Advertisement

ನಮ್ಮ ಹಕ್ಕೊತ್ತಾಯ: ಬಂಟ್ವಾಳ –ರಂಗಮಂದಿರ, ಕ್ರೀಡಾಂಗಣ ಬೇಗ ಈಡೇರಲಿ

12:17 AM Mar 27, 2023 | Team Udayavani |

ಬಂಟ್ವಾಳ ತಾಲೂಕಿನಲ್ಲಿ ಹಲವು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ. ಆದರೆ ಕೆಲವು ಹಳೆಯ ಬೇಡಿಕೆಗಳು ಜಾರಿಗೊಳ್ಳಬೇಕಾದುದು ಅಗತ್ಯ. ಯಾರೇ ಅಧಿಕಾರಕ್ಕೆ ಬಂದರೂ ಅವುಗಳನ್ನು ಈಡೇರಿಸಬೇಕೆಂಬುದು ಜನಾಗ್ರಹ.

Advertisement

ಬಂಟ್ವಾಳ: ಮೂಲ ಸೌಕರ್ಯಗಳ ಮೂಲಕ ಸಾಕಷ್ಟು ಅಭಿವೃದ್ಧಿ ಹೊಂದಿದ ತಾಲೂಕು ಎಂಬ ಹೆಗ್ಗಳಿಕೆಯನ್ನು ಗಳಿಸಿಕೊಂಡಿದ್ದರೂ ಕೆಲವು ಪ್ರಮುಖ ಬೇಡಿಕೆಗಳು ಈಡೇರಬೇಕಿದೆ.

ಮುಖ್ಯವಾಗಿ ತಾಲೂಕು ಕೇಂದ್ರದಲ್ಲಿ ಸುಸಜ್ಜಿತ ರಂಗಮಂದಿರ ಬೇಕು ಎಂಬ ಬೇಡಿಕೆ ಹಲವು ವರ್ಷಗಳದ್ದು. ಜತೆಗೆ ತಾಲೂಕು ಕ್ರೀಡಾಂಗಣದ ಕನಸು ಇನ್ನೂ ನನಸಾಗಿಲ್ಲ. ಹೀಗೆ ಹತ್ತು ಹಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂಬ ಆಗ್ರಹ ಜನರಿಂದ ವ್ಯಕ್ತವಾಗುತ್ತಲೇ ಇದೆ.

ತಾಲೂಕು ಕೇಂದ್ರದಲ್ಲಿ ಸುಸಜ್ಜಿತ ರಂಗಮಂದಿರ ಬೇಕು ಎಂಬ ಬೇಡಿಕೆ ಹೊಸದಲ್ಲ. ಈ ಹಿಂದೆ ಬಿ.ಸಿ.ರೋಡಿನಲ್ಲಿ ಇದ್ದ ರಂಗಮಂದಿರ
ವನ್ನು ರಸ್ತೆ ಕಾಮಗಾರಿಗಾಗಿ ಕೆಡವಲಾಗಿತ್ತು. ಬಿ.ಸಿ.ರೋಡು ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿ ರಂಗ ಮಂದಿರ ನಿರ್ಮಾಣ ಪ್ರಸ್ತಾವ ಈ ಹಿಂದಿನಿಂದ ಕೇಳಿಬಂದಿತ್ತು. ಆದರೂ ಕ್ರಮೇಣ ತೆರೆಮರೆಗೆ ಸರಿಯಿತು. ಆದ ಕಾರಣ, ತಾಲೂಕಿನಲ್ಲಿ ರಂಗಮಂದಿರ ನಿರ್ಮಾಣವಾಗಿಲ್ಲ. ಇದರಿಂದ ನೂರಾರು ಸಂಘಟನೆಗಳು ದುಬಾರಿ ಬಾಡಿಗೆ ತೆತ್ತು ಕೆಲವು ಖಾಸಗಿ ಸಭಾಂಗಣದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಸ್ಥಿತಿ ಇದೆ.

ಇದರೊಂದಿಗೆ ತಾಲೂಕು ಮಟ್ಟದಲ್ಲಿ ಯಾವುದೇ ಕ್ರೀಡಾಕೂಟ ಸೇರಿದಂತೆ ಇತರ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಲು ಕ್ರೀಡಾಂಗಣ ಎಂಬುದಿಲ್ಲ. ಹೀಗಾಗಿ ಅವುಗಳ ಆಯೋಜನೆಗೂ ಖಾಸಗಿ ಸ್ಥಳಕ್ಕಾಗಿ ಮೊರೆ ಹೋಗಬೇಕಿದೆ. ತಾಲೂಕು ಕೇಂದ್ರದಿಂದ 6 ಕಿ.ಮೀ. ದೂರದ ಬೆಂಜನಪದವಿನಲ್ಲಿ ಕ್ರೀಡಾಂ ಗಣ ನಿರ್ಮಾಣದ ವಿಷಯ 6-7 ವರ್ಷಗಳಿಂದ ಕೇಳಿ ಬರುತ್ತಲೇ ಇದೆ.

Advertisement

ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳು ನಡೆದರೂ ಬಂಟ್ವಾಳಕ್ಕೆ ತುರ್ತು ಅಗತ್ಯಕ್ಕೆ ಬ್ಲಿಡ್‌ ಬ್ಯಾಂಕ್‌ ಇಲ್ಲ. ರಕ್ತದ ಅಗತ್ಯವಿದ್ದಾಗ ಮಂಗಳೂರು ಅಥವಾ ಪುತ್ತೂರನ್ನು ಆಶ್ರಯಿಸಬೇಕಿದೆ. ಖಾಸಗಿ ಆಸ್ಪತ್ರೆ, ಸ್ವಯಂಸೇವಾ ಸಂಸ್ಥೆಗಳ ಬ್ಲಿಡ್‌ಬ್ಯಾಂಕ್‌ ಸಹ ಇಲ್ಲ. ಇದರ ಸ್ಥಾಪನೆ ಕುರಿತು ಈ ಹಿಂದೆಯೇ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಅನುಷ್ಠಾನ ಗೊಳ್ಳಬೇಕಿದೆ.

ನೀರಾ ಘಟಕ ಪುನರಾರಂಭವಿಲ್ಲ.!
ತೆಂಗು ಕೃಷಿ ಪ್ರೋತ್ಸಾಹದ ಕುರಿತು ಈ ಹಿಂದೆ ತುಂಬೆಯಲ್ಲಿ ಅನುಷ್ಠಾನಗೊಂಡಿದ್ದ ತೋಟಗಾರಿಕಾ ಇಲಾಖೆಯ ನೀರಾ ಘಟಕವು ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದು, ಅದರ ಪುನರಾರಂಭಕ್ಕೆ ಆಗ್ರಹ ಕೇಳಿಬರುತ್ತಲೇ ಇದೆ. ಅದನ್ನು ನಿರ್ವಹಣೆಗೆ ಇತರರಿಗೆ ಕೊಡುವ ಪ್ರಸ್ತಾವವೂ ಅರ್ಧಕ್ಕೆ ನಿಂತಿದ್ದು, ಸಾಕಷ್ಟು ಬಾರಿ ಸದನದಲ್ಲೂ ಪ್ರಸ್ತಾವವಾಗಿದೆ.

ಬಂಟ್ವಾಳ ನಗರ ಸ್ಥಳೀಯಾಡಳಿತಕ್ಕೆ ಗ್ರಾಮೀಣ ಭಾಗದ ಕಂಚಿನಡ್ಕಪದವಿನಲ್ಲಿ ತ್ಯಾಜ್ಯ ನಿರ್ವಹಣ ಘಟಕವಿದ್ದರೂ ಅಲ್ಲಿ ಹಸಿ ಕಸದ ವಿಲೇವಾರಿಗೆ ಅವಕಾಶವಿಲ್ಲ. ಹಾಗಾಗಿ ಹಸಿ ಕಸವನ್ನು ಬೇರೆಲ್ಲಿಗೋ ಸಾಗಿಸಬೇಕಾದ ಸ್ಥಿತಿ. ಈ ನಿಟ್ಟಿನಲ್ಲಿ ಹಸಿ ಕಸವನ್ನೂ ವಿಲೇ ಮಾಡಬಹುದಾದ ತ್ಯಾಜ್ಯ ನಿರ್ವಹಣ ಘಟಕ ಸ್ಥಾಪಿಸಬೇಕಿದೆ.

~ ಕಿರಣ್‌ ಸರಪಾಡಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next