Advertisement

 ಖಾಸಗಿ ವೈದ್ಯ ಸಂಸ್ಥೆಗಳ ನಿಯಂತ್ರಣ ತಿದ್ದುಪಡಿಗೆ ವಿರೋಧ 

09:57 AM Nov 04, 2017 | |

ಮಹಾನಗರ: ರಾಜ್ಯ ಸರಕಾರ ಜಾರಿಗೆ ತರಲು ಹೊರಟಿರುವ ‘ಖಾಸಗಿ ವೈದ್ಯ ಸಂಸ್ಥೆಗಳ ನಿಯಂತ್ರಣ ತಿದ್ದುಪಡಿ ವಿಧೇಯಕ’ಯನ್ನು ವಿರೋಧಿಸಿ ಶುಕ್ರವಾರ ನಗರದಲ್ಲೂ ಖಾಸಗಿ ಆಸ್ಪತ್ರೆ ಸಿಬಂದಿ ವೈದ್ಯಕೀಯ ಸೇವೆ ಸ್ಥಗಿತಗೊಳಿಸಿ ಮುಷ್ಕರ ಹಮ್ಮಿಕೊಂಡಿದ್ದು, ರೋಗಿಗಳು ಪರದಾಡುವಂತಾಯಿತು.

Advertisement

ಆಸ್ಪತ್ರೆಗಳ ಗೇಟಿನ ಬಳಿಯೇ ‘ಸೇವೆ ಲಭ್ಯವಿರುವುದಿಲ್ಲ’ ಎಂಬುದಾಗಿ ಬ್ಯಾನರ್‌ ಅಳವಡಿಸಿದ್ದು, ಸೆಕ್ಯುರಿಟಿಗಳು ಕೂಡ ಸೇವೆ ಇಲ್ಲ ಎಂದು ಗೇಟ್‌ನಿಂದಲೇ ರೋಗಿಗಳನ್ನು ವಾಪಸ್‌ ಕಳುಹಿಸುತ್ತಿದ್ದರು. ಇದರಿಂದ ಅಗತ್ಯ ಚಿಕಿತ್ಸೆಗಾಗಿ ಬಂದ ಹಲವು ರೋಗಿಗಳು ಬರಿಗೈಯಲ್ಲೇ ಹಿಂದಿರುಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹೊರರೋಗಿ ವಿಭಾಗ, ತುರ್ತು ಚಿಕಿತ್ಸೆ ಸಹಿತ ಎಲ್ಲ ರೀತಿಯ ಸೇವೆಗಳನ್ನೂ ಸ್ಥಗಿತಗೊಳಿಸಲಾಗಿತ್ತು.

ಖಾಸಗಿ ಆಸ್ಪತ್ರೆಗಳ ಮುಷ್ಕರದಿಂದಾಗಿ ಸರಕಾರಿ ಆಸ್ಪತ್ರೆಗಳಲ್ಲಿ ಜನಜಂಗುಳಿ ಹೆಚ್ಚಿತ್ತು. ನಗರದ ಜಿಲ್ಲಾ ವೆನ್ಲಾಕ್‌ ಆಸ್ಪತ್ರೆ, ಸರಕಾರಿ ಲೇಡಿಗೋಶನ್‌ ಆಸ್ಪತ್ರೆಗಳಲ್ಲಿ ಎಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಗಮಿಸಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ, ಔಷಧಕ್ಕೆ ಗಂಟೆ ಗಟ್ಟಲೆ ಕಾಯಬೇಕಾಗಿ ಬಂತು. ಕೆಲವು ಆಯುರ್ವೇದ ವೈದ್ಯರು ಕೂಡ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದರಿಂದ ಆಯುರ್ವೇದಿಕ್‌ ಕ್ಲಿನಿಕ್‌ಗಳೂ ಮುಚ್ಚಿದ್ದವು.

ಎ.ಜೆ. ಆಸ್ಪತ್ರೆ ಮುಂತಾದೆಡೆಗಳಲ್ಲಿ ಕೆಪಿಎಂಇ ಕಾಯ್ದೆ ತಿದ್ದುಪಡಿ ಮಾಡುವ ಸರಕಾರದ ಕ್ರಮ ವಿರೋಧಿಸಿ ಶುಕ್ರವಾರ ಯಾವುದೇ ಸೇವೆ ಇರುವುದಿಲ್ಲ ಎಂಬುದಾಗಿ ಬ್ಯಾನರ್‌ ಅಳವಡಿಸಿ ರೋಗಿಗಳಿಗೆ ತಿಳಿಸುವ ಕೆಲಸ ಮಾಡಲಾಗಿತ್ತು. 

ಸರಕಾರದ ತಪ್ಪಿಗೆ ಜನರಿಗೆ ಶಿಕ್ಷೆ
ಒಮೇಗಾ ಆಸ್ಪತ್ರೆಗೆ ಔಷಧಕ್ಕಾಗಿ ಬಂದಿದ್ದ ಕೋಟೆಕಾರ್‌ನ ಮಾಲತಿ ಅವರು ಹೇಳುವ ಪ್ರಕಾರ, ‘ಆಸ್ಪತ್ರೆಗಳನ್ನೇ ಬಂದ್‌ ಮಾಡಿ ವೈದ್ಯರು ಮುಷ್ಕರ ನಡೆಸುವುದರಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತದೆ. ಸರಕಾರ ಮಾಡಿದ ತಪ್ಪಿಗೆ ಜನಸಾಮಾನ್ಯರಿಗೆ ಶಿಕ್ಷೆ ನೀಡುವುದು ಸರಿಯಲ್ಲ. ಅಗತ್ಯ ಚಿಕಿತ್ಸೆಗೆ ಮಂಗಳೂರಿಗೆ ಬಂದರೆ ಇಲ್ಲಿನ ಯಾವ ಆಸ್ಪತ್ರೆಗಳೂ ಚಿಕಿತ್ಸೆ ನೀಡದಿರುವುದು ತೊಂದರೆಯಾಗಿದೆ.ಮುಷ್ಕರದ ಬಗ್ಗೆ ಮಾಹಿತಿ ಇದ್ದರೂ, ಹೊರರೋಗಿ ಸೇವೆಗಳು ಇರಬಹುದು ಎಂದುಕೊಂಡಿದ್ದೆ’ ಎನ್ನುತ್ತಾರೆ.

Advertisement

ಡಿಸಿಗೆ ಮನವಿ 
ಮುಷ್ಕರದ ಅಂಗವಾಗಿ ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಶಾಖೆಯ ಸಭಾಂಗಣದಲ್ಲಿ ಸಭೆ ನಡೆಸಲಾಯಿತು. ಶಾಖೆಯ ಅಧ್ಯಕ್ಷ ಡಾ| ರಾಘ ವೇಂದ್ರ ಭಟ್‌, ಕಾರ್ಯದರ್ಶಿ ಡಾ| ಯೋಗೀಶ್‌ ಬಂಗೇರ, ಖಜಾಂಚಿ ಡಾ| ಜಿ. ಕೆ. ಭಟ್‌ ಮತ್ತಿತರರು ಉಪಸ್ಥಿತರಿದ್ದರು. 200ಕ್ಕೂ ಹೆಚ್ಚು ಮಂದಿ ವೈದ್ಯರು ಸಭೆಯಲ್ಲಿ ಪಾಲ್ಗೊಂಡರು. ಬಳಿಕ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next