Advertisement

ಕಣ್‌ ತೆರೆದು ನೋಡಿ

09:52 PM Jun 12, 2019 | mahesh |

ಭೂಮಿ ಮೇಲಿನ ಜೀವಜಾಲದಲ್ಲಿ ನಮಗೆ ಗೊತ್ತಿಲ್ಲದ ಸಂಗತಿಗಳು ಹಲವಾರು! ಅಷ್ಟೇ ಯಾಕೆ… ನಮ್ಮ
ಸುತ್ತಮುತ್ತಲೇ ಇರುವ, ನಿತ್ಯವೂ ಕಣ್ಣಿಗೆ ಕಾಣುವ ಜೀವಿಗಳು, ಹುಳ ಹುಪ್ಪಟೆಗಳನ್ನೇ ನಾವು ಸರಿಯಾಗಿ
ತಿಳಿದುಕೊಂಡಿರುವುದಿಲ್ಲ. ಅಂಥ ಸೋಜಿಗದ ಜಗತ್ತಿನೊಳಗೊಂದು ಸುತ್ತು…

Advertisement

ಸಂಬಳ ಕೇಳದ ಪೌರ ಕಾರ್ಮಿಕರು
ನಮ್ಮ ಸುತ್ತಮುತ್ತಲ ಪರಿಸರವನ್ನು ಚೆಂದಗಾಣಿಸುವಲ್ಲಿ, ಶುಚಿಯಾಗಿರಿಸುವಲ್ಲಿ ಪೌರ ಕಾರ್ಮಿಕರ ಪಾತ್ರ ಹಿರಿದು. ಬೆಳಿಗ್ಗೆ ಎಷ್ಟೇ ಚಳಿ ಇದ್ದರೂ, ಕತ್ತಲಿದ್ದರೂ ತ್ಯಾಜ್ಯವನ್ನು ಸಾಗಿಸುವಲ್ಲಿ ಅವರು ನಿರತರಾಗಿರುತ್ತಾರೆ. ಇವರನ್ನು ಹೊರತು ಪಡಿಸಿ ನಮ್ಮ ನೆರೆಹೊರೆಯನ್ನು ಸ್ವತ್ಛವಾಗಿಡುವ ಕೆಲಸದಲ್ಲಿ ನಿರತವಾಗಿರುವ ಹಲವು ಜೀವಿಗಳು ನಮ್ಮ ನಡುವೆ ಇವೆ. ಕಾಗೆ, ರಣಹದ್ದು, ನಾಯಿ, ನರಿಗಳು ಅವುಗಳಲ್ಲಿ ಕೆಲವು. ರಸ್ತೆ ಬದಿ ಸತ್ತು ಬಿದ್ದ ಇಲಿ ಕೆಲ ದಿವಸಗಳ ಬಳಿಕ ಆ ಜಾಗದಲ್ಲಿ ಇಲ್ಲದೇ ಇರುವುದನ್ನು ನೀವು ಗಮನಿಸಿರಬಹುದು. ಇಲ್ಲವೇ ಅದನ್ನು ಇತರೆ ಪ್ರಾಣಿ ಪಕ್ಷಿಗಳು ಸತ್ತ ಪ್ರಾಣಿಯನ್ನು ಭಕ್ಷಿಸುವುದನ್ನು ಗಮನಿಸಿರಬಹುದು. ಬೃಹತ್‌ ಗಾತ್ರದ ಪ್ರಾಣಿಗಳು ಮರಣ ಹೊಂದಿದಾಗ ರಣಹದ್ದುಗಳು ಅದರ ಸುತ್ತ ನೆರೆಯುವುದನ್ನು ನೋಡಿರಬಹುದು. ಈ ಪ್ರಾಣಿ ಪಕ್ಷಿಗಳನ್ನು ಸ್ಕ್ಯಾವೆಂಜರ್ ಎನ್ನುತ್ತಾರೆ. ಅವು ಇಲ್ಲದೇ ಇದ್ದ ಪಕ್ಷದಲ್ಲಿ ಯಾವ ಪರಿಸ್ಥಿತಿ ಒದಗುತ್ತಿತ್ತು ಎಂದು ಯಾವತ್ತಾದರೂ ಯೋಚಿಸಿದ್ದೀರಾ? ಸತ್ತ ಪ್ರಾಣಿಯ ದೇಹ ಕೊಳೆತು ಗಬ್ಬು ನಾತ ಬೀರುತ್ತಿತ್ತು. ಪ್ರಕೃತಿಯಲ್ಲಿ ಸಮತೋಲನ ಕಾಪಾಡಿಕೊಳ್ಳಲು ಈ ಜೀವಿಗಳು ಸಹಕಾರಿ. ಅದನ್ನು ತಪ್ಪಿಸಲು ಹೊರಟೆ ಏನಾಗುತ್ತದೆ ಎನ್ನುವುದಕ್ಕೆ ಒಳ್ಳೆಯ ಉದಾಹರಣೆ ಇಲ್ಲಿದೆ. 90ರ ದಶಕದಲ್ಲಿ ಭಾರತದಲ್ಲಿ ರಣಹದ್ದುಗಳ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡು ಬಂದಿತ್ತು. ಅದ0ಕ್ಕೆ ಕಾರಣವೇನೆಂದು ತನಿಖೆ ನಡೆಸಿದಾಗ ಹಳ್ಳಿಗಳಲ್ಲಿ ಜನರು ಅವುಗಳನ್ನು ವಿಷ ಹಾಕಿ ಸಾಯಿಸುತ್ತಿದ್ದ ಸಂಗತಿ ಬೆಳಕಿಗೆ ಬಂದಿತ್ತು. ಇದರ ಅಡ್ಡ ಪರಿಣಾಮ ಏನಾಯ್ತು ಅಂದರೆ ಸತ್ತ ಪ್ರಾಣಿಗಳನ್ನು ತಿನ್ನಲು ನಾಯಿಗಳು ಮುಗಿಬಿದ್ದವು. ರಣಹದ್ದುಗಳಿದ್ದಾಗ ಅವು ತಿಂದುಳಿಸಿದ್ದನ್ನು ನಾಯಿಗಳು ಮುಕ್ಕುತ್ತಿದ್ದವು. ಆದರೆ ಈಗ ರಣಹದ್ದು ಇಲ್ಲದೇ ಇದ್ದುದರಿಂದ ನಾಯಿಗಳೇ ಪಾರಮ್ಯ ಮೆರೆದವು. ಇದರಿಂದಾಗಿ ಅವುಗಳ ಸಂಖ್ಯೆ ಹೆಚ್ಚಿ ಅವುಗಳ ಕಾಟದಿಂದ ರೇಬಿಸ್‌ ಕಾಯಿಲೆ ಹೆಚ್ಚಳವಾಗಿತ್ತು. ಸೃಷ್ಟಿಯ ನಿಯಮ ಮೀರಿ ಹೊರಟರೆ ಏನಾಗುತ್ತದೆ ಎನ್ನುವುದಕ್ಕೆ ಇದೊಳ್ಳೆ ನಿದರ್ಶನ. ಆದ್ದರಿಂದ ನಾವು ಪೌರ ಕಾರ್ಮಿಕರಿಗೆ ಋಣಿಯಾಗಿರುವಷ್ಟೇ, ಈ ಸ್ಕ್ಯಾವೆಂಜರ್ ಗಳಿಗೂ ಕೃತಜ್ಞರಾಗಿರಬೇಕು.

ಸಹಬಾಳ್ವೆಯ ಪಾಠ ಹೇಳುವ ಚಿಟ್ಟೆಗಳು
ಮನೆ ಮುಂದಿನ ಉದ್ಯಾನಗಳಲ್ಲಿ, ಕಾಡಿನಲ್ಲಿ, ಹಸಿರು ತುಂಬಿರುವಲ್ಲಿ, ಚಿಟ್ಟೆಗಳು ಹಾರಾಡುವುದನ್ನು ನೋಡಿರುತ್ತೀರಾ… ಅದೇ ಚಿಟ್ಟೆ ಚಳಿಗಾಲದಲ್ಲಿ ಗಿಡಮರಗಳು, ಮನೆಯ ತಾರಸಿ, ರಸ್ತೆಗಳೆಲ್ಲಾ ಹಿಮವನ್ನು ಹೊದ್ದಾಗ ಚಿಟ್ಟೆಗಳು ಹುಟ್ಟಿಕೊಳ್ಳುವುದಿಲ್ಲವಾ? ಎಂದು ಪ್ರಶ್ನಿಸಿಕೊಂಡಿದ್ದೀರಾ? ಚಿಟ್ಟೆ ತಾನು ರೆಕ್ಕೆ ಪಡೆದು ಹಾರುವ ಮುನ್ನ ನಾಲ್ಕು ಹಂತಗಳನ್ನು ಅದು ದಾಟಬೇಕಾಗುತ್ತದೆ. ಮೊಟ್ಟೆ, ಕ್ಯಾಟರ್‌ಪಿಲ್ಲರ್‌, ಪ್ಯೂಪಾ ಮತ್ತು ವಯಸ್ಕ ಚಿಟ್ಟೆ- ಕ್ರಮವಾಗಿ ಇವೇ ಆ ನಾಲ್ಕು ಹಂತಗಳು. ಪ್ಯೂಪಾ ಹಂತವನ್ನು ದಾಟಿದ ಮೇಲೆಯೆ ಅವಕ್ಕೆ ರೆಕ್ಕೆ ಮೂಡುವುದು. ಶೀತಲ ವಾತಾವರಣದಲ್ಲಿ ಚಿಟ್ಟೆಗಳು ರೆಕ್ಕೆ ಮೂಡದ ಹಂತವನ್ನು ತಮ್ಮದಾಗಿಸಿಕೊಂಡಿರುತ್ತವೆ. ಒಂದು ಚಿಟ್ಟೆಯ ಪ್ರಭೇದ ಮೊಟ್ಟೆಯಾಗಿದ್ದರೆ, ಇನ್ನೊಂದು ಕ್ಯಾಟರ್‌ಪಿಲ್ಲರ್‌, ಮತ್ತೂಂದು ಪ್ಯೂಪಾ… ಏಕೆಂದರೆ ಕೆಲ ಪ್ರಭೇದಗಳು ಒಂದೇ ಗಿಡವನ್ನು ಆಹಾರಕ್ಕಾಗಿ ಅವಲಂಬಿಸಿರುತ್ತದೆ. ಚಲಿಗಾಲದಲ್ಲಿ ಆ ಗಿಡಗಳು ತುಂಬಾ ಕಡಿಮೆ ಸಂಖ್ಯೆಯಲ್ಲಿರುತ್ತವೆ. ಹೀಗಾಗಿ ಅದನ್ನು ಅವಲಂಬಿಸಿದ ಎಲ್ಲಾ ಪ್ರಭೇದಗಳಿಗೂ ಆಹಾರ ಸಿಕ್ಕದೇ ಹೋಗಬಹುದು. ಹೀಗಾಗಿ ಅವುಗಳು ಚಳಿಗಾಲ ಕಳೆಯುವವರೆಗೂ ವಯಸ್ಕ ಹಂತವನ್ನು ತಲುಪದೆ, ರಕ್ಕೆ ಬಲಿಯದ ಹಂತಗಳಲ್ಲಿಯೇ ಕಾಲ ತಳ್ಳಿ ಬಿಡುತ್ತವೆ. ಎಲ್ಲೋ ಕೆಲ ಪ್ರಭೇದಗಳಷ್ಟೆ ಚಿಟ್ಟೆಗಳಾಗುತ್ತವೆ. ಲಭ್ಯವಿರುವ ಆಹಾರ ಅವುಗಳಿಗೆ ಸಾಕಾಗುತ್ತದೆ. ತಮ್ಮ ಸಹೋದರರಿಗೆ ಆಹಾರದ ಅಭಾವ ಕಾಡದೇ ಇರಲಿ ಎಂಬ ಕಾರಣಕ್ಕೆ ಇಂಥದ್ದೊಂದು ವ್ಯವಸ್ಥೆ ರೂಪಿಸಿಕೊಂಡಿರುವ ಚಿಟ್ಟೆಗಳಿಂದ ಮನುಷ್ಯ ಸಹಬಾಳ್ವೆಯ ಪಾಠ ಕಲಿಯಬಹುದು.

ಹರ್ಷವರ್ಧನ್‌ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next