Advertisement

ಬೇಟೆಯಾಡಲು ಹಳೇ ಹುಲಿಗಳು ಸಜ್ಜು !

04:51 PM Apr 16, 2018 | Team Udayavani |

ಯಾದಗಿರಿ: ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, ಜಿಲ್ಲೆಯ ನಾಲ್ಕು
ಕ್ಷೇತ್ರದಲ್ಲಿಯೂ ಯಾವುದೇ ಅಭ್ಯರ್ಥಿಗಳ ಬದಲಾವಣೆಯಾಗಿಲ್ಲ. ಮತ್ತೆ ಹಳಬರಿಗೆ ಟಿಕೆಟ್‌ ನೀಡಲಾಗಿದೆ.

Advertisement

ಸುರಪುರ ಮತಕ್ಷೇತ್ರದಿಂದ ಹಾಲಿ ಶಾಸಕ ರಾಜಾವೆಂಕಟಪ್ಪ ನಾಯಕ, ಶಹಾಪುರದಿಂದ ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ, ಗುರುಮಠಕಲ್‌ ಮತಕ್ಷೇತ್ರದಿಂದ ಹಾಲಿ ಶಾಸಕ ಬಾಬುರಾವ ಚಿಂಚನಸೂರ ಅವರಿಗೆ ನಿರೀಕ್ಷೆಯಂತೆ ಟಿಕೆಟ್‌ ಲಭಿಸಿದೆ. ಈ ಕ್ಷೇತ್ರದಲ್ಲಿ ಯಾವುದೇ ಪೈಪೋಟಿ ಇರಲಿಲ್ಲ. ಹಾಗಾಗಿ ಇವರೆಲ್ಲರೂ ಸುಲಭವಾಗಿ ಟಿಕೆಟ್‌ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಯಾದಗಿರಿ ಮತಕ್ಷೇತ್ರದಲ್ಲಿ ಮಾತ್ರ ಹಾಲಿ ಶಾಸಕ ಡಾ| ಎ.ಬಿ. ಮಾಲಕರೆಡ್ಡಿ ಹಾಗೂ ಮಾಜಿ ಎಂಎಲ್‌ಸಿ ಚನ್ನಾರೆಡ್ಡಿ ಪಾಟೀಲ
ತುನ್ನೂರ ಅವರ ನಡುವೆ ತೀವ್ರ ಪೈಪೋಟಿ ಎದುರಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಶಾಸಕ ಡಾ| ಎ.ಬಿ. ಮಾಲಕರೆಡ್ಡಿ ಅವರು ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್‌ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಆಪ್ತ ಚನ್ನಾರೆಡ್ಡಿ ಪಾಟೀಲ ತುನ್ನೂರ ಅವರಿಗೆ ಟಿಕೆಟ್‌ ದೊರಕಿಸಿಕೊಡುವಲ್ಲಿ ವಿಫಲರಾಗಿದ್ದಾರೆ.
 
ಯಾದಗಿರಿ ಮತಕ್ಷೇತ್ರದ ಶಾಸಕ ಡಾ| ಎ.ಬಿ. ಮಾಲಕರೆಡ್ಡಿ ಅವರು ಚುನಾವಣಾ ರಾಜಕೀಯ ನಿವೃತ್ತಿ ಪಡೆಯುವುದಾಗಿ ಘೋಷಣೆ ಮಾಡಿದ್ದರು. ತದ ನಂತರ ಅಭಿಮಾನಿಗಳು, ಕಾರ್ಯಕರ್ತರ ಒತ್ತಾಯದಿಂದ ಮನಸ್ಸು ಬದಲಾಯಿಸಿದ ಅವರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವದಾಗಿ ಘೋಷಿಸಿ ಅದರಂತೆ ಟಿಕೆಟ್‌ ಪಡೆಯುವಲ್ಲಿಯೂಯಶಸ್ವಿಯಾಗಿದ್ದಾರೆ. ಯಾದಗಿರಿ ಮತಕ್ಷೇತ್ರದಿಂದ ಡಾ| ಎ.ಬಿ. ಮಾಲಕರೆಡ್ಡಿ ಅವರಿಗೆ ಟಿಕೆಟ್‌ ನೀಡಿರುವುದರಿಂದ ಮಾಜಿ ಎಂಎಲ್‌ಸಿ ಚನ್ನಾರೆಡ್ಡಿ ಪಾಟೀಲ ತುನ್ನೂರ ಸೇರಿದಂತೆ ಇತರೆ ನಾಯಕರು ಅಸಮಾಧಾನ ಹೊಂದಿದ್ದಾರೆ. ಹೈಕಮಾಂಡ್‌ ತೀರ್ಮಾನದಿಂದ ಕಾಂಗ್ರೆಸ್‌ ಪಕ್ಷದಲ್ಲಿ ಸಾಕಷ್ಟು ಅಸಮಾಧಾನ ಉಂಟಾಗುವ ಸಾಧ್ಯತೆಗಳಿವೆ.
 
83 ವಯಸ್ಸಿನ ಡಾ| ಎ.ಬಿ. ಮಾಲಕರೆಡ್ಡಿ ಅವರು ಮತ್ತೆ ಚುನಾವಣೆಗೆ ನಿಲ್ಲುವ ನಡೆಗೆ ಈಗಾಗಲೇ ಕಾಂಗ್ರೆಸ್‌ ಪಕ್ಷದಲ್ಲಿ ಸಾಕಷ್ಟು ಅಸಮಾಧಾವಿತ್ತು. ಈಗ ಮತ್ತೆ ಅವರಿಗೆ ಟಿಕೆಟ್‌ ನೀಡಿರುವುದರಿಂದ ಮುಂಬರುವ ಚುನಾವಣೆಯಲ್ಲಿ ಡಾ| ಮಾಲಕರಡ್ಡಿ ಅವರಿಗೆ ಇದು ಪರಿಣಾಮ ಬೀರುವ ಸಾಧ್ಯತೆಗಳಿವೆ. 

ಗುರುಮಠಕಲ್‌, ಶಹಾಪುರ, ಸುರಪುರಗಳಲ್ಲಿ ನಿರೀಕ್ಷೆಯಂತೆ ಬಾಬುರಾವ ಚಿಂಚನಸೂರ, ಶರಣಬಸಪ್ಪ ದರ್ಶನಾಪುರ,
ರಾಜಾವೆಂಕಟಪ್ಪ ನಾಯಕ ಅವರಿಗೆ ಟಿಕೆಟ್‌ ದೊರೆತ್ತಿದ್ದು, ಕ್ಷೇತ್ರದಲ್ಲಿ ಕಾರ್ಯಕರ್ತರು ಸಂತಸಗೊಂಡಿದ್ದಾರೆ. ಇಲ್ಲಿ ಯಾವುದೇ ಅಸಮಾಧಾನವಿಲ್ಲದಿರುವುದು ಕಂಡು ಬಂದಿದೆ. ಸುರಪುರ, ಶಹಾಪುರ ಮತಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದ್ದರಿಂದ ಚುನಾವಣೆ ಕಣ ರಂಗೇರಿದೆ. ಒಟ್ಟಾರೆಯಾಗಿ ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿ ಜಿಲ್ಲಾದ್ಯಂತ ಸಂಚಲನ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಯಾವ ಬದಲಾವಣೆಯಾಗಲಿದೆ ಎಂಬುದು ಕಾಲವೇ ನಿರ್ಧರಿಸಲಿದೆ.

„ರಾಜೇಶ ಪಾಟೀಲ ಯಡ್ಡಳ್ಳಿ

Advertisement
Advertisement

Udayavani is now on Telegram. Click here to join our channel and stay updated with the latest news.

Next