Advertisement

Forest: ಇಡೀ ರಾಜ್ಯಕ್ಕೆ ಕೇವಲ ನಾಲ್ವರು ವನ್ಯಜೀವಿ ವೈದ್ಯರು!

11:42 PM Dec 17, 2023 | Team Udayavani |

ಶಿವಮೊಗ್ಗ: ಹುಲಿ, ಚಿರತೆ, ಆನೆಗಳ ಸಂಖ್ಯೆಯಲ್ಲಿ ದೇಶದಲ್ಲೇ ಅಗ್ರಗಣ್ಯ ಸ್ಥಾನದಲ್ಲಿರುವ ಇಡೀ ರಾಜ್ಯದಲ್ಲಿ ಇರುವುದು ನಾಲ್ಕೇ ಮಂದಿ ವನ್ಯಜೀವಿ ವೈದ್ಯಾಧಿಕಾರಿಗಳು. ಅವರು ಕೂಡ ಪೂರ್ಣಾವಧಿ ಅಲ್ಲ!

Advertisement

ಭಾರತದ ಶೇ.20ರಷ್ಟು ಆನೆ ಸಂತತಿ, ಶೇ.18ರಷ್ಟು ಹುಲಿ ಸಂತತಿ, ಐದು ರಾಷ್ಟ್ರೀಯ ಉದ್ಯಾನವನಗಳು ಹಾಗೂ 30 ವನ್ಯಜೀವಿ ಅಭಯಾರಣ್ಯಗಳು ರಾಜ್ಯದಲ್ಲಿವೆ. 13 ಅರಣ್ಯ ವೃತ್ತ ಹಾಗೂ 600 ಅರಣ್ಯ ವಲಯಗಳಿವೆ. ಪ್ರತಿ ಜಿಲ್ಲೆ ಅಥವಾ ಪ್ರತಿ ವೃತ್ತಕ್ಕೆ ಒಬ್ಬರು ವನ್ಯಜೀವಿ ವೈದ್ಯಾಧಿಕಾರಿಗಳ ಅಗತ್ಯ ಇದೆ. ಆದರೆ, ನಾಲ್ಕೇ ನಾಲ್ಕು ವನ್ಯಜೀವಿ ವೈದ್ಯರು ಕಾರ್ಯನಿರ್ವಹಿಸಬೇಕಾದ ದುಃಸ್ಥಿತಿ ಇದೆ.

ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದ್ದರೂ ಅರಣ್ಯ ಇಲಾಖೆ ಪೂರ್ಣ ಪ್ರಮಾಣದ ವನ್ಯಜೀವಿ ವೈದ್ಯಾಧಿಕಾರಿಗಳನ್ನು ನೇಮಕ ಮಾಡುತ್ತಿಲ್ಲ. ದೇಶದಲ್ಲೇ ಆನೆಗಳ ಸಂಖ್ಯೆಯಲ್ಲಿ ಮುಂಚೂಣಿಯ ಲ್ಲಿರುವ ಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಇನ್ನಷ್ಟು ಉಲ½ಣಗೊಳ್ಳವ ಸಾಧ್ಯತೆ ಹೆಚ್ಚಿದೆ.

ನಾಲ್ಕೇ ಮಂದಿ ಡಾಕ್ಟರ್‌
ಅರಣ್ಯ ಇಲಾಖೆ ಕಾರ್ಯಾಚರಣೆಯಲ್ಲಿ ಆನೆ ತೂಕ, ವಯಸ್ಸು ಅಂದಾಜಿನ ಮೇಲೆ ಇಷ್ಟೇ ಪ್ರಮಾಣ ಅರವಳಿಕೆ ನೀಡಬೇಕೆಂಬ ನಿಯಮವಿದೆ. ಇದಕ್ಕೆ ಅರಣ್ಯ ಇಲಾಖೆಯ ವನ್ಯಜೀವಿ ವೈದ್ಯಾಧಿಕಾರಿಗಳು ನೇತೃತ್ವ ವಹಿಸುತ್ತಾರೆ. ಬಂಡೀಪುರ, ಹುಣಸೂರು, ಮೈಸೂರು, ಶಿವಮೊಗ್ಗದಲ್ಲಿ ಮಾತ್ರ ವನ್ಯಜೀವಿ ವೈದ್ಯಾಧಿಕಾರಿಗಳಿದ್ದಾರೆ. ರಾಜ್ಯದ ಯಾವುದೇ ಮೂಲೆಯಲ್ಲಿ ವನ್ಯಜೀವಿ ಹಿಡಿಯುವ ಕಾರ್ಯಾಚರಣೆ ಇದ್ದರೆ ಅದಕ್ಕೆ ಇವರೇ ಹೋಗುತ್ತಾರೆ. ಯಾವುದೇ ಪ್ರಾಣಿ, ಎಷ್ಟೇ ದೂರವಿದ್ದರೂ ನಿಖರವಾಗಿ ಡಾರ್ಟ್‌ ಮಾಡುವಷ್ಟು ಪರಿಣತಿ ಇವರಿಗಿದೆ. ಅನೇಕ ವರ್ಷಗಳಿಂದ ಯಶಸ್ವಿ ಕಾರ್ಯಾಚರಣೆ ಮಾಡುತ್ತಿ ರುವ ಇವರಿಗೆ ಇತ್ತೀಚಿನ ವರ್ಷಗಳು ಸವಾಲಾಗಿದೆ. ವೈದ್ಯಾಧಿಕಾರಿಗಳಲ್ಲದೆ, ಅನುಭವದ ಆಧಾರದ ಮೇಲೆ ಅರಣ್ಯ ಇಲಾಖೆ ಸಿಬಂದಿಯನ್ನೇ ಶಾರ್ಪ್‌ ಶೂಟರ್‌ಗಳಾಗಿ ಬಳಸಿಕೊಳ್ಳಲಾಗುತ್ತಿದೆ! ಯಾವುದೇ ಕಾರ್ಯಾಚರಣೆಯಲ್ಲಿ ಕನಿಷ್ಠ ಇಬ್ಬರು ವೈದ್ಯಾಧಿಕಾರಿಗಳು ಇರುವುದು ಅವಶ್ಯ. ಇಲ್ಲಿ ಅದು ಪಾಲನೆಯಾಗುತ್ತಿಲ್ಲ.

ಮಧ್ಯಪ್ರದೇಶ ಮಾದರಿಯಾಗಲಿ
ಮಧ್ಯಪ್ರದೇಶದಲ್ಲಿ ವನ್ಯಜೀವಿ ಗಳ ಅಧ್ಯಯನ, ತರಬೇತಿ ಪಡೆದ ಪೂರ್ಣಾವಧಿ ವೈದ್ಯರನ್ನು ಅರಣ್ಯ ಇಲಾಖೆ ನೇಮಿಸಿಕೊಂಡಿದೆ. ಇವರು ನಿವೃತ್ತಿಯಾಗುವವರೆಗೂ ಇಲಾಖೆ ಸೇವೆಯಲ್ಲೇ ಇರುತ್ತಾರೆ. ಕರ್ನಾಟಕದಲ್ಲಿ ಹಂಗಾಮಿ ವೈದ್ಯರಾಗಿ ನೇಮಕಗೊಳ್ಳುವ ಇವರು ಪೂರ್ಣಾವಧಿ ಪೂರೈಸು ವುದು ತುಂಬಾ ವಿರಳ. ಪಶು ವೈದ್ಯಾಧಿಕಾರಿಗಳಾದರೆ ಡ್ರಾಯಿಂಗ್‌ ಆಫೀಸರ್‌ ಆಗಿರುವ ಇವರಿಗೆ ಅರಣ್ಯ ಇಲಾಖೆಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವಿರುವುದಿಲ್ಲ. ಕನಿಷ್ಠ ವಿಭಾಗವಾರು ವೈದ್ಯಾಧಿಕಾರಿಗಳ ನೇಮಕವಾದರೆ ಮಾನವ-ಪ್ರಾಣಿ ಸಂಘರ್ಷ ನಿಯಂತ್ರಣ ಸಾಧ್ಯ ಎನ್ನುತ್ತಾರೆ ಅರಣ್ಯಾಧಿಕಾರಿಗಳು.

Advertisement

ಅರಣ್ಯ ಇಲಾಖೆಯಲ್ಲಿ ಪರಿಣತಿ ಹೊಂದಿದ ವನ್ಯಜೀವಿ ವೈದ್ಯಾಧಿಕಾರಿಗಳಿಲ್ಲ. ಪಶು ವೈದ್ಯ ಇಲಾಖೆಯಿಂದ ಇವರು ಬರುತ್ತಾರೆ. ಮೂರ್‍ನಾಲ್ಕು ವರ್ಷ ಅನುಭವ ಪಡೆದು ಹೋಗುತ್ತಾರೆ. ಮಧ್ಯಪ್ರದೇಶದಲ್ಲಿ ತರಬೇತಿ ಪಡೆದ ವನ್ಯಜೀವಿ ವೈದ್ಯಾಧಿಕಾರಿಗಳ ಕೇಡರ್‌ ಇದೆ. ಅದೇ ರೀತಿ ರಾಜ್ಯದಲ್ಲೂ ಆಗಬೇಕು. – ಜೋಸೆಫ್‌ ಹೂವರ್‌, ವನ್ಯಜೀವಿ ಮಂಡಳಿ ಮಾಜಿ ಸದಸ್ಯ

 ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next