Advertisement

ಮೂರು ತಿಂಗಳಷ್ಟೇ ಇನ್ನು ಮರಳುಗಾರಿಕೆ

01:21 AM Sep 11, 2019 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಆರ್‌ಝಡ್‌ ವಲಯದಲ್ಲಿ ಮಳೆಗಾಲದಲ್ಲಿ ನಿಷೇಧಗೊಂಡಿದ್ದ ಮರಳುಗಾರಿಕೆ ಪುನರಾರಂಭಗೊಂಡಿದ್ದು, ಇನ್ನು ಈ ಭಾಗದಲ್ಲಿ ಮರಳುಗಾರಿಕೆ ನಡೆಸುವುದಕ್ಕೆ ಮೂರು ತಿಂಗಳಷ್ಟೇ ಅವಕಾಶವಿದೆ.

Advertisement

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಎರಡೂವರೆ ತಿಂಗಳ ನಿಷೇಧ ಹೊರತುಪಡಿಸಿದರೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಮರಳುಗಾರಿಕೆಗೆ ಯಾವುದೇ ಅಡ್ಡಿ ಎದುರಾಗಿಲ್ಲ. ಈ ಕಾರಣಕ್ಕೆ ಜಿಲ್ಲೆಯಲ್ಲಿ ಮರಳು ಅಭಾವದ ಸಮಸ್ಯೆ ಅಷ್ಟೊಂದು ಕಂಡುಬಂದಿರಲಿಲ್ಲ. ಅದೇ ಕಳೆದ ವರ್ಷ ಸುಮಾರು ಆರು ತಿಂಗಳು ವಿಳಂಬವಾಗಿ ಮರಳುಗಾರಿಕೆ ನಡೆಸುವುದಕ್ಕೆ ಅನುಮತಿ ದೊರೆತಿದ್ದು, ಮರಳು ಲಭ್ಯತೆ ವಿಚಾರದಲ್ಲಿ ಸಾಕಷ್ಟು ತೊಂದರೆಯೂ ಆಗಿತ್ತು. ಜಿಲ್ಲೆಯಲ್ಲಿ

2019ರ ಡಿಸೆಂಬರ್‌ 25ರ ಬಳಿಕ ಮರಳುಗಾರಿಕೆ ಮತ್ತೆ ಸ್ಥಗಿತಗೊಳ್ಳಲಿದ್ದು, ಆ ಬಳಿಕ ಹೊಸದಾಗಿ ಬ್ಯಾಥಮೆಟ್ರಿಕ್‌ ಸರ್ವೇ ನಡೆಸಿದ ಬಳಿಕವಷ್ಟೇ ಮರಳುಗಾರಿಕೆಗೆ ಅವಕಾಶ ದೊರೆಯಲಿದೆ. ಈ ಪ್ರಕ್ರಿಯೆಗೆ ಕನಿಷ್ಠ 2 ತಿಂಗಳ ಕಾಲಾವಕಾಶ ತೆಗೆದುಕೊಳ್ಳುವ ಸಾಧ್ಯತೆಗಳಿವೆ.

105 ಮಂದಿಗೆ ಅನುಮತಿ
ಕಳೆದ ವರ್ಷ ಬ್ಯಾಥಮೆಟ್ರಿಕ್‌ ಸರ್ವೆಗಾಗಿ ಜಿಯೋ ಮೆರೈನ್‌ ಸೊಲ್ಯೂಶನ್‌ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಅದು ಸಲ್ಲಿಸಿದ‌ ವರದಿಯನ್ನು ಜಿಲ್ಲಾಡಳಿತ ತಾಂತ್ರಿಕ ವರದಿಗಾಗಿ ಎನ್‌ಐಟಿಕೆಗೆ ನೀಡಿತ್ತು. ಪರಿಶೀಲನೆ ಬಳಿಕ ಎನ್‌ಐಟಿಕೆ ಅ. 11ರಂದು ನೀಡಿದ ವರದಿಯಲ್ಲಿ ನೇತ್ರಾವತಿ ಹಾಗೂ ಫಲ್ಗುಣಿ ನದಿಯ ಸಿಆರ್‌ಝಡ್‌ ವಲಯದಲ್ಲಿ 22 ಬ್ಲಾಕ್‌ಗಳಲ್ಲಿ ಮರಳು ತೆಗೆಯಬಹುದು ಎಂದು ಶಿಫಾರಸು ಮಾಡಿತ್ತು. ಈ ಆಧಾರದಲ್ಲಿ ಒಟ್ಟು 105 ಮಂದಿಗೆ ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆಗೆ ಅವಕಾಶ ನೀಡಲಾಗಿತ್ತು.

2018ರ ಜೂನ್‌ನಿಂದ ಆಗಸ್ಟ್‌ 15ರ ವರೆಗೆ ಸಿಆರ್‌ಝಡ್‌ ಮರಳುಗಾರಿಕೆಗೆ ನಿಷೇಧ ಹೇರಲಾಗಿತ್ತು. ಆದರೆ ನಿಷೇಧ ಮುಕ್ತಾಯಗೊಂಡ ಬಳಿಕವೂ ಸರ್ವೆ ಹಾಗೂ ದಿಬ್ಬಗಳ ಗುರುತಿಸುವಿಕೆ ಮತ್ತು ಪರಿಸರ ಇಲಾಖೆಯ ಅನುಮತಿ ಪ್ರಕ್ರಿಯೆಗಳಿಂದಾಗಿ ಮರಳುಗಾರಿಕೆಗೆ ಅನುಮತಿ ವಿಳಂಬವಾಗಿ ಜಿಲ್ಲೆಯಲ್ಲಿ ತೀವ್ರ ಮರಳಿನ ಸಮಸ್ಯೆ ಎದುರಾಗಿತ್ತು. ನಾನ್‌ ಸಿಆರ್‌ಝಡ್‌ ವಲಯದಲ್ಲೂ ಇದೇ ವೇಳೆ ತಾಂತ್ರಿಕ ಕಾರಣಗಳಿಂದಾಗಿ ಮರಳುಗಾರಿಕೆ ಸ್ಥಗಿತಗೊಂಡಿತ್ತು. ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಅನುಮತಿ ಪ್ರಕ್ರಿಯೆಗಳು ಪೂರ್ಣಗೊಂಡು ನವೆಂಬರ್‌ ಅಂತ್ಯದ ವೇಳೆಗೆ ಮರಳುಗಾರಿಕೆ ಆರಂಭಗೊಂಡಿದ್ದರೂ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗಿದ್ದು ಈ ವರ್ಷದ ಜನವರಿಯಲ್ಲಿ.

Advertisement

ಮರು ಸರ್ವೇಗೆ ಪೂರಕ ಸಿದ್ಧತೆ
ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆ ಡಿಸೆಂಬರ್‌ನಲ್ಲಿ ಕೊನೆಗೊಳ್ಳಲಿದೆ. ಬಳಿಕ ಬ್ಯಾಥಮೆಟ್ರಿಕ್‌ ಸರ್ವೆ ನಡೆಸಿ ಮರಳು ದಿಬ್ಬಗಳನ್ನು ಗುರುತಿಸಿ ಸಂಬಂಧಪಟ್ಟ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಹೊಸದಾಗಿ ಈ ವಲಯದಲ್ಲಿ ಮರಳುಗಾರಿಕೆ ಪ್ರಾರಂಭಗೊಳ್ಳಲಿದೆ. ಪೂರಕ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.
– ಪದ್ಮಶ್ರೀ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕರು

Advertisement

Udayavani is now on Telegram. Click here to join our channel and stay updated with the latest news.

Next