Advertisement

ನಮ್ಮ ಹಕ್ಕೊತ್ತಾಯ: ಕಾರ್ಕಳ ತಾಲೂಕು ಬೆಳೆಯುತ್ತಿದೆ –ಬಸ್‌ ನಿಲ್ದಾಣವೂ ಸುಸಜ್ಜಿತವಾಗಬೇಕು

11:46 PM Mar 26, 2023 | Team Udayavani |

ಕಾರ್ಕಳ ತಾಲೂಕು ಹತ್ತಾರು ಕಾರಣಗಳಿಂದ ಬೆಳೆಯತೊಡಗಿದೆ. ಹೀಗೆ ಬೆಳೆಯುತ್ತಿರುವ ನಗರಕ್ಕೆ ಸಕಾಲದಲ್ಲಿ ಪೌಷ್ಟಿಕಾಂಶಗಳು, ಸೂಕ್ತ ಆರೈಕೆ ಸಿಗದಿದ್ದರೆ ಕ್ರಮೇಣ ಅಭಿವೃದ್ಧಿ ಕೃಶವಾಗಬಹುದು. ಹಾಗಾಗಿ ಬಸ್‌ ನಿಲ್ದಾಣದಂಥ ಮೂಲ ಸೌಕರ್ಯ ಇನ್ನಷ್ಟು ಸುಸಜ್ಜಿತಗೊಳಿಸಬೇಕೆಂಬುದು ಜನಾಗ್ರಹ.

Advertisement

ಕಾರ್ಕಳ: ರಾಜ್ಯದ ಪ್ರಮುಖ ಪ್ರವಾಸಿ ಕ್ಷೇತ್ರ, ಜೈನ ಕಾಶಿ ಎಂದೇ ಕರೆಯಲಾಗುವ ಕಾರ್ಕಳದ ತಾಲೂಕು ಕೇಂದ್ರದಲ್ಲಿ ಕಾರ್ಯಾಚರಿಸುತ್ತಿರುವ ಬಸ್‌ ನಿಲ್ದಾಣವನ್ನು ಮೇಲ್ದರ್ಜೆಗೇರಿಸಬೇಕು, ಕಾರ್ಕಳ, ಹೆಬ್ರಿ ತಾಲೂಕು ಕೇಂದ್ರವಾಗಿಸಿ ಇಲ್ಲಿಗೆ ಡಿಪೋ ಮಂಜೂರುಗೊಳಿಸಬೇಕು ಎನ್ನುವ ಹಕ್ಕೊ ತ್ತಾಯ ಬಹಳ ವರ್ಷಗಳಿಂದ ಕೇಳಿಬರುತ್ತಿದೆ.

ಬಂಡಿಮಠ ಹಾಗೂ ನಗರದ ಮಧ್ಯೆ ಇರುವ ಹಳೆ ಬಸ್‌ ನಿಲ್ದಾಣ ಎರಡೂ ಈಗ ಬಳಕೆಯಲ್ಲಿವೆ. ಹಳೆಯ ಬಸ್‌ ನಿಲ್ದಾಣ ತೀರಾ ಇಕ್ಕಟ್ಟಾಗಿದ್ದು, ಪುರಸಭೆಯ 5ನೇ ವಾರ್ಡ್‌ ಬಂಡಿಮಠದಲ್ಲಿ 2011-12ರಲ್ಲಿ 1.78 ಎಕ್ರೆ ವಿಸ್ತೀರ್ಣದಲ್ಲಿ 2 ಕೋ.ರೂ. ವೆಚ್ಚದಲ್ಲಿ ಕಾಂಕ್ರೀಟ್‌ ಕಾಮಗಾರಿ ನಡೆಸಿ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗಿತ್ತು.

ಆದರೆ ಆ ಬಳಿಕ ಭವಿಷ್ಯಕ್ಕನುಗುಣವಾಗಿ ಅದು ಮೇಲ್ದರ್ಜೆಗೇರಿರಲಿಲ್ಲ. ಹೆಚ್ಚು ಮೂಲ ಸೌಕರ್ಯ ಕಲ್ಪಿಸದಿರುವುದು ಹಾಗೂ ಪೇಟೆಯಿಂದ ಹೊರಗೆ ಇರುವುದರಿಂದ ಅದು ನಿರೀಕ್ಷಿತ ರೀತಿಯಲ್ಲಿ ಬಳಕೆಯಾಗುತ್ತಿಲ್ಲ. ಹೀಗಾಗಿ ಇಲ್ಲಿ ಪ್ರಮುಖ ಕೇಂದ್ರಗಳಿಗೆ ಓಡಾಡುವ ಸರಕಾರಿ, ಕೆಲವು ಖಾಸಗಿ ಬಸ್‌ಗಳು ಕೆಲವು ನಿಮಿಷ ನಿಂತು ಸಾಗುವುದು ಬಿಟ್ಟರೆ ಹಳೆಯ ಬಸ್‌ ನಿಲ್ದಾಣದಲ್ಲಿಂದಲೇ ಸಂಚಾರ ನಡೆಸುತ್ತಿವೆ. ಹಾಗಾಗಿ ಬಂಡಿಮಠ ವಿಶಾಲ ಜಾಗ ಹೊಂದಿದ್ದರೂ ಸೂಕ್ತವಾಗಿ ಬಳಕೆಯಾಗದ್ದರಿಂದ ನೆಪಕ್ಕಷ್ಟೆ ಎಂಬಂತಾಗಿದೆ. ಈ ಕೊರತೆಯನ್ನು ನೀಗಿಸಿ ಪೇಟೆಯ ಬಸ್‌ ನಿಲ್ದಾಣವನ್ನು ಪೂರ್ಣ ಪ್ರಮಾಣದಲ್ಲಿ ಬಂಡಿಮಠಕ್ಕೆ ಸ್ಥಳಾಂತರಿಸಿ ಮೇಲ್ದರ್ಜೆಗೇರಿಸಬೇಕು. ಎರಡೂ ತಾಲೂಕು ಕೇಂದ್ರಕ್ಕೆ ಅನುಕೂಲವಾಗುವಂತೆ ಬಸ್‌ ಡಿಪೋ ತೆರೆದಲ್ಲಿ ಸುಮಾರು 55 ಹಳ್ಳಿಗಳಿಗೆ ಗ್ರಾಮೀಣ ಬಸ್‌ ಸಂಚಾರ ವ್ಯವಸ್ಥೆಯನ್ನು ಸದೃಢ ಗೊಳಿಸಬಹುದಾಗಿದೆ.

ಕಾರ್ಕಳ ತಾಲೂಕು ಪ್ರಗತಿಯ ಅಗತ್ಯಕ್ಕೆ ಅನು ಗುಣವಾಗಿ ಪುನರ್‌ ರೂಪಿಸಿಕೊಳ್ಳುತ್ತಿದೆ. ಪ್ರವಾಸಿ ಕ್ಷೇತ್ರವಾಗಿ ಜನಪ್ರಿಯವಾಗುತ್ತಿದೆ. ಇಲ್ಲಿನ ಶ್ರೀ ಭಗವಾನ್‌ ಬಾಹುಬಲಿ, ಪಡುತಿರುಪತಿ ಖ್ಯಾತಿಯ ಶ್ರೀ ವೆಂಕಟರಮಣ ದೇವಸ್ಥಾನ, ಚತುರ್ಮುಖ ಬಸದಿ, ಅತ್ತೂರು ಬಸಿಲಿಕಾ ಚರ್ಚ್‌, ವರಂಗ ಬಸದಿ, ಜೈನ ಬಸದಿ, ಶಿಲ್ಪಾ ಕಲಾ ಕೇಂದ್ರ, ನಕ್ರೆಕಲ್ಲು, ಪರಶುರಾಮ ಥೀಂ ಪಾರ್ಕ್‌ ಎಲ್ಲವೂ ಜನರನ್ನು ಆಕರ್ಷಿಸತೊಡಗಿವೆ. ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಆದರೆ ದೂರದೂರುಗಳಿಂದ ಆಗಮಿಸುವವರಿಗೆ ಬಂದು ಹೋಗಲು ಇಲ್ಲಿಗೆ ಸೂಕ್ತ ಬಸ್‌ ವ್ಯವಸ್ಥೆ ಇಲ್ಲ. ಬಸ್‌ ಡಿಪೋ ಆಗಿ ದೂರದೂರಿಗೆ ಸುಖಾಸೀನ ಆರಾಮದಾಯಕ ಬಸ್‌ನ ವ್ಯವಸ್ಥೆಗಳಾದಲ್ಲಿ ಉಭಯ ತಾಲೂಕಿನ ಅಭಿವೃದ್ಧಿಗೆ ಪೂರಕವಾಗಿ ಕಾರ್ಕಳ ನಾಡಿನ ಸಂಪರ್ಕದ ಪ್ರಮುಖ ಕೊಂಡಿಯಾಗಿ ಬೆಳೆಯಲಿದೆ. ಈಗ ಜಿಲ್ಲಾ ಕೇಂದ್ರ, ಪಕ್ಕದ ಪಟ್ಟಣಗಳಿಗೆ ತೆರಳಿ ಅಲ್ಲಿಂದ ಬಸ್‌ ಹಿಡಿದು ನಗರ ಸೇರುತ್ತಿದ್ದಾರೆ.

Advertisement

ಒಂದೇ ಕಡೆ ಸುಸಜ್ಜಿತ ಬಸ್‌ ನಿಲ್ದಾಣವಿರಲಿ
ಕಾರ್ಕಳದ ಬಂಡಿಮಠ, ಪೇಟೆ ಈ ಎರಡು ಬಸ್‌ ನಿಲ್ದಾಣಗಳನ್ನೂ ಸಮಾನ ಹಾಗೂ ಸಮರ್ಪಕವಾಗಿ ಬಳಸಬೇಕೆನ್ನುವ ನ್ಯಾಯಾಲಯ ಆದೇಶವಿದೆ. ಕಾರ್ಕಳ ತಾಲೂಕಿಗೆ ಪರವಾನಿಗೆ ನೀಡತಕ್ಕಂತಹ ರಹದಾರಿಗಳನ್ನು ಬಂಡಿಮಠ ಬಸ್‌ ನಿಲ್ದಾಣದಿಂದ ಕೇಂದ್ರೀಕರಿಸಿ ನೀಡಲು ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಸೂಚನೆ ಇದೆ. ಹಾಗಾಗಿ ನಿಲ್ದಾಣವನ್ನು ಸುಸಜ್ಜಿತಗೊಳಿಸಬೇಕು. ಇಲ್ಲವಾದರೆ ದಶ ದಿಕ್ಕಿಗೂ ತೆರಳಲು ಅನುಕೂಲವಾಗುವಂಥ ಸೂಕ್ತ ಸ್ಥಳ ಆಯ್ಕೆ ಮಾಡಿ ಸುಸಜ್ಜಿತ ಬಸ್‌ ನಿಲ್ದಾಣದೊಂದಿಗೆ ಬಸ್‌ ಡಿಪೋ ನಿರ್ಮಿಸಿದರೆ ಅನುಕೂಲವಾಗಲಿದೆ ಎಂಬುದು ಕೇಳಿಬರುತ್ತಿರುವ ಜನಾಭಿಪ್ರಾಯ.

ಕಾರ್ಕಳದಿಂದ ಹೆಬ್ರಿಗೆ 31 ಕಿ.ಮೀ. ಅಲ್ಲಿಂದ ಆಗುಂಬೆಗೆ 19 ಕಿ.ಮೀ., ಆಗುಂಬೆಯಿಂದ ತೀರ್ಥಹಳ್ಳಿಗೆ 32 ಕಿ.ಮೀ. ದೂರವಿದೆ. ಕಾರ್ಕಳದಿಂದ ಉಡುಪಿಗೆ 38 ಕಿ.ಮೀ., ಮಂಗಳೂರಿಗೆ 52 ಕಿ.ಮೀ., ಧರ್ಮಸ್ಥಳಕ್ಕೆ 63 ಕಿ.ಮೀ., ಕಾರ್ಕಳದಿಂದ ಕಳಸಕ್ಕೆ 71 ಕಿ.ಮೀ., ಕುದುರೆಮುಖ 52 ಕಿ.ಮೀ. ದೂರವಿದೆ. ಕಾರ್ಕಳ ಹೊರತುಪಡಿಸಿದರೆ ಈ ಮೇಲಿನ ಪ್ರಮುಖ ಕೇಂದ್ರಗಳಿಗೆ ತೆರಳಿ ಅಲ್ಲಿಂದ ಪ್ರಯಾಣ ಮುಂದುವರಿಸಬೇಕಿದೆ.

~ ಬಾಲಕೃಷ್ಣ ಭೀಮಗುಳಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next