Advertisement

ಕೊಂಕಿನ ಪ್ರವೃತ್ತಿ ಸಲ್ಲದು

07:45 AM Mar 21, 2018 | Harsha Rao |

ತುತ್ತು ಅನ್ನ ಸಂಪಾದನೆಗಾಗಿ 2014ರಲ್ಲಿ ಪಂಜಾಬ್‌ನ ನಲವತ್ತು ಮಂದಿ ಭಾರತೀಯರು ಇರಾಕ್‌ನ ಮೊಸೂಲ್‌ಗೆ ತೆರಳಿದ್ದವರು ಮರಳಿ ಬರಲೇ ಇಲ್ಲ. ಅಂಥ ದುಃಖದಾಯಕ ಘಟನೆ ನಡೆದು ಹೋಗಿದೆ. ಉಗ್ರ ಸಂಘಟನೆ ಐಸಿಸ್‌ನ ಬಾಹುಳ್ಯ ಇರುವ ಮೊಸುಲ್‌ಗೆ ತೆರಳಿದ್ದವರು ಕೆಲಸ ಆರಂಭಿಸುವ ಮೊದಲೇ ರಕ್ತಪಿಪಾಸುಗಳ ಕೈಗೆ ಸಿಕ್ಕಿಬಿದ್ದಿದ್ದರು. ಈ ಬಗ್ಗೆ ಮಾಹಿತಿ ಕೊಡುವ ಗುರುತರ ಹೊಣೆ ಸಹಜವಾಗಿಯೇ ಕೇಂದ್ರ ವಿದೇಶಾಂಗ ಸಚಿವರ ಮೇಲಿದೆ. ಹೀಗಾಗಿ ಅವರು ಲೋಕಸಭೆಯಲ್ಲಿ ಮಾಹಿತಿ ನೀಡುವಾಗ ಕಾಂಗ್ರೆಸ್‌ ನೇತೃತ್ವದ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿ ಅಡ್ಡಿ ಮಾಡಿದ್ದು ಸಂಸದೀಯ ನಡಾವಳಿಗೆ ಕಪ್ಪುಚುಕ್ಕೆಯೇ ಸರಿ. ನಲವತ್ತು ಮಂದಿಯ ಪೈಕಿ ಒಬ್ಬ ವ್ಯಕ್ತಿ ಮಾತ್ರ ಅವರ ಕಪಿ ಮುಷ್ಟಿಯಿಂದ ಪಾರಾಗಿ ಬಂದಿದ್ದಾರೆ. ಆದರೆ ಮಂಗಳವಾರ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಮತ್ತು ಇತರ ಪಕ್ಷಗಳು ನಡೆದುಕೊಂಡ ರೀತಿ ಸಮಂಜಸವಾಗಿಲ್ಲ. ದೇಶದಲ್ಲಿ ಒಬ್ಬ ವ್ಯಕ್ತಿ ಅಸುನೀಗಿರುವ ಬಗ್ಗೆ ಮಾಹಿತಿ ನೀಡುವುದಕ್ಕೂ, ವಿದೇಶದಲ್ಲಿ ನಮ್ಮ ದೇಶದ ಪ್ರಜೆ ನಾಪತ್ತೆಯಾಗಿ, ಅಸುನೀಗಿರುವ ಬಗ್ಗೆ ಘೋಷಣೆ ಮಾಡುವುದಕ್ಕೆ ಬಹಳ ವ್ಯತ್ಯಾಸವಿದೆ.

Advertisement

ರಾಜ್ಯಸಭೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ 39 ಮಂದಿ ಭಾರತೀಯರು ಅಸುನೀಗಿದ ಬಗ್ಗೆ ಸ್ವಯಂ ಪ್ರೇರಿತರಾಗಿ ಹೇಳಿಕೆ ನೀಡಿ ಮಾಹಿತಿ ನೀಡುವಲ್ಲಿ ಯಶಸ್ವಿಯಾದರು. ಆದರೆ ಲೋಕಸಭೆಯಲ್ಲಿ ಸಚಿವರಿಗೆ ಮಾತನಾಡಲು ಕಾಂಗ್ರೆಸ್‌ ಅವಕಾಶ ಕೊಡದೆ ಗದ್ದಲ ಎಬ್ಬಿಸಿದ್ದು ಸರ್ವಥಾ ಸರಿಯಲ್ಲ. ಏಕೆಂದರೆ ಜವಾಬ್ದಾರಿ ಯುತ ಸರಕಾರ ಯಾವ ರೀತಿ ನಡೆದುಕೊಳ್ಳಬೇಕು ಎಂಬ ಅರಿವು ಅವರಿಗೂ ಇದೆ. ಹಿಂದಿನ ವರ್ಷಗಳಲ್ಲಿ ಅವರೂ ಇದೇ ಮಾದರಿಯ ಪರಿಸ್ಥಿತಿಗಳನ್ನು ಅವರು ಎದುರಿಸಿದ್ದರಿಂದ ಸಚಿವೆ ಸ್ವರಾಜ್‌ಗೆ ಮಾತನಾಡಲು ಅವಕಾಶ ಮಾಡಿಕೊಡಬೇಕಾಗಿತ್ತು. ಸಂಸತ್‌ ಅಧಿವೇಶನ ನಡೆಯುತ್ತಿ ರುವಾಗ ಪ್ರಮುಖ ವಿಚಾರವನ್ನು ಸದನದಲ್ಲಿಯೇ ಹೇಳಬೇಕೆ ಹೊರತು, ಬೇರೆ ಸ್ಥಳದಲ್ಲಿ ಅಲ್ಲ. ಹೀಗಾಗಿ ವಿದೇಶಾಂಗ ಸಚಿವರು ತಮ್ಮ ಸಾಂವಿಧಾನಿ ಕವಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಮೂವತ್ತೂಂಭತ್ತು ಮಂದಿ ಭಾರತೀಯರು ನಾಪತ್ತೆಯಾಗಿರುವ ಬಗ್ಗೆ ಹಾಲಿ ಕೇಂದ್ರ ಸರಕಾರ ಕೈಕಟ್ಟಿ ಕುಳಿತಿರದೆ, ಜವಾಬ್ದಾರಿಯುತವಾಗಿಯೇ ನಡೆದುಕೊಂಡಿದೆ.  ರಾಜತಾಂತ್ರಿಕ ಮಟ್ಟದಲ್ಲಿ ಮತ್ತು ಇತರ ಮಾರ್ಗಗಳ ಮೂಲಕ ಅವರನ್ನು ಪತ್ತೆಹಚ್ಚುವ ಬಗ್ಗೆ ಕ್ರಮ ಕೈಗೊಂಡಿತ್ತು. ಸೂಕ್ತವಾದ ಆಡಳಿತ ವ್ಯವಸ್ಥೆ ಇಲ್ಲದೆ ಇರುವ ಮೊಸೂಲ್‌ನಂಥ ನಗರದಲ್ಲಿ ಭಾರತದಂಥ ದೇಶದಿಂದ ತೆರಳಿದ 39 ಮಂದಿಯ ಗುರುತು, ಇರುವು ಪತ್ತೆ ಹಚ್ಚುವುದೇ ಸಾಹಸ, ಸವಾಲಿನ ಕೆಲಸ. ನಾಗರಿಕ ಸರಕಾರ ಆಡಳಿತವಿಲ್ಲದೆ, ಕ್ರೂರತ್ವವೇ ಆದ್ಯತೆಯ ಕಾರ್ಯವೈಖರಿಯನ್ನಾಗಿ ಮಾಡಿಕೊಂಡಿರುವ ಉಗ್ರ ಸಂಘಟನೆ ಜತೆ ಗರಿಷ್ಠ ಪ್ರಮಾಣದ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು.

ಆಯಾಯ ದೇಶಕ್ಕೆ ಸಂಬಂಧಿಸಿದಂತೆ ಅಲ್ಲಿಯದ್ದೇ ಆಗಿರುವ ಕಾನೂನು ಇದೆ. ಅದರಂತೆ ನಮ್ಮ ಸರಕಾರವೂ ನಡೆದುಕೊಳ್ಳಬೇಕಾಗುತ್ತದೆ. ಇರಾಕ್‌ ಜತೆ ಪ್ರಾಚೀನ ಕಾಲದಿಂದಲೂ ಉತ್ತಮ ಬಾಂಧವ್ಯ ಇದ್ದದ್ದು, ಪ್ರಜಾಸತ್ತಾತ್ಮಕ ಸರ್ಕಾರದ ಅವಧಿಯಲ್ಲೂ ಮುಂದುವರಿದಿದ್ದರಿಂದ ಅವರನ್ನು ಹುಡುಕುವ ಕಾರ್ಯ ನಡೆದೇ ಇತ್ತು. ಕಳೆದ ವರ್ಷ ಜುಲೈನಲ್ಲಿ  ಇರಾಕ್‌ನ ವಿದೇಶಾಂಗ ಸಚಿವ ಇಬ್ರಾಹಿಂ ಅಲ್‌-ಎಷ್ಕರ್‌ ಅಲ್‌-ಜಫಾರಿ ಭಾರತ ಪ್ರವಾಸ ಕೈಗೊಂಡಿದ್ದಾಗ ಕೇಂದ್ರ ವಿದೇಶಾಂಗ ಸಚಿವೆ ನಾಪತ್ತೆಯಾದವರ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದ್ದಾಗ ಅಲ್‌-ಜಫಾರಿ ಅವರು ಬದುಕಿದ್ದಾರೋ ಇಲ್ಲವೋ ಎಂದು ತಿಳಿದಿಲ್ಲ ಎಂದು ಹೇಳಿದ್ದರು.

ಅಸುನೀಗಿದ ವಿಚಾರವನ್ನು ಸಂಸತ್‌ಗೆ ತಿಳಿಸುವ ಮೊದಲು ಕುಟುಂಬ ವರ್ಗಕ್ಕೆ ತಿಳಿಸಬೇಕು. ಶೋಧ ಕಾರ್ಯದಲ್ಲಿ ವಿಳಂಬ ಮಾಡಿದೆ ಎಂದು ವಿಪಕ್ಷಗಳು ಟೀಕಿಸುತ್ತಿವೆ. ಸರಕಾರ ಕೈಗೊಂಡದ್ದು ಸರಿಯಾದ ಕ್ರಮ ಅಲ್ಲ ಎಂದು ಟೀಕಿಸುವ ಪಕ್ಷದ ನಾಯಕರು ಪ್ರಾಥಮಿಕ ವಿಚಾರದ ಬಗ್ಗೆಯೇ ಗಮನ ಹರಿಸದೇ ಇದ್ದದ್ದು ವಿಷಾದನೀಯವೇ ಸರಿ. ಏಕೆಂದರೆ ಮೊಸೂಲ್‌ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಪರಿಸ್ಥಿತಿ ಹೇಗಿದೆ ಎನ್ನುವುದು ಪೂರ್ವ ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳೂ ಹೇಳುವ ಸ್ಥಿತಿಯಲ್ಲಿರುವಾಗ ಸರಕಾರ ಸಮರ್ಥವಾಗಿ ಪರಿಸ್ಥಿತಿ ನಿಭಾಯಿಸಲಿಲ್ಲ ಎಂಬ ಆರೋಪ ಸರಿಯಲ್ಲ. 2017ರಲ್ಲಿ ಯೆಮೆನ್‌ನಲ್ಲಿ ಆಂತರಿಕ ಸಂಘರ್ಷದ ವೇಳೆ ಭಾರತ ಸರಕಾರ ಕೈಗೊಂಡ ಬೃಹತ್‌ ಪ್ರಮಾಣದ ರಕ್ಷಣಾ ಕಾರ್ಯಾಚರಣೆಯನ್ನು ವಿಶ್ವವೇ ಶ್ಲಾ ಸಿತ್ತು. ಅದನ್ನು ಪ್ರತಿಪಕ್ಷಗಳು ಮರೆತಿರಬೇಕು.

Advertisement

ಭವಿಷ್ಯ ಕಟ್ಟಿಕೊಳ್ಳಲು ತೆರಳಿದ್ದ ಮೂವತ್ತೂಂಭತ್ತು ಕುಟುಂಬಗಳಿಗೆ ಈಗ ಬೇಕಾಗಿರುವುದು ರಾಜಕೀಯ ವಾಕ್ಸಮರ ಅಲ್ಲ. ಬದಲಿಗೆ ಸಾಂತ್ವನದ ನುಡಿಗಳು. ಆಡಳಿತ ಮತ್ತು ಪ್ರತಿಪಕ್ಷಗಳು ಪ್ರತ್ಯಾರೋಪ ನಡೆಸದೆ ಮುಂದಿನ ಹಂತದ ಬಗ್ಗೆ ಯೋಚಿಸಬೇಕು. ಪ್ರತಿಪಕ್ಷಗಳು ಕದಡುವ ನೀರಿನಲ್ಲಿ ಮೀನು ಹಿಡಿವ ಕೆಲಸ ಮಾಡದೆ, ಇಂಥ ಪರಿಸ್ಥಿತಿಯಲ್ಲಿ ಸರಕಾರಕ್ಕೆ ನೆರವಾಗುವ ಬಗ್ಗೆ ಯೋಚಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next