Advertisement

ಎಡ ಕಣ್ಣೆದುರಲ್ಲೇ ಭಗತ್‌ಸಿಂಗ್‌ ಅಪಹರಣ

05:17 PM Mar 24, 2022 | Team Udayavani |

ದೇಶ ಕಂಡ ಮಹಾನ್‌ ವ್ಯಕ್ತಿಗಳ ಜಯಂತಿ, ಪುಣ್ಯಸ್ಮರಣೆಗಳು ಪ್ರತೀ ವರ್ಷವೂ ಬರುವಂಥದ್ದೇ. ಹಾಗೆಯೇ, ಕಾಲದ ಈ ಮ್ಯೂಸಿಕಲ್‌ ಚೇರ್‌ನಲ್ಲಿ ಕುಳಿತಂತೆ ಮಾರ್ಚ್‌ 23ರಂದು ಕ್ರಾಂತಿಕಾರಿ ಭಗತ್‌ ಸಿಂಗ್‌ ಅವರ ಪುಣ್ಯಸ್ಮರಣೆ ಮಿಂಚಿನಂತೆ ಫ‌ಳಕ್ಕೆಂದು ಮರೆ ಆಯಿತು. ಎಲ್ಲರೂ ವಿಸ್ಮಯಪಟ್ಟುಕೊಳ್ಳುವ ಹಾಗೆ “ಭಗತ್‌ ದಿನ’ದ ಸುತ್ತ ಒಂದಷ್ಟು ಕ್ರಾಂತಿಕಾರಕ ವಿದ್ಯಮಾನಗಳು ಘಟಿಸಿದವು. ದೇಶವೆಲ್ಲ “ದಿ ಕಾಶ್ಮೀರ್‌ ಫೈಲ್ಸ್‌’ನ ಗುಂಗಿನಲ್ಲಿ ಮುಳುಗಿರುವಾಗ, ಇತ್ತ ಪಂಜಾಬ್‌ನಲ್ಲಿ ಮೊದಲ ಬಾರಿಗೆ ಗದ್ದುಗೆ ಹಿಡಿದ ಆಮ್‌ ಆದ್ಮಿ ಪಕ್ಷವು ಭಗತ್‌ ಸಿಂಗ್‌ಗೆ ತನ್ನ “ಸೈದ್ಧಾಂತಿಕ ರಾಯಭಾರಿ’ಯ ಛದ್ಮವೇಷ ತೊಡಿಸಿದೆ.

Advertisement

ಕಾಂಗ್ರೆಸ್‌, ಬಿಜೆಪಿ, ಎಡಪಕ್ಷಗಳು- ಹೀಗೆ ಹಲವಾರು ದಶಕಗಳ ಇತಿಹಾಸವುಳ್ಳ ಪಕ್ಷಗಳೆಲ್ಲ ತಮ್ಮದೇ ಸೈದ್ಧಾಂತಿಕ ನಾಯಕರನ್ನು ಗುರುತಿಸಿ, ಬೇಲಿ ಹಾಕಿಕೊಂಡಿವೆ. ಹಾಗೆ ನೋಡಿದರೆ, ನಿನ್ನೆ ಮೊನ್ನೆ ಕಣಿºಟ್ಟ ಆಪ್‌ಗೆ ಆ ರೀತಿಯ ಸೈದ್ಧಾಂತಿಕ ಅಪ್ಪ- ಅಮ್ಮ ಯಾರೂ ಇದ್ದಿರಲೇ ಇಲ್ಲ. ಈ ಕೊರತೆ ನೀಗಿಸಲೆಂದೇ ಆಪ್‌ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌, ಭಗತ್‌ ಸಿಂಗ್‌ ಮೇಲೆ ಒಂದು ಕಣ್ಣಿಟ್ಟಿದ್ದರು. ಪಂಜಾಬ್‌ನ ನೂತನ ಮುಖ್ಯಮಂತ್ರಿ ಭಗವಂತ್‌ ಮಾನ್‌ರ ಪ್ರಮಾಣ ವಚನವನ್ನು ಭಗತ್‌ ಸಿಂಗ್‌ರ ಹುಟ್ಟೂರಿನಲ್ಲೇ ನಡೆಸಿದರು. ಭಗತ್‌ರಂತೆ ಬಸಂತಿ ಪೇಟಾ (ಹಳದಿ ಪೇಟಾ) ಧರಿಸಿ ಕಾರ್ಯಕರ್ತರು ಸಂಭ್ರಮಿಸಿದರು. ಅಲ್ಲಿನ ಸಿಎಂ ಕಚೇರಿಯಲ್ಲಿ ಮೊದಲು ತೂಗಿಬಿದ್ದಿದ್ದು ಕೂಡ ಈ ಕ್ರಾಂತಿಕಾರನ ಫೋಟೋವೇ!

ಕೇಜ್ರಿವಾಲ್‌ ಪಕ್ಷದ ಈ ಸೈದ್ಧಾಂತಿಕ ನಡೆ ಕೇವಲ ಪಂಜಾಬ್‌ಗಷ್ಟೇ ಸೀಮಿತಗೊಳ್ಳದೆ, ರಾಷ್ಟ್ರದ ರಾಜಧಾನಿ ಹೊಸದಿಲ್ಲಿಯನ್ನೂ ನಿಧಾ ನಕ್ಕೆ ಆವರಿಸಿಕೊಳ್ಳುತ್ತಿದೆ. ದಿಲ್ಲಿ ಸರಕಾರ ಝರೋಡಾ ಕಲಾನ್‌ನಲ್ಲಿ ತೆರೆಯಲು ಉದ್ದೇಶಿಸಿರುವ ಬೃಹತ್‌ ಸೈನಿಕ ಶಾಲೆಗೆ ಭಗತ್‌ ಸಿಂಗ್‌ರ ಹೆಸರನ್ನಿಡಲು ತುದಿಗಾಲಲ್ಲಿ ನಿಂತಿರುವುದೇ ಇದಕ್ಕೆ ಸಾಕ್ಷಿ.
ಮೈಮರೆತ ಎಡಪಕ್ಷಗಳು ತೆತ್ತ ಬೆಲೆ ಭಗತ್‌ ಸಿಂಗ್‌ರನ್ನು ತನ್ನ ಪಕ್ಷದ ಐಕಾನ್‌ ಆಗಿ ರೂಪಿಸುವ ಆಪ್‌ನ ಇವೆಲ್ಲ ಜಾಣ ಹೆಜ್ಜೆಗಳು ಜರಗುತ್ತಿರುವುದು, ಎಡ ಪಕ್ಷಗಳ ಅಧಃಪತನದ ಈ ಕಾಲಘಟ್ಟದಲ್ಲಿ ಎಂಬುದೂ ಇಲ್ಲಿ ಉಲ್ಲೇ ಖಾರ್ಹ. ಕಾರಣ, “ಭಗತ್‌ ಸಿಂಗ್‌ ನಮ್ಮ ತತ್ವ- ಸಿದ್ಧಾಂತದ ಪ್ರತಿನಿಧಿ’ ಅಂತಲೇ ಎಡಪಕ್ಷಗಳು ಇಲ್ಲಿಯ ತನಕ ಬಿಂಬಿಸಿ ಕೊಂಡು ಬಂದಿದ್ದವು. ಎಡ ಚಿಂತನೆಯ ಯಾವುದೇ ಚಳವಳಿಗೂ, ಭಗತ್‌ಸಿಂಗ್‌ ಫೋಟೋಗಳ ಹಾಜರಿ ಇದ್ದೇ ಇರುತ್ತಿತ್ತು.

2006ರ ಒಂದು ಪ್ರಸಂಗವನ್ನು ಸುಮ್ಮನೆ ನೆನಪಿಸಿಕೊಳ್ಳಿ. ರಾಕೇಶ್‌ ಓಂ ಪ್ರಕಾಶ್‌ ಮೆಹ್ರಾ ನಿರ್ದೇಶನದ “ರಂಗ್‌ ದೇ ಬಸಂತಿ’ ನೆಮಾ ತೆರೆಗೆ ಅಪ್ಪಳಿಸಿದಾಗ, ಭಗತ್‌ ಸಿಂಗ್‌ನ ಕುರಿತಾದ ಚಿತ್ರವೆಂಬ ಒಂದೇ ಕಾರಣಕ್ಕೆ ಎಡಪಕ್ಷಗಳು ಚಿತ್ರದ ಜನಪ್ರಿಯತೆಯನ್ನು ಎನ್‌ಕ್ಯಾಶ್‌ ಮಾಡಿಕೊಂಡಿದ್ದವು. ಎಡ ಪಂಥೀಯ ಚಿಂತಕರ ಪ್ರಭಾವವಿದ್ದ ಯೂನಿವರ್ಸಿಟಿಗಳೆಲ್ಲ ಆ ಸಿನೆಮಾ ತೋರಿಸಿ, ವ್ಯವಸ್ಥೆ ವಿರುದ್ಧ ಸಿಡಿದೇಳುವ ಮನೋಭಾವಕ್ಕೆ ನೀರೆರೆದಿದ್ದು ಗುಟ್ಟಾಗೇನೂ ಉಳಿದಿಲ್ಲ.

“ಭಗತ್‌ ನಮ್ಮವ, ಭಗತ್‌ ನಮ್ಮವ’!
ಭಗತ್‌ ಸಿಂಗ್‌ನನ್ನು “ನಮ್ಮವ’ ಎಂಬ ಪ್ರತಿಪಾದನೆಗೆ ಇಳಿಯುವಲ್ಲಿ ಬಿಜೆಪಿ ಕೂಡ ಹಿಂದೆ ಬಿದ್ದಿಲ್ಲ. ಕಳೆದ ಹಲವು ದಶಕಗಳಿಂದ ಎಡಪಕ್ಷಗಳು ಮತ್ತು ಸಂಘ ಪರಿವಾರದ ನಡುವೆ “ಭಗತ್‌ ನಮ್ಮವ, ಭಗತ್‌ ನಮ್ಮವ’ ಎಂಬ ವೈಚಾರಿಕ ತಿಕ್ಕಾಟ ನಡೆಯುತ್ತಲೇ ಬಂದಿದೆ. ಕ್ರಾಂತಿವೀರನನ್ನು ಸ್ಮರಿಸುವ ಕೆಲಸವನ್ನು ಆರೆಸ್ಸೆಸ್‌ ತನ್ನ ಶಾಖೆಗಳ ಮೂಲಕ ನಿರಂತರ ಮಾಡಿದೆ. ವಿವಿಧೆಡೆಯ ಶಾಖೆಗಳಿಗೆ “ಭಗತ್‌’ ಅಂತಲೇ ಹೆಸರಿಟ್ಟು, ತನ್ನ ಚಟುವಟಿಕೆ ವಿಸ್ತರಿಸಿದೆ. “ಗಲ್ಲುಗಂಬಕ್ಕೆ ಕೊರಳೊಡ್ಡುವ ಮೊದಲು ಭಗತ್‌ ಸಿಂಗ್‌, ಕ್ರಾಂತಿ ಸತ್ತಿತು ಅಂತ ಬೇಸರಪಟ್ಟುಕೊಂಡಿದ್ದ’ ಎಂಬ ಸಂಗತಿಯನ್ನು ಬಲಪಂಥೀಯ ಚಿಂತಕರು ಮತ್ತೆ ಮತ್ತೆ ಪ್ರತಿಪಾದಿಸುತ್ತಲೇ ಬಂದಿದ್ದಾರೆ. “ಆತ ಎಡಪಂಥೀಯರ ಸ್ವತ್ತಲ್ಲ ನಮ್ಮವ’ ಎನ್ನುವುದನ್ನು ಎಬಿವಿಪಿ ತನ್ನ ಸಾಕಷ್ಟು ಕಾರ್ಯಕ್ರಮಗಳ ಮೂಲಕ ಸಮರ್ಥಿಸಿಕೊಳ್ಳುತ್ತಿದೆ.
ಆದಾಗ್ಯೂ, ಭಗತ್‌ ಸಿಂಗ್‌ ಗಲ್ಲುಗಂಬಕ್ಕೆ ಏರುವ ಮುಂಜಾನೆ ಕಾರ್ಲ್ಮಾರ್ಕ್‌Õನ ಪುಸ್ತಕ ಓದುತ್ತಿದ್ದ ಎಂಬ ಸಂಗತಿ ಎಡಪಕ್ಷಗಳ ಪಾಲಿಗೆ ವೈಚಾರಿಕ ಮೇಲುಗೈ.

Advertisement

ಆದರೆ, ಆ ಸೈದ್ಧಾಂತಿಕ ಸಂಭ್ರಮವನ್ನು ದೀರ್ಘ‌ಕಾಲ ಉಳಿಸಿಕೊಳ್ಳುವಲ್ಲಿ ಎಡಪಕ್ಷಗಳು ಸಂಪೂರ್ಣ ಎಡವಿಬಿದ್ದಿವೆ. ಈ ಪಕ್ಷಗಳು ದುರ್ಬಲವಾಗುತ್ತಿದ್ದಂತೆ, ಇದರ ಆಶ್ರಯದಲ್ಲಿದ್ದ ಚಿಂತಕರೆಲ್ಲ ನಡೆಸಿದ “ಮಹಾನ್‌ ವಲಸೆ’, ಭಗತ್‌ ಸಿಂಗ್‌ರ ಆರಾಧನೆ ಮೇಲೂ ಪರಿಣಾಮ ಬೀರಿದೆ. ಹಾಗೆ ಕ್ರಾಂತಿ ವೀರನ ಗುಣಗಾನ ಮಾಡಿಕೊಂಡು ಬಂದ “ಎಡ’ ಅನು ಯಾ ಯಿಗಳು, ಇಂದು ಆಪ್‌ನ ನೆರಳಿಗೆ ಸರಿಯುತ್ತಿದ್ದಾರೆ. ಹೀಗಾಗಿ ಆಪ್‌ ಭಗತ್‌ ಸಿಂಗ್‌ರನ್ನು ತನ್ನ ಸೈದ್ಧಾಂತಿಕ ಆಸ್ತಿಯಾಗಿ ಪರಿವರ್ತಿಸಿಕೊಳ್ಳುವ ಅವಸರ ತೋರುತ್ತಿದೆ.

ಗಾಂಧಿಯಿಂದ ಭಗತ್‌ವರೆಗೆ…
ತಮಾಷೆಯೆಂದರೆ, ಆಪ್‌ನ ಮೂಲ ಬೇರುಗಳಲ್ಲಿ ಭಗತ್‌ ಸಿಂಗ್‌ನ ಕ್ರಾಂತಿಕಾರಕ ಚಿಂತನೆಗಳೇ ಕಾಣದಿರುವುದು! ಕೆಲವು ವರುಷಗಳ ಹಿಂದೆ ದಿಲ್ಲಿಯ ರಾಮ್‌ಲೀಲಾ ಮೈದಾನದಲ್ಲಿ ಅಣ್ಣಾ ಹಜಾರೆ ನಡೆಸಿದ ಹೋರಾಟದಲ್ಲಿ ಸಿಡಿದ ತುಣುಕೆಂಬಂತೆ, ಆಮ್‌ ಆದ್ಮಿ ಪಕ್ಷ ಜನ್ಮ ತಳೆದಿದ್ದು ಗೊತ್ತೇ ಇದೆ. ಭ್ರಷ್ಟಾಚಾರ ತಡೆಗಾಗಿ ಲೋಕ್‌ಪಾಲ್‌ ಮಸೂದೆ ಜಾರಿಗಾಗಿ ಅಂದು ಅಣ್ಣಾ ಹಜಾರೆ ನಡೆಸಿದ ಸತ್ಯಾಗ್ರಹ ಹೋರಾಟ, ಗಾಂಧಿ ತತ್ತÌದ ಹಿನ್ನೆಲೆಯಲ್ಲಿ ರೂಪು ತಳೆದಿತ್ತು. ಅಂದು ಗಾಂಧೀ ಪಥದಲ್ಲಿ ಅಂಬೆಗಾಲಿಟ್ಟಿದ್ದ ಆಪ್‌ ಈಗ ತನ್ನ ರಾಜಕೀಯ ಲಾಭಕ್ಕಾಗಿ ಓಡುತ್ತಿರುವುದು ಮಾತ್ರ ಕ್ರಾಂತಿಕಾರಿ ಭಗತ್‌ ಸಿಂಗ್‌ರ ಪಥದಲ್ಲಿ!

ಎಲ್ಲ “ರಾಷ್ಟ್ರ ನಾಯಕ’ರೂ ಒಂದೊಂದು ಪಾರ್ಟಿ!
ಪ್ರಸ್ತುತ ಭಾರತದಲ್ಲಿ ಯಾವುದೇ ಸಂಗತಿ ಅಥವಾ ಯಾವುದೇ ವ್ಯಕ್ತಿಯೂ ರಾಜಕೀಯ ಸಿದ್ಧಾಂತದ ನೆರಳು ಸೋಕದೆ ದೂರ ಉಳಿದಿಲ್ಲ. ಹಾಗೆ ಉಳಿಯಲೂ ಸಾಧ್ಯವಾಗುತ್ತಿಲ್ಲ. ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ, ಸಾಮಾಜಿಕ ಚಳವಳಿಯಲ್ಲಿ ಮೇರು ವ್ಯಕ್ತಿ ಗಳಾಗಿ ಗುರುತಿಸಿಕೊಂಡು, ಚರಿತ್ರೆಯ ಗರ್ಭದೊಳಗೆ ಸೇರಿರುವ ರಾಷ್ಟ್ರ ನಾಯಕರೆಲ್ಲರನ್ನೂ ಈಗ ಒಂದೊಂದು ಪಕ್ಷಗಳು “ಇವರು ನಮ್ಮವರು’ ಅಂತಲೇ ಆರಾಧಿಸುತ್ತಿವೆ.

ಗಾಂಧಿ, ನೆಹರೂ ಅವರ ಪೂಜೆಯಲ್ಲಿ ಮೈಮರೆತಿದ್ದ ಕಾಂಗ್ರೆಸ್‌, ಸ್ವಾತಂತ್ರ್ಯ ಹೋರಾಟಕ್ಕೆ ಹೆಗಲುಕೊಟ್ಟಿದ್ದ ನೇತಾಜಿ ಸುಭಾಷ್‌ಚಂದ್ರ ಬೋಸ್‌, ಸರ್ದಾರ್‌ ವಲ್ಲಭಬಾಯ್‌ ಪಟೇಲ್‌, ವೀರ ಸಾವರ್ಕರ್‌ ಅವರಿಂದ ದೊಡ್ಡ ಅಂತರ ಕಾಪಾಡಿಕೊಂಡಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಬಿಜೆಪಿ, ಈ ಗಣ್ಯರಿಗೆ ತನ್ನ ಸೈದ್ಧಾಂತಿಕ ಹೀರೋ ಗೌರವ ನೀಡಿ, ಮುನ್ನೆಲೆಗೆ ತಂದಿತು. ಕಳೆದ ವರ್ಷ ನಡೆದ ಪಶ್ಚಿಮ ಬಂಗಾಲ ಚುನಾವಣೆ ವೇಳೆ ಟಿಎಂಸಿ ಪಕ್ಷಕ್ಕೂ ಒಂದು ಹೆಜ್ಜೆ ಮುಂದೆ ಎಂಬಂತೆ ಬಿಜೆಪಿ, ನೇತಾಜಿಯ ಬಗ್ಗೆ ಅಭಿಮಾನ ಪ್ರಕಟಿಸಿತ್ತು. ಇದರ ಜತೆಗೆ ಮಹಾನ್‌ ಕವಿ ರವೀಂದ್ರನಾಥ್‌ ಟಾಗೋರ್‌ರನ್ನೂ ಅಪ್ಪಿಕೊಂಡಿತ್ತು. ಕಾಂಗ್ರೆಸ್‌ನ ಮೇರು ನಾಯಕರೇ ಆಗಿದ್ದ ಸರ್ದಾರ್‌ ವಲ್ಲಭ ಬಾಯ್‌ ಪಟೇಲ್‌, ಆ ಪಕ್ಷದ ನೆರಳಿನಿಂದ ಇಂದು ಎಷ್ಟೋ ದೂರ ಬಂದಂತಿದೆ. ಪಟೇಲರೀಗ ಬಿಜೆಪಿಯ ಬಹುದೊಡ್ಡ ಆಸ್ತಿ. ಹಾಗೆ ಸಾವರ್ಕರ್‌ ಕೂಡ. ಇಷ್ಟೆಲ್ಲದರ ನಡುವೆ, “ಸಂವಿಧಾನ ಶಿಲ್ಪಿ’ ಡಾ| ಬಿ.ಆರ್‌. ಅಂಬೇಡ್ಕರ್‌ರನ್ನು ಎಲ್ಲ ಸಿದ್ಧಾಂತವಾದಿಗಳೂ, ಸಂದರ್ಭಕ್ಕೆ ತಕ್ಕಂತೆ ಇವರು ನಮ್ಮವರೆಂದು ಸಮಾನವಾಗಿ ಜಗ್ಗಾಡುತ್ತಲೇ ಬಂದಿದ್ದಾರೆ.

ಪ್ರಾದೇಶಿಕ ಭಾಗದಲ್ಲಿ ಮಹಾನ್‌ ಛಾಪು ಮೂಡಿಸಿದ ನಾಯಕರ ಬಗ್ಗೆ ಏನೇ ಋಣಾತ್ಮಕ ಸಂಗತಿ ಜರಗಿದರೂ ಇಂದು ಅದು ದೊಡ್ಡ ವಿವಾದಕ್ಕೆ ತಿರುಗಿಕೊಳ್ಳುತ್ತಿದೆ. ನಾರಾಯಣ ಗುರುಗಳ ಕುರಿತ ಸ್ತಬ್ಧಚಿತ್ರ ತಿರಸ್ಕರಿಸಿದಾಗ, ಇಂಥ ವಿವಾದದ ಚಕ್ರವ್ಯೂಹದಲ್ಲಿ ಆಡಳಿತರೂಢ ಬಿಜೆಪಿಯೇ ಸಿಲುಕಬೇಕಾ ಯಿತು. ನಿತ್ಯ ಪ್ರಾಥಃಕಾಲದ “ಏಕಾತ್ಮತಾ ಸ್ತೋತ್ರ’ದಲ್ಲಿ ನಾರಾ ಯಣ ಗುರು ಅವರನ್ನು ಆರೆಸ್ಸೆಸ್‌ ಸ್ಮರಿಸಿದರೂ, ಬಿಜೆಪಿಗೆ ಸ್ತಬ್ಧಚಿತ್ರ ತಿರಸ್ಕಾರ ವಿವಾದ ನುಂಗಲಾರದ ತುತ್ತೇ ಆಗಿ ಹೋಯಿತು.

ಅದೇನೆ ಇರಲಿ… ಒಂದು ಪಕ್ಷದ ಸೈದ್ಧಾಂತಿಕ ಕೋಟೆಗೆ ಲಗ್ಗೆ ಇಟ್ಟು “ಮೇರು ನಾಯಕ’ರನ್ನು ಅಪಹರಿಸುವ ಪ್ರಸಂಗಕ್ಕೆ ಭಗತ್‌ ಸಿಂಗ್‌ ಹೊಸ ಸೇರ್ಪಡೆ. ರಾಷ್ಟ್ರ ನಾಯಕರ ಆರಾಧನೆಯಲ್ಲಿ ಯಾವುದೇ ರಾಜಕೀಯ ಪಕ್ಷ ಕೊಂಚ ಮೈಮರೆತರೂ ಇನ್ನೊಂದು ಪಕ್ಷ ಅದರ ಲಾಭ ಪಡೆಯುತ್ತದೆ ಎನ್ನುವುದರಲ್ಲಿ ಮರುಮಾತಿಲ್ಲ.

ವಿವಿಧ ಪಕ್ಷಗಳ ನೆರಳಿನಡಿ ನಾಯಕರು
ಮಹಾತ್ಮಾ ಗಾಂಧೀಜಿ, ಸುಭಾಷ್‌ ಚಂದ್ರ ಬೋಸ್‌, ಭಗತ್‌ ಸಿಂಗ್‌, ನೆಹರೂ, ಸರ್ದಾರ್‌ ವಲ್ಲಭಬಾಯ್‌ ಪಟೇಲ್‌, ಡಾ| ಬಿ.ಆರ್‌. ಅಂಬೇಡ್ಕರ್‌, ಸಾವರ್ಕರ್‌.

-ಕೀರ್ತಿ ಕೋಲ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next