Advertisement

ಉಡುಪಿ ಜಿಲ್ಲೆಯಲ್ಲಿ ಆನ್‌ಲೈನ್‌ ವಂಚನೆ: ವರ್ಷಾರಂಭದಲ್ಲೇ 8 ಲ.ರೂ. ಪಂಗನಾಮ

10:11 AM Feb 27, 2023 | Team Udayavani |

ಉಡುಪಿ: ಆನ್‌ಲೈನ್‌ ವ್ಯವಹಾರದಲ್ಲಿ ಅದೆಷ್ಟು ಜಾಗರೂಕರಾಗಿದ್ದರೂ ಖದೀಮರು ವಿಭಿನ್ನ ರೀತಿಯಲ್ಲಿ ಜನರನ್ನು ಯಾಮಾರಿಸುವ ಕಲೆ ಕರಗತ ಮಾಡಿಕೊಂಡಿದ್ದಾರೆ. ಈ ವರ್ಷದ ಜನವರಿಯಿಂದ ಫೆ.26ರ ವರೆಗೆ ಜಿಲ್ಲೆಯಲ್ಲಿ 8 ಪ್ರಕರಣಗಳು ದಾಖಲಾಗಿದ್ದು, 8,55,165 ರೂ. ಮೊತ್ತ ವಂಚಕರ ಪಾಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Advertisement

ಅಪರಿಚಿತ ಲಿಂಕ್‌ಗಳನ್ನು ಕಳುಹಿಸಿ ಯಾಮಾರಿಸುವುದು, ಕೆವೈಸಿ ಅಪ್‌ಡೇಟ್‌ ನೆಪದಲ್ಲಿ ಕರೆ ಮಾಡಿ ಮಾಹಿತಿ ಸಂಗ್ರಹಿಸುವುದು, ಒಟಿಪಿ ಕಳುಹಿಸಿ ನಂಬರ್‌ ಪಡೆದು ಹಣ ದೋಚುವುದು, ಗಿಫ್ಟ್ ನೆಪದಲ್ಲಿ ವಂಚನೆ, ಆನ್‌ಲೈನ್‌ ಉದ್ಯೋಗದ ಆಮಿಷದ ಮೂಲಕ ಹಣ ವರ್ಗಾಯಿಸಿಕೊಳ್ಳುವುದು, ತಪ್ಪಾಗಿ ಹಣ ವರ್ಗಾಯಿಸಿ ಮತ್ತೆ ಮರುಪಾವತಿಸಲು ತಿಳಿಸುವುದು ಇತ್ಯಾದಿ ತಂತ್ರಗಾರಿಕೆಯನ್ನು ಆನ್‌ಲೈನ್‌ ವಂಚಕರು ಬಳಕೆ ಮಾಡುತ್ತಿರುವುದು ಈ ಪ್ರಕರಣಗಳಲ್ಲಿ ಗೋಚರಕ್ಕೆ ಬಂದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಬ್ಯಾಂಕ್‌ ಖಾತೆಗೆ ಹಣ

ನಮ್ಮ ಬ್ಯಾಂಕ್‌ ಅಕೌಂಟ್‌ನ ಉಳಿತಾಯ ಖಾತೆಗೆ ಅಪರಿಚಿತ ವ್ಯಕ್ತಿಗಳು ನಿರ್ದಿಷ್ಟ ಮೊತ್ತವನ್ನು ಹಾಕುತ್ತಾರೆ. ಅನಂತರ ಫೋನ್‌ ಕರೆ ಮಾಡಿ ನಿಮ್ಮ ತಂದೆಯವರ ಸ್ನೇಹಿತ, ಬಂಧು ಅಥವಾ ಬೇರೆಯವರಿಗೆ ಹಾಕುವ ಹಣವನ್ನು ನಿಮಗೆ ಹಾಕಿದ್ದೇವೆ ದಯವಿಟ್ಟು ಮರುಪಾವತಿಸಿ ಎಂದು ನಮ್ಮನ್ನು ಪುಸಲಾಯಿಸುತ್ತಾರೆ. ಆಗ ಬ್ಯಾಂಕ್‌ ವಿವರ ಪಡೆದು ಒಟಿಪಿ ತಿಳಿಸುವಂತೆ ಹೇಳಿ ವಂಚಿಸುತ್ತಾರೆ. ಅಕೌಂಟ್‌ ಮಾಹಿತಿ ಪಡೆದು ಒಟಿಪಿ ನಂಬರ್‌ ಪಡೆದುಕೊಂಡು ವಂಚಿಸುತ್ತಾರೆ.

ಕೆಲವು ಬಾರಿ ಕಣ್ತಪ್ಪಿನಿಂದ ಗೂಗಲ್‌ ಪೇ ಅಥವಾ ಫೋನ್‌ ಪೇನಲ್ಲಿ ಬೇರೆಯವರಿಗೆ ಹಣ ಹೋಗುವುದಿದೆ. ಅದನ್ನು ಕೂಡಲೇ ಅದೇ ಮಾರ್ಗದಲ್ಲಿ ಫೋನ್‌ ಸಂಖ್ಯೆಯ ಮೂಲಕ ಹಿಂದಕ್ಕೆ ಪಡೆದುಕೊಳ್ಳಬಹುದು ಅಥವಾ ಹಿಂದಿರುಗಿಸಬಹುದು. ಯಾವುದೇ ಕಾರಣಕ್ಕೂ ಬ್ಯಾಂಕ್‌ ವಿವರ, ಎಡಿಎಂ ವಿವರ, ಒಟಿಪಿ ಮಾಹಿತಿಯನ್ನು ವಾಟ್ಸಾಪ್‌, ಎಸ್‌ಎಂಎಸ್‌, ಜಿಮೈಲ್‌, ಟೆಲಿಗ್ರಾಂ ಆ್ಯಪ್‌ಗ್ಳ ಮೂಲಕ ಬರುವ ಲಿಂಕ್‌ಗಳನ್ನು ಕ್ಲಿಕ್ಕಿಸುವುದು, ಹಂಚುವುದನ್ನು ಮಾಡದಿರುವುದೇ ಒಳಿತು ಎನ್ನುತ್ತಾರೆ ಸೈಬರ್‌ ಪರಿಣಿತರು.

Advertisement

ದೂರು ನೀಡಲು ಹಿಂಜರಿಕೆ ಬೇಡ

ವಿದ್ಯಾವಂತರು, ಶೇ.20-30ರಷ್ಟು ಹಿರಿಯ ನಾಗರಿಕರು ಸೈಬರ್‌ ವಂಚನೆಗೊಳಗಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹೆಚ್ಚಿನವರು ತಮ್ಮ ಘನತೆಗೆ ಅಂಜಿ ದೂರು ನೀಡಲು ಹಿಂದೇಟು ಹಾಕುತ್ತಾರೆ. ಯಾರೇ ಆದರೂ ಆನ್‌ಲೈನ್‌ ವ್ಯವಹಾರ ಮಾಡುವಾಗ ಎಚ್ಚರ ವಹಿಸುವುದು ಅತೀ ಅಗತ್ಯ. ಅಪರಿಚಿತರೊಂದಿಗೆ ಆನ್‌ಲೈನ್‌ನಲ್ಲಿ ಹಣಕಾಸಿನ ವ್ಯವಹಾರ ಮಾಡುವ ನಿಟ್ಟಿನಲ್ಲಿ ಹೆಚ್ಚು ಎಚ್ಚರ ವಹಿಸಬೇಕು.

ಎಚ್ಚರವಹಿಸಿದಷ್ಟು ಉತ್ತಮ
ಅತೀ ಶೀಘ್ರ(ಗೋಲ್ಡನ್‌ ಹವರ್‌)ದಲ್ಲಿ ದೂರು ನೀಡಿದ ಸಂದರ್ಭದಲ್ಲಿ ಆ ಹಣವನ್ನು ತಡೆಹಿಡಿದು ಹಿಂತಿರುಗಿಸುವ ಕೆಲಸ ಮಾಡಲಾಗಿದೆ. ಅನಾಮಧೇಯ ಸಂದೇಶ, ಲಿಂಕ್‌ಗಳನ್ನು ಆದಷ್ಟು ನಿರ್ಲಕ್ಷಿಸಿದರೆ ಉತ್ತಮ. ಯಾವುದೇ ಆತಂಕಕ್ಕೊಳಗಾಗದೆ ದೂರು ನೀಡಬೇಕು.
-ಹಾಕೆ ಅಕ್ಷಯ್‌ ಮಚ್ಚೀಂದ್ರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಗೋಲ್ಡರ್‌ ಹವರ್‌
ಶೇ.90ರಷ್ಟು ಪ್ರಕರಣಗಳಲ್ಲಿ ವಂಚನೆಗೊಳಗಾದ ಹಣ ಹಿಂದಕ್ಕೆ ಸಿಗುವುದೇ ಇಲ್ಲ. ಆನ್‌ಲೈನ್‌ ವಂಚನೆ ತಡೆಗಿರುವ ಏಕೈಕ ಮಾರ್ಗವೆಂದರೆ ಗೋಲ್ಡನ್‌
ಹವರ್‌ನ ಸದುಪಯೋಗ. ಇದಕ್ಕೆ ನಿರ್ದಿಷ್ಟ ಕಾಲಮಿತಿ ಎಂಬುವುದಿಲ್ಲ. ಘಟನೆ ನಡೆದ ತತ್‌ಕ್ಷಣ ಸಮೀಪದ ಪೊಲೀಸ್‌ ಠಾಣೆ ಅಥವಾ ಸೈಬರ್‌ ಠಾಣೆಗೆ ದೂರು ನೀಡಿ ಆದ ಘಟನೆಯನ್ನು ವಿವರಿಸಿದರೆ ಅಕೌಂಟ್‌ ಟ್ರ್ಯಾಕ್‌ ಮಾಡಿ ತಡೆಹಿಡಿಯಲು ಸಾಧ್ಯವಿದೆ. ದೂರು ನೀಡಲು ವಿಳಂಬ ಮಾಡಿದಷ್ಟು ಪ್ರಕರಣ ಜಟಿಲವಾಗುತ್ತದೆ ಎಂಬುವುದು ಸೈಬರ್‌ ಪೊಲೀಸರ ಅಭಿಪ್ರಾಯ.

ಇದನ್ನೂ ಓದಿ: ಅಸಹಾಯಕರಿಗೆ “ವಾತ್ಸಲ್ಯ’: ಡಾ| ಹೇಮಾವತಿ ಹೆಗ್ಗಡೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next