Advertisement

Ramnagar: ಡಿಸಿಎಂ ಆದೇಶಕ್ಕೆ ಅಧಿಕಾರಿಗಳೇ ಡೋಂಟ್‌ ಕೇರ್‌

03:35 PM Aug 29, 2023 | Team Udayavani |

ರಾಮನಗರ: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಆದೇಶಕ್ಕೆ ಅವರ ತವರು ಜಿಲ್ಲೆಯ ಅಧಿಕಾರಿಗಳೇ ಡೋಂಟ್‌ ಕೇರ್‌ ಎನ್ನುತ್ತಿದ್ದಾರಾ..? ಇದೀಗ ಇಂತಹುದೊಂದು ಪ್ರಶ್ನೆ ಅಧಿಕಾರಿಗಳ ವರ್ತನೆಯಿಂದ ಕಾಡುತ್ತಿದೆ.

Advertisement

ಹೌದು.., ಜೂ.26 ರಂದು ಜಿಲ್ಲಾಮಟ್ಟದ ಪ್ರಗತಿಪರಿಶೀಲನಾ ಸಭೆ ನಡೆಸಿದ ಡಿಸಿಎಂ ಡಿ.ಕೆ.ಶಿವಕುಮಾರ್‌ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಜಿಲ್ಲೆಯ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸವಿರಬೇಕು. ಮನೆ ಮಾಡದ ಅಧಿಕಾರಿಗಳು 60 ದಿನಗಳ ಒಳಗೆ ಮನೆ ಮಾಡಬೇಕು, ಸಾರ್ವಜನಿಕರಿಗೆ 24 ತಾಸು ಅಧಿಕಾರಿಗಳು ಸಿಗುವಂತಾಗಬೇಕು ಎಂದು ಹೇಳುತ್ತಿದ್ದರಾದರೂ ಜಿಲ್ಲೆಯಾವ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಮನೆ ಮಾಡಲು ಮುಂದಾಗಿಲ್ಲ.

ಬೆಂಗಳೂರು ಮೈಸೂರಿನಿಂದ ಪ್ರಯಾಣ:   ಸರ್ಕಾರಿ ನೌಕರರ ಸೇವಾ ನಿಯಮಗಳ ಪ್ರಕಾರ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ತಾವು ಕರ್ತವ್ಯ ನಿರ್ವಹಿಸುವ ಕೇಂದ್ರಸ್ಥಳದಲ್ಲೇ ವಾಸ ಮಾಡಬೇಕು ಎಂಬ ನಿಯಮ ವಿದೆಯಾದರೂ ಬಹುತೇಕ ಅಧಿಕಾರಿ ಮತ್ತು ನೌಕರರು ಕೇಂದ್ರ ಸ್ಥಾನದಲ್ಲಿ ವಾಸಿಸುತ್ತಿಲ್ಲ. ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ನಗರಗಳಿಂದ ಬಂದು ಹೋಗುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕ ಕೆಲಸ ಕಾರ್ಯಗಳು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಅಧಿಕಾರಿ ಮತ್ತು ನೌಕರರು ದೂರದ ಊರುಗಳಿಂದ ಪ್ರಯಾಣಿಸುವ ಕಾರಣ ಕೆಲಸಕ್ಕೆ ತಡವಾಗಿ ಬರುವುದು, ಕೆಲವೊಮ್ಮೆ ಬಸ್‌ ಮತ್ತು ರೈಲು ಬೇಗ ಹೊರಡುತ್ತವೆ ಎಂಬ ಕಾರಣಕ್ಕೆ ಬೇಗ ಹೊರಡುವುದು ಮಾಡುತ್ತಿದ್ದು, ಇಲಾಖೆ ಕೆಲಸಗಳಿಗೆ ನಿಗಾ ವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪಗಳು ಇದ್ದು, ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರು ಕೇಂದ್ರಸ್ಥಾನದಲ್ಲೇ ಉಳಿದಿಕೊಳ್ಳಬೇಕು ಎಂದು ಆದೇಶ ಹೊರಡಿಸಿದ್ದರು.

ಗಡುವು ಮುಗಿದರೂ ಡೊಂಟ್‌ಕೇರ್‌:   ಜಿಲ್ಲೆಯ ಎಲ್ಲಾ ಅಧಿಕಾರಿಗಳು ಮತ್ತು ಸರ್ಕಾರಿ ನೌಕರರು ಕೇಂದ್ರ ಸ್ಥಾನದಲ್ಲೇ ಉಳಿದಿಕೊಳ್ಳಬೇಕು ಒಂದು ತಿಂಗಳೊಳಗೆ ಮನೆ ಮಾಡಬೇಕು ಎಂದು ಸೂಚಿಸಿದ್ದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ 2 ತಿಂಗಳು ಕಾಲಾವಕಾಶ ನೀಡುವಂತೆ ತಿಳಿಸಿದ ಹಿನ್ನೆಲೆಯಲ್ಲಿ ಗಡುವನ್ನು ವಿಸ್ತರಿಸಲಾಯಿತು. ಆದರೆ ಗಡುವು ಮುಗಿದರೂ ಇದುವರೆಗೆ ಯಾರೂ ಮನೆ ಮಾಡಲು ಮುಂದಾಗಿಲ್ಲ. ಜಿಲ್ಲಾಮಟ್ಟದ ಅಧಿಕಾರಿ ಗಳಿರಲಿ ಗ್ರಾಮ ಮಟ್ಟದಲ್ಲಿ ಕೆಲಸ ಮಾಡುವ ಪಿಡಿಒ ಗಳು, ವಿಎ, ಆರ್‌ಐ ಗಳು ತಮ್ಮ ಕೇಂದ್ರಸ್ಥಾನದಲ್ಲಿ ವಾಸವಿರದೆ ನಗರ ಪ್ರದೇಶದಲ್ಲಿ ಮನೆ ಮಾಡಿಕೊಂಡಿ ದ್ದಾರೆ. ಕೆಲ ಪಿಡಿಒಗಳು ಬೆಂಗಳೂರು, ಮೈಸೂರಿನಿಂದ ಗ್ರಾಪಂ ಕಚೇರಿಗೆ ಹೋಗಿ ಕೆಲಸ ಮಾಡುತ್ತಿದ್ದು, ತಾಲೂಕು ಮಟ್ಟದ ಅಧಿಕಾರಿಗಳು ದೂರು ಊರು ಗಳಿಂದ ಪ್ರಯಾಣಿಸುತ್ತಿದ್ದಾರೆ. ಇದರಿಂದಾಗಿ ಸಕಾಲ ದಲ್ಲಿ ಜನತೆಗೆ ಸಿಗದಾಗಿದ್ದಾರೆ.

Advertisement

ಆದೇಶ ಜಾರಿಗೆ ಮೀನಾಮೇಷ:  ಒಂದೆಡೆ ಕೇಂದ್ರ ಸ್ಥಾನದಲ್ಲಿ ಮನೆ ಮಾಡಲು ಅಧಿಕಾರಿ ಮತ್ತು ನೌಕರರು ಉದಾಸೀನ ಮಾಡುತ್ತಿದ್ದರೆ ಮತ್ತೂಂದೆಡೆ ಜಿಲ್ಲಾಡಳಿತ ಸಹ ಸಿಬ್ಬಂದಿಗೆ ಚುರುಕು ಮುಟ್ಟಿಸಲು ಮೀನಾಮೇಷ ಏಣಿಸುತ್ತಿದೆ. ಡಿಸಿಎಂ 60 ದಿನಗಳ ಒಳಗೆ ಕೇಂದ್ರ ಸ್ಥಾನ ದಲ್ಲಿ ಮನೆ ಮಾಡಿಕೊಳ್ಳಬೇಕು. ಈ ಬಗ್ಗೆ ವಾರ್ತಾ ಮತ್ತು ಪ್ರಚಾರ ಇಲಾಖೆ ಮಾಹಿತಿ ಕೈಪಿಡಿಯನ್ನು ಸಿದ್ಧ ಪಡಿಸಬೇಕು ಎಂದು ಸೂಚಿಸಿದ್ದರು. ಆದರೆ, ವಾರ್ತಾ ಇಲಾಖೆಯಿಂದ ಎಲ್ಲಾ ಅಧಿಕಾರಿಗಳಿಗೆ ನೋಟೀಸ್‌ ಜಾರಿಯಾಗಿದ್ದು, ಇದಕ್ಕೆ ಉತ್ತರ ನೀಡುವಲ್ಲಿ ಸಹ ಅಧಿ ಕಾರಿಗಳು ಮತ್ತು ಸಿಬ್ಬಂದಿಗಳು ನಿರ್ಲಕ್ಷ್ಯ ತೋರಿರು ವುದು ತಿಳಿದು ಬಂದಿದೆ. ಜಿಲ್ಲೆಯಲ್ಲಿ ಕೆಂಗಲ್‌ ದೇವಾಲ ಯದ ಆಡಳಿತಾಧಿಕಾರಿ ಮಾತ್ರ ಈ ನೋಟೀ ಸ್‌ಗೆ ಪ್ರತಿಕ್ರಿಯೆ ಮಾಡಿದ್ದು ಉಳಿದವರು ಡೋಂಟ್‌ ಕೇರ್‌.

ಅಧಿಕಾರಿ ವಾಸವಿಲ್ಲದ ಕಾರಣ ಅವಾಂತರ:

ಕೆಲ ದಿನಗಳ ಹಿಂದೆ ರಾಮನಗರ ಶಾಸಕ ಇಕ್ಬಾಲ್‌ ಹುಸೇನ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳ್ಳಂ ಬೆಳಗ್ಗೆ            ಭೇಟಿ ನೀಡಿ ಪರಿಶೀಲನೆಗೆ ಮುಂದಾಗಿದ್ದರು. ಬೆಂಗಳೂರಿನಲ್ಲಿ ವಾಸವಾಗಿದ್ದ ಪೌರಾಯುಕ್ತರು ಸ್ಥಳಕ್ಕೆ ತರಾತುರಿಯಲ್ಲಿ ಬರುವಾಗ ಇವರ ಕಾರು ಯುವತಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವಿಗೀಡಾಗಿದ್ದರು. ಸಾಕಷ್ಟು ಅಧಿಕಾರಿಗಳು ಇಂದಿಗೂ ರೈಲು ಮತ್ತು ಬಸ್‌ನಲ್ಲಿ ಪ್ರಯಾಣಿ ಸುತ್ತಿದ್ದು, ಕೇಂದ್ರ ಸ್ಥಾನದಲ್ಲಿ ಬಾಡಿಗೆ ಮನೆ ಮಾಡಿ ಉಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ಎಚ್‌ಆರ್‌ಎ (ಹೌಸ್‌ರೆಂಟ್‌ ಅಲೋಯೆನ್ಸ್‌) ವೇತನದೊಂದಿಗೆ ನೀಡಲಾಗುತ್ತದೆಯಾದರೂ ಅಧಿಕಾರಿಗಳು ಸುಳ್ಳು ಲೆಕ್ಕ ತೋರಿಸಿ ಬಾಡಿಗೆ ಮನೆ ಮಾಡುವ ಗೋಜಿಗೆ ಹೋಗುತ್ತಿಲ್ಲ.

ಮೊದಲ ಕೆಡಿಪಿ ಸಭೆಯಲ್ಲಿ ಕೇಂದ್ರಸ್ಥಾನದಲ್ಲಿ ಮನೆ ಮಾಡಿ ಎಂದು ಜಿಲ್ಲೆಯ ಎಲ್ಲಾ ಅಧಿಕಾರಿಗಳು ಮತ್ತು ನೌಕರರಿಗೆ ಸೂಚಿಸಲಾಗಿದೆ. ಕೆಲ ಕಾರಣ ಗಳಿಂದ 60 ದಿನ ಸಮಯಾವಕಾಶ ನೀಡಲಾಗಿತ್ತು. ಗಡುವು ಮುಗಿದಿದ್ದು ಈ ಬಗ್ಗೆ ಮುಂದಿನ ದಿನಗಳಲ್ಲಿ ನಡೆಯಲಿರುವ ಸಭೆಯಲ್ಲಿ ಮಾಹಿತಿ ಪಡೆದು, ಕ್ರಮ ಕೈಗೊಳ್ಳಲಾಗುವುದು. –ರಾಮಲಿಂಗರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ

ಸಭೆಯಲ್ಲಿ ಸೂಚಿಸಿದಂತೆ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಮನೆ ಮಾಡಿರುವ ವಿವರವನ್ನು ಜಿಪಿಎಸ್‌ ಹಾಗೂ ಪೋಟೋ ಸಮೇತ ನೀಡ ಲಾಗುವುದು. ಈಬಗ್ಗೆ ಮಾಹಿತಿ ನೀಡುವಂತೆ ಎಲ್ಲಾ ನೌಕರರಿಗೆ ಪತ್ರ ಬರೆಯಲಾಗಿದೆ.– ರಮೇಶ್‌, ಸಹಾಯಕ ನಿರ್ದೇಶಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ 

-ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next