Advertisement

ಮನೆಯಲ್ಲೇ ಇರಲು ಸಾರ್ವಜನಿಕರಲ್ಲಿ ಅಧಿಕಾರಿಗಳ ಮನವಿ

07:30 PM Mar 24, 2020 | mahesh |

ಮಡಿಕೇರಿ: ಮಾರಕ ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಸೂಚನೆಯಂತೆ ಕೊಡಗನ್ನು ಲಾಕ್‌ ಡೌನ್‌ ಮಾಡಿ, ಹಲವು ನಿರ್ಬಂಧಗಳನ್ನು ಹೇರಿರುವ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾ ವ್ಯಾಪ್ತಿಯ ಬಹುತೇಕ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಾಹನ ಹಾಗೂ ಜನ ಸಂಚಾರ ವಿರಳವಾಗಿತ್ತು. ಆದರೆ ಕೆಲವು ಭಾಗಗಳಲ್ಲಿ ಅನಗತ್ಯ ಕಂಡು ಬಂದ ವಾಹನ‌ದಟ್ಟಣೆ ಮತ್ತು ಜನಜಂಗುಳಿಯನ್ನು ಪೊಲೀಸರು ಕಠಿನ ಸೂಚನೆ‌ಗಳನ್ನು ನೀಡುವ ಮೂಲಕ ನಿಯಂತ್ರಿಸಿದರು.

Advertisement

ಹಾಲು, ಹಣ್ಣು, ದಿನಸಿ ಸಾಮಗ್ರಿಯನ್ನು ಒಳಗೊಂಡಂತೆ ನಿತ್ಯೋಪಯೋಗಿ ವಸ್ತುಗಳ ಮಾರಾಟ ಮತ್ತು ಖರೀದಿಗೆ ಅವಕಾಶ ಕಲ್ಪಿಸಿದ್ದರಿಂದ ಬೆಳಗ್ಗಿನ ಕೆಲವು ಗಂಟೆಗಳ ಕಾಲ ಅಂಗಡಿ ಮಳಿಗೆಗಳಲ್ಲಿ ಜನರು ಮುಗಿಬಿದ್ದು ಖರೀದಿಯಲ್ಲಿ ತೊಡಗಿದರು. ಸೋಂಕಿನ ಭೀಕರತೆಯ ಅರಿವಿದ್ದರೂ ವಾಹನಗಳ ಸಂಚಾರ ಬೆಳಗ್ಗಿನ ಅವಧಿಯಲ್ಲಿ ಹೆಚ್ಚು ಕಂಡು ಬಂತು. ನಗರ ವ್ಯಾಪ್ತಿಯಲ್ಲಿ ಜನರು ಒಂದೆಡೆ ಸೇರದಂತೆ ಪೊಲೀಸರು ಅಗತ್ಯ ಮುನ್ನೆಚ್ಚರಿಕೆ ಕ್ರಮಗ‌ಳನ್ನು ಕೈಗೊಂಡರಲ್ಲದೆ, ಆಗಾಗ್ಗೆ ಎಚ್ಚರಿಕೆಯನ್ನು ನೀಡುತ್ತಿದ್ದರು. ಹಣ್ಣು ಮತ್ತು ತರಕಾರಿ ಮಳಿಗೆಗಳಲ್ಲಿ ಜನರು ಒಂದಷ್ಟು ಹೆಚ್ಚಿನ ಪ್ರಮಾಣದಲ್ಲೆ ಸೇರಿದ್ದು ಕಂಡು ಬಂತು.

ಸರ್ಕಾರದ ಲಾಕ್‌ಡೌನ್‌ ಆದೇಶದಂತೆ ಖಾಸಗಿ ಬಸ್‌ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಹೊಟೇಲ್‌, ಬಾರ್‌ ಮತ್ತು ರೆಸ್ಟೋರೆಂಟ್‌ಗಳು ಬಂದ್‌ ಆಗಿದ್ದವು. ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಎಲ್ಲಾ ಅಂತರ ರಾಜ್ಯ ರಸ್ತೆಗಳನ್ನು ಬಂದ್‌ ಮಾಡಲಾಗಿದೆ. ಜಿಲ್ಲೆಯ ಸಂಪಾಜೆ, ಶಿರಂಗಾಲ, ಮಾಕುಟ್ಟ ಚೆಕ್‌ ಪೋಸ್ಟ್‌ಗಳ‌ಲ್ಲಿ ವಾಹನಗಳು ಹೊರ ಜಿಲ್ಲೆಗಳಿಗೆ ತೆರಳದಂತೆ ಮತ್ತು ಕೊಡಗನ್ನು ಪ್ರವೇಶಿಸದಂತೆ ಕ್ರಮ ಕೈಗೊಳ್ಳಲಾಗಿದೆ.

ಮಡಿಕೇರಿಯಲ್ಲಿ ಜನ
ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸರ್ಕಾರದ ಲಾಕ್‌ ಡೌನ್‌ ಆದೇಶವಿದ್ದರೂ ಸಾಕಷ್ಟು ಸಂಖ್ಯೆಯಲ್ಲಿ ಖಾಸಗಿ ವಾಹನಗಳ ಸಂಚಾರ, ಅಂಗಡಿ ಮಳಿಗೆಗಳಲ್ಲಿ ನಿತ್ಯೋಪಯೋಗಿ ವಸ್ತುಗಳ ಖರೀದಿಯಲ್ಲಿ ಸಾರ್ವಜನಿಕರು ತೊಡಗಿದ್ದರು. ನಗರದಲ್ಲಿ ಜನ ಗುಂಪು ಸೇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪೋಲಿಸರು, ತಕ್ಷಣ ತಮ್ಮ ತಮ್ಮ ಮನೆಗಳಿಗೆ ತೆರಳುವಂತೆ ಸೂಚನೆ ನೀಡಿದರು.

ಮುಖ್ಯ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ವಾಹನಗಳ ಸಂಚಾರಕ್ಕೆ ತಡೆಯೊಡ್ಡುವ ಪ್ರಯತ್ನಗಳು ಪೊಲೀಸ್‌ ಇಲಾಖೆಯಿಂದ ನಡೆಯಿತು. ಖಾಸಗಿ ವಾಹನಗಳು ಮನಬಂದಂತೆ ತಿರುಗಾಡುತ್ತಿದ್ದ ಹಿನ್ನೆಲೆಯಲ್ಲಿ ಮಧ್ಯಾಹ್ನದ ಬಳಿಕ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳೇ ಖುದ್ದು ನಗರ ಸಂಚಾರ ನಡೆಸಿ ವಾಹನ ಮತ್ತು ಜನ ಸಂಚಾರಕ್ಕೆ ಕಡಿವಾಣ ಹಾಕಲು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡರು. ಸಾರ್ವಜನಿಕರು ತಮ್ಮ ತಮ್ಮ ಮನೆಗಳಲ್ಲೇ ಉಳಿದುಕೊಂಡು ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಸಹಕರಿಸಬೇಕೆಂದು ಎಸ್‌ಪಿ ಡಾ.ಸುಮನ್‌ ಡಿ. ಪನ್ನೇಕರ್‌ ಮನವಿ ಮಾಡಿದರು. ಇಡೀ ಜಿಲ್ಲೆ ಮಾರಕ ರೋಗಾಣು ನಿಯಂತ್ರಣಕ್ಕೆ ಲಾಕ್‌ ಡೌನ್‌ ಆಗಿದ್ದರು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವಾದರು, ಸಾರ್ವಜನಿಕರ ಸಂಖ್ಯೆ ವಿರಳವಾಗಿತ್ತು. ತೀರ ಆವಶ್ಯಕ ಕೆಲಸಗಳಿಗಷ್ಟೆ ಬರಬೇಕೆಂದು ಸೂಚಿಸಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸರ್ಕಾರಿ ಕಚೇರಿಗಳತ್ತ ತಲೆ ಹಾಕಲಿಲ್ಲ.

Advertisement

ತಾಲೂಕು ಕೇಂದ್ರ ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಬೆಳಗ್ಗಿನ ಅವಧಿಯಲ್ಲಿ ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಘಟನೆ ನಡೆಯಿತು. ಈ ಸಂದರ್ಭ ಜನರು ಗುಂಪು ಗೂಡುವುದನ್ನು ತಡೆಯಲು ತಹಶೀಲ್ದಾರ್‌ ಹಾಗೂ ಪೊಲೀಸರು ಹರಸಾಹಸ ಪಡಬೇಕಾಯಿತು.

ಗಡಿ ಪ್ರವೇಶ ನಿಷೇಧ
ಕೊಡಗಿನ ಗಡಿ ಭಾಗ ಶಿರಂಗಾಲ ಹಾಗೂ ಕೊಪ್ಪ ಬಳಿ ಇರುವ ಅರಣ್ಯ ಇಲಾಖೆಯ ತಪಾಸಣ ಗೇಟ್‌ಗಳನ್ನು ಬಂದ್‌ ಮಾಡುವ ಮೂಲಕ ಹಾಸನ-ಕೊಡಗು ಹಾಗೂ ಕೊಡಗು ಮೈಸೂರು ನಡುವೆ ಸಂಚರಿಸುವ ವಾಹನಗಳನ್ನು ತಡೆ ಹಿಡಿಯಲಾಯಿತು.

ಶಿರಂಗಾಲ ಗೇಟ್‌ ಬಳಿ ಹಾಸನ ಕಡೆಯಿಂದ ಕೊಡಗಿಗೆ ಬರುವ ಹಾಗೂ ಕೊಡಗು ಜಿಲ್ಲೆಯಿಂದ ಹೋಗುವ ವಾಹನಗಳನ್ನು ಅರಣ್ಯ ಹಾಗೂ ಪೊಲೀಸ್‌ ಇಲಾಖೆ ಸಿಬ್ಬಂದಿಗಳು ತಪಾಸಣೆ ಮಾಡುವುದರೊಂದಿಗೆ ಹೊರಗಿನ ವಾಹನಗಳು ಜಿಲ್ಲೆಗೆ ಬರುವುದನ್ನು ತಡೆದರು. ಅಲ್ಲದೆ ಹೊರ ಜಿಲ್ಲೆಗೆ ಅಗತ್ಯವಾಗಿ ಹೋಗಬೇಕಿದ್ದವರಿಗೆ ಮಾತ್ರ ಅವಕಾಶ ಮಾಡಿಕೊಟ್ಟರು.

ಇತ್ತ ಕೊಪ್ಪ ಗೇಟ್‌ನಲ್ಲೂ ಮೈಸೂರು ಜಿಲ್ಲೆಯಿಂದ ಕೊಡಗು ಜಿಲ್ಲೆಗೆ ಆಗಮಿಸುವ ಅಗತ್ಯ ವಾಹನಗಳನ್ನು ಹೊರತುಪಡಿಸಿ ಉಳಿದ ಸಾರ್ವಜನಿಕರ ವಾಹನಗಳಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿತ್ತು. ಕೊಡಗು ಜಿಲ್ಲೆಯಿಂದ ಮೈಸೂರು ಜಿಲ್ಲೆಯತ್ತ ಪ್ರಯಾಣ ಬೆಳೆಸಿದವರಿಗೆ ಮತ್ತೆ ಜಿಲ್ಲೆಗೆ ಹಿಂದಿರುಗದಂತೆ ಷರತ್ತು ವಿಧಿಸಿ ಅವಕಾಶ ಕಲ್ಪಿಸಲಾಯಿತು.

ಕೆಲವರಿಗೆ ಸಮಯ ನಿಗದಿಪಡಿಸಿ ಪಾಸ್‌ ವಿತರಿಸಿ ಬಿಡುತ್ತಿದ್ದುದು ಕಂಡು ಬಂತು. ಆಟೋಗಳು, ಟ್ಯಾಕ್ಸಿಗಳ ಸಂಚಾರ, ದಿನಸಿ ಅಂಗಡಿಗಳ ವ್ಯಾಪಾರ ಕಂಡುಬಂತು. ಶಿರಂಗಾಲ ವ್ಯಾಪ್ತಿಯಲ್ಲಿ ಕೊರೊನಾ ವೈರಸ್‌ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಹರೀಶ್‌ ಮತ್ತು ಗ್ರಾಮ ಪಂಚಾಯತ್‌ ಅಧ್ಯಕ್ಷ ಮಂಜುನಾಥ್‌ ಸೇರಿದಂತೆ ಸರ್ವ ಸದಸ್ಯರು ಗ್ರಾಮದ ಎಲ್ಲ ವಾರ್ಡ್‌ ಗಳಿಗೆ ಭೇಟಿ ನೀಡಿ ಶುಚಿತ್ವ ಹಾಗೂ ಕೋವಿಡ್-19 ವೈರಸ್‌ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು. ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಲಾಕ್‌ ಡೌನ್‌ ಮಾಡಿರುವ ಹಿನ್ನೆಲೆಯಲ್ಲಿ ಕೂಡಿಗೆಯ ಕೆಲವು ಅಂಗಡಿಗಳು ಮುಚ್ಚಲ್ಪಟ್ಟಿದವು. ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡೂರು ಕೈಗಾರಿಕಾ ಪ್ರದೇಶದಲ್ಲಿರುವ 50 ಕ್ಕೂ ಹೆಚ್ಚು ಕೈಗಾರಿಕಾ ಘಟಕಗಳು ಸ್ವಯಂ ಪ್ರೇರಿತರಾಗಿ ಬಂದ್‌ ಮಾಡಿದವು. ಈ ವ್ಯಾಪ್ತಿಯ ಸಣ್ಣ ಮತ್ತು ದೊಡ್ಡ ಕೈಗಾರಿಕಾ ಘಟಕಗಳಲ್ಲಿ ಬೆಳಗ್ಗೆ ಬೆಳಗ್ಗೆ ಕೆಲಸ ಪ್ರಾರಂಭವಾದರೂ ನಂತರದಲ್ಲಿ ಆಯಾ ಘಟಕಗಳವರು ಕೈಗಾರಿಕಾ ಕೇಂದ್ರಗಳನ್ನು ಮುಚ್ಚಿದರು.

Advertisement

Udayavani is now on Telegram. Click here to join our channel and stay updated with the latest news.

Next