Advertisement

ಸಾಹಿತ್ಯ ಅಕಾಡೆಮಿಯಿಂದ ಮುಕ್ತ ಮಾಲಿಕೆ

06:47 AM Dec 30, 2018 | |

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ, ಸಂಶೋಧಕ ಮತ್ತು ಅಧ್ಯಯನಶೀಲರ ಇಚ್ಛೆಯ ವಿಷಯದ ಕುರಿತ ರಚಿಸಲಾದ ಕೃತಿಗಳನ್ನು ಪ್ರಕಟಿಸುವ “ಮುಕ್ತ ಪ್ರಕಟಣಾ ಮಾಲಿಕೆ ಯೋಜನೆ’ ರೂಪಿಸಿದೆ. ಈ ಯೋಜನೆ ಮೂಲಕ ಸಂಶೋಧಕರ ಸೃಜನೇತರ ಸಾಹಿತ್ಯವನ್ನು ಪ್ರಕಟಿಸಲು ಅಕಾಡೆಮಿ ಮೊದಲ ಬಾರಿಗೆ ಇಚ್ಛಾಶಕ್ತಿ ತೋರಿಸಿದೆ.

Advertisement

ಇದುವರೆಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ತಜ್ಞರಿಗೆ ವಿಷಯ ನೀಡಿ, ಬಳಿಕ ಅವರು ಸಂಶೋಧನೆ ನಡೆಸಿ ನೀಡಿದ ಕೃತಿಗಳನ್ನು ಪ್ರಕಟಿಸುತ್ತಿತ್ತು. ಆಸಕ್ತರಿಗೆ ಫೆಲೋಶಿಪ್‌ ನೀಡಿ, ಅವರಿಗೆ ಮಾರ್ಗದರ್ಶಕರನ್ನು ಒದಗಿಸಿ ಹಾಗೂ ಕೃತಿಗಳನ್ನು ಬರೆಸಿ ಹಾಗೂ ಬಿಡಿ ಲೇಖನಗಳನ್ನು ಸಂಪಾದನೆ ಮಾಡಿ ಪುಸ್ತಕ ಪ್ರಕಟಣೆ ಮಾಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಅಕಾಡೆಮಿ ನೂತನ ಯೋಜನೆ ಮೂಲಕ ಸಂಶೋಧಕರು ತಮ್ಮ ಇಚ್ಛೆಯ ವಿಷಯದ ಕುರಿತು ನಡೆಸಿದ ಸಂಶೋಧನಾತ್ಮಕ ಕೃತಿಗಳನ್ನು ಪ್ರಕಟಿಸಲು ಮುಂದಾಗಿದೆ.

ಕಥೆ, ಕವನ, ಕಾವ್ಯ, ನಾಟಕ, ಅನುವಾದ ಸೇರಿದಂತೆ ಸೃಜನಶೀಲ ಸಾಹಿತ್ಯ ಪ್ರಕಾರದ ಕೃತಿಗಳನ್ನು ಮುಕ್ತ ಪ್ರಕಟಣಾ ಮಾಲಿಕೆಯಲ್ಲಿ ಹೊರ ತರಲಾಗುವುದಿಲ್ಲ. ವಿಮರ್ಶೆ, ಪ್ರವಾಸ ಕಥನ, ಸಂಶೋಧನಾತ್ಮಕ ಬರಹಗಳು, ವೈಚಾರಿಕ ಬರಹಗಳು ಸೇರಿದಂತೆ ಸೃಜನೇತರ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳನ್ನು ಅಕಾಡೆಮಿ ಪ್ರಕಟಿಸಲಿದೆ. ಬಿಡಿ ಲೇಖನಗಳ ಸಂಗ್ರಹಕ್ಕೆ ಮಾತ್ರ ಮನಸ್ಸು ಮಾಡಿಲ್ಲ.

150 ಪುಟಗಳ ಕೃತಿಗಳ ಪ್ರಕಟಣೆ: ಮುಕ್ತ ಪ್ರಕಟಣಾ ಮಾಲಿಕೆಯಲ್ಲಿ ನಿರ್ದಿಷ್ಟವಾಗಿ ಇಷ್ಟೇ ಸಂಖ್ಯೆಯ ಕೃತಿಗಳನ್ನು ಪ್ರಕಟಿಸಬೇಕೆಂದು ನಿರ್ಧರಿಸಿಲ್ಲ. ಅಕಾಡೆಮಿ ರಚಿಸುವ ಸಮಿತಿ ಆಯ್ಕೆ ಮಾಡಿದ ಬರಹಗಳಷ್ಟನ್ನು ಕೃತಿಗಳ ರೂಪದಲ್ಲಿ ಹೊರ ತರಲಾಗುವುದು. 150 ಪುಟಗಳ ಮಿತಿಯಲ್ಲಿ ಒಂದೊಂದು ವಿಷಯಕ್ಕೂ ಸಂಬಂಧಿಸಿದ ಪ್ರತ್ಯೇಕ ಕೃತಿಗಳನ್ನು ಪ್ರಕಟಿಸಲಾಗುವುದು. ಅಕಾಡೆಮಿ ಪುಸ್ತಕ ಪ್ರಕಟಣೆಗೆಂದು 15 ಲಕ್ಷ ರೂ.ಗಳನ್ನು ಮೀಸಲಿಟ್ಟಿದೆ. ಈ ಹಣದಲ್ಲಿಯೇ ಮುಕ್ತ ಪ್ರಕಟಣಾ ಮಾಲಿಕೆಯ ಕೃತಿಗಳನ್ನು ಪ್ರಕಟಿಸಲು ನಿರ್ಧರಿಸಲಾಗಿದೆ.

ಪ್ರಬುದ್ಧವಾದ ವಿಷಯಗಳ ಬಗ್ಗೆ ಸರಳವಾದ ನಿರೂಪಣೆ ಇರಬೇಕು. ಭಾಷೆ ಸರಳವಾಗಿರಬೇಕು. ಪ್ರವಾಸ ಕಥನಗಳನ್ನು ಕಳುಹಿಸುವವರು ಅದಕ್ಕೆ ಸಂಬಂಧಿಸಿದ ಚಿತ್ರಗಳನ್ನು ನೀಡಬೇಕು. ವೈಚಾರಿಕ ಬರಹಗಳಾಗಿದ್ದಲ್ಲಿ ಸಂಖ್ಯೆಗಳು ಮತ್ತು ದಾಖಲೆಗಳಿಗೆ ಪ್ರಾದಾನ್ಯತೆ ನೀಡಬೇಕು. ಲೇಖಕರು ಬಳಸಿಕೊಂಡ ಆಕಾರಗಳ ಬಗ್ಗೆಯೂ ಮಾಹಿತಿ ನೀಡಿದರೆ ಉತ್ತಮ ಎಂದು ತಮ್ಮ ಬರಹಗಳನ್ನು ಕಳುಹಿಸಲು ಇಚ್ಛಿಸುವವರಿಗೆ ಅಕಾಡೆಮಿ ಸಲಹೆ ನೀಡಿದೆ.

Advertisement

ಫೆ.28ರ ವರೆಗೂ ಅವಕಾಶ: ಯಾವುದೇ ಪದವಿಗೆ ಸಾದರಪಡಿಸಿದ ಸಂಶೋಧನಾತ್ಮಕ ಪ್ರಬಂಧಗಳು 150 ಪುಟಗಳ ಮಿತಿಯೊಳಗೆ ಇದ್ದರೆ ಅಂತಹವುಗಳನ್ನು ಪರಿಶೀಲಿಸಲಾಗುವುದು. ಈ ಕೃತಿಗಳು ಎಲ್ಲಿಯೂ ಪೂರ್ಣವಾಗಿ ಅಥವಾ ಬಿಡಿ ಬಿಡಿಯಾಗಿ ಪ್ರಕಟವಾಗಿರಬಾರದು. ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಕೃತಿಗಳನ್ನು ಕಳುಹಿಸಲು ಆಸಕ್ತರಿಗೆ ಫೆ.28ರವರೆಗೂ ಅವಕಾಶ ನೀಡಲಾಗಿದೆ.

ಪ್ರಬುದ್ಧ ಕೃತಿಗಳಿಗೆ ಮಾನ್ಯತೆ: ಸಾಕಷ್ಟು ಜನ ಸಂಶೋಧಕರು ತಮ್ಮಿಷ್ಟದ ವಿಷಯದ ಕುರಿತು ಅಧ್ಯಯನ ನಡೆಸಿ ಸಂಶೋಧನ ಲೇಖನಗಳನ್ನು ಬರೆದಿರುತ್ತಾರೆ. ಆದರೆ ಅದನ್ನು ಪ್ರಕಟಿಸುವ ಅವಕಾಶವಿರುವುದಿಲ್ಲ. ಅಂತಹ ಸಂಶೋಧಕರ ಮತ್ತು ಪದವೀಧರರ ಕೃತಿಗಳನ್ನು ಪ್ರಕಟಿಸಲು ಕರ್ನಾಟಕ ಸಾಹಿತ್ಯ ಅಕಾಡೆಮಿ ಈ ಯೋಜನೆ ರೂಪಿಸಿದೆ.

ಸ್ವಯಂ ಆಸಕ್ತಿಯಿಂದ ಮಾಡಿರುವಂತಹ ಸಂಶೋಧನಾತ್ಮಕ ಕಾರ್ಯಗಳು ಹೆಚ್ಚು ಪ್ರಬುದ್ಧವಾಗಿರುತ್ತವೆ. ನಿರ್ದಿಷ್ಟ ವಿಷಯದ ನಿರ್ಬಂಧವಿಲ್ಲದಿರುವುದರಿಂದ ಯಾವುದೇ ಆಂತರಿಕ ಒತ್ತಡವಿಲ್ಲದೆ ಅವು ರೂಪುಗೊಂಡಿರುತ್ತವೆ. ಹೀಗಾಗಿ ಪ್ರಕಟಣೆಗೆ ಅಕಾಡೆಮಿ ತೀರ್ಮಾನಿಸಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಹೇಳಿದರು. 

* ಶ್ರುತಿ ಮಲೆನಾಡತಿ

Advertisement

Udayavani is now on Telegram. Click here to join our channel and stay updated with the latest news.

Next