Advertisement

ಇ.ಡಿ. ರಂಗಪ್ರವೇಶ; ಜಹಾಂಗೀರ್‌ ಪುರಿ ಹಿಂಸೆ: ಅನ್ಸರ್‌ ವಿರುದ್ಧ ಅಕ್ರಮ ಹಣ ಪ್ರಕರಣ

12:47 AM Apr 24, 2022 | Team Udayavani |

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿಯಾದ ಅನ್ಸರ್‌ ಶೇಖ್‌ ವಿರುದ್ಧ ಜಾರಿ ನಿರ್ದೇಶನಾಲಯ, ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್‌ಎ) ಪ್ರಕರಣ ದಾಖಲಿಸಿಕೊಂಡಿದೆ.ಹಿಂಸಾಚಾರ ಪ್ರಕರಣ

Advertisement

ಪ್ರಕರಣದ ತನಿಖೆ ನಡೆಸಿರುವ ದೆಹಲಿ ಪೊಲೀಸರಿಗೆ, ಭಾರತದಲ್ಲಿರುವ ಅನ್ಸರ್‌ ಶೇಖ್‌ ಅವರಿಗೆ ವಿದೇಶಗಳಿಂದ ಅಕ್ರಮವಾಗಿ ಹಣ ರವಾನೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಪಶ್ಚಿಮ ಬಂಗಾಳದ ಹಾಲ್ಡಿಯಾದಲ್ಲಿ ಅನ್ಸರ್‌ ಹೆಸರಿನಲ್ಲಿ ಭವ್ಯ ಬಂಗಲೆಯಿರುವುದು ತನಿಖೆ ವೇಳೆ ತಿಳಿದುಬಂದಿತ್ತು.

ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಸಣ್ಣದೊಂದು ಗುಜರಿ ಅಂಗಡಿಯನ್ನಿಟ್ಟುಕೊಂಡಿರುವ ಅನ್ಸರ್‌ಗೆ ಇಷ್ಟು ದೊಡ್ಡ ಭವ್ಯ ಬಂಗಲೆ ಬಂದಿದ್ದಾದರೂ ಹೇಗೆಂಬ ಕುತೂಹಲದೊಂದಿಗೆ ತನಿಖೆ ಮುಂದುವರಿಸಿದ ಪೊಲೀಸರಿಗೆ, ಅನ್ಸರ್‌ಗೆ ವಿದೇಶಗಳಿಂದ ಹಣ ರವಾನೆಯಾಗಿರುವ ಬಗ್ಗೆ ಮಾಹಿತಿಗಳು ದೊರಕಿದ್ದವು.

ಈ ಹಿನ್ನೆಲೆಯಲ್ಲಿ, ದೆಹಲಿಯ ಪೊಲೀಸ್‌ ಆಯುಕ್ತರಾದ ರಾಕೇಶ್‌ ಆಸ್ತಾನಾ ಅವರು, ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದು, ಅನ್ಸರ್‌ರವರ ಆಸ್ತಿ ಮೂಲ ಪತ್ತೆಗಾಗಿ ಪಿಎಂಎಲ್‌ಎ ಕಾಯ್ದೆಯಡಿ ತನಿಖೆ ನಡೆಸುವಂತೆ ಇ.ಡಿ.ಯನ್ನು ಕೋರಿದ್ದರು ಎಂದು ಮೂಲಗಳು ತಿಳಿಸಿವೆ.

ರಾಕೇಶ್‌ ಆಸ್ತಾನಾರವರ ಮನವಿ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಇ.ಡಿ., ಆನ್ಸರ್‌ನ ಸಮಸ್ತ ಆಸ್ತಿಯ ಆರ್ಥಿಕ ಮೂಲವನ್ನು ಹಚ್ಚಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

8 ದಿನಗಳ ಪೊಲೀಸ್‌ ಬಂಧನ
ದೆಹಲಿಯ ಸ್ಥಳೀಯ ನ್ಯಾಯಾಲಯವು ಪ್ರಮುಖ ಆರೋಪಿ ಅನ್ಸರ್‌ ಹಾಗೂ ಇತರ  ಆರೋಪಿಗಳಾದ ಸಲೀಮ್‌,  ಆಹಿರ್‌ ಎಂಬುವರನ್ನು ಎಂಟು ದಿನಗಳ ಪೊಲೀಸ್‌ ಬಂಧನಕ್ಕೊಳಪಡಿಸಿದೆ.

ನಿಖರ ವಯಸ್ಸು ತಿಳಿಯಲು ಬೋನ್‌ ಟೆಸ್ಟ್‌
ಜಹಾಂಗೀರ್‌ ಪುರಿ ಹಿಂಸಾಚಾರ ಪ್ರಕರಣದಲ್ಲಿ ಬಂಧಿಯಾಗಿರುವ ಬಾಲಾಪರಾಧಿಯೆಂದು ಹೇಳಲಾಗಿರುವ ನಿಖರ ವಯಸ್ಸನ್ನು ತಿಳಿಯಲು ದೆಹಲಿ ಪೊಲೀಸರು ಮೂಳೆಗಳ ಪರೀûಾ ವಿಧಾನದ ಮೊರೆ ಹೋಗಲು ನಿರ್ಧರಿಸಿದ್ದಾರೆ. ಈ ಹುಡುಗನ ಅಪ್ಪನೂ ಇದೇ ಪ್ರಕರಣದಲ್ಲಿ ಬಂಧಿತನಾಗಿದ್ದು, ಆತ ದೆಹಲಿ ಹೈಕೋರ್ಟ್‌ಗೆ ಅರ್ಜಿಯೊಂದನ್ನು ಸಲ್ಲಿಸಿ, ಪ್ರಕರಣದಲ್ಲಿ ಬಂಧಿಸಲಾಗಿರುವ ತಮ್ಮ ಪುತ್ರ ಇನ್ನೂ ಅಪ್ರಾಪ್ತನೆಂದು ಮೇಲ್ಮನವಿ ಸಲ್ಲಿಸಿದ್ದಾನೆ.

ಕಾನೂನಿನ ಪ್ರಕಾರ, ಬಾಲಾಪರಾಧಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಬಹುದೇ ವಿನಃ ಅವರನ್ನು ಬಂಧಿಸುವ ಅಧಿಕಾರವಿಲ್ಲ. ಹಾಗಾಗಿ, ತನ್ನ ಪುತ್ರನ ಬಂಧನ ಕಾನೂನಿನ ಉಲ್ಲಂಘನೆ ಎಂದು ಅರ್ಜಿಯಲ್ಲಿ ತಂದೆ ವಾದಿಸಿದ್ದಾನೆ. ಈ ಹಿನ್ನೆಲೆಯಲ್ಲಿ, ನ್ಯಾಯಾಲಯದ ಸೂಚನೆ ಮೇರೆಗೆ ಬಾಲಕನ ನಿಖರವಾದ ವಯಸ್ಸು ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ.

ಟಿವಿ ಚಾನೆಲ್‌ಗ‌ಳಿಗೆ ಕೇಂದ್ರ ಸಲಹೆ
“ವಿಶ್ವಾಸಾರ್ಹವಲ್ಲದ, ಹಾದಿತಪ್ಪಿಸುವ, ಸೂಕ್ಷ್ಮ ಹಾಗೂ ಪ್ರಚೋದನಾತ್ಮಕ ಸುದ್ದಿಗಳನ್ನು ಬಿತ್ತರಿಸದಿರಿ.’  - ಇದು ಖಾಸಗಿ ಟಿವಿ ಚಾನೆಲ್‌ಗ‌ಳಿಗೆ ಕೇಂದ್ರ ಸರ್ಕಾರ ಕೊಟ್ಟಿರುವ ಸಲಹೆ. ದೆಹಲಿಯ ಜಹಾಂಗಿರ್‌ಪುರಿ ಹಿಂಸಾಚಾರ, ರಷ್ಯಾ-ಉಕ್ರೇನ್‌ ಯುದ್ಧ ಸೇರಿದಂತೆ ಇತ್ತೀಚಿನ ಕೆಲವು ಘಟನೆಗಳಿಗೆ ಸಂಬಂಧಿಸಿ ದೇಶದ ಖಾಸಗಿ ಟಿವಿ ಚಾನೆಲ್‌ಗ‌ಳು ಬಿತ್ತರಿಸುತ್ತಿರುವ ಸುದ್ದಿಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಈ ರೀತಿಯ ಸುದ್ದಿ ಬಿತ್ತರಿಸುವಾಗ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದೆ.

“”ಹಲವು ಸ್ಯಾಟಲೈಟ್‌ ಟಿವಿ ಚಾನೆಲ್‌ಗ‌ಳು ವಿಶ್ವಾಸಾರ್ಹವಲ್ಲದ ಸುದ್ದಿಗಳು, ಅನಧಿಕೃತವಾದ ಮಾಹಿತಿ, ಸತ್ಯಾಸತ್ಯತೆಯನ್ನು ಪರೀಕ್ಷಿಸದ ವಿಡಿಯೋ ತುಣುಕುಗಳು, ಸಾಮಾಜಿಕವಾಗಿ ಆಕ್ಷೇಪಾರ್ಹವಾದ ಭಾಷೆ ಬಳಕೆ, ಕೆಟ್ಟ ಅಭಿರುಚಿಯ ವಿಚಾರಗಳು, ಅಶ್ಲೀಲ ಹಾಗೂ ಮಾನಹಾನಿಕರ ವರದಿಗಳು, ಮತೀಯ ಶಕ್ತಿಗಳ ತುಷ್ಟೀಕರಣದಂಥ ಸುದ್ದಿಗಳನ್ನು ಬಿತ್ತರಿಸುತ್ತಿರುವುದು ಕಂಡುಬಂದಿದೆ” ಎಂದು ಕೇಂದ್ರ ಹೇಳಿದೆ.

“ಜಹಾಂಗೀರ್‌ಪುರಿ ಹಿಂಸಾಚಾರದ ವೇಳೆ ಕೆಲವು ಚಾನೆಲ್‌ಗ‌ಳು ಪ್ರಚೋದನಾತ್ಮಕ ಶೀರ್ಷಿಕೆಗಳನ್ನು ನೀಡಿದ್ದು, ಸಮುದಾಯಗಳ ನಡುವೆ ಕೋಮು ಹಿಂಸಾಚಾರ ಹೆಚ್ಚಿಸುವಂಥ ಹಿಂಸಾಚಾರದ ವಿಡಿಯೋಗಳನ್ನು ಪ್ರಸಾರ ಮಾಡಿವೆ. ಇವೆಲ್ಲವೂ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂಥದ್ದು. ಹಲವು ಪತ್ರಕರ್ತರು ಮತ್ತು ಟಿವಿ ಆ್ಯಂಕರ್‌ಗಳು ತಿರುಚಿರುವ ಮತ್ತು ವೈಭವೀಕರಿಸಿದ ಹೇಳಿಕೆಗಳನ್ನು ನೀಡುವ ಮೂಲಕ ವೀಕ್ಷಕರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಎಚ್ಚರ ವಹಿಸಿ” ಎಂದೂ ಸರ್ಕಾರ ಸಲಹೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next