Advertisement

ಬಿಜೆಪಿಯಷ್ಟೇ ನಮ್ಮ ಗುರಿ, ಯದುವೀರ್‌ರನ್ನು ಗುರಿಯಾಗಿಸಿಕೊಳ್ಳದಿರಿ: ಸಿಎಂ ಸೂಚನೆ

09:30 PM Mar 24, 2024 | Team Udayavani |

ಮೈಸೂರು: ಕಾಂಗ್ರೆಸ್‌ ಪಕ್ಷದ ಮುಖಂಡರು, ಸಚಿವರು, ಸ್ಥಳೀಯ ಅಭ್ಯರ್ಥಿಗಳು ಯಾರೂ ಕೂಡಾ ನಮ್ಮ ಪ್ರತಿಸ್ಪರ್ಧಿ ಯದುವೀರ್‌ ಒಡೆಯರ್‌ ಅವರನ್ನು ವೈಯಕ್ತಿಕವಾಗಿ ಗುರಿಯಾಗಿಸಿಕೊಂಡು ಮಾತನಾಡುವುದಾಗಲಿ, ಹೇಳಿಕೆ ನೀಡುವುದಾಗಲಿ ಮಾಡಬೇಡಿ. ನಮ್ಮ ಗುರಿ ಏನಿದ್ದರೂ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ 10 ವರ್ಷಗಳಿಂದ ನಡೆಸಿರುವ ದುರಾಡಳಿತದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಿ. ನಮ್ಮ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಯನ್ನು ಮನೆ-ಮನೆಗೂ ತಿಳಿಸಿ, ನಮ್ಮ ಪಕ್ಷದ ಅಭ್ಯರ್ಥಿ ಪರ ಮತ ಯಾಚಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

Advertisement

ಮೈಸೂರಿನ ಖಾಸಗಿ ಹೊಟೇಲ್‌ನಲ್ಲಿ ರವಿವಾರ ನಡೆದ ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳ ಕಾಂಗ್ರೆಸ್‌ ಪಕ್ಷದ ಜನಪ್ರತಿನಿಧಿಗಳು ಹಾಗೂ ಮುಂಚೂಣಿ ನಾಯಕರ ಸಭೆಯಲ್ಲಿ ಮಾತನಾಡಿದ ಅವರು, ಹಳೇ ಮೈಸೂರು ಭಾಗದಲ್ಲಿ ರಾಜ ವಂಶಸ್ಥರ ಜತೆ ಜನರು ಭಾವನಾತ್ಮಕ ಸಂಬಂಧ ಇಟ್ಟುಕೊಂಡಿದ್ದಾರೆ. ಆದ್ದರಿಂದ ಯದುವೀರ್‌ ಒಡೆಯರ್‌ ಅವರನ್ನು ಮಹಾರಾಜ, ರಾಜವಂಶಸ್ಥ ಎಂದು ಪದೇಪದೆ ಉಲ್ಲೇಖಿಸದೆ ಬಿಜೆಪಿ ಅಭ್ಯರ್ಥಿ ಎಂದು ಹೇಳಿ. ಅವರ ವಿರುದ್ಧ ಸಿಕ್ಕಸಿಕ್ಕಂತೆ ಹೇಳಿಕೆಗಳನ್ನು ಕೊಡಬೇಡಿ, ಭಾಷಣ ಮಾಡುವಾಗ ಎಚ್ಚರಿಕೆಯಿಂದ ಮಾತನಾಡಿ ಎಂದು ಕಿವಿಮಾತನ್ನು ಹೇಳಿದ್ದಾರೆ.

ಬಿಜೆಪಿಯವರಿಗೆ ಆಹಾರವಾಗಬಾರದು
ಭಾವನಾತ್ಮಕ ವಿಚಾರಗಳನ್ನು ತಿರುಚುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಹೀಗಾಗಿ ನಿಮ್ಮ ಹೇಳಿಕೆಗಳು ಬಿಜೆಪಿಯವರಿಗೆ ಆಹಾರವಾಗಬಾರದು. ಈ ಕಾರಣದಿಂದ ಯದುವೀರ್‌ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದು ಸಿಎಂ ಪದೇಪದೆ ಒತ್ತಿ ಹೇಳಿದರು.

ವೈಯಕ್ತಿಕ ಟೀಕೆ ಬೇಡ: ಸೇಠ್
ಸಿದ್ದರಾಮಯ್ಯ ಅವರಿಗಿಂತ ಮೊದಲು ಭಾಷಣ ಮಾಡಿದ ಕಾಂಗ್ರೆಸ್‌ ನೂತನ ಕಾರ್ಯಾಧ್ಯಕ್ಷ ತನ್ವೀರ್‌ ಸೇಠ್ ಕೂಡ ಇದೇ ಮಾತನ್ನು ಸೂಚ್ಯವಾಗಿ ಕಾರ್ಯಕರ್ತರಿಗೆ ಹೇಳಿದರು. ನೀವು ಯಾರನ್ನೇ ಆಗಲಿ ವೈಯಕ್ತಿಕವಾಗಿ ಗುರಿಯಾಗಿಸಿಕೊಂಡು ಮಾತನಾಡಲು ಹೋಗಬೇಡಿ. ಏನೋ ಮಾತನಾಡಿ ಅಂತಿಮವಾಗಿ ಪಕ್ಷಕ್ಕೆ ಮುಜುಗರ ಉಂಟುಮಾಡಬೇಡಿ. ಚುನಾವಣ ಸಮಯದಲ್ಲಿ ಸಣ್ಣ ವಿಚಾರಗಳು ಕೂಡಾ ದೊಡ್ಡದಾಗುತ್ತಾ ಹೋಗುತ್ತವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next