Advertisement

19 ರಂದು ಸವದತ್ತಿಯಿಂದ ಸುವರ್ಣ ಸೌಧಕ್ಕೆ ಪಾದಯಾತ್ರೆ

04:55 PM Dec 18, 2022 | Team Udayavani |

ವಿಜಯಪುರ : ಮಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾವೇ ಕೊಟ್ಟ ಮಾತಿನಿಂದ ಡಿ.19 ರೊಳಗೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಘೋಷಿಸಬೇಕು. ಮೀಸಲಾತಿಗಾಗಿ ಕೂಡಲಸಂಗಮ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಡಿ.19 ರಿಂದ ಸವದತ್ತಿಯಿಂದ ಬೆಳಗಾವಿ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಡಿ.22 ರಂದು ಬೆಳಗಾವಿಯಲ್ಲಿ ಸಮಾಜದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.

Advertisement

ಭಾನುವಾರ ನಗರದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಸಮಾಜದ ಹೋರಾಟದ ವಿವರ ನೀಡಿದ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ, ಮೀಸಲು ಹೋರಾಟ ಸಮಿತಿ ಗೌರವಾಧ್ಯಕ್ಷ ಎಂ.ಎಸ್.ರುದ್ರಗೌಡರ, ಬೆಳಗಾವಿ ಸುರ್ವಣ ಸೌಧದಲ್ಲಿ ನಡೆಯುವ ಸಮಾವೇಶ ನಮ್ಮ ಸಮುದಾಯದ ಬಡವರ ಪರವಾದ ಮೀಸಲು ಹೋರಾಟದ ಅಂತಿಮ ಘಟ್ಟ. ಮಾಡಿ ಮಡಿ, ಮೀಸಲು ಪಡೆದೇ ಮಡಿ ಎಂಬ ಘೋಷಣೆಯೊಂದಿಗೆ ಬೆಳಗಾವಿಯಲ್ಲಿ 25 ಲಕ್ಷ ಜನರ ಶಕ್ತಿಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದರು.

ಬೆಳಗಾವಿ ಸಮಾವೇಸಕ್ಕೆ ಮುನ್ನ ಜನಜಾಗೃತಿಗಾಗಿ ಅದೇ ಜಿಲ್ಲೆಯ ಸವದತ್ತಿಯಲ್ಲಿ ಕಾರ್ಯಕ್ರಮದ ಬಳಿಕ ಡಿ.19 ರಂದು ಅಲ್ಲಿಂದಲೇ ಬೆಳವಡಿ, ಕಿತ್ತೂರು ಮಾರ್ಗವಾಗಿ ಡಿ.22 ರ ವರೆಗೆ ಪಾದಯಾತ್ರೆ ನಡೆಯಲಿದೆ. 100 ಎಕರೆ ಪ್ರದೇಶದಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಅದೇ ಜಿಲ್ಲೆಯ 10 ಲಕ್ಷ ಜನರು, ವಿಜಯಪುರ ಜಿಲ್ಲೆಯ 4 ಲಕ್ಷ ಜನರು ಸೇರಿದಂತೆ 25 ಜನರ ಬೃಹತ್ ಶಕ್ತಿ ಪ್ರದರ್ಶನ ನಡೆಸಲಾಗುತ್ತದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾವೇ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳ ಸಮ್ಮುಖದಲ್ಲಿ ಸಮಾಜದ ಪ್ರಮುಖರಿಗೆ ಮಾತು ಕೊಟ್ಟಂತೆ ಡಿ.19 ರೊಳಗೆ ಪಂಚಮಸಾಲಿ ಸಮಾಜಕ್ಕೆ ಮೀಸಲು ಘೋಷಿಸುವ ವಿಶ್ವಾಸವಿದೆ ಎಂದರು.

ಮೀಸಲು ಘೋಷಿಸಿದರೆ ಬೆಳಗಾವಿಲ್ಲಿ ಡಿ.22 ರಂದು ನಡೆಯಲಿರುವ ಶಕ್ತಿಪ್ರದರ್ಶನ ಸಮಾವೇಶವನ್ನೇ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಅಭಿನಂದನಾ ಸಮಾವೇಶವಾಗಿ ಪರಿವರ್ತಿಸಲಿದ್ದೇವೆ. ಮುಖ್ಯಮಮತ್ರಿ ಮಾತುತಪ್ಪಿದರೆ ಸಮಾವೇಶ ಹೋರಾಟದ ವೇದಿಕೆಯಾಗಿ ಪರಿವರ್ತನೆಯಾಗಲಿದೆ. ಅಗತ್ಯ ಎನಿಸಿದರೆ ಅಹೋರಾತ್ರಿ ಧರಣಿ ನಡೆಸುವ ಮೂಲಕ ಹೋರಾಟ ತೀವ್ರಗೊಳಿಸಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು.

Advertisement

ಸಮಾಜಕ್ಕೆ 28 ವರ್ಷಗಳಿಂದ ನಡೆಸಿದ್ದ ಹೋರಾಟಕ್ಕೆ ಯಾರ ಬಲಿಷ್ಠ ನಾಯಕತ್ವ ನೀಡಿದರು, ಹೋರಾಟವನ್ನು ಯಾರು ತಾರ್ಕಿಕ ಅಂತ್ಯಕ್ಕೆ ಕರೆದೊಯ್ದಿದ್ದಾರೆ ಎಂಬುದು ಸಮಾಜದ ಜನರಿಗೆ ಗೊತ್ತಿದೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಮ್ಮದೇ ಸರ್ಕಾರವಿದ್ದರೂ ಸದನ ಬಾವಿಗಿಳಿದು ಹೋರಾಟ ಮಾಡಿದ್ದಾರೆ. ಸದನ ಹೊರಗೆ ಬಸವಜಯ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ನಡೆದ ನಿರಂತರ ಹೋರಾಟಗಳಿಗೆಲ್ಲ ಯತ್ನಾಳ ಹಾಗೂ ವಿಜಯಾನಂದ ಕಾಶಪ್ಪನವರ ಸೇರಿದಂತೆ ಸಾವಿರಾರು ಜನರು ಸಾಥ್ ನೀಡಿದ್ದಾರೆ. ಹೀಗಾಗಿ ಹೋರಾದ ಕೀರ್ತಿ ಯಾರಿಗೆ ನೀಡಬೇಕೆಂದು ಜನರೇ ನಿರ್ಧರಿಸುತ್ತಾರೆ ಎಂದರು.

ಹೋರಾಟಕ್ಕೆ ತಾರ್ಕಿಕ ಅಂತ್ಯ ಸಿಗುತ್ತದೆ ಎಂದರಿತ ಕೆಲವು ಮಠಾಧೀಶರು, ನಾಯಕರು, ಶಾಸಕರು, ಸಚಿವರು ಇದೀಗ ಮನವಿ ಸಲ್ಲಿಸುವ, ಸಭೆಗಳಲ್ಲಿ ಭಾಗವಿಸುವ ನಾಟಕ ಆರಂಭಿಸಿದ್ದಾರೆ. ಇನ್ನಾದರೂ ಇಂಥವರೆಲ್ಲ ನಮ್ಮ ಹೋರಾಟದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಲು ಮುಂದಾದಲ್ಲಿ ನಮ್ಮ ತಕರಾರು ಏನಿಲ್ಲ ಎಂದರು.

ಹೋರಾಟದಲ್ಲಿ ಪಾಲ್ಗೊಳ್ಳುವ ಜನರು ಸ್ವಯಂ ಬುತ್ತಿ, ನೀರು, ಅಗತ್ಯ ಎನಿಸಿದರೆ ಅಹೋರಾತ್ರಿ ಹೋರಾಟಕ್ಕಾಗಿ ಹಾಸಿಗೆ, ಹೊದಿಕೆ ಸಮೇತ ಬೆಳಗಾವಿಗೆ ಬರಬೇಕು. ಸಮಾವೇಶದಲ್ಲಿ ಪಾಲ್ಗೊಳ್ಳಲು ಹಳ್ಳಿಗಳಿಂದ ಬರುವ ಸಮಾಜದ ಬಡವರಿಗಾಗಿ ವಾಹನ ಸೇವೆ ಒದಗಿಸಲು ಹೋರಾಟ ಸಮಿತಿ ವ್ಯವಸ್ಥೆ ಮಾಡುತ್ತದೆ ಎಂದರು.

ಮೀಸಲಾತಿಗಾಗಿ ನಡೆಯುತ್ತಿರುವ ಈ ಹೋರಾಟ ಅಂತಿಮ ಹಂತದ್ದಾಗಿದ್ದು, ಮನೆಗೆ ಒಬ್ಬರಲ್ಲ, ಮನೆಯಲ್ಲಿ ಒಬ್ಬರನ್ನು ಬಿಟ್ಟು ಇತರರು ಬೆಳಗಾವಿ ಸಮಾವೇಶಕ್ಕೆ ಆಗಮಿಸಿ ಸಮಾಜದ ಶಕ್ತಿ ಪ್ರದರ್ಶನ ನೀಡಬೇಕು. ರಾಜ್ಯದಾದ್ಯಂತ ಸುಮಾರು 1.40 ಕೋಟಿ ಜನಸಂಖ್ಯೆ ಇದ್ದು, ಮೂಲೆ ಮೂಲೆಯಿಂದ ಜನರು ಆಗಮಿಸಲು ಸಂಘಟನೆ ರೂಪಿಸಲಾಗಿದೆ ಎಂದರು. ಪಂಚಸೇನೆಯ ರಾಜ್ಯಾಧ್ಯಕ್ಷ ಬಿ.ಎಸ್.ಪಾಟೀಲ ನಾಗರಾಳಹುಲಿ, ನಿಂಗನಗೌಡ ಸೋಲಾಪುರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next