Advertisement

ನಮ್ಮೂರು ನಮ್ಮ ಕೆಲಸ

07:35 PM Aug 19, 2019 | mahesh |

ನಮ್ಮೂರು ಹೀಗಿರಬೇಕು ಅಂತ ಕನಸು ಕಂಡ ಮೇಲೆ ಈ ಗುಂಪು ಸಮ್ಮನೆ ಕೂರಲಿಲ್ಲ. ಊರಿನ ಗಲ್ಲಿ ಗಲ್ಲಿ ತಿರುಗಿ, ಕಸ, ನೀರಿನ ಮಹತ್ವ ತಿಳಿಸುವುದರ ಜೊತೆಗೆ ತಾವೇ ಸ್ವತ್ಛತಾ ಕಾರ್ಯಕ್ಕೆ ನಿಂತು ಬಿಟ್ಟರು. ರಸ್ತೆಯ ಅಂಚಲ್ಲಿ ಗಿಡ ನೆಟ್ಟು, ನೀವು ನೀರು ಹಾಕಿ ಬೆಳೆಸಿ ಅಂತ ಮನೆಯವರಿಗೆ ದತ್ತು ಕೊಟ್ಟರು. ಅಂದಹಾಗೆ, ಸಮಾಜ ಸೇವಕರು ತಂಡದಲ್ಲಿ ಎಂಜಿನಿಯರ್‌, ಡಾಕ್ಟರ್‌ಗಳು, ಉದ್ಯಮಿ, ಲಾಯರ್‌ಗಳು, ಸಾಮಾನ್ಯ ಜನರೂ ಕೂಡ ಇದ್ದಾರೆ.

Advertisement

ಗುಳೇದ ಗುಡ್ಡದಲ್ಲಿ ಈಗ ತಿಪ್ಪೆ ಕಾಣುವುದಿಲ್ಲ, ಕಸ ಬಿದ್ದರೆ ಕ್ಷಣಾರ್ಧದಲ್ಲೇ ಮಾಯ. ಏಕೆಂದರೆ, ಇದನ್ನೆಲ್ಲ ಸ್ವಚ್ಛ ಮಾಡುವುದಕ್ಕಾಗಿಯೇ ಕಟಿಬದ್ಧವಾದ ತಂಡ ಇದೆ. ಅದರ ಹೆಸರು ಗುಳೇದಗುಡ್ಡದ ಸಮಾಜ ಸೇವಕರು (GSW)ಅಂತ. ಇವರ ಗುರಿ, ಗುಳೇದ ಗುಡ್ಡವನ್ನು ಸ್ವತ್ಛವಾಗಿಡಬೇಕು ಅನ್ನೋದು. ಪ್ರಧಾನಿ ನರೇಂದ್ರ ಮೋದಿಯವರ ಸ್ವತ್ಛತಾ ಅಭಿಯಾನದ ಕರೆಯಿಂದ ಸ್ಫೂರ್ತಿಗೊಂಡು ಹುಟ್ಟಿದ್ದು ಬಾಗಲಕೋಟೆ ಸಮಾಜ ಸೇವಕರ ತಂಡ. ಇದರ ಸದಸ್ಯರು ಪ್ರತಿ ಶನಿವಾರ, ಭಾನುವಾರಗಳನ್ನು ತಮ್ಮ ಊರನ್ನು ಕ್ಲೀನ್‌ ಮಾಡಲು ತೆಗೆದಿಟ್ಟಿದ್ದಾರೆ. ಇಡೀ ಊರು ಪರಿಶುದ್ಧವಾಗಿರಬೇಕು ಅನ್ನೋದು ಇವರ ಗುರಿ. ಈ ಗುರಿ ಹುಟ್ಟಿ ಸುಮಾರು ಐದು ವರ್ಷವಾಯಿತು. ಈಗಲೂ ಮುಂದುವರಿದಿದೆ. ಸೇವ‌ಕರ ತಂಡದಲ್ಲಿ ಗುಳೇದಗುಡ್ಡದ ಸಾಮಾನ್ಯ ಜನರಿಂದ, ಡಾಕ್ಟರ್‌, ಎಂಜಿನಿಯರ್‌ಗಳು, ಶಿಕ್ಷಕರು, ಉದ್ಯಮಿ, ವಕೀಲರು, ನೇಕಾರರು, ಫೋಟೋಗ್ರಾಫ‌ರ್‌ಗಳು ಯಾವುದೇ ಭೇದಭಾವವಿಲ್ಲದೆ ಕೈ ಜೋಡಿಸಿದ್ದಾರೆ.

“ಆರಂಭದಲ್ಲಿ ಸ್ವತ್ಛತಾ ಕಾರ್ಯ ಮಾಡುವುದನ್ನು ಜನರು ನೋಡುತ್ತಾ ನಿಲ್ಲುತ್ತಿದ್ದರು. ಅದರಲ್ಲೊಬ್ಬ ಏ…. ನೋಡ್ರೋ ಅಲ್ಲಿ ಡಾಕ್ಟ್ರೇ ಕಸ ಹೊಡಿತಿದಾರೆ, ನಾವು ಕೈ ಜೋಡಿಸೋಣ ಬನ್ರೊ ಎಂದದ. ನಂತರದಲ್ಲಿ ಜನ ತಾವಾಗೇ ಬಂದು ಜೊತೆಯಾದರು’ ಎಂದು ಸಮಾಜ ಸೇವಕರ ಸಂಘ ಆರಂಭಿಸಿದ ಡಾ. ಬಸವರಾಜ ಬಂಟನೂರ.

ಮೊಟ್ಟ ಮೊದಲಿಗೆ ಸದಾ ಜನಜಂಗುಳಿ, ಗೌಜು ಗದ್ದಲದಿಂದ ಕೂಡಿದ್ದ ಗುಳೇದಗುಡ್ಡ ಬಸ್‌ ನಿಲ್ದಾಣದ ಸುತ್ತಮುತ್ತ ಸ್ವತ್ಛತಾ ಕಾರ್ಯ ಶುರುಮಾಡಿದರು. ಅಲ್ಲಿರುವ ಮುಳ್ಳು ಕಂಟಿಗಳನ್ನು ಕಡಿದು ಆವರಣದಲ್ಲಿ ಸಸಿಗಳನ್ನು ಹಚ್ಚಲಾಯಿತು. ಆ ಸಸಿಗಳನ್ನು ದನಕರು ತಿನ್ನಬಾರದೆಂದು ಕಬ್ಬಿಣದ ಟ್ರೀ ಗಾರ್ಡ್‌( ರಕ್ಷಾ ಕವಚ) ಮಾಡಿ ಹಾಕಲಾಯಿತು. ಊರಿನ ಆರಾಧ್ಯ ದೇವತೆ ಮೂಕೇಶ್ವರಿ ದೇವಿಯ ದ್ವಾರಬಾಗಿಲಿನಿಂದ ಹಿಡಿದು ಗುಡಿಯವರೆಗೂ ಸಸಿಗಳನ್ನು ನೆಟ್ಟು, ಅದರ ನಿರ್ವಹಣೆ ಜವಾಬ್ದಾರಿಯನ್ನು ಮುಂದಿನ ಮನೆಗಳಿಗೆ ಕೊಟ್ಟಿದ್ದಾರೆ. ಇದರಲ್ಲಿ ಯಾರು ಚೆನ್ನಾಗಿ ಗಿಡ ಬೆಳಸುತ್ತಾರೋ ಅವರಿಗೆ ಮಹಿಳಾ ದಿನಚಾರಣೆಯಂದು ಸನ್ಮಾನ ಮಾಡುತ್ತಾರೆ.

ಗುಳೇದಗುಡ್ಡಕ್ಕೆ ದೊಡ್ಡ ಸಮಸ್ಯೆ ಕಸದ ತಿಪ್ಪೆಗಳದ್ದು. ಇದರ ನಿರ್ಮೂಲನೆ ಮಾಡುವುದು ಹೇಗೆ ಅನ್ನೋದನ್ನು ತಂಡ ಯೋಚಿಸಿತು. ರೋಗ ಬಂದ ನಂತರ ಮತ್ತೆ ಮರುಕಳಿಸಿದಂತೆ ತಡೆಯುವುದು ಬಹಳ ಮುಖ್ಯ ಅನ್ನೋ ರೀತಿ, ತಿಪ್ಪೆಯ ಸ್ವಚ್ಛ ಮಾಡಿದ ನಂತರ ಮತ್ತೆ ಅದೇ ರೀತಿ ಆಗದಂತೆ ತಡೆಯಲು ಒಂದಷ್ಟು ಯೋಜನೆಗಳನ್ನು ಹಾಕಿಕೊಂಡರು. ಹೀಗಾಗಿ, ಜನರ ಮನಸ್ಸನ್ನು ಸ್ವತ್ಛತೆಯೆಡೆಗೆ ಹೊರಳಿಸಲು ಮನೆ ಮನೆಗೆ ಭೇಟಿ ನೀಡಿ, ನೀರಿನ ಸದ್ಬಳಕೆ ಬಗ್ಗೆ ಅರಿವು ಮೂಡಿಸ ತೊಡಗಿದರು. ಜನರಲ್ಲಿ ಜಾಗೃತಿ ನಿಧಾನವಾಗಿ ಮೂಡಲಾರಂಭಿಸಿತು. ಪರಿಣಾಮ, ಶನಿವಾರ ಭಾನುವಾರಗಳನ್ನು ಎಲ್ಲರೂ ಸಮಾಜ ಸೇವೆಗೆ ಮೀಸಲಿಟ್ಟರು. ಪ್ರತಿ ಶನಿವಾರ ಸಂಜೆ, ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಮೋಹಲ್ಲಾ ಸಭೆ
(ಜನಜಾಗೃತಿ ಸಭೆ) ನಡೆಸುತ್ತಾರೆ. ಅಲ್ಲಿಗೆ ಪುರಸಭಾ ಅಧಿಕಾರಿಗಳನ್ನು ಸೇರಿಸಿ, ಏನೇನು ಕೆಲಸ, ಸಮಸ್ಯೆ ಏನು ಅಂತೆಲ್ಲ ಸ್ಥಳೀಯರೊಂದಿಗೆ ಚರ್ಚಿಸುತ್ತಾರೆ. ಕಳೆದ ಐದು ವರ್ಷಗಳಿಂದ ಸಮಾಜ ಸೇವೆಯಲ್ಲಿ ನಿರತರಾಗಿರುವ ಗುಳೇದ ಗುಡ್ಡದ ಸೇವಕರು ಆರಂಭದಲ್ಲಿ ಇದ್ದದ್ದು 8-10ಜನ ಮಾತ್ರ ಇದ್ದರು. ಇವತ್ತು ಈ ಸಂಖ್ಯೆ 50ಕ್ಕೂ ಹೆಚ್ಚಾಗಿದೆ.
ಈ ಸಂಘದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಖಜಾಂಚಿ ಅಂತ ಯಾವ ಹುದ್ದೆಗಳೂ ಇಲ್ಲ. ಹೀಗೆಲ್ಲ ಹುದ್ದೆ ಸೃಷ್ಟಿ ಮಾಡಿದರೆ ರಾಜಕೀಯ ಹರಡಬಹುದು ಎನ್ನುವ ಉದ್ದೇಶದಿಂದಲೇ ಯಾರೂ ಮುಖ್ಯರಲ್ಲ, ಯಾರು ಅಮುಖ್ಯರೂ ಅಲ್ಲಾ ಎಂಬ ಕುವೆಂಪು ಅವರ ಆಶಯದಂತೆ ನಡೆದುಕೊಂಡು ಬರುತ್ತಿದ್ದಾರೆ. ಇರುವ ಸದಸ್ಯರಲ್ಲಿ ವಾರಕ್ಕೆ ಒಬ್ಬರು ನಾಯಕತ್ವ ವಹಿಸಿಕೊಳ್ಳುವುದರಿಂದ ಸಮಸ್ಯೆ ಇಲ್ಲವಂತೆ.


GSW ತಂಡದ ನಿಸ್ವಾರ್ಥ ಕಾರ್ಯದಿಂದ ಗುಳೇಗುಡದಲ್ಲಿ ಬೇತಾಳನಂತೆ ಸತತ 50 ವರ್ಷಗಳಿಂದ ಬೆನ್ನಿಗಂಟಿಕೊಂಡಿದ್ದ 70 ರಿಂದ 80 ತಿಪ್ಪೆಗಳು ಕಣ್ಮರೆಯಾದವು. ಕೇವಲ ಸ್ವತ್ಛ ಮಾಡುವುದೊಂದೇ ತಂಡದ ಗುರಿಯಾಗಿರಲಿಲ್ಲ. ಗುಳೇದಗುಡ್ಡವನ್ನು ಹಸಿರಾಗಿಸುವುದು ತಂಡದ ಗುರಿಯಾಗಿದೆ. ಅದರಂತೆ, ಮಳೆಗಾಲದಲ್ಲಿ ಸಾವಿರ ಸಸಿ ಸಂಭ್ರಮ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು, 1,500 ಸಸಿಗಳನ್ನು ನೆಟ್ಟಿದ್ದಾರೆ. ಗುಳೇದಗುಡ್ಡ ದಲ್ಲಿರುವ ಎಲ್ಲಾ ಶಾಲಾ-ಕಾಲೇಜುಗಳು, ಸಂಘ ಸಂಸ್ಥೆಗಳು, ಊರಿನ ಗುರು ಹಿರಿಯರು ಈ ವಿನೂತನ ಕಾರ್ಯಕ್ಕೆ ಹೆಗಲು ಕೊಟ್ಟರು. ಸಸಿ ನೆಟ್ಟ ಮೇಲೆ ಅವುಗಳ ಜವಾಬ್ದಾರಿಯನ್ನು ವಿದ್ಯಾರ್ಥಿಗಳಿಗೆ ನೀಡಿದ್ದಾರೆ.

Advertisement

ಎಖಗ ಯ ತಂಡದ ವಾರ್ಷಿಕೋತ್ಸವದ ನೆಪದಲ್ಲಿ ಊರಿನ ಪ್ರಮುಖ ರಸ್ತೆಗಳಲ್ಲಿ ಜಾಥಾ(ಜನಜಾಗೃತಿ) ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ಅರಿವು ಮೂಡಿಸುವುದರ ಜೊತೆಗೆ, ಪೌರ ಕಾರ್ಮಿಕರಿಗೆ ಉಚಿತ ಆರೋಗ್ಯ ಮತ್ತು ರಕ್ತ ತಪಾಸಣೆ ಕಾರ್ಯಕ್ರಮವನ್ನು ಏರ್ಪಡಿಸುತ್ತಿದೆ.

ವಾರಕ್ಕೆ ಒಬ್ಬರು ಲೀಡರ್‌
ಸಂಘದ ಸದಸ್ಯರನ್ನು ಒಟ್ಟು ಗೂಡಿಸಲು ವಾಟ್ಸಾಪ್‌ ಗ್ರೂಪ್‌ ಇದೆ. ಅದರಲ್ಲಿ ಈ ವಾರ ಯಾವ ಪ್ರದೇಶಕ್ಕೆ ಹೋಗಬೇಕು, ಯಾರ ಮನೆಯಲ್ಲಿ ಸಭೆ ನಡೆಸಬೇಕು, ಎಲ್ಲೆಲ್ಲಿ ಸ್ವತ್ಛ ಗೊಳಿಸಬೇಕು ಅನ್ನೋ ವಿಚಾರ ಬಹುಮತದಿಂದ ನಿರ್ಧಾರವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ರೀತಿ ಸಭೆ ನಡೆದಾಗ ಇವರು ಮೇಲು, ಅವರು ಕೀಳು ಅನ್ನೋ ಮನೋಭಾವ ಬರಬಾರದು ಎಂಬ ಕಾರಣಕ್ಕೆ ಯಾರೂ ಖುರ್ಚಿಯ ಮೇಲೆ ಕುಳಿತು ಚರ್ಚಿಸುವುದಿಲ್ಲ. ಎಲ್ಲರೂ ನೆಲದ ಮೇಲೆ ಕುಳಿತೇ ವಿಚಾರ ವಿನಿಮಯ ಮಾಡುವುದು ವಿಶೇಷ .

ಶಿವಕುಮಾರ ಮೋಹನ ಕರನಂದಿ

Advertisement

Udayavani is now on Telegram. Click here to join our channel and stay updated with the latest news.

Next