Advertisement

ಗೋಪಾಲಕೃಷ್ಣ ಬೇಳೂರನ್ನು ಮೆಚ್ಚಿಸಲು ನಮ್ಮ ಉಚ್ಚಾಟನೆ; ಡಾ.ರಾಜನಂದಿನಿ ವ್ಯಂಗ್ಯ

04:46 PM Jul 07, 2023 | Team Udayavani |

ಸಾಗರ: ಬಿಜೆಪಿ ಸೇರುವ ಮೊದಲು ನಾನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದೇನೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್ ನನ್ನನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿರುವುದಾಗಿ ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಬಿಜೆಪಿ ಪಕ್ಷದ ತಾಲೂಕು ಪ್ರಮುಖರಾದ ಡಾ. ರಾಜನಂದಿನಿ ತಿಳಿಸಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿದ್ದು ಬಿಜೆಪಿ ಪರ ಕೆಲಸ ಮಾಡಿದ್ದರೆ ಉಚ್ಚಾಟನೆಗೆ ಒಂದು ಅರ್ಥ ಬರುತ್ತಿತ್ತು. ಆದರೆ ಪಕ್ಷಕ್ಕೆ ರಾಜಿನಾಮೆ ನೀಡಿ ಎರಡು ತಿಂಗಳ ನಂತರ ಉಚ್ಚಾಟನೆ ಮಾಡಿದ್ದಾಗಿ ಹೇಳುತ್ತಿರುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ನಡೆ ಹಿಂದೆ ಯಾವ ಉದ್ದೇಶವಿದೆ ಎನ್ನುವುದನ್ನು ಅವರು ಸ್ಪಷ್ಟಪಡಿಸಬೇಕು ಎಂದರು.

ಕಾಂಗ್ರೆಸ್ ಹಿಂದಿನ ಶಾಸಕರನ್ನು ನಾನು ಉಚ್ಚಾಟನೆ ಬಗ್ಗೆ ಚರ್ಚೆ ಮಾಡಿದ್ದೇನೆ. ತಾವು ಶಾಸಕರಾಗಿದ್ದಾಗ ಇಂತಹದ್ದು ನಡೆದಿರಲಿಲ್ಲ ಎಂದು ಹೇಳುತ್ತಾರೆ. ಈಗಿನ ಕಾಂಗ್ರೆಸ್ ಶಾಸಕರ ದ್ವೇಷದ ರಾಜಕಾರಣಕ್ಕೆ ಇದು ಸಾಕ್ಷಿಯಾಗಿದೆ. ನಮ್ಮ ಬೇಡಿಕೆಗೆ ವಿರುದ್ಧವಾಗಿರುವ ಅಭ್ಯರ್ಥಿಗೆ ಟಿಕೆಟ್ ನೀಡಿದ್ದರಿಂದ ನಾವು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇವೆ. ಎರಡು ತಿಂಗಳ ನಂತರ ನಮ್ಮನ್ನು ಉಚ್ಚಾಟನೆ ಮಾಡಿರುವುದು ಕಾನೂನುಬಾಹಿರ ಎಂದು ಹೇಳಿದರು.

ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್ ಮಾತನಾಡಿ, ನಾವೆಲ್ಲಾ ಮೂಲ ಕಾಂಗ್ರೆಸ್ಸಿಗರು. ಗೋಪಾಲಕೃಷ್ಣ ಬೇಳೂರು ಬಿಜೆಪಿ, ಜೆಡಿಎಸ್ ಅಲೆದು ಅಲ್ಲಿ ಟಿಕೆಟ್ ಸಿಗಲಿಲ್ಲ ಎಂದು ಕಾಂಗ್ರೆಸ್‌ಗೆ ಬಂದವರು. ನಾನು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದೇನೆ. ಹಿಂದೆ ಬೇಳೂರು ಶಾಸಕರಾಗಿದ್ದ ಸಂದರ್ಭದಲ್ಲಿಯೇ ಕ್ಷೇತ್ರದಲ್ಲಿ ದ್ವೇಷದ ರಾಜಕಾರಣ ಹುಟ್ಟಿದ್ದು, ಅದನ್ನು ಈಗಲೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ನೀತಿ ನಿಯಮ ಇದ್ದರೆ ಮೊದಲು ಜಿಲ್ಲಾಧ್ಯಕ್ಷ ಸುಂದರೇಶ್ ಅವರನ್ನು ಉಚ್ಚಾಟನೆ ಮಾಡಲಿ ಎಂದು ಒತ್ತಾಯಿಸಿದ ಅವರು, ಶಾಸಕ ಗೋಪಾಲಕೃಷ್ಣ ಬೇಳೂರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನ ಹರಿಸುವುದನ್ನು ಬಿಟ್ಟು ಇಂತಹ ದ್ವೇಷದ ರಾಜಕಾರಣವನ್ನು ಮುಂದುವರೆಸುವುದನ್ನು ನಿಲ್ಲಿಸಲಿ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು ಮಾತನಾಡಿ, ಪಕ್ಷಕ್ಕೆ ರಾಜೀನಾಮೆ ನೀಡಿದವರನ್ನು ಉಚ್ಚಾಟನೆ ಮಾಡಿದ್ದೇವೆ ಎಂದು ನೀಡಿರುವ ಹೇಳಿಕೆಯೇ ಆಶ್ಚರ್ಯಕರ ಸಂಗತಿಯಾಗಿದೆ. ಗೋಪಾಲಕೃಷ್ಣ ಬೇಳೂರನ್ನು ಮೆಚ್ಚಿಸಲು ಜಿಲ್ಲಾಧ್ಯಕ್ಷ ಸುಂದರೇಶ್ ಈ ನಿರ್ಧಾರ ಕೈಗೊಂಡಿದ್ದು ಸ್ಪಷ್ಟವಾಗುತ್ತಿದೆ. ನಾವು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತೇವೆ ಎಂದು ಬೇಳೂರು ಆತುರದಲ್ಲಿ ಉಚ್ಚಾಟನೆಗೆ ಒತ್ತಡ ಹೇರಿದ್ದು ಕಂಡುಬರುತ್ತಿದೆ. ಈಗಾಗಲೇ ಕ್ಷೇತ್ರವ್ಯಾಪ್ತಿಯಲ್ಲಿ ದುರಾಡಳಿತ ಭ್ರಷ್ಟಾಚಾರ ಮಿತಿ ಮೀರುತ್ತಿದ್ದು, ಮುಂದಿನ ದಿನಗಳಲ್ಲಿ ಅಂಕಿಅಂಶದ ಸಹಿತ ಬಹಿರಂಗಪಡಿಸಲಾಗುತ್ತದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಜಿ.ಕೆ.ಭೈರಪ್ಪ, ಭರ್ಮಪ್ಪ ಅಂದಾಸುರ, ಭಾಸ್ಕರ ಜನ್ನೆಹಕ್ಲು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next