನ್ನೂ ಅಧ್ಯಾಪಕರಲ್ಲಿ ಕೇಳಿ ಬಗೆಹರಿಸಿಕೊಂಡುಬಿಡುತ್ತಿದ್ದ. ನಾನು ಗಮನಿಸಿದ ಇನ್ನೊಂದು ಸಂಗತಿ ಅವನು ಪಠ್ಯಪುಸ್ತಕವನ್ನು ಪೂರ್ತಿಯಾಗಿ ಓದುತ್ತಿದ್ದ. ಒಂದಷ್ಟನ್ನು ಓದಿ, ಕೆಲವನ್ನು ಮುಖ್ಯವಲ್ಲವೆಂದು ಬಿಡುವುದು- ಹೀಗೆಲ್ಲಾ ಮಾಡುತ್ತಿರಲಿಲ್ಲ. ಅವನು ಟೈಮ್‌ ವೇಸ್ಟ್‌ ಮಾಡಿದ್ದೇ ನಾನು ನೋಡಿಲ್ಲ. ಊಟದ ಸಮಯದಲ್ಲೂ ಅವನು ಊಟ ಬೇಗ ಮುಗಿಸಿ ಓದಲು ಕೂರುತ್ತಿದ್ದ. ಆಟವಂತೂ ದೂರದ ಮಾತು. ಹೆಚ್ಚು ಸ್ನೇಹಿತರೂ ಅವನಿಗಿರಲಿಲ್ಲ. ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರಲಿಲ್ಲವಾದರೂ ತುಂಬಾ ಆ್ಯಕ್ಟಿವ್‌ ಹುಡುಗನಾಗಿದ್ದ. ಚರ್ಚಾ ಸ್ಪರ್ಧೆ, ಕ್ವಿಝ್ನಲ್ಲಿ ಮುಂದಿದ್ದ. ಇನ್ನೊಂದು ಮುಖ್ಯವಾದ ಸಂಗತಿ ಎಂದರೆ ತಾನು ಜಾಣ ಇದ್ದೀನಿ ಅಂತ ಅವನ ತಲೆ ತಿರುಗುತ್ತಿರಲಿಲ್ಲ. ಬೇರೆಯವರು ಯಾರಾದರೂ ಆಗಿದ್ದರೆ ಹೇಗಿರುತ್ತಿದ್ದರೋ ನಂಗೊತ್ತಿಲ್ಲ. ಆದರೆ ರಂಜನ್‌ ಯಾವತ್ತೂ ತನ್ನ ಬುದ್ಧಿವಂತಿಕೆಯನ್ನು, ತನ್ನ ಶೈಕ್ಷಣಿಕ ಪ್ರಗತಿಯನ್ನು ಇತರರ ಮುಂದೆ ಪ್ರದರ್ಶಿಸುತ್ತಿರಲಿಲ್ಲ. ಅವನಲ್ಲಿ ನನಗೆ ತುಂಬಾ ಇಷ್ಟವಾದ ಗುಣ ಅದುವೇ.
– ಗಿರೀಶ್‌ ಬಾಟ್ನಿ, ರಂಜನ್‌ನ ವಿಜ್ಞಾನ ಶಿಕ್ಷಕರು, ಪೂರ್ಣಪ್ರಜ್ಞಾ ಪ್ರೌಢಶಾಲೆ, ಭದ್ರಾವತಿ 

ರ್‍ಯಾಂಕ್‌ಗೆ ನೆರವಾಗುವ ಯೋಗ!
ಪರೀಕ್ಷೆ ಸಮಯದಲ್ಲಿ ಮನಸ್ಸು ಆತಂಕಗೊಳ್ಳುತ್ತದೆ. ಈ ಸಂದರ್ಭದಲ್ಲಿ ಓದು ತಲೆಗೆ ಹತ್ತುವುದಿಲ್ಲ. ಹೀಗಾಗಿ ಪುಸ್ತಕ ಬದಿಗಿಟ್ಟು ಒಂದಷ್ಟು ಸಮಯ ಯೋಗಾಭ್ಯಾಸ ಮಾಡುವುದರಿಂದ ಮನಸ್ಸು ನಿರಾಳವಾಗುತ್ತದೆ, ಸಹಜ ಸ್ಥಿತಿಗೆ ಬರುತ್ತದೆ. ನನ್ನ ಪ್ರಕಾರ ಕೇವಲ 20 ನಿಮಿಷಗಳ ಯೋಗದ ವಿದ್ಯಾರ್ಥಿಗಳು ತಮ್ಮೆಲ್ಲಾ ಉದ್ವಿಗ್ನತೆಯನ್ನು ಕಳೆದುಕೊಳ್ಳಬಹುದು. ಅಲ್ಲದೆ ಸೂರ್ಯ ನಮಸ್ಕಾರ, ಮತ್ಸಾéಸನದಂಥ ಆಸನಗಳನ್ನು ಅಭ್ಯಾಸ ಮಾಡುವುದರಿಂದ ಮಕ್ಕಳ ಏಕಾಗ್ರತೆ ಮತ್ತು ನೆನಪಿನ ಶಕ್ತಿ ಹೆಚ್ಚುತ್ತದೆ. ಯೋಗ, ಅಧ್ಯಾತ್ಮದ ಮುಖಾಂತರ ನಮ್ಮೊಳಗಿನ ಶಕ್ತಿಯನ್ನು ಜಾಗೃತಗೊಳಿಸಿದಾಗ ಮನಸ್ಸು ಇನ್ನಷ್ಟು ಸದೃಢಗೊಳ್ಳುವುದು. ಆಗ ಯಾವುದೇ ವಿಚಾರವನ್ನು ಗ್ರಹಿಸಿಕೊಳ್ಳುವುದು ಸುಲಭ. ಉಸಿರಿಗಿರುವ ಶಕ್ತಿ ಅಗಾಧವಾದುದು. ಬರೀ ಉಸಿರಾಡುವ ಪ್ರಕ್ರಿಯೆಯ ಮೂಲಕವೇ ಜಾಗೃತ ಸ್ಥಿತಿಗೆ ತಲುಪಿಬಿಡಬಹುದು. ಕಪಾಲಭಾತಿಯಂಥ ಪ್ರಾಣಾಯಾಮ ತಂತ್ರಗಳೂ ಕೂಡಾ ವಿದ್ಯಾರ್ಥಿಗಳಿಗೆ ತುಂಬಾ ಸಹಕಾರಿ.
– ಶ್ರೀ ವಚನಾನಂದ ಸ್ವಾಮೀಜಿ, ಶ್ವಾಸಗುರು 

ಮನೋಶಾಸ್ತ್ರ ಏನು ಹೇಳುತ್ತೆ?
1. ಪರೀಕ್ಷೆಯ ಫಲಿತಾಂಶದ ಕಡೆಗೆ ಗಮನ ಕೊಡಬೇಡಿ. ಸಿದ್ದತೆಗೆ ಆದ್ಯತೆ ಕೊಡಿ
2. ಏಕಾಗ್ರತೆಗಾಗಿ, ಉಸಿರಾಟವನ್ನು ಕ್ರಮಬದ್ಧವಾಗಿ ಮಾಡುವುದು
3. ಇಡೀ ಪಠ್ಯಪುಸ್ತಕವನ್ನು ಓದಿ
4. ಒಂದು ಮತ್ತು ಎರಡು ಅಂಕಗಳ ಪ್ರಶ್ನೆಗಳಿಗೆ ಮೊದಲು ಸಿದ್ದತೆ ಮಾಡಿಕೊಳ್ಳಿ
5. ಗಣಿತದ ಸಮಸ್ಯೆಗಳನ್ನು ಬಿಡಿಸುವುದು ಅಭ್ಯಾಸವಾಗಬೇಕು.  
6. ಪದ್ಯಗಳನ್ನು ಬಾಯಿಪಾಠ ಮಾಡಿದರೆ ಓಳ್ಳೆಯದು
7. ಹಾಸಿಗೆಯ ಮೇಲೆ ಕುಳಿತು ಓದಬೇಡಿ. ಚಾಪೆಯ ಮೇಲೆ ಕುಳಿತು ಓದಿದರೆ ಒಳ್ಳೆಯದು
8. ಅತಿಯಾಗಿ ಆಹಾರ, ಕುರುಕಲು ತಿಂಡಿಯ ಸೇವನೆ ಬೇಡ
9. ಮೊಬೈಲು ಮತ್ತು ಟಿ.ವಿ.ಯಿಂದ ದೂರವಿರಿ
– ಡಾ. ಶುಭಾ ಮಧುಸೂದನ್‌, ಚಿಕಿತ್ಸಾ ಮನೋವಿಜ್ಞಾನಿ 

ವಿದ್ಯಾರ್ಥಿಗಳ ಆಹಾರಕ್ರಮ ಹೀಗಿರಲಿ…
ಪರೀಕ್ಷಾ ಸಮಯದಲ್ಲಿ ಮಕ್ಕಳು ಒತ್ತಡಕ್ಕೆ ಸಿಲುಕುವುದು ಸಹಜ. ಒತ್ತಡದ ಕಾರಣದಿಂದ ಮಕ್ಕಳಿಗೆ ತುಂಬಾ ಹಸಿವಾಗಬಹುದು ಅಥವಾ ಹಸಿವಾಗದೇ ಇರಬಹುದು. ಹಾಗಾಗಿ ಹೆತ್ತವರು ಮಕ್ಕಳ ಆಹಾರ ಕ್ರಮದ ಬಗ್ಗೆ ಗಮನ ಹರಿಸಬೇಕು. ಊಟ ಬಿಡುವುದರಿಂದ ಮೆದುಳಿಗೆ ಗುಕೋಸ್‌ ಸರಬರಾಜು ಕಡಿಮೆಯಾಗಿ, ಯೋಚನಾ ಶಕ್ತಿ, ನೆನಪಿನ ಶಕ್ತಿ ಕುಂಠಿತವಾಗುತ್ತದೆ. ಹೀಗಾಗಿ ಆಗಾಗ ಹಣ್ಣಿನ ರಸಗಳಿಗೆ ಬೆಲ್ಲ ಹಾಕಿ ಕುಡಿಯೋದು ಒಳ್ಳೆಯದು. ಇನ್ನು ಕೆಲವರು ನಿದ್ರೆ ಬರಬಾರದು ಎಂದು ಆಗಾಗ ಕಾಫಿ-ಟೀ ಕುಡಿಯುತ್ತಾರೆ. ಹಾಗೆ ಕಾಫಿ-ಟೀ ಕುಡಿದರೆ ಜಠರಾಮ್ಲಗಳ ಉತ್ಪತ್ತಿ ಹೆಚ್ಚಾಗಿ ಆ್ಯಸಿಡಿಟಿಯಂಥ ಸಮಸ್ಯೆಗಳು ಉಂಟಾಗುತ್ತವೆ. ಕಾಫಿ-ಟೀ ಬದಲು ಬಿಸಿನೀರಿಗೆ ಲವಂಗ, ಚಕ್ಕೆ ಹಾಕಿ ಸ್ವಲ್ಪ ಸ್ವಲ್ಪವೇ ಕುಡಿಯಬಹುದು. ಕಷಾಯ ಅಥವಾ ಮಜ್ಜಿಗೆಯನ್ನು ಕುಡಿದರೂ ಆದೀತು. 
ಕುರುಕಲು ತಿಂಡಿ, ಚಾಕಲೇಟುಗಳಿಂದ ದೂರವಿರಿ. ರಾತ್ರಿ ಹದವಾದ ಬಿಸಿ ಅನ್ನ- ಸಾರು ಊಟ ಮಾಡಿದರೆ, ನಿದ್ದೆಯ ಸಮಸ್ಯೆ ಕಾಡುವುದಿಲ್ಲ. ಮೂರು ಹೊತ್ತೂ ಊಟ ಮಾಡಬೇಕು. ಹಣ್ಣು-ತರಕಾರಿ, ತಾಜಾ ಹಣ್ಣಿನ ರಸ ಸೇವಿಸಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಿ. ಯಥೇತ್ಛವಾಗಿ ನೀರು ಕುಡಿಯಿರಿ ಹಾಗೂ ಚೆನ್ನಾಗಿ ನಿದ್ದೆ ಮಾಡಿ. 
ಡಾ. ಹೆಚ್‌.ಎಸ್‌. ಪ್ರೇಮಾ, ಡಯಟೀಶಿಯನ್‌ ಮತ್ತು ನ್ಯೂಟ್ರಿಷಿಯನಿಸ್ಟ್‌

 ಹರ್ಷವರ್ಧನ್‌, ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next