Advertisement

ಸರ್ಕಾರಿ ಪ್ರೌಢಶಾಲೆ ಕಟ್ಟಡ ಉದ್ಘಾಟನೆ

02:31 PM Sep 02, 2019 | Team Udayavani |

ಭಾಲ್ಕಿ: ತಾಲೂಕಿನ ಗಡಿ ಭಾಗದ ಮೆಹಕರ್‌ ಗ್ರಾಮದಲ್ಲಿ ಹೈದ್ರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆಯಡಿ 1ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಸರಕಾರಿ ಪ್ರೌಢಶಾಲೆ ಕಟ್ಟಡವನ್ನು ಶಾಸಕ ಈಶ್ವರ ಖಂಡ್ರೆ ಉದ್ಘಾಟಿಸಿ, ಪರಿಶೀಲಿಸಿದರು.

Advertisement

ಬಳಿಕ ಕೆಲಕಾಲ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಶಾಸಕರ ಹಲವು ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರ ಹೇಳಿ ಭೇಷ್‌ ಎನಿಸಿಕೊಂಡರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಾಲೆಗೆ ರಸ್ತೆ ವ್ಯವಸ್ಥೆ, ಆವರಣ ಗೋಡೆ, ಆಟದ ಮೈದಾನ ಸಮತಟ್ಟ ಮಾಡುವುದು, ಶುದ್ಧ ಕುಡಿವ ನೀರಿನ ವ್ಯವಸ್ಥೆ ಮಾಡುವುದು ಸೇರಿದಂತೆ, ಶಾಲೆಗೆ ಬಸ್‌ನಲ್ಲಿ ಬರುವಾಗ ನಿರ್ವಾಹಕ ಹಣ ಕೇಳುವುತ್ತಿರುವ ಕುರಿತು ಸಮಸ್ಯೆಗಳನ್ನು ಶಾಸಕರ ಎದುರು ತೆರೆದಿಟ್ಟರು.

ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿದ ಶಾಸಕರು, ತಕ್ಷಣ ಸಾರಿಗೆ ಘಟಕ ವ್ಯವಸ್ಥಾಪಕರಿಗೆ ದೂರವಾಣಿ ಮೂಲಕ ಮಾತನಾಡಿ, ಬಸ್‌ನ ನಿರ್ವಾಹಕರು ವಿದ್ಯಾರ್ಥಿಗಳಿಂದ ಹಣ ಪಡೆಯದಿರುವಂತೆ ಸೂಚನೆ ನೀಡಿದರು.

ರಾಷ್ಟ್ರೀಯ ಮಾಧ್ಯಮಿಕ ಯೋಜನೆಯಡಿ 1ಲಕ್ಷ ರೂ. ಅನುದಾನ ಬಳಕೆ ಮಾಡಿಕೊಂಡು ಎರಡ್ಮೂರು ದಿನಗಳಲ್ಲಿ ಶುದ್ಧ ಕುಡಿವ ನೀರಿನ ಘಟಕ ಅಳವಡಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ, ಮುಖ್ಯಶಿಕ್ಷಕರಿಗೆ ಸೂಚನೆ ನೀಡಿದರು. ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರಿಗೆ ಮಾತನಾಡಿ, ಮುಖ್ಯ ರಸ್ತೆಯಿಂದ ಶಾಲೆ ವರೆಗೂ ಮೆಟಲಿಂಗ್‌ ರಸ್ತೆ ಮಾಡಿಕೊಡುವಂತೆ ಶಾಸಕರು ಸೂಚನೆ ನೀಡಿದರು. ಉತ್ತಮ ಶಿಕ್ಷಣ ಪಡೆದು ಹೆತ್ತ ತಂದೆ ತಾಯಿ ಹಾಗೂ ಕಲಿತ ಶಾಲೆಗೆ ಗೌರವ ತಂದು ಕೊಡುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾಪಂ ಅಧ್ಯಕ್ಷೆ ಮೀರಾ ಜನಾರ್ಧನ, ಉಪಾಧ್ಯಕ್ಷ ಮಾರುತಿರಾವ್‌ ಮಗರ, ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ್‌, ಗ್ರಾಪಂ ಅಧ್ಯಕ್ಷ ಶಿವರಾಜ ತೋರಣೆ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದನೂರ್‌, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಸೂರ್ಯಕಾಂತ ಪಾಟೀಲ ಸೇರಿದಂತೆ ಹಲವರು ಇದ್ದರು.

ಡಿ ಗ್ರೂಪ್‌ ಸಿಬ್ಬಂದಿ ವಸತಿ ಗೃಹಕ್ಕೆ 50 ಲಕ್ಷ:

ಮೆಹಕರ್‌ನಲ್ಲಿ ನಂಜುಂಡಪ್ಪ ಯೋಜನೆಯಡಿ 1.40 ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನು ಶಾಸಕ ಈಶ್ವರ ಖಂಡ್ರೆ ಪರಿಶೀಲಿಸಿದರು. ಆಪರೇಶನ್‌ ಥೇಟರ್‌, ಹೆರಿಗೆ ಕೊಠಡಿ, ಪುರುಷ-ಮಹಿಳೆಯರ ಸಾಮಾನ್ಯ ವಾರ್ಡ್‌ ಗಳಿಗೆ ಖುದ್ದು ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು. ಬಳಿಕ ಶಾಸಕರು ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಉತ್ತಮ ಚಿಕಿತ್ಸೆ ಸಿಗಬೇಕು ಎನ್ನುವ ಸದುದ್ದೇಶದಿಂದ ಹೈಟೆಕ್‌ ಮಾದರಿಯಲ್ಲಿ ಆಸ್ಪತ್ರೆ ನಿರ್ಮಿಸಲಾಗಿದ್ದು, ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಬರುವ ದಿನಗಳಲ್ಲಿ ಶಿಥಿಲಾವಸ್ಥೆಯ ಆಸ್ಪತ್ರೆ ನೆಲಸಮ ಮಾಡಿ ಅಲ್ಲಿ ಉದ್ಯಾನವನ ಮಾಡುವ ಚಿಂತನೆ ಜತೆಗೆ ಡಿ ಗ್ರೂಪ್‌ ಸಿಬ್ಬಂದಿಗಳ ವಸತಿ ಗೃಹ ಹಾಗೂ ಆಸ್ಪತ್ರೆ ಸುತ್ತುಗೋಡೆ ನಿರ್ಮಾಣಕ್ಕೆ 50 ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು. ಕೊರತೆ ಇರುವ ವೈದ್ಯರ ನೇಮಕಕ್ಕೂ ಆದ್ಯತೆ ನೀಡಲಾಗುವುದು. ಇರುವ ವೈದ್ಯರು ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವಂತೆ ಸಲಹೆ ನೀಡಿದರು.
Advertisement
Advertisement

Udayavani is now on Telegram. Click here to join our channel and stay updated with the latest news.

Next