Advertisement

ಏಕರೂಪ ಸಂಹಿತೆಗೆ ವಿರೋಧ; ಆಪ್‌ನಿಂದ ತಾತ್ವಿಕ ಬೆಂಬಲ

10:32 AM Jun 29, 2023 | Team Udayavani |

ಲಕ್ನೋ/ನವದೆಹಲಿ: ಒಂದು ದೇಶದಲ್ಲಿ ಎರಡು ರೀತಿಯ ಕಾನೂನುಗಳು ಏಕೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಭೋಪಾಲದಲ್ಲಿ ಮಂಗಳವಾರ ಪ್ರಶ್ನಿಸಿ, ಪರೋಕ್ಷವಾಗಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿ ಮಾಡಲು ಸಮರ್ಥನೆ ನೀಡಿದ್ದರು.

Advertisement

ಅದರ ಬೆನ್ನಲ್ಲಿಯೇ ಲಕ್ನೋದಲ್ಲಿ ಪ್ರಧಾನ ಕಚೇರಿ ಹೊಂದಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಮಂಗಳವಾರ ರಾತ್ರಿಯೇ ಸಭೆ ಸೇರಿ, ಪ್ರಧಾನಿ ಮೋದಿಯವರ ಮಾತುಗಳ ಆಂತರ್ಯದ ಬಗ್ಗೆ ಚರ್ಚೆ ನಡೆಸಿತು. ಬರೋಬ್ಬರಿ ಮೂರು ಗಂಟೆಗಳ ಕಾಲ ಆನ್‌ಲೈನ್‌ನಲ್ಲಿ ಮಂಡಳಿ ಪದಾಧಿಕಾರಿಗಳು ಸಭೆ ನಡೆಸಿದ್ದಾರೆ.

ಯುಸಿಸಿಯನ್ನು ಸಾಮಾನ್ಯ ಕಾನೂನನ್ನಾಗಿ ಜಾರಿ ಮಾಡುವುದರ ಬಗ್ಗೆ ಮಂಡಳಿ ಹೊಂದಿರುವ ಅಭಿಪ್ರಾಯಗಳನ್ನು ಕೇಂದ್ರ ಕಾನೂನು ಆಯೋಗಕ್ಕೆ ಸಲ್ಲಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಭೆಯ ಬಗ್ಗೆ ಬುಧವಾರ ಮಾಹಿತಿ ನೀಡಿದ
ಎಐಎಂಪಿಎಲ್‌ಬಿ ಸದಸ್ಯ ಖಾಲಿದ್‌ ರಶೀದ್‌ ಫ‌ರಂಗಿ ಮಹ್ಲಿ ತಿಳಿಸಿದ್ದಾರೆ. ತಡರಾತ್ರಿಯೇ ನಡೆದ ಸಭೆಗೆ ಸಮಜಾಯಿಷಿ ನೀಡಿದ ಅವರು “ಇದೊಂದು ಸಾಮಾನ್ಯ ಸಭೆ’ ಎಂದಷ್ಟೇ ಹೇಳಿದ್ದಾರೆ.

ಜು.14ರಂದು ಆಯೋಗಕ್ಕೆ ಅಭಿಪ್ರಾಯಗಳನ್ನು ಸಲ್ಲಿಸಲು ಕೊನೆಯ ದಿನ. ಹೀಗಾಗಿ, ಅದರ ಬಗ್ಗೆ ಪರಾಮರ್ಶೆ ನಡೆಸಲಾಯಿತು ಎಂದರು. “ದೇಶದ ಸಂವಿಧಾನದ ಆಶಯಗಳಿಗೆ ಯುಸಿಸಿ ವಿರುದ್ಧವಾದದ್ದು. ಅದನ್ನು ನಾವು ವಿರೋಧಿಸುತ್ತೇವೆ. ಅದು ಮಂಡಳಿಯ ನಿರ್ಣಯವೂ ಆಗಿದೆ’ ಎಂದರು.

ಪ್ರಜೆಗಳ ಮೇಲೆ ಹೇರಲಾಗದು: ಪ್ರಧಾನಿ ಮೋದಿ
ಮಾತುಗಳಿಗೆ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಆಕ್ಷೇಪ ಮಾಡಿ, “ನಿಗದಿತ ಕಾರ್ಯಸೂಚಿ ಆಧಾರಿತ ಸರ್ಕಾರದಿಂದ ದೇಶದ ಪ್ರಜೆಗಳ ಮೇಲೆ ನಿಲುವು ಹೇರಲಾಗದು. ಒಂದು ವೇಳೆ, ಆ ರೀತಿ ವರ್ತಿಸಿದರೂ, ಸಮಾಜದಲ್ಲಿ ಇರುವ ವಿಭಜನೆ ಮತ್ತಷ್ಟು ಹೆಚ್ಚಾದೀತು’ ಎಂದು ಟ್ವೀಟ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.

Advertisement

ಜನರು ಎದುರಿಸುತ್ತಿರುವ ನಿರುದ್ಯೋಗ, ಬೆಲೆ ಏರಿಕೆ, ದ್ವೇಷಮಯ ಅಪರಾಧ, ತಾರತಮ್ಯ ಸಮಸ್ಯೆಗಳಿಂದ ಗಮನ ದೂರ ಸೆಳೆಯಲು ಪ್ರಧಾನಿ ಸಂಹಿತೆಯ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಹಿಂದಿನ ಕಾನೂನು ಆಯೋಗ ಯುಸಿಸಿ ಜಾರಿಗೆ ತರಲು ಸದ್ಯದ ಹಂತದಲ್ಲಿ ಸಾಧ್ಯವಿಲ್ಲ ಎಂದು ನೀಡಿದ್ದ ವರದಿಯನ್ನು ಪ್ರಧಾನಿ ಮೋದಿ ಓದಿ ನೋಡಲಿ’ ಎಂದು ಬರೆದುಕೊಂಡಿದ್ದಾರೆ.

ಹಿಂದೆಯೂ ನಡೆದಿತ್ತು ಪ್ರಯತ್ನ
ಜೂ.14ರಂದು ಕಾನೂನು ಆಯೋಗ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡುವುದರ ಬಗ್ಗೆ ನಿರ್ಧಾರ ಪ್ರಕಟಿಸಿ, ದೇಶವಾಸಿಗಳಿಂದ ಸಲಹೆ- ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ಅದರ ಬೆನ್ನಲ್ಲೇ ಪ್ರಧಾನಿ ಮೋದಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

2018ರ ಆಗಸ್ಟ್‌ನಲ್ಲಿ 21ನೇ ಕಾನೂನು ಆಯೋಗ ಸಂಹಿತೆ ಬಗ್ಗೆ ಸಲಹಾ ಪತ್ರಿಕೆಯನ್ನು ಬಿಡುಗಡೆ ಮಾಡಿತ್ತು. 1985ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಬಹುವಾಗಿ ಚರ್ಚೆಗೊಂಡು ತೀರ್ಪು ಪ್ರಕಟವಾ ಗಿದ್ದ ಶಾಭಾನೋ ಪ್ರಕರಣದ ಬಳಿಕ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಬಗ್ಗೆ ಚರ್ಚೆ ಆರಂಭವಾಗಿತ್ತು. ಸುಪ್ರೀಂಕೋರ್ಟ್‌ ಮತ್ತು ದೇಶದ ಹಲವು ಹೈಕೋರ್ಟ್‌ಗಳ ತೀರ್ಪುಗಳಲ್ಲಿ ಸಂಹಿತೆ ಜಾರಿಯ ಅಗತ್ಯತೆಯನ್ನು ಸಾರಿ ಹೇಳಲಾಗಿತ್ತು.

ಆಪ್‌ನಿಂದ ತಾತ್ವಿಕ ಬೆಂಬಲ
ದೆಹಲಿಯಲ್ಲಿ ಆಡಳಿತಾತ್ಮಕ ವಿಚಾರಗಳಿಗೆ ಬಿಜೆಪಿ ವಿರುದ್ಧ ಹೋರಾಟ ನಡೆಸುವ ಆಮ್‌ ಆದ್ಮಿ ಪಕ್ಷ ಸಮಾನ ನಾಗರಿಕ ಸಂಹಿತೆ (ಯುಸಿಸಿ) ಜಾರಿ ಮಾಡುವ ಬಗ್ಗೆ ತಾತ್ವಿಕ ಒಪ್ಪಿಗೆ ನೀಡಿದೆ. ಈ ನಿಟ್ಟಿನಲ್ಲಿ ಎಲ್ಲರ ಜತೆಗೆ ಚರ್ಚೆ ನಡೆಸಿ ಸಹಮತ ಏರ್ಪಟ್ಟ ಬಳಿಕ ಅದನ್ನು ಅನುಷ್ಠಾನಗೊಳಿಸಬೇಕು ಎಂದು ಆಪ್‌ನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂದೀಪ್‌ ಪಾಠಕ್‌ ಹೇಳಿದ್ದಾರೆ.

ಸಮಾನ ನಾಗರಿಕ ಸಂಹಿತೆ ಜಾರಿಗೆ ತರುವ ವಿಚಾರ ಸಂವಿಧಾನದಲ್ಲೇ ಉಲ್ಲೇಖಗೊಂಡಿದೆ. ಕಾಂಗ್ರೆಸ್‌ ಸಂವಿಧಾನದ ಅಂಶಗಳನ್ನು ಜಾರಿಗೆ ತರುವುದರ ಬಗ್ಗೆ ಬೆಂಬಲ ನೀಡುತ್ತದೆಯೋ ಅಥವಾ ಅದನ್ನು ವಿರೋಧಿಸುವ ಕೋಮುವಾದದ ಸಂಚು ಹೊಂದಿರುವ ನಿಲುವುಗಳಿಗೆ ಸ್ವಾಗತ ಕೋರುತ್ತದೆಯೋ ಎಂಬುದನ್ನು ಸ್ಪಷ್ಟಪಡಿಸಬೇಕು.
ಮುಖ್ತಾರ್‌ ಅಬ್ಟಾಸ್‌ ನಖ್ವಿ, ಬಿಜೆಪಿ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next