Advertisement

Olympics; ಯಾವುದೇ ಒತ್ತಡಕ್ಕೊಳಗಾಗದಿರಿ:ಕ್ರೀಡಾಪಟುಗಳಿಗೆ ಮೋದಿ ಕಿವಿಮಾತು

12:10 AM Jul 06, 2024 | Team Udayavani |

ಹೊಸದಿಲ್ಲಿ: “ಒತ್ತಡಕ್ಕೆ ಒಳಗಾಗಬೇಡಿ, ಚೆನ್ನಾಗಿ ನಿದ್ರೆ ಮಾಡಿ…’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಕ್ರೀಡಾಳುಗಳಿಗೆ ಕಿವಿಮಾತು ಹೇಳಿದ್ದಾರೆ. ಇದರಿಂದ ಉತ್ತಮ ಫ‌ಲಿತಾಂಶವನ್ನು ಪಡೆದುಕೊಳ್ಳಬಹುದು ಎಂದಿದ್ದಾರೆ.

Advertisement

ಶುಕ್ರವಾರ ಹೊಸದಿಲ್ಲಿಯಲ್ಲಿ ಆಯೋಜಿಸ ಲಾಗಿದ್ದ ಕಾರ್ಯಕ್ರಮದಲ್ಲಿ ಆ್ಯತ್ಲೀಟ್‌ಗಳ ಜತೆಗೆ ಪ್ರಧಾನಿ ಸಂವಾದ ನಡೆಸಿದರು. ಈ ಸಂವಾದದಲ್ಲಿ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನೀರಜ್‌ ಚೋಪ್ರಾ, ಪಿ.ವಿ. ಸಿಂಧು, ನಿಖತ್‌ ಜರೀನ್‌ ಆನ್‌ಲೈನ್‌ನಲ್ಲಿ ಭಾಗಿಯಾಗಿದ್ದರು. ಉಳಿದಂತೆ ಭಾರತದ ಹಾಕಿ ತಂಡ, 21 ಮಂದಿ ಶೂಟರ್‌ಗಳು ಹಾಗೂ ಇತರ ಕೆಲವು ಕ್ರೀಡಾಳುಗಳು ನೇರವಾಗಿ ಪಾಲ್ಗೊಂಡರು.

ಗುರಿಯ ಕಡೆ ಮನಸ್ಸು…
ಗೆಲುವು ಮತ್ತು ಸೋಲು ಎಲ್ಲ ಆಟಗಳ ಭಾಗವಾಗಿವೆ. ಹೀಗಾಗಿ ಒತ್ತಡಕ್ಕೆ ಒಳಗಾಗದೆ ಆಟೋಟಗಳಲ್ಲಿ ಭಾಗಿಯಾಗಬೇಕು. ಯಾವುದೇ ಕಾರಣಕ್ಕೂ ನಿದ್ದೆಯನ್ನು ತ್ಯಾಗ ಮಾಡಬಾರದು. ಉತ್ತಮವಾಗಿ ನಿದ್ರೆ ಮಾಡಿದರೆ ಅದು ನಿಮ್ಮ ಫ‌ಲಿತಾಂಶವನ್ನು ಉತ್ತಮಪಡಿಸುತ್ತದೆ. ನೀವು ಪಂದ್ಯ ಗೆಲ್ಲುತ್ತೀರೋ ಇಲ್ಲವೋ ಎಂಬುದು ಮುಖ್ಯವಲ್ಲ. ನಿಮ್ಮ ಪ್ರತಿಶತ 100ರಷ್ಟು ಸಾಮರ್ಥ್ಯ ನೀಡುವುದು ಮುಖ್ಯ ಎಂದು ಮೋದಿ ಹೇಳಿದರು.

ಜರ್ಮನಿಯಿಂದ ನೀರಜ್‌…
ಸಂವಾದದ ವೇಳೆ ಮಾತನಾಡಿದ ಚೋಪ್ರಾ, “ನಾವು ಈಗ ಜರ್ಮನಿಯಲ್ಲಿ ಅಭ್ಯಾಸ ನಡೆಸು ತ್ತಿದ್ದೇವೆ. ಗಾಯಾಳಾದ ಕಾರಣ ನಾನು ಹೆಚ್ಚು ಟೂರ್ನಿಗಳಲ್ಲಿ ಆಡಲಿಲ್ಲ. ಕೆಲವು ದಿನಗಳ ಹಿಂದೆ ಫಿನ್ಲಂಡ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದೆ’ ಎಂದರು. ಆ್ಯತ್ಲೀಟ್‌ಗಳು ಭಯಬಿಟ್ಟು ಭಾಗವಹಿಸಬೇಕು ಎಂಬ ಸಲಹೆಯನ್ನೂ ನೀಡಿದರು.

“2036ರ ಒಲಿಂಪಿಕ್ಸ್‌ಗೆ ನಿಮ್ಮ ಅಭಿಪ್ರಾಯ ಮುಖ್ಯ’
ಭಾರತ 2036ರ ಒಲಿಂಪಿಕ್ಸ್‌ಗೆ ಬಿಡ್‌ ಸಲ್ಲಿಸಲು ಮುಂದಾಗಿದೆ. ಇದನ್ನು ಪರಿಪೂರ್ಣವಾಗಿ ಆಯೋಜನೆ ಮಾಡಲು ಆ್ಯತ್ಲೀಟ್‌ಗಳು ನೀಡುವ ಮಾಹಿತಿ ಬಹಳ ಮುಖ್ಯವಾಗುತ್ತದೆ. ಹೀಗಾಗಿ ಪ್ಯಾರಿಸ್‌ ಒಲಿಂಪಿಕ್ಸ್‌ನಿಂದ ಮರಳಿದ ಬಳಿಕ ಎಲ್ಲ ಆಟಗಾರರೂ ತಪ್ಪದೇ ಅಭಿಪ್ರಾಯ ನೀಡಿ. ಇದರಿಂದಾಗಿ ದೇಶದಲ್ಲಿ ಒಲಿಂಪಿಕ್ಸ್‌ ಸಿದ್ಧತೆಗೆ ಸಂಬಂಧಿಸಿದಂತೆ ಕ್ರೀಡಾ ಪರಿಸರವನ್ನು ನಾವು ನಿರ್ಮಾಣ ಮಾಡಬಹುದು ಎಂದು ಮೋದಿ ಹೇಳಿದರು.
ಬಿಡುವಾಗಿದ್ದಾಗ, ಅಲ್ಲಿನ ಏರ್ಪಾಟುಗಳನ್ನು ಗಮನಿಸಿ. ನೀವು ನೀಡುವ ಮಾಹಿತಿ 2036ರ ಒಲಿಂಪಿಕ್ಸ್‌ಗೆ ಬಿಡ್‌ ಸಲ್ಲಿಸಲು ಭಾರತಕ್ಕೆ ನೆರವಾಗಲಿದೆ ಎಂದರು.

Advertisement

ನೀರಜ್‌ ಚೋಪ್ರಾ ಧ್ವಜಧಾರಿ
ಪ್ಯಾರಿಸ್‌ ಒಲಿಂಪಿಕ್ಸ್‌ ಉದ್ಘಾಟನೆಯ ವೇಳೆ 28 ಕ್ರೀಡಾಪಟುಗಳನ್ನೊಳಗೊಂಡ ಭಾರತೀಯ ತಂಡವನ್ನು ಟೋಕಿಯೊ ಒಲಿಂಪಿಕ್ಸ್‌ ಬಂಗಾರ ವಿಜೇತ ಜಾವೆಲಿನ್‌ ತ್ರೋವರ್‌ ನೀರಜ್‌ ಚೋಪ್ರಾ ತ್ರಿವರ್ಣ ಧ್ವಜದೊಂದಿಗೆ ಮುನ್ನಡೆಸಲಿದ್ದಾರೆ. ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ ಕ್ರೀಡಾಪಟುಗಳಲ್ಲಿ 17 ಮಂದಿ ಪುರುಷರು ಮತ್ತು 11 ಮಂದಿ ಮಹಿಳೆಯರ ತಂಡ ಪಥ ಸಂಚಲನದಲ್ಲಿ ಪಾಲ್ಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next