Advertisement

ಅಧಿಕಾರಿಗಳು ರೈತರ ಶೋಷಣೆ ಮಾಡುವುದು ನಿಲ್ಲಿಸಲಿ

01:21 PM Jun 09, 2019 | Team Udayavani |

ಮಾಲೂರು: ರೈತರ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿರುವ ಜಿಲ್ಲಾ ಹಾಗೂ ತಾಲೂಕು ಆಡಳಿತ ಶೋಷಣೆ ಮಾಡುವುದನ್ನು ಕೈಬಿಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಹಶೀಲ್ದಾರ್‌ ಕಚೇರಿ ಮುಂಭಾಗ ಧರಣಿ ನಡೆಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ರಾಜ್ಯ ಸಂಚಾಲಕ ಬೆಂಡಶೆಟ್ಟಹಳ್ಳಿ ರಮೇಶ್‌, ಬರಗಾಲ, ರೈತರ ಬೆಳೆಗಳಿಗೆ ಬೆಲೆ ಕುಸಿತಗಳಿಂದ ಕೆಂಗೆಟ್ಟಿರುವ ರೈತರು ಅರ್ಥಿಕವಾಗಿ ಕೆಂಗಾಲಾಗಿದ್ದಾರೆ. ರೈತರ ಸಮಸ್ಯೆಗಳಿಗೆ ಅಧಿಕಾರಗಳು ಸ್ಪಂದಿಸುತ್ತಿಲ್ಲ. ರೈತರು ನಿರಂತರವಾಗಿ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ ಎಂದರು.

ಸಮಸ್ಯೆ ಬಗೆ ಹರಿಸಬೇಕಾದ ಅಧಿಕಾರಿ ವರ್ಗವೇ ರೈತರ ಶೋಷಣೆ ಮಾಡುತ್ತಿದೆ ಎಂದು ಅಪಾದಿಸಿದ ಅವರು, ಒಂದಡೆ ಬರಗಾಲದಿಂದ ಕೃಷಿ ನಷ್ಟವಾಗುತ್ತಿದ್ದು, ಇನ್ನೊಂದಡೆ ಕಂದಾಯ, ವಿದ್ಯುಚ್ಚಕ್ತಿ ಸೇರಿ ಸರ್ಕಾರದ ಇಲಾಖೆಗಳ ಅಧಿಕಾರಿಗಳ ಶೋಷಣೆಯಿಂದ ರೈತರು ಜರ್ಜಿತರಾಗಿದ್ದಾರೆ ಎಂದು ದೂರಿದರು.

ಪೋಡಿ ಅದಾಲತ್‌ ಮುಂದುವರಿಸಿ: ಮನವಿಗೆ ಸ್ವೀಕರಿಸಲು ಬಂದ ತಹಶೀಲ್ದಾರ್‌ ಅವರನ್ನು ಕಚೇರಿಗಳಲ್ಲಿ ರೈತರ ಅರ್ಜಿಗಳನ್ನು ಕಡೆಗಾಣಿಸುತ್ತಿರುವ ಬಗ್ಗೆ ಸಾಕ್ಷಿ ಸಮೇತ ತೋರಿಸಿ ಎಂದು ತರಾಟೆ ತೆಗೆದುಕೊಂಡ ಬೆಡಶೆಟ್ಟಿಹಳ್ಳಿ ರಮೇಶ್‌, ಸಾಗುವಳಿ ಚೀಟಿ ವಿತರಣೆಯಾಗದೇ ರೈತರಿಗೆ ತೊಂದರೆಯಾಗುತ್ತಿದ್ದು, ತಾಲೂಕಿನಲ್ಲಿ ತಡೆಯಾಗಿರುವ ಪೋಡಿ ಅದಾಲತ್‌ ಮತ್ತೆ ಮುಂದುವರಿಸಬೇಕೆಂದು ಅಗ್ರಹಿಸಿದರು.

ಆಶ್ರಯ ಯೋಜನೆಯಡಿ ಬಡವರಿಗೆ ನೀಡುತ್ತಿರುವ ವಸತಿ ಯೋಜನೆಯು ಸಮಯಕ್ಕೆ ಸರಿಯಾಗಿ ಹಣ ಬಿಡುಗಡೆ ಮಾಡದಿರುವ ಬಗ್ಗೆ ತಹಶೀಲ್ದಾರ್‌ ಅವರು ಗಮನ ನೀಡಬೇಕೆಂದ ರೈತ ಮುಖಂಡ ರಮೇಶ್‌, ಸರ್ಕಾರದಿಂದ ಆದೇಶವಾಗಿರುವ ಸಾಲಮನ್ನಾ ಯೋಜನೆಯಡಿಯ ರೈತರಿಗೆ ಡಿ.ಸಿ.ಸಿ.ಬ್ಯಾಂಕ್‌ ರೈತರ ಖಾತೆಗಳಿಗೆ ಸಾಲದ ಹಣವನ್ನು ತುಂಬಿ ಸಾಲ ಮುಕ್ತರನ್ನಾಗಿ ಮಾಡದೇ ರೈತರಿಗೆ ಮೋಸ ಮಾಡುತ್ತಿರುವುದು ಸರಿನಾ ಎಂದು ಪ್ರಶ್ನಿಸಿದರು.

Advertisement

ಗಮನ ಹರಿಸಿ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಸಮಯಕ್ಕೆ ಕೂಲಿ ನೀಡದೆ ಅಧಿಕಾರಿಗಳು ಸತಾಯಿಸುವುದರ ಬಗ್ಗೆ ತಹಶೀಲ್ದಾರ್‌ ಗಮನ ಹರಿಸಬೇಕು ಎಂದು ಹೇಳಿದರು.

ಅಕ್ರಮ ಗಣಿಗಾರಿಕೆಗೆ ಅವಕಾಶ: ಕೆ.ಸಿ.ವ್ಯಾಲಿ ಯೋಜನೆ ಅನುಷ್ಠಾನ, ಮತ್ತು ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲಿ ಮಾಲೂರಿಗೆ ಅನ್ಯಾಯವಾಗಿದೆ. ತಾಲೂಕಿನಿಂದ ಹೊರರಾಜ್ಯಗಳಿಗೆ ಅಕ್ರಮವಾಗಿ ಕೆರೆಗಳ ಮಣ್ಣು ಸಾಗಣೆ ಮಾಡುತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ. ಇದನ್ನು ನಿಲ್ಲಿಸಿ, ನಮ್ಮ ತಾಲೂಕಿನ ಸಂಪತ್ತನ್ನು ಉಳಿಸಬೇಕು. ಎಷ್ಟು ಧರಣಿ, ಹೋರಾಟ ನಡೆಸಿದರೂ ಟೇಕಲ್ ಹೋಬಳಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಲು ಅವಕಾಶ ಮಾಡಿಕೊಟ್ಟಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದರು.

ಸಮಸ್ಯೆ ಬಗೆಹರಿಸುವ ಭರವಸೆ: ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್‌ ನಾಗರಾಜ್‌, ನನ್ನ ಅಧಿಕಾರದ ವ್ಯಾಪ್ತಿಯಲ್ಲಿ ಬರುವ ರೈತರ ಎಲ್ಲಾ ಸಮಸ್ಯೆಯನ್ನು ಪ್ರಾಮಾಣಿಕವಾಗಿ ಬಗೆ ಹರಿಸುತ್ತೇನೆ. ತನ್ನ ವ್ಯಾಪ್ತಿ ಮೀರಿರುವ ಸಮಸ್ಯೆಗಳ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಕಳುಹಿಸಿಕೊಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಾಮೇಗೌಡ, ವರಾದಪುರ ನಾಗರಾಜು, ಗೋವಿಂದಪ್ಪ, ಶ್ರೀನಾಥ್‌, ಹರೀಶ್‌, ಸಂಪಂಗಿ ಗೌಡ, ವಿನೋದ್‌ಕುಮಾರ್‌, ಮುನಿರಾಜು, ಮುನಿನಾರಾಯಣಪ್ಪ, ನರಸಿಂಹಯ್ಯ, ಸುಬ್ರಮಣಿ, ಪಡವನಹಳ್ಳಿ ಮುನಿರಾಜು, ವೆಂಕಟೇಶ್‌, ನಾರಾಯಣಸ್ವಾಮಿ, ರಾಜಪ್ಪ, ನಾಗಣ್ಣ, ಮಾರಪ್ಪ, ತಿಮ್ಮರಾಯಪ್ಪ, ಜಕ್ಕಸಂದ್ರ ಮುನಿಯಪ್ಪ, ಸೆಲ್ವ ಕುಮಾರ್‌ ಸೇರಿದಂತೆ ರೈತ ಮುಖಂಡರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next