Advertisement

ರಸ್ತೆ ಒತ್ತುವರಿ ಅಂಗಡಿಗಳ ತೆರವು ಕಾರ್ಯಾಚರಣೆ

06:03 PM Nov 10, 2019 | Suhan S |

ಕೆ.ಆರ್‌.ಪೇಟೆ: ಪಟ್ಟಣದಲ್ಲಿ ಮುಖ್ಯ ರಸ್ತೆ ಸೇರಿದಂತೆ ಎಲ್ಲಾ ರಸ್ತೆಗಳಲ್ಲಿಯೂ ವರ್ತಕರು ಒತ್ತುವರಿ ಮಾಡಿಕೊಂಡು ನಿರ್ಮಿಸಿಕೊಂಡಿದ್ದ ಅಂಗಡಿಗಳನ್ನು ಪಾಂಡವಪುರ ಉಪ ವಿಭಾಗಾಧಿಕಾರಿ ಶೈಲಜಾ ನೇತೃತ್ವದ ಅಧಿಕಾರಿಗಳ ತಂಡ ಶುಕ್ರವಾರ, ಶನಿವಾರ ತೆರವುಗೊಳಿಸಿದರು.

Advertisement

ರಾಜ್ಯದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಪ್ರವಾಸಿ ಮಂದಿರ ವೃತ್ತದಲ್ಲಿ ರಸ್ತೆ ಬದಿ ವ್ಯಾಪಾರಿಗಳು ರಸ್ತೆಯಲ್ಲಿಯೇ ಅಂಗಡಿಗಳಿಟ್ಟುಕೊಂಡು ವ್ಯಾಪಾರ ಮಾಡುತ್ತಿರುವುದು ಸಾರ್ವಜನಿಕರ ಓಡಾಟಕ್ಕೆ ಕಿರಿಕಿರಿ ಉಂಟು ಮಾಡಿದೆ. ಅಲ್ಲದೆ, ವಾಹನಗಳ ಸಂಚಾರಕ್ಕೂ ಸಮಸ್ಯೆಯಾಗಿದೆ. ಇದರಿಂದ ಪ್ರತಿದಿನ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ.

ಸಾರ್ವಜನಿಕರ ದೂರಿನ ಮೇರೆಗೆ ಹಾಗೂಮಾಧ್ಯಮಗಳ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ರಸ್ತೆ ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳು ಶುಕ್ರವಾರ ಬೆಳ್ಳಂಬೆಳಗ್ಗೆಯೇ ಜೆ.ಸಿ.ಬಿ. ಯಂತ್ರಗಳು, ಪುರಸಭೆ ಪೌರಕಾರ್ಮಿಕರನ್ನು ಬಳಸಿಕೊಂಡು ರಸ್ತೆ ಒತ್ತುವರಿ ತೆರವುಗೊಳಿಸಿದರು.

ಮುಖ್ಯರಸ್ತೆ ಸಂಪೂರ್ಣ ತೆರವು: ಪ್ರವಾಸಿ ಮಂದಿರದಿಂದ ಆರಂಭಿಸಿದ ರಸ್ತೆ ತೆರವು ಕಾರ್ಯಾಚರಣೆ, ಮೈಸೂರು ರಸ್ತೆಯ ಡಾ. ಕೃಷ್ಣಮೂರ್ತಿ ಪೆಟ್ರೋಲ್‌ ಬಂಕ್‌ ಹಾಗೂ ಬಸನವಣ್ಣ ಸಮುದಾಯ ಭವನದವರೆಗೆ, ಹೊಸಹೊಳಲು ರಸ್ತೆಯಲ್ಲಿ ಸರ್ಕಾರಿ ಆಸ್ಪತ್ರೆವರೆಗೆ, ಚನ್ನರಾಯಪಟ್ಟಣ ರಸ್ತೆಯಲ್ಲಿ ನ್ಯಾಯಾಲಯದವರೆಗೆ ಸೇರಿದಂತೆ ಮುಖ್ಯರಸ್ತೆ ಒತ್ತುವರಿ ಸಂಪೂರ್ಣ ತೆರವು ಕಾರ್ಯಾಚರಣೆ ರಾತ್ರಿವರೆಗೂ ನಡೆಯಿತು.

ಪ್ರತಿಭಟನೆ: ರಸ್ತೆಬದಿ ಅಂಗಡಿಗಳ ಮಾಲೀಕರು ತೆರವು ಕಾರ್ಯಾಚರಣೆ ಖಂಡಿಸಿ ಕೆ.ಸಿ.ಶ್ರೀಕಾಂತ್‌ ನೇತೃತ್ವದಲ್ಲಿ ಪುರಸಭೆ ಮುಂದೆ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಪುರಸಭೆ ಸದಸ್ಯ ರವೀಂದ್ರಬಾಬು, ಏಕಾಏಕಿ ರಸ್ತೆ ಬದಿಯಲ್ಲಿರುವ ಅಂಗಡಿಗಳ ತೆರವು ಕಾರ್ಯಾಚರಣೆ ಖಂಡನೀಯ. ವರ್ತಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ಕಾರ್ಯಚರಣೆ ಅಸಮಾಧಾನ ವ್ಯಕ್ತಪಡಿಸದರು.

Advertisement

ಸರ್ಕಾರಿ ಆದೇಶ ಪಾಲಿಸಿ: ಉಪ ವಿಭಾಗಾಧಿಕಾರಿ ಶೈಲಜಾ ಮಾತನಾಡಿ, ಸರ್ಕಾರಿ ಆದೇಶದ ಮೇರೆಗೆ ಒತ್ತುವರಿ ತೆರವುಗೊಳಿಸಿದ್ದೇವೆ. ಸಾರ್ವಜನಿಕರ ರಸ್ತೆಯಲ್ಲಿ ಅಂಗಡಿಗಳಿಟ್ಟು ಓಡಾಟಕ್ಕೆ ಕಿರಿಕಿರಿ ಉಂಟು ಮಾಡುವುದು ಸರಿಯಲ್ಲ. ಸರ್ಕಾರಿ ನಿಯಮದಂತೆ ಕೆಲಸ ಮಾಡುತ್ತಿದ್ದೇವೆ. ತೊಂದರೆ ಮಾಡದೆ ಅಂಗಡಿ ತೆರವುಗೊಳಿಸುವಂತೆ ಪ್ರತಿಭಟನಾಕಾರರ ಮನವೊಲಿಸಿ ಕಾರ್ಯಾಚರಣೆ ಮುಂದುವರಿಸಿದರು.

ತೆರವು ಕಾರ್ಯಾಚರಣೆಯಲ್ಲಿ ತಹಶೀಲ್ದಾರ್‌ ಎಂ.ಶಿವಮೂರ್ತಿ, ಸರ್ಕಲ್‌ ಇನ್ಸ್‌ಪೆಕ್ಟರ್‌ ಸುಧಾಕರ್‌, ಪುರಸಭಾ ಮುಖ್ಯಾಧಿಕಾರಿ ಸತೀಶ್‌ ಕುಮಾರ್‌, ಪೌರಕಾರ್ಮಿಕರು, ಪೊಲೀಸ್‌ ಸಿಬ್ಬಂದಿ ಮತ್ತಿತರರು ಭಾಗವಹಿಸಿದ್ದರು. ಕೆಲವೆಡೆ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಅಂಗಡಿ ತೆರವುಗೊಳಿಸಿದರೆ ಮತ್ತೆ ಕೆಲವರು ವಿರೋಧಿಸಿದರೂ ಅಧಿಕಾರಿಗಳು ತಮ್ಮ ಕೆಲಸ ತಾವು ಮಾಡಿ ಒತ್ತುವರಿ ತೆರವುಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next