ಭೂ ಮಾಪನ ಇಲಾಖೆಯ ಮೂಲಕ ಕೆರೆಯನ್ನು ಅಳತೆ ಮಾಡಲು ಜು. 21ರಂದು ದಿನ ನಿಗದಿ ಮಾಡಿದೆ.
Advertisement
ಕೆರೆಯನ್ನು ಒತ್ತುವರಿ ಮಾಡಲಾಗಿದೆ ಎಂದು ಕಂದಾಯ ಇಲಾಖೆ ಹಾಗೂ ಗ್ರಾ.ಪಂ.ಗೆ ದೂರು ನೀಡಿ ಹಲವು ತಿಂಗಳು ಕಳೆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಎರಡು ತಿಂಗಳ ಹಿಂದೆ ದೂರಿಗೆ ಸ್ಪಂದಿಸಿದ ಪುತ್ತೂರು ತಹಶೀಲ್ದಾರ್ ಅನಂತ ಶಂಕರ ಅವರು, ಕೆರೆಯನ್ನು ಅಳೆದು ಗಡಿ ಗುರುತು ಮಾಡಿ ಅತಿಕ್ರಮಣ ನಡೆದಿದ್ದರೆ ಕೂಡಲೇ ತೆರವುಗೊಳಿಸುವಂತೆ ಕಡಬ ಕಂದಾಯ ನಿರೀಕ್ಷಕರಿಗೆ ಮೌಖೀಕ ಆದೇಶ ನೀಡಿದ್ದರು. ಕಂದಾಯ ನಿರೀಕ್ಷಕರು ಕೆರೆಯನ್ನು ಅಳತೆ ಮಾಡಿ ಗಡಿ ಗುರುತು ಮಾಡಿಕೊಡಲು ಪತ್ರ ಬರೆದಿದ್ದರೂ ಭೂ ಮಾಪನ ಇಲಾಖೆ ಕ್ರಮ ಕೈಗೊಂಡಿರಲಿಲ್ಲ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಗುರುವಾರ ಜರಗಿದ ಕಡಬ ಗ್ರಾಮಸಭೆಯಲ್ಲೂ ಈ ವಿಚಾರ ಚರ್ಚೆಗೆ ಬಂದು ಕಂದಾಯ ಹಾಗೂ ಭೂಮಾಪನ ಇಲಾಖೆ ಅಧಿಕಾರಿಗಳನ್ನು ಗ್ರಾಮಸ್ಥರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಅರ್ಪಾಜೆ ಕೆರೆ ಒತ್ತುವರಿಯಾಗಿದೆ ಮತ್ತು ಕೆರೆಯಲ್ಲಿ ನೀರು ನಿಲ್ಲದಂತೆ ತೋಡು ನಿರ್ಮಿಸಲಾಗಿದೆ ಎನ್ನುವ ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಉದಯವಾಣಿ ಸುದಿನ ಸಚಿತ್ರ ವರದಿಗಳನ್ನು ಪ್ರಕಟಿಸಿ, ಇಲಾಖೆಗಳು ಹಾಗೂ ಪಂಚಾಯತ್ ಗಮನ ಸೆಳೆದಿತ್ತು. ಅರ್ಪಾಜೆ ಕೆರೆ ಉದೇರಿ, ನಾಲ್ಗುತ್ತು ಹಾಗೂ ಅರ್ಪಾಜೆ ಪರಿಸರದ ಕೃಷಿ ತೋಟಗಳಿಗೆ ಹಾಗೂ ಭತ್ತದ ಗದ್ದೆಗಳಿಗೆ ನೀರುಣಿಸುವ ಮೂಲಕ ಸಾರ್ವಜನಿಕರಿಗೆ ಸಹಕಾರಿಯಾಗಿತ್ತು. ಆದರೆ ಕೆರೆಯ ಪಶ್ಚಿಮ ಭಾಗದಲ್ಲಿ
ಹೆಚ್ಚುವರಿ ನೀರು ಹರಿದುಹೋಗಲು ಇರುವ ಕಾಲುವೆಯನ್ನು 7ರಿಂದ 8 ಅಡಿ ಆಳಗೊಳಿಸಿರುವುದರಿಂದ ನಿರಂತರ ಮಳೆ ಸುರಿದರೂ ಕೆರೆಯಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಹೀಗಾಗಿ, ಕೆರೆ ಬಯಲು ಪ್ರದೇಶದಂತಾಗಿದ್ದು, ಪರಿಸರದಲ್ಲಿ ಅಂತರ್ಜಲ ಮಟ್ಟವೂ ಕುಸಿದಿದೆ. ಕೆರೆಯ ಒತ್ತುವರಿಯನ್ನು ತೆರವುಗೊಳಿಸಿ ಕೆರೆಯ ನೀರು ಹರಿದುಹೋಗುವ ಕಾಲುವೆಯನ್ನು ಮುಚ್ಚಿಸಿ ಕೆರೆಯನ್ನು ಸಂರಕ್ಷಿಸಬೇಕೆಂದು ಸ್ಥಳೀಯರು ಜಿಲ್ಲಾಧಿಕಾರಿಗೆ ನೀಡಿದ ದೂರಿನಲ್ಲಿ ಮನವಿ ಮಾಡಿದ್ದರು. ಈ ಮಧ್ಯೆ ಅರ್ಪಾಜೆ ಕೆರೆಯನ್ನು ಸ್ವಂತ ಖರ್ಚಿನಲ್ಲಿ ಗ್ರಾಮಸ್ಥರ ನೆರವಿನೊಂದಿಗೆ ಅಭಿವೃದ್ಧಿಪಡಿಸಲು ತಾಂತ್ರಿಕ ಅನುಮತಿ ನೀಡುವಂತೆ ಸ್ಥಳೀಯ ಕೃಷಿಕ ಚಾಕೋ ಫಿಲಿಪ್ ಅವರು ಕಡಬ ಗ್ರಾ.ಪಂ. ಹಾಗೂ ತಹಶೀಲ್ದಾರ್ಗೆ ಮನವಿ ಸಲ್ಲಿಸಿದ್ದರು. ಆದರೆ ಕೆರೆಯ ಗಡಿ ಗುರುತು ಆಗದ ಕಾರಣ ಅವರ ಮನವಿಗೆ ಇಲಾಖೆಗಳಿಂದ ಯಾವುದೇ ಪೂರಕ ಸ್ಪಂದನೆ ಸಿಕ್ಕಿಲ.
Related Articles
ಕೆರೆಯನ್ನು ಅಭಿವೃದ್ಧಿಪಡಿಸಲು ಅನುಮತಿ ನೀಡುವಂತೆ ಕೃಷಿಕ ಚಾಕೋ ಫಿಲಿಪ್ ಅವರು ಪಂ. ಗೆ ಮನವಿ ಸಲ್ಲಿಸಿದ್ದಾರೆ. ಕೆರೆಗಳನ್ನು ಅಭಿವೃದ್ಧಿಪಡಿಸಲು ಪಂಚಾಯತ್ ಕೂಡ ಉತ್ಸುಕವಾಗಿದೆ. ಆದರೆ ಕೆರೆಯ ಗಡಿ ಗುರುತು ಆದ ಬಳಿಕವಷ್ಟೇ ನಾವು ಮುಂದುವರಿಯಲು ಸಾಧ್ಯ. ಇದೀಗ ಭೂ ಮಾಪನ ಇಲಾಖೆ ಕೆರೆಯನ್ನು ಅಳತೆ ಮಾಡಲು ದಿನ ನಿಗದಿ ಮಾಡಿದೆ. ಗಡಿ ಗುರುತು ಆದ ಬಳಿಕ ನಾವು ಕೆರೆಯ ಅಭಿವೃದ್ಧಿಯ ಕುರಿತು ಕ್ರಮ ಕೈಗೊಳ್ಳಲಿದ್ದೇವೆ.
– ಚೆನ್ನಪ್ಪ ಗೌಡ ಕಜೆಮೂಲೆ, ಕಡಬ ಪಿಡಿಒ
Advertisement
ವಿಶೇಷ ವರದಿ