Advertisement

‘ಒಂಬತ್ತನೇ ದಿಕ್ಕು’ ಚಿತ್ರ ವಿಮರ್ಶೆ:  ಥ್ರಿಲ್ಲರ್‌ ಪಯಣದಲ್ಲಿ ಸಿಕ್ಕ ಹೊಸ ದಿಕ್ಕು

11:34 AM Jan 29, 2022 | Team Udayavani |

ಇತ್ತೀಚಿನ ವರ್ಷಗಳಲ್ಲಿ ಕಡಿಮೆ ಬಜೆಟ್‌ನಲ್ಲಿ ಕಂಟೆಂಟ್‌ ಆಧಾರಿತ ಸಿನಿಮಾ ಪ್ರಯೋಗಗಳ ಮೂಲಕ ಗುರುತಿಸಿಕೊಳ್ಳುತ್ತಿರುವ ನಿರ್ದೇಶಕ ದಯಾಳ್‌ ಪದ್ಮನಾಭನ್‌ ಈ ಬಾರಿ “ಒಂಬತ್ತನೇ ದಿಕ್ಕು’ ಎಂಬ ಅಂಥದ್ದೇ ಸಿನಿಮಾವನ್ನು ತೆರೆಮೇಲೆ ತಂದಿದ್ದಾರೆ. ಇದರಲ್ಲೊಂದು ಸಸ್ಪೆನ್ಸ್‌-ಥ್ರಿಲ್ಲರ್‌ ಎಳೆಯಿದೆ. ಅದರ ಹಿಂದೊಂದು ಕ್ರೈಂ ಕಹಾನಿಯಿದೆ. ಫ್ಯಾಮಿಲಿ ಸೆಂಟಿಮೆಂಟ್‌, ಒಂದಷ್ಟು ಎಮೋಶನ್ಸ್‌, ಆ್ಯಕ್ಷನ್‌, ಕಾಮಿಡಿ ಎಲ್ಲದನ್ನೂ ಸಮೀಕರಿಸಿ ಅದಕ್ಕೊಂದು ದಿಕ್ಕು ದೆಸೆ ತೋರಿಸಲು ದಯಾಳ್‌ ಸಾಕಷ್ಟು ಶ್ರಮಿಸಿದ್ದಾರೆ.

Advertisement

ಸಿನಿಮಾದ ಕಥಾಹಂದರದ ಬಗ್ಗೆ ಹೇಳುವುದಾದರೆ, ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಪುರಾತನ ಶಿಲ್ಪವೊಂದನ್ನು ಮಾರಾಟ ಮಾಡಲು ಹೊರಟಾಗ ಅದರ ಹಿಂದೆ ಬೀಳುವವರ ಮನಸ್ಥಿತಿ ಹೇಗಿರುತ್ತದೆ? ಹಣದ ಹಿಂದೆ ಬಿದ್ದವರ ಓಟ ಹೇಗಿರುತ್ತದೆ? ಕೋಟಿ ಕೋಟಿ ಲೂಟಿ ಮಾಡುವವರ ಪ್ಲಾನ್‌ ಏನು? ಅಂತಿಮವಾಗಿ ಅದರ ಪ್ರತಿಫ‌ಲ ಯಾರಿಗೆ ದಕ್ಕುತ್ತದೆ, ಯಾರೆಲ್ಲ ಅದಕ್ಕೆ ಪಾಲುದಾರರು ಅನ್ನೊದು ಕಥೆಯ ಒಂದು ಎಳೆ.

ಇದನ್ನೂ ಓದಿ:ಏನಿದು ಪ್ರಸವ ನಂತರದ ಖಿನ್ನತೆ? ಯಾವ ವೈದ್ಯರನ್ನು ಸಂಪರ್ಕಿಸಬೇಕು? ಇದಕ್ಕೆ ಚಿಕಿತ್ಸೆ ಏನು?

ಸಾಮಾನ್ಯವಾಗಿ ನಾಲ್ಕು ದಿಕ್ಕು, ಎಂಟು ದಿಕ್ಕು ಅಥವಾ ಹತ್ತು ದಿಕ್ಕು ಅಂತೆಲ್ಲ ಕೇಳಿರುತ್ತೇವೆ. ಇದ್ಯಾವುದು “ಒಂಬತ್ತನೇ ದಿಕ್ಕು’ ಅಂದ್ರೆ, ಅದು ನಿರ್ದೇಶಕ ದಯಾಳ್‌ ಪದ್ಮನಾಭನ್‌, ತಮ್ಮ ದೃಷ್ಟಿಯಲ್ಲಿ ಕಥೆ ಹೇಳುತ್ತಿರುವ ಹೊಸ ದಿಕ್ಕು. ಎಲ್ಲ ದಿಕ್ಕುಗಳಲ್ಲಿಯೂ, ಎಲ್ಲರ ದೃಷ್ಟಿಯಲ್ಲೂ ಒಂದೊಂದು ರೀತಿಯಲ್ಲಿ ಕಾಣುವ ಕಥೆ ನಿರ್ದೇಶಕರ ದೃಷ್ಟಿ (ಒಂಬತ್ತನೇ ದಿಕ್ಕು)ಯಲ್ಲಿ ಹೇಗೆ ಕಾಣುತ್ತದೆ ಎಂಬ ಹೊಸ ಆಯಾಮದ ನಿರೂಪಣೆ ಈ ಚಿತ್ರದ ವಿಶೇಷತೆ.

ಸರಳ ಕಥೆಯೊಂದರ ಎಳೆಯನ್ನು ಇಟ್ಟುಕೊಂಡು, ಅದಕ್ಕೆ ಪ್ರೇಕ್ಷಕರು ಬಯಸುವ ಎಲ್ಲ ಎಂಟರ್‌ಟೈನ್ಮೆಂಟ್‌ ಅಂಶಗಳನ್ನು ಸೇರಿಸಿ “ಒಂಬತ್ತನೇ ದಿಕ್ಕು’ ಕಥೆ ಹೇಳಿದ್ದಾರೆ ನಿರ್ದೇಶಕರು. ಆದರೆ ಇಡೀ ಸಿನಿಮಾವನ್ನು ನೋಡಿದವರಿಗೆ ಬೇರೆ ಭಾಷೆಯ ಒಂದಷ್ಟು ಸಸ್ಪೆನ್ಸ್‌- ಕ್ರೈಂ ಥ್ರಿಲ್ಲರ್‌ ಸಿನಿಮಾಗಳ ಛಾಯೆ ಕಣ್ಮುಂದೆ ಬಂದರೂ ಅಚ್ಚರಿ ಇಲ್ಲ. ಇಂಥದ್ದೊಂದು ಅಡ್ಡ ಪರಿಣಾಮದ ಯೋಚನೆಯ ನಡುವೆಯೇ ಸಿನಿಮಾ ಕ್ಲೈಮ್ಯಾಕ್ಸ್‌ ಹಂತಕ್ಕೆ ಬಂದಿರುತ್ತದೆ.

Advertisement

ಮಧ್ಯಮ ವರ್ಗದ ಕುಟುಂಬದ ಜವಾಬ್ದಾರಿಯುತ ಮಗನಾಗಿ ಯೋಗಿ ಅವರದ್ದು ಅಚ್ಚುಕಟ್ಟಾದ ಅಭಿನಯ. ಯೋಗಿ ಅಭಿನಯದಲ್ಲಿ ಒಂದಷ್ಟು ಪ್ರಬುದ್ದತೆ, ಸಹಜತೆ ಎರಡನ್ನೂ ಚಿತ್ರದಲ್ಲಿ ಕಾಣಬಹುದು. ಚಿತ್ರದಲ್ಲಿ ಹೆಚ್ಚಿನ ಸ್ಕ್ರೀನ್‌ ಸ್ಪೇಸ್‌ ಇಲ್ಲದಿದ್ದರೂ, ಇರುವಷ್ಟು ಹೊತ್ತು ತನ್ನ ಲವಲವಿಕೆಯ ಪಾತ್ರದಲ್ಲಿ ಅದಿತಿ ಪ್ರಭುದೇವ ಇಷ್ಟವಾಗುತ್ತಾರೆ. ನಾಯಕ – ನಾಯಕಿಯನ್ನು ಹೊರತುಪಡಿಸಿ, ನೆಗೆಟೀವ್‌ ಶೇಡ್‌ನ‌ ಪಾತ್ರದಲ್ಲಿ ಸಂಪತ್‌ ಇಡೀ ಸಿನಿಮಾದಲ್ಲಿ ನೋಡುಗರನ್ನು ಆವರಿಸಿಕೊಳ್ಳುತ್ತಾ ಹೋಗುತ್ತಾರೆ. ಹಣದ ಮೋಹದ ಬಲೆಯೊಳಗೆ ಸಿಲುಕಿ, ಪರಿಸ್ಥಿತಿಗೆ ತಕ್ಕಂತೆ ಕ್ರೌರ್ಯದ ಮುಖವನ್ನು ಅನಾವರಣಗೊಳಿಸುತ್ತ ಹೋಗುವ ಮಧ್ಯಮ ವಯಸ್ಕನಾಗಿ ಸಂಪತ್‌ ಅವರದ್ದು ಕಾಡುವಂಥ ಪಾತ್ರ. ಉಳಿದಂತೆ ಹಿರಿಯ ನಟ ಅಶೋಕ್‌, ಸಾಯಿಕುಮಾರ್‌, ಸುಂದರ್‌, ಮುನಿ ಅವರ ಪಾತ್ರಗಳೂ ಗಮನ ಸೆಳೆಯುತ್ತದೆ. ಇನ್ನು ಕೆಲವು ಪಾತ್ರಗಳು, ಹೆಚ್ಚು ಕಾಲ ತೆರೆಮೇಲೆ ಉಳಿಯದಿರುವುದರಿಂದ ಅವುಗಳ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ.

ಒಟ್ಟಾರೆ ಸಸ್ಪೆನ್ಸ್‌, ಕ್ರೈಂ-ಥ್ರಿಲ್ಲರ್‌ ಸಿನಿಮಾಗಳನ್ನು ಇಷ್ಟಪಡುವವರಿಗೆ “ಒಂಬತ್ತನೇ ದಿಕ್ಕು’ ಕನಿಷ್ಟ ಮನರಂಜನೆ ನೀಡುವ ಖಾತ್ರಿ ಕೊಡುತ್ತದೆ.

ಜಿ.ಎಸ್.ಕಾರ್ತಿಕ ಸುಧನ್

Advertisement

Udayavani is now on Telegram. Click here to join our channel and stay updated with the latest news.

Next