Advertisement

ಕಂದಾಯ ನ್ಯಾಯಾಲಯಗಳಲ್ಲಿ ಲಕ್ಷ ಅರೆ ನ್ಯಾಯಿಕ ಪ್ರಕರಣಗಳು ಬಾಕಿ

12:08 AM Apr 20, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಂದಾಯ ನ್ಯಾಯಾಲಯಗಳಲ್ಲಿನ ಬಾಕಿ ಪ್ರಕರಣಗಳ ಭಾರ ಹೆಚ್ಚಾಗುತ್ತಲೆ ಇದೆ. ಸದ್ಯ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರ ಕಂದಾಯ ನ್ಯಾಯಾಲಯಗಳಲ್ಲಿ 1 ಲಕ್ಷಕ್ಕೂ ಅಧಿಕ ಅರೆ ನ್ಯಾಯಿಕ ಪ್ರಕರಣಗಳು ಬಾಕಿ ಇವೆ.

Advertisement

ಜಮೀನಿನ ಹಕ್ಕು ವರ್ಗಾವಣೆ, ಮ್ಯುಟೇಶನ್‌, ಖಾತಾ ಮತ್ತು ಆರ್‌. ಟಿ.ಸಿ. ಬದಲಾವಣೆಗಳಿಗೆ ಸಂಬಂಧಿಸಿದ ಅರೆ ನ್ಯಾಯಿಕ ಪ್ರಕರಣಗಳನ್ನು ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರರ ಕಂದಾಯ ನ್ಯಾಯಾಲಯಗಳಲ್ಲಿ ಇತ್ಯರ್ಥಪಡಿಸುತ್ತಾರೆ. ಆದರೆ, ಅಧಿಕಾರಿಗಳ ಕಾರ್ಯಬಾಹುಳ್ಯದ ಪರಿಣಾಮ ಅರೆ ನ್ಯಾಯಿಕ ಪ್ರಕರಣಗಳ ಬಾಕಿ ಹೆಚ್ಚುತ್ತಲೆ ಇದೆ.

ಅದಕ್ಕಾಗಿ ಈ ಬಾಕಿ ಪ್ರಕರಣಗಳ ಭಾರ ಇಳಿಸಲು ಕಂದಾಯ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. ಅದರಂತೆ, ಎಲ್ಲ ಅರೆ ನ್ಯಾಯಿಕ ಕಂದಾಯ ನ್ಯಾಯಾಲಯಗಳು ಪ್ರಕರಣಗಳ ವಿಚಾರಣೆಯನ್ನು ವಾರದ ಪ್ರತಿ ಮಂಗಳವಾರ ಮತ್ತು ಗುರುವಾರಗಳಂದು ಪೂರ್ಣದಿನ ಕಡ್ಡಾಯವಾಗಿ ನಡೆಸಲು ನಿರ್ದೇಶನ ನೀಡಿದೆ. ಅದೇ ರೀತಿ ಮ್ಯುಟೇಶನ್‌, ಖಾತಾ ಮತ್ತು ಆರ್‌ಟಿಸಿ ಬದಲಾವಣೆಗೆ ಸಲ್ಲಿಕೆಯಾಗುವ ಅರ್ಜಿಗಳು ವಿವಾದರಹಿತವಾದ ಪ್ರಕರಣಗಳಿದ್ದಲ್ಲಿ ಖಾತೆ ಬದಲಾವಣೆಯನ್ನು 60 ದಿನಗಳಲ್ಲಿ ಭೂಮಿ ತಂತ್ರಾಂಶದ ಮೂಲಕ ಸಕಾಲ ಸೇವೆಗಳಡಿ ವಿಲೇವಾರಿ ಮಾಡಲಾಗುತ್ತಿದೆ.

ಅಲ್ಲದೇ ಅರ್ಜಿಯು ಆಸ್ತಿಯ ಹಕ್ಕಿನ ಹೊರತಾದ ವಿವಾದಿತ ಪ್ರಕರಣವಾಗಿದ್ದಲ್ಲಿ ಕರ್ನಾಟಕ ಭೂ ಕಂದಾಯ ಅಧಿನಿಯಮದ ಪ್ರಕಾರ ತಹಶೀಲ್ದಾರರು ಮೂರು ತಿಂಗಳಲ್ಲಿ ಇತ್ಯರ್ಥಪಡಿಸಬೇಕು. ಮೇಲ್ಮನವಿಗಳನ್ನು ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳು 6 ತಿಂಗಳಲ್ಲಿ ಇತ್ಯರ್ಥಪಡಿಸಲು ಸೂಚಿಸಲಾಗಿದೆ.

ಇದನ್ನೂ ಓದಿ:ಬಂಡೀಪುರ ಸಂರಕ್ಷಿತ ಪ್ರದೇಶದಲ್ಲಿ ಅವಳಿ ಮರಿಗಳಿಗೆ ಜನ್ಮ ನೀಡಿದ ಆನೆ!

Advertisement

ಅಧಿಕಾರಿಗಳಿಗೆ ತಿಂಗಳ ಗುರಿ
ಬಾಕಿ ಪ್ರಕರಣಗಳ ವಿಲೇವಾರಿಯನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸಲು ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳಿಗೆ ಸರಕಾರ ತಿಂಗಳ ಗುರಿ ನೀಡಿದೆ. ಅದರಂತೆ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಅರೆ ನ್ಯಾಯಿಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನ ಸಭೆ ನಡೆಸಿ, ಪ್ರತಿ ಜಿಲ್ಲಾಧಿಕಾರಿ ಪ್ರತಿ ತಿಂಗಳು 75 ಪ್ರಕರಣಗಳನ್ನು ಹಾಗೂ ಉಪ ವಿಭಾಗಾಧಿಕಾರಿಗಳು ಪ್ರತಿ ತಿಂಗಳು 100 ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ಗುರಿ ನಿಗದಿಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next