Advertisement

ಇಂದಿನಿಂದ ಏಕದಿನ ಪಂದ್ಯಾಟ : ಭಾರತದ ಮುಂದೆ ನಡೆದೀತೇ ಚಾಂಪಿಯನ್ನರ ಆಟ?

11:51 PM Mar 22, 2021 | Team Udayavani |

ಪುಣೆ: ಪ್ರವಾಸಿ ಇಂಗ್ಲೆಂಡ್‌ ವಿರುದ್ಧ ಮೊದಲು ಟೆಸ್ಟ್‌, ಅನಂತರ ಟಿ20 ಸರಣಿ ಜಯಿಸಿ ಪ್ರಭುತ್ವ ಸಾಧಿಸಿದ ಖುಷಿಯಲ್ಲಿರುವ ಭಾರತವೀಗ ಏಕದಿನ ಸರಣಿಯನ್ನೂ ವಶಪಡಿಸಿ ಕೊಳ್ಳಲು ಪುಣೆಗೆ ಬಂದಿಳಿದಿದೆ. 3 ಪಂದ್ಯಗಳ ಸರಣಿ ಇಲ್ಲಿ ಮಂಗಳವಾರ ಮೊದಲ್ಗೊಳ್ಳಲಿದ್ದು, ಮಾರ್ಗನ್‌ ಬಳಗವನ್ನು ಮಗುಚಲು ತಂತ್ರ ಗಾರಿಕೆ ರೂಪಿಸುತ್ತಿದೆ.

Advertisement

ಇನ್ನೊಂದೆಡೆ ಇಂಗ್ಲೆಂಡಿಗೆ ಇದು ಪ್ರತಿಷ್ಠೆಯ ಸಮರ. ಟೆಸ್ಟ್‌ ಮತ್ತು ಟಿ20 ಸರಣಿಗಳೆರಡರಲ್ಲೂ ಆರಂಭಿಕ ಮುನ್ನಡೆ ಸಾಧಿಸಿಯೂ ಇದನ್ನು ಉಳಿಸಿಕೊಳ್ಳಲಾಗದೆ ತೀವ್ರ ಮುಖಭಂಗ ಅನುಭವಿಸಿತ್ತು. ಹೀಗಾಗಿ ಏಕದಿನದಲ್ಲಾದರೂ ಮರ್ಯಾದೆ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಜತೆಗೆ “ವರ್ಲ್ಡ್ ಚಾಂಪಿಯನ್‌’ ಎಂಬ ಟ್ಯಾಗ್‌ಲೈನ್‌ ಹೊಂದಿರುವುದರಿಂದ ಇದಕ್ಕೆ ತಕ್ಕ ಪ್ರದರ್ಶನ ನೀಡಬೇಕಾದ ಅಗತ್ಯವಿದೆ.

3ನೇ ಹರ್ಡಲ್ಸ್‌
ಹಾಗೆ ನೋಡಿದರೆ, ಕಳೆದ ಟೆಸ್ಟ್‌ ಹಾಗೂ ಟಿ20 ಸರಣಿಗಳಿಗೆ ಹೋಲಿಸಿದರೆ 3 ಪಂದ್ಯಗಳ ಈ ಏಕದಿನ ಸರಣಿಗೆ ವಿಶೇಷ ಮಹತ್ವವೇನೂ ಇಲ್ಲ. ಮುಂಬರುವ ದಿನಗಳಲ್ಲಿ ಭಾರತಕ್ಕೆ ಯಾವುದೇ ಒನ್‌ಡೇ ಸೀರಿಸ್‌ ಇಲ್ಲದಿರುವುದೇ ಇದಕ್ಕೆ ಕಾರಣ. ಟೆಸ್ಟ್‌ ಸರಣಿ ವೇಳೆ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಸವಾಲು ಎದುರಿತ್ತು. ಈ ಹರ್ಡಲ್ಸ್‌ನಲ್ಲಿ ಟೀಮ್‌ ಇಂಡಿಯಾ ಗೆದ್ದು ಬಂತು.

ಟಿ20 ಸರಣಿಯತ್ತ ಬಂದಾಗ, ಅಲ್ಲಿದ್ದುದು ವಿಶ್ವದ ನಂಬರ್‌ ವನ್‌ ತಂಡದೆದುರಿನ ಮುಖಾಮುಖೀ. ಇಲ್ಲಿಯೂ ಭಾರತ ಅಸಾಮಾನ್ಯ ಪ್ರದರ್ಶನ ನೀಡಿತು. ಇದೇ ಸಾಹಸ ಏಕದಿನಕ್ಕೂ ವಿಸ್ತರಿಸಲ್ಪಡಲಿದೆ ಎಂಬ ವಿಶ್ವಾಸ ಭಾರತದ ಕ್ರಿಕೆಟ್‌ ಅಭಿಮಾನಿಗಳದ್ದು.

ಧವನ್‌ ಫಾರ್ಮ್ ಹೇಗೆ?
ಟಿ20ಯಲ್ಲಿದ್ದಂತೆ, ಭಾರತಕ್ಕೆ ಇಲ್ಲಿ ಸಶಕ್ತ ಆಡುವ ಬಳಗವೊಂದನ್ನು ರೂಪಿಸಬೇಕಾದ ಅಗತ್ಯವೇನೂ ಕಂಡುಬರದು. ಆದರೆ ತಂಡದ ಮೀಸಲು ಸಾಮರ್ಥ್ಯ ಅಮೋಘ ಮಟ್ಟ ದಲ್ಲಿರುವುದರಿಂದ “ಪ್ಲೇಯಿಂಗ್‌ ಇಲೆವೆನ್‌’ ಒಂದನ್ನು ಅಂತಿಮಗೊಳಿಸುವುದೇ ದೊಡ್ಡ ಸಮಸ್ಯೆಯಾಗಲಿದೆ!

Advertisement

ರೋಹಿತ್‌ ಶರ್ಮ ಅವರೊಂದಿಗೆ ಓಪ ನಿಂಗ್‌ ಬರುವವರು ಯಾರು ಎಂಬ ಪ್ರಶ್ನೆಗೆ ನಾಯಕ ಕೊಹ್ಲಿ ಉತ್ತರ ನೀಡಿದ್ದಾರೆ. ಈ ಸ್ಥಾನ ಶಿಖರ್‌ ಧವನ್‌ ಪಾಲಾಗಿದೆ. ಆದರೆ ಇವರ ಫಾರ್ಮ್ ಬಗ್ಗೆ ಸಹಜವಾಗಿಯೇ ಅನುಮಾನ ವಿದೆ. ಇದನ್ನು ಪರಿಹರಿಸಲು “ಡೆಲ್ಲಿ ಗಬ್ಬರ್‌’ ಯಶಸ್ವಿಯಾಗುವರೇ ಎಂಬುದನ್ನು ಕಾದು ನೋಡಬೇಕು. ಇಲ್ಲವಾದರೆ ಈ ಸ್ಥಾನ ತುಂಬಲು ದೊಡ್ಡದೊಂದು ಪಡೆಯೇ ಇದೆ. ಶುಭಮನ್‌ ಗಿಲ್‌, ಕೆ.ಎಲ್‌. ರಾಹುಲ್‌ ಸದ್ಯ ತಂಡದಲ್ಲೇ ಇದ್ದಾರೆ. ಪೃಥ್ವಿ ಶಾ, ದೇವದತ್ತ ಪಡಿಕ್ಕಲ್‌ ಹೊರಗಡೆ ಕಾಯುತ್ತಿದ್ದಾರೆ. ಹೀಗಾಗಿ ಧವನ್‌ ಪಾಲಿಗೆ ಇದು ಅಳಿವು ಉಳಿವಿನ ಸರಣಿ.

ಪಾಂಡ್ಯ: 10 ಓವರ್‌ ಸಾಧ್ಯವೇ?
ಮತ್ತೂಂದು ಆಯ್ಕೆ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರದು. ಈ ಹಾರ್ಡ್‌ ಹಿಟ್ಟರ್‌ನ ಬ್ಯಾಟಿಂಗ್‌ ಫಾರ್ಮ್ ಬಗ್ಗೆ ಅನುಮಾನವಿಲ್ಲ. ಆದರೆ ಇತ್ತೀಚೆಗಷ್ಟೇ ಶಸ್ತ್ರ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದರಿಂದ ಸ್ಪೆಷಲಿಸ್ಟ್‌ ಬೌಲರ್‌ ಆಗಿ ಇವರಿಂದ 10 ಓವರ್‌ ಎಸೆಯಲು ಸಾಧ್ಯವೇ ಎಂಬ ಪ್ರಶ್ನೆಯೊಂದಿದೆ. ಟಿ20ಯಲ್ಲಿ ನಾಲ್ಕೇ ಓವರ್‌ ಮಿತಿ ಇದ್ದುದರಿಂದ ಪಾಂಡ್ಯ ಯಶಸ್ವಿಯಾಗಿದ್ದರು. ಆದರೆ ಏಕದಿನದ ಸವಾಲು ಇದಕ್ಕಿಂತ ಭಿನ್ನ.

ಮತ್ತೋರ್ವ ಆಲ್‌ರೌಂಡರ್‌ ಸ್ಥಾನಕ್ಕೆ ವಾಷಿಂಗ್ಟನ್‌ ಸುಂದರ್‌ ಮತ್ತು ಕೃಣಾಲ್‌ ಪಾಂಡ್ಯ ನಡುವೆ ಪೈಪೋಟಿ ಇದೆ. ಉಳಿದಂತೆ ಭಾರತದ ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆ ಯಾವುದೇ ಗೊಂದಲವಿಲ್ಲ. ಕೊಹ್ಲಿ, ಅಯ್ಯರ್‌, ಸೂರ್ಯಕುಮಾರ್‌, ಪಂತ್‌ ಅವರಿಂದ ಇದು ಫಿಟ್‌ ಆಗಿದೆ. ಪಂತ್‌ ಕೀಪಿಂಗ್‌ ನಡೆಸುವುದರಿಂದ ರಾಹುಲ್‌ ಪ್ರವೇಶಕ್ಕೆ ಬ್ರೇಕ್‌ ಬಿದ್ದಿದೆ ಎಂದೇ ಹೇಳಬೇಕಾಗುತ್ತದೆ.
ಬೌಲಿಂಗ್‌ ವಿಭಾಗದಲ್ಲಿ ಭುವನೇಶ್ವರ್‌, ಕುಮಾರ್‌, ಯಜುವೇಂದ್ರ ಚಹಲ್‌, ಮೊಹಮ್ಮದ್‌ ಸಿರಾಜ್‌ ಅಥವಾ ನಟರಾಜನ್‌ ಕಾಣಿಸಿಕೊಳ್ಳಬಹುದು. ಕೊನೆಯ ಕ್ಷಣದಲ್ಲಿ ಕರ್ನಾಟಕದ ಪ್ರಸಿದ್ಧ್ ಕೃಷ್ಣ ಒನ್‌ಡೇ ಕ್ಯಾಪ್‌ ಧರಿಸಿದರೂ ಅಚ್ಚರಿ ಇಲ್ಲ.

ಗೊಂದಲದಲ್ಲಿ ಇಂಗ್ಲೆಂಡ್‌
ಎರಡೂ ಸರಣಿ ಕಳೆದುಕೊಂಡ ಕಾರಣ ಇಲ್ಲಿ ಇಂಗ್ಲೆಂಡ್‌ ತಂಡ ಒಂದು ರೀತಿಯ ಗೊಂದಲಕ್ಕೆ ಸಿಲುಕಿರುವುದು ಸುಳ್ಳಲ್ಲ. ಪ್ರಧಾನ ವೇಗಿ ಜೋಫ್ರ ಆರ್ಚರ್‌ ಇಲ್ಲದಿರುವುದು, ಮಾರ್ಕ್‌ ವುಡ್‌ ಅಂತಿಮ ಟಿ20 ಪಂದ್ಯದಲ್ಲಿ ಚೆನ್ನಾಗಿ ಚಚ್ಚಿಸಿಕೊಂಡದ್ದು, ಸ್ಪಿನ್ನರ್‌ಗಳಾದ ಆದಿಲ್‌ ರಶೀದ್‌, ಮೊಯಿನ್‌ ಅಲಿ ಯಾವುದೇ ಪರಿಣಾಮ ಬೀರದಿದ್ದುದು ಆಂಗ್ಲರ ಬೌಲಿಂಗ್‌ ಸಮಸ್ಯೆಯನ್ನು ಬಿಗಡಾಯಿಸುವಂತೆ ಮಾಡಿದೆ. ಭಾರತದ ಬ್ಯಾಟಿಂಗ್‌ ಸರದಿಯುದ್ದಕ್ಕೂ ಮುನ್ನುಗ್ಗಿ ಬೀಸುವವರೇ ತುಂಬಿದ್ದನ್ನು ಮರೆಯುವಂತಿಲ್ಲ.

ಹೀಗಾಗಿ ಇಂಗ್ಲೆಂಡ್‌ ಬ್ಯಾಟಿಂಗ್‌ ಸಾಮರ್ಥ್ಯದಿಂದಲೇ ಹೋರಾಟ ನಡೆಸಬೇಕಾಗುತ್ತದೆ. ರಾಯ್‌, ಬೇರ್‌ಸ್ಟೊ, ಮಾರ್ಗನ್‌, ಸ್ಟೋಕ್ಸ್‌, ಬಟ್ಲರ್‌ ಅವರೆಲ್ಲ ಯಶಸ್ಸು ಕಾಣುವುದು ಮುಖ್ಯ.

ಸಂಭಾವ್ಯ ತಂಡಗಳು
ಭಾರತ: ರೋಹಿತ್‌ ಶರ್ಮ, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ (ನಾಯಕ), ಶ್ರೇಯಸ್‌ ಅಯ್ಯರ್‌, ಸೂರ್ಯಕುಮಾರ್‌ ಯಾದವ್‌, ರಿಷಭ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ವಾಷಿಂಗ್ಟನ್‌ ಸುಂದರ್‌/ಕೃಣಾಲ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಸಿರಾಜ್‌, ಯಜುವೇಂದ್ರ ಚಹಲ್‌/ಕುಲದೀಪ್‌ ಯಾದವ್‌.

ಇಂಗ್ಲೆಂಡ್‌: ಜಾಸನ್‌ ರಾಯ್‌, ಜಾನಿ ಬೇರ್‌ಸ್ಟೊ, ಬೆನ್‌ ಸ್ಟೋಕ್ಸ್‌, ಇಯಾನ್‌ ಮಾರ್ಗನ್‌ (ನಾಯಕ), ಜಾಸ್‌ ಬಟ್ಲರ್‌, ಸ್ಯಾಮ್‌ ಬಿಲ್ಲಿಂಗ್ಸ್‌, ಮೊಯಿನ್‌ ಅಲಿ/ಲಿಯಮ್‌ ಲಿವಿಂಗ್‌ಸ್ಟೋನ್‌, ಸ್ಯಾಮ್‌ ಕರನ್‌/ಟಾಮ್‌ ಕರನ್‌, ಆದಿಲ್‌ ರಶೀದ್‌, ಮಾರ್ಕ್‌ ವುಡ್‌, ರೀಸ್‌ ಟಾಪ್ಲಿ.

Advertisement

Udayavani is now on Telegram. Click here to join our channel and stay updated with the latest news.

Next