Advertisement

Puri; ತೆರೆದ ರತ್ನ ಭಂಡಾರ: ಹಾವುಗಳಿರಲಿಲ್ಲ

01:23 AM Jul 15, 2024 | Team Udayavani |

ಪುರಿ: ಜಗತ್ಪ್ರಸಿದ್ಧ ಒಡಿಶಾದ ಪುರಿ ಜಗನ್ನಾಥ ದೇಗುಲದ ಖಜಾನೆ “ರತ್ನ ಭಂಡಾರ’ವನ್ನು 46 ವರ್ಷಗಳ ಬಳಿಕ ರವಿವಾರ ತೆರೆಯಲಾಯಿತು. ಒಡಿಶಾ ಸರಕಾರ ರಚಿಸಿದ ಸಮಿತಿಯ ಸದಸ್ಯರು ರವಿವಾರ ಮಧ್ಯಾಹ್ನ 12 ಗಂಟೆಗೆ ದೇಗುಲವನ್ನು ಪ್ರವೇಶಿಸಿ, ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿದರು. ಬಳಿಕ 1.28 ಗಂಟೆಗೆ ರತ್ನ ಭಂಡಾರದ ದ್ವಾರವನ್ನು ತೆರೆಯಲಾಯಿತು.

Advertisement

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 46 ವರ್ಷಗಳಿಂದ ರತ್ನ ಭಂಡಾರ ಮುಚ್ಚಿರುವ ವಿಷಯವೇ ಚುನಾವಣ ಪ್ರಚಾರದ ಸರಕಾಗಿತ್ತು. ರತ್ನ ಭಂಡಾರ ಕೀಗಳು ಕಾಣೆಯಾಗಿದ್ದನ್ನು ಆಧಾರವಾಗಿಟ್ಟುಕೊಂಡು ಬಿಜೆಪಿಯು, ಆಗ ಆಡಳಿತದಲ್ಲಿದ್ದ ಬಿಜೆಡಿ ವಿರುದ್ಧ ಆರೋಪ ಮಾಡಿತ್ತು. ವಿಧಾನಸಭೆ ಚುನಾವಣೆಯಲ್ಲಿ ಗೆದ್ದರೆ ರತ್ನ ಭಂಡಾರ ಮರು ತೆರೆಯುವುದಾಗಿ ಭರವಸೆ ನೀಡಿತ್ತು.

ಭದ್ರತಾ ಕೊಠಡಿಗೆ ಎಲ್ಲ ವಸ್ತು ಶಿಫ್ಟ್

ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನ(ಎಸ್‌ಒಪಿ)ಗಳ ಅನುಸಾರ ನಾವು ಬಾಗಿಲುಗಳನ್ನು ತೆರೆದು ಪರಿಶೀಲಿಸಿದ್ದೇವೆ. ರತ್ನ ಭಂಡಾರ ಹೊರ ಚೇಂಬರ್‌ನಲ್ಲಿದ್ದ ಎಲ್ಲ ಆಭರಣಗಳು ಮತ್ತು ಬೆಲೆ ಬಾಳುವ ವಸ್ತುಗಳನ್ನು ದೇಗುಲದಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಭದ್ರತಾ ಕೊಠಡಿಗೆ ಸ್ಥಳಾಂತರಿಸಲಾಗಿದೆ. ಬಳಿಕ ಒಳ ಚೇಂಬರ್‌ ಪ್ರವೇಶಿಸಲಾಯಿತು. ಅಲ್ಲಿ 3 ಕೀಲಿಗಳನ್ನು ಹಾಕಲಾಗಿತ್ತು. ಆದರೆ ಜಿಲ್ಲಾಡಳಿತದ ಬಳಿ ಇರುವ ಕೀಯಿಂದ ಲಾಕ್‌ ತೆಗೆಯಲು ಸಾಧ್ಯವಿಲ್ಲವಾದ್ದರಿಂದ, ಕೀಲಿಗಳನ್ನು ಎಸ್‌ಒಪಿ ಅನುಸಾರ ಒಡೆಯಲಾಯಿತು. ಬಳಿಕ ಒಳಪ್ರವೇಶಿಸಿ ಪರಿಶೀಲಿಸಲಾಯಿತು ಎಂದು ಆಡಳಿತಾಧಿಕಾರಿ ಅರಬಿಂದ್‌ ಪಧೀ ತಿಳಿಸಿದ್ದಾರೆ.

ಒಳ ಕೋಣೆಯಲ್ಲಿರುವ ಆಭರಣಗಳು ಮತ್ತು ಬೆಲೆ ಬಾಳುವ ವಸ್ತುಗಳನ್ನು ಸದ್ಯಕ್ಕೆ ತಾತ್ಕಾಲಿಕ ಭದ್ರತಾ ಕೋಣೆಗೆ ಸ್ಥಳಾಂತರಿಸದಿರಲು ಸಮಿತಿ ನಿರ್ಧರಿಸಿದೆ. ಧಾರ್ಮಿಕ ವಿಧಿವಿಧಾನಗಳ ಮುಗಿದ ಬಳಿಕ ಈ ಕೋಣೆಯಲ್ಲಿ ವಸ್ತುಗಳನ್ನು ಸ್ಥಳಾಂತರಿಸಲಾಗುವುದು ಎಂದು ಸಮಿತಿ ಹೇಳಿದೆ.

Advertisement

ಯಾರ್ಯಾರು ಇದ್ದರು?

ಒಡಿಶಾ ಹೈಕೋರ್ಟ್‌ನ ನಿವೃತ್ತ ನ್ಯಾ| ಬಿಸ್ವನಾಥ ರಥ್‌, ಶ್ರೀ ಜಗನ್ನಾಥ ದೇಗುಲ ಆಡಳಿತ ಮಂಡಳಿಯ ಮುಖ್ಯ ಆಡಳಿತಗಾರ ಅರಬಿಂದ್‌ ಪಧೀ, ಎಎಸ್‌ಐ ಅಧೀಕಕ್ಷ ಡಿ.ಬಿ.ಗದನಾಯಕ, ಪುರಿಯ ರಾಜಮನೆತನದ ರಾಜ ಗಜಪತಿ ಮಹಾರಾಜ 11 ಮಂದಿ ರತ್ನ ಭಂಡಾರ ಕೋಣೆಗಳನ್ನು ತೆರೆಯುವಾಗ ಉಪಸ್ಥಿತರಿದ್ದರು. ಭಂಡಾರದ ಹೊರ ಮತ್ತು ಒಳ ಕೋಣೆಗಳನ್ನು ಪರಿಶೀಲಿಸಿ ಹೊರ ಬರುವಾಗ ಸಂಜೆ 5.20 ನಿಮಿಷವಾಗಿತ್ತು.

1978ರಲ್ಲಿ ತೆರೆಯಲಾಗಿತ್ತು ರತ್ನ ಭಂಡಾರ

1978ರಲ್ಲಿ (46 ವರ್ಷ) ದೇಗುಲದ  ರತ್ನ ಭಂಡಾರವನ್ನು ತೆರೆಯಲಾಗಿತ್ತು. ಶತಮಾನಗಳಿಂದಲೂ ಕಾಣಿಕೆಯಾಗಿ ಬಂದಿದ್ದ ಆಭರಣಗಳು ಮತ್ತು ಬೆಲೆ ಬಾಳುವ ವಸ್ತುಗಳನ್ನು ದಾಸ್ತಾನು ಮಾಡಲು ಆಗ 70 ದಿನಗಳನ್ನು ತೆಗೆದುಕೊಳ್ಳಲಾಗಿತ್ತು. ಆಗ ಲೆಕ್ಕ ಹಾಕಿದ ಪ್ರಕಾರ 128 ಕೆ.ಜಿ. ಚಿನ್ನದ 454 ಆಭರಣಗಳು, 221 ಕೆ.ಜಿ. ಬೆಳ್ಳಿ ಹಾಗೂ 293 ಆಭರಣಗಳು ಇದ್ದವು. ಹೈಕೋರ್ಟ್‌ ನಿರ್ದೇಶನದ ಅನುಸಾರ 2018ರಲ್ಲಿ ಬಾಗಿಲು ತೆರೆಯುವ ಪ್ರಯತ್ನ ಮಾಡಲಾಯಿತಾದರೂ, ಕೀಗಳು ಕಾಣೆಯಾದ್ದರಿಂದ ಸಾಧ್ಯವಾಗಿರಲಿಲ್ಲ.

ರತ್ನಭಂಡಾರ ವಸ್ತುಗಳ ಡಿಜಿಟಲೀಕರಣ

ರತ್ನ ಭಂಡಾರದಲ್ಲಿನ ಆಭರಣಗಳು ಮತ್ತು ಬೆಲೆ ಬಾಳುವ ವಸ್ತುಗಳ ಡಿಜಿಟಲ್‌ ಪಟ್ಟಿಯನ್ನು ತಯಾರಿಸಲು ಸರಕಾರ ನಿರ್ಧರಿಸಿದೆ. ಇದರಲ್ಲಿ ಆಯಾ ವಸ್ತುಗಳ ತೂಕ ಸೇರಿದಂತೆ ಇನ್ನಿತರ ಮಾಹಿತಿ ಇರಲಿದೆ.

ರತ್ನ ಭಂಡಾರದಲ್ಲಿ  ಹಾವುಗಳಿರಲಿಲ್ಲ

ಪುರಿ ಜಗನ್ನಾಥನಿಗೆ ಸಂಬಂಧಿಸಿ ಆಭರಣಗಳನ್ನು ರತ್ನ ಭಂಡಾರದಲ್ಲಿ ಹಾವುಗಳು ಕಾವಲು ಕಾಯುತ್ತಿವೆ ಎಂಬ ಪ್ರತೀತಿ ಇದೆ. ಆ ಕಾರಣಕ್ಕಾಗಿ ಬಾಗಿಲುಗಳನ್ನು ತೆರೆಯುವಾಗ ಸಮಿತಿಯು ಹಾವು ಹಿಡಿಯುವರನ್ನು ಕರೆಯಿಸಿತ್ತು. ಆದರೆ ಹಾವುಗಳು ಕಂಡು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಬಾಗಿಲು ತೆರೆಯುತ್ತಲೇ ಬಾವಲಿಗಳು ಹಾರಿ ಹೋದವು.

ಜನರ ಬಯಕೆಯಂತೆ ಜಗನ್ನಾಥ ಸಂಕೀರ್ಣದ 4 ದ್ವಾರಗಳನ್ನು ಈ ಮೊದಲೇ ತೆರೆಯಲಾಗಿತ್ತು. ಮಹತ್ವದ ಉದ್ದೇಶಕ್ಕಾಗಿ ಈಗ 46 ವರ್ಷಗಳ ಬಳಿಕ ರತ್ನ ಭಂಡಾರದ ದ್ವಾರಗಳನ್ನು ತೆರೆಯಲಾಗಿದೆ.

-ನರೇಂದ್ರ ಮೋದಿ, ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next