Advertisement

ರಸ್ತೆಯಲ್ಲಿ ಹರಡಿಕೊಂಡಿದೆ ತೈಲಾಂಶ; ಮಳೆಗಾಲದ ಅಪಘಾತಕ್ಕೆ ಕಾರಣ

11:49 PM Jul 12, 2019 | mahesh |

ಸುಬ್ರಹ್ಮಣ್ಯ: ಮಳೆಗಾಲವೆಂದರೆ ವಾಹನ ಸವಾರರಿಗೆ ಸವಾಲಿನ ದಿನಗಳು. ಅದರಲ್ಲೂ ದ್ವಿಚಕ್ರ ವಾಹನ ಸವಾರರಂತು ಎಷ್ಟು ಎಚ್ಚರ ವಹಿಸಿದರು ಸಾಲದು. ಮಳೆಗಾಲದಲ್ಲಿ ರಸ್ತೆ ಮೇಲೆ ಚೆಲ್ಲುವ ತೈಲಾಂಶಗಳಿಂದ ಈ ಅವಧಿಯಲ್ಲಿ ದ್ವಿಚಕ್ರ ಸಹಿತ ಇತರ ವಾಹನ ಸವಾರರ ಪಾಲಿಗೆ ಸವಾಲಿನ ದಿನಗಳು.

Advertisement

ಎಲ್ಲ ರಸ್ತೆಗಳಲ್ಲಿ ತೈಲಾಂಶಗಳು ಚೆಲ್ಲಿ ವಾಹನ ಸಂಚಾರದ ವೇಳೆ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ವಾಹನಗಳು ಸಂಚರಿಸುವ ವೇಳೆ ಘನ ವಾಹನಗಳಿಂದ ಸೋರಿಕೆಯಾದ ತೈಲಾಂಶಗಳು ಡಾಮರು ರಸ್ತೆ ಮೇಲೆ ಚೆಲ್ಲಿ ಅಪಾಯಕ್ಕೆ ಆಹ್ವಾನ ನೀಡುವಂತಿವೆ. ಮಳೆಗಾಲ ಆರಂಭದ ದಿನಗಳಲ್ಲಿ ಒದ್ದೆ ನೆಲದಲ್ಲಿ ತೈಲಾಂಶಗಳು ಸೇರಿ ವಾಹನಗಳು ಬ್ರೇಕ್‌ ಹಾಕಿದಾಗ ಒಮ್ಮೆಗೆ ಸ್ಕಿಡ್ಡಾಗಿ ಉರುಳುವುದು, ಜಾರುವುದು ಇತ್ಯಾದಿ ಘಟನೆಗಳು ನಡೆಯುತ್ತವೆ. ಮಳೆಗಾಲದ ಆರಂಭಿಕ ಹಂತದಲ್ಲಿ ದ್ವಿಚಕ್ರ ವಾಹನ ಸವಾರರು ಎಚ್ಚರ ವಹಿಸಬೇಕಾಗುತ್ತದೆ.

ಮುಂಜಾಗ್ರತೆ ಇರಲಿ
ವಿಪರೀತ ಮಳೆ ಆರಂಭವಾಗುವ ಮುಂಚಿತವೇ ದ್ವಿಚಕ್ರ ವಾಹನಗಳ ವೀಲನ್ನು ಸರ್ವಿಸ್‌ ಮಾಡಿಸಿಕೊಳ್ಳುವುದು. ಬಿಡಿಭಾಗಗಳನ್ನು ಬಿಗಿಗೊಳಿಸುವುದು. ವಾಹನದ ಎಂಜಿನ್‌ ಕಂಡಿಷನ್‌ನಲ್ಲಿ ಇರಿಸಿಕೊಳ್ಳುವುದು ಸೂಕ್ತ. ವಾಹನಗಳ ಚಕ್ರಗಳು ಸವೆದಿದ್ದಲ್ಲಿ ಜಾರುವ ಸಂಭವವೇ ಹೆಚ್ಚು. ಮಳೆ ಆರಂಭಿಕ ಅವಧಿಯಲ್ಲಿ ಸವೆದ ಟಯರ್‌ಗಳ ಬದಲಾವಣೆ ಸೂಕ್ತ. ಚಕ್ರಗಳಲ್ಲಿ ಗಾಳಿಯ ಪ್ರಮಾಣ ಸರಿಯಾಗಿ ಇರಿಸುವುದು. ಬ್ರೇಕ್‌ ಕೂಡ ಕಂಡಿಷನ್‌ ಇರಿಸುವುದು ಅಗತ್ಯ. ವಯರಿಂಗ್‌ ಸಿಸ್ಟಮ್‌, ಹೆಡ್‌ಲೈಟ್‌ ಹಾಗೂ ಸಿಗ್ನಲ್‌ಲೈಟ್‌ಗಳ ಬಳಕೆ ಹೆಚ್ಚಿರುವ ಕಾರಣ ಈ ಬಗ್ಗೆಯೂ ಗಮನವಿರಲಿ.

ಹಾರ್ನ್ ಬಳಕೆ ಹಾಗೂ ಮಿರರ್‌ ಹೊಂದಿರುವುದು ಅಗತ್ಯ. ಮುಂದಿನ ಮತ್ತು ಹಿಂದಿನ ಎರಡು ಬ್ರೇಕ್‌ ಬಳಕೆಯಲ್ಲಿರಲಿ. ಅಕ್ಸಿಲೇಟರ್‌ ಮೂಲಕವೇ ಸಾಧ್ಯವಾದಷ್ಟು ನಿಯಂತ್ರಣ ಮುಖ್ಯ. ವಾಹನಗಳ ಬಿಡಿಭಾಗಗಳಲ್ಲಿ ಮಳೆಗೆ ಕೆಸರು, ತೈ„ಲಾಂಶ ಸೇರುವುದರಿಂದ ಮಳೆಗಾಲವೂ ವಾಹನವನ್ನು ತೊಳೆದಿಟ್ಟುಕೊಳ್ಳುವುದು ಅಗತ್ಯ.

ರಸ್ತೆಯಲ್ಲಿ ಹಾಕಿರುವ ಪೈಂಟ್‌, ಪ್ಯಾಚ್‌ ಗೆರೆಗಳು ಕೂಡ ಮಳೆಗಾಲದಲ್ಲಿ ಜಾರುತ್ತವೆ. ಅದರ ಮೇಲೆ ಸಂಚಾರಿಸುವಾಗಲು ಎಚ್ಚರವಿರಲಿ, ವಾಹನಗಳ ನಡುವೆ ಸಾಕಷ್ಟು ಅಂತರವಿರಿಸಿಕೊಳ್ಳುವುದು ಒಳ್ಳೆಯದು. ಎದುರಿನ ವಾಹನಗಳ ಹಾಗೂ ಬ್ರೇಕ್‌ಲೈಟ್‌ಗಳ ಬಗ್ಗೆ ನಿಗಾವಿರಲಿ. ಎಲ್ಲ ಸಂದರ್ಭವೂ ನಿಯಂತ್ರಣ ಅಗತ್ಯವಿದೆ. ವಾಹನಗಳ ನಡುವೆ ನುಗ್ಗಿಸುವ, ಗುಂಡಿ ತಪ್ಪಿಸುವ ಕಾರ್ಯಕ್ಕೆ ಮುಂದಾಗಿ ಆಪತ್ತು ತಂದುಕೊಳ್ಳದಿರುವುದು ಒಳ್ಳೆಯದು.

Advertisement

ಪ್ರಾಣಕ್ಕೂ ಕುತ್ತು
ಸುಳ್ಯ-ಜಾಲೂರು-ಸುಬ್ರಹ್ಮಣ್ಯ ರಸ್ತೆಯುದ್ದಕ್ಕೂ ಹಲವು ಕಡೆಗಳಲ್ಲಿ ತೈಲಾಂಶಗಳು ರಸ್ತೆ ಮೇಲೆ ಚೆಲ್ಲಿಕೊಂಡಿದೆ. ಅನೇಕ ಸವಾರರು ಈಗಾಗಲೇ ಬಿದ್ದು ಗಾಯಗೊಂಡಿದ್ದಾರೆ. ತೇವ ತುಂಬಿದ ರಸ್ತೆಯಲ್ಲಿ ವಾಹನಗಳು ಬ್ರೇಕ್‌ ಹಾಕುವಾಗ ಹಿಡಿತ ಸಿಗದೆ ಅವಘಡಗಳು ಸಂಭವಿಸುತ್ತಿರುವುದು ಸವಾರರ ಪ್ರಾಣಕ್ಕೂ ಕುತ್ತು ತರುತ್ತಿದೆ. ನಡುಗಲ್ಲು ಸಮೀಪ ನಡೆದ ಬೈಕ್‌-ಕಾರಿನ ಅಪಘಾತದಲ್ಲಿ ಸವಾರ ಮೃತಪಟ್ಟಿದ್ದಾರೆ. ಸುಬ್ರಹ್ಮಣ್ಯ-ಪಂಜ-ಕಾಣಿಯೂರು ಮಾರ್ಗದಲ್ಲೂ ಗುರುವಾರ ಅಪಘಾತಗಳು ಸಂಭವಿಸಿವೆ.

ಸವಾರರ ನಿರ್ಲಕ್ಷ್ಯ
ಬೈಕ್‌ ಸವಾರರು ಮಳೆಗಾಲದಲ್ಲಿ ವೇಗ ನಿಯಂತ್ರಣ, ಮೊಬೈಲ್‌ ಬಳಕೆ, ತಿರುವಿನ ಜಾಗದಲ್ಲಿ ಓವರ್‌ ಟೇಕ್‌ ಬಗ್ಗೆ ಗಮನವಿರಿಸಬೇಕು. ಹೆಲ್ಮೆಟ್‌ ಬಳಕೆ ಕಡ್ಡಾಯ. ಇವೆಲ್ಲವೂ ಸುರಕ್ಷತೆ ದೃಷ್ಟಿಯಿಂದ ಬಹುಮುಖ್ಯ. ಠಾಣಾ ವ್ಯಾಪ್ತಿಯಲ್ಲಿ ಗುರು ವಾರ ನಡೆದ 2 ಪ್ರಕರಣಗಳಲ್ಲಿ ಸವಾರರ ನಿರ್ಲಕ್ಷವೇ ಘಟನೆಗೆ ಕಾರಣವಾಗಿದೆ.
– ಚಂದಪ್ಪ ,ಎಎಸ್‌ಐ ಸುಬ್ರಹ್ಮಣ್ಯ ಪೊಲೀಸ್‌ ಠಾಣೆ

Advertisement

Udayavani is now on Telegram. Click here to join our channel and stay updated with the latest news.

Next