Advertisement

ಅನಧಿಕೃತ ಬಸ್‌ ತಡೆದರೆ ಅಧಿಕೃತ ಆದಾಯ ಏರಿಕೆ

10:48 AM Dec 24, 2017 | |

ಬೆಂಗಳೂರು: ನಷ್ಟದ ನಡುವೆಯೂ ಯಾವುದೇ ಆರ್ಥಿಕ ಹೊರೆ ಇಲ್ಲದೆ, ಬಿಎಂಟಿಸಿ ಟಿಕೆಟ್‌ ದರವನ್ನು ಕನಿಷ್ಠ ಶೇ.30ರಿಂದ 40ರಷ್ಟು ಇಳಿಸಲು ಸಾಧ್ಯವಿದೆ! ಆದರೆ, ಅದಕ್ಕೆ ಸಾರಿಗೆ ಇಲಾಖೆ ಮತ್ತು ಬಿಎಂಟಿಸಿ ಮನಸ್ಸು ಮಾಡಬೇಕು. ಇತ್ತೀಚೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಬಿಎಂಟಿಸಿ ಬಸ್‌ಗಳ ಪ್ರಯಾಣ ದರವನ್ನು ಶೇ.50ರಷ್ಟು ಕಡಿಮೆ ಮಾಡಬೇಕು ಎಂದಿದ್ದರು. ಇದಕ್ಕೆ ಸಾರಿಗೆ ಸಚಿವರು ಕೂಡ “ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು’ ಎಂದೂ ಹೇಳಿದ್ದರು. ಅದಕ್ಕೆ ಪೂರಕವಾಗಿ, ನಗರದಲ್ಲಿ ನಿಯಮ ಬಾಹಿರವಾಗಿ ಸಂಚರಿಸುತ್ತಿರುವ ವಾಹನಗಳ ಹಾವಳಿಗೆ ಕಡಿವಾಣ ಹಾಕಿದರೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ದಿನದ ಆದಯಾ ಕನಿಷ್ಠ 75 ಲಕ್ಷ ರೂ.ನಿಂದ ಒಂದು ಕೋಟಿ ರೂ.ಗೆ ಏರಿಕೆಯಾಗಲಿದೆ. ಆಗ ಟಿಕೆಟ್‌ ದರದಲ್ಲಿ ಶೇ.30ರಿಂದ 40ರಷ್ಟನ್ನು ಅನಾಯಾಸವಾಗಿ ತಗ್ಗಿಸಬಹುದು ಎಂದು ಬಿಎಂಟಿಸಿ ಅಂದಾಜಿಸಿದೆ.

Advertisement

ನಿಯಮ ಬಾಹಿರ ವಾಹನಗಳ ವಿರುದ್ಧ ಡಿ.11 ರಿಂದ 16ರವರೆಗೆ ಕೇವಲ ಮೂರ್‍ನಾಲ್ಕು ಕಡೆಗಳಲ್ಲಿ ಸಾರಿಗೆ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಬಿಎಂಟಿಸಿಗೆ ಪ್ರತಿ ದಿನ 20ರಿಂದ 25 ಲಕ್ಷ ರೂ. ಆದಾಯ ಏರಿಕೆಯಾಗಿದೆ. ಹಾಗೊಂದು ವೇಳೆ ನಗರಾದ್ಯಂತ ಅನಧಿಕೃತ ಖಾಸಗಿ ಬಸ್‌ಗಳಿಗೆ ಸಂಪೂರ್ಣ ಬ್ರೇಕ್‌ ಬಿದ್ದರೆ, ಸಂಸ್ಥೆಯ ದಿನದ ಆದಾಯ 75 ಲಕ್ಷ ರೂ.ಗೆ ಏರಿಕೆಯಾಗುತ್ತದೆ ಎಂದು ಬಿಎಂಟಿಸಿಯ ಅಧಿಕಾರಿಗಳು ತಿಳಿಸಿದ್ದಾರೆ.

1005 ಬಸ್‌ ನಿಯಮ ಬಾಹಿರ?: ಬಿಎಂಟಿಸಿ ಅಧಿಕಾರಿಗಳು ಈಚೆಗೆ ನಡೆಸಿದ ಸಮೀಕ್ಷೆ ಪ್ರಕಾರ ನಗರದಲ್ಲಿ 1,005 ಬಸ್‌ಗಳು ನಿಯಮಬಾಹಿರವಾಗಿ ಸಂಚರಿಸುತ್ತಿವೆ. ಈ ಪೈಕಿ 474 ಬಸ್‌ ಹಾಗೂ ಮಿನಿ ಬಸ್‌, 408 ಟೆಂಪೋ ಟ್ರ್ಯಾಕ್ಸ್‌, 33 ಮ್ಯಾಕ್ಸಿಕ್ಯಾಬ್‌, 90 ಇತರೆ ವಾಹನಗಳಿವೆ ಎಂದು ಗುರುತಿಸಲಾಗಿದೆ. ಇದಲ್ಲದೆ, ಆ್ಯಪ್‌ ಆಧಾರಿತ ವಾಹನಗಳು ಸೇರಿದಂತೆ ಸಾರಿಗೆ ನಿಯಮ ಬಾಹಿರವಾಗಿ ಸಂಚರಿಸುತ್ತಿವೆ ಎಂದು ಬಿಎಂಟಿಸಿ ಮಾಹಿತಿ ನೀಡಿದೆ.

ಎಲ್ಲೆಲ್ಲಿ ಕಾರ್ಯಾಚರಣೆ?: ನಗರದ ಮೇಕ್ರಿ ವೃತ್ತ, ಬಿಇಎಲ್‌ ವೃತ್ತ, ಹೈಗ್ರೌಂಡ್ಸ್‌, ಹೆಬ್ಟಾಳ, ಕಾವೇರಿ ಜಂಕ್ಷನ್‌, ಗೋವರ್ಧನ್‌ ಚಿತ್ರಮಂದಿರ, ಸಿಲ್ಕ್ಬೋರ್ಡ್‌ ಜಂಕ್ಷನ್‌, ಎಲೆಕ್ಟ್ರಾನಿಕ್‌ ಸಿಟಿ, ಉಡುಪಿ ಗಾರ್ಡನ್‌, ಮೈಕೋ ಲೇಔಟ್‌, ಹುಳಿಮಾವು, ಮಾರತ್‌ಹಳ್ಳಿ, ಗುಟ್ಟಹಳ್ಳಿ, ಐಟಿಪಿಎಲ್‌, ಅಗರ, ಕುಂದಲಹಳ್ಳಿ, ಸರ್ಜಾಪುರ, ದಾಸರಹಳ್ಳಿ, ಬಿಟಿಎಂ ಲೇಔಟ್‌, ಬನಶಂಕರಿ, ಮೈಸೂರು ಬ್ಯಾಂಕ್‌ ವೃತ್ತ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಅನಧಿಕೃತ ಖಾಸಗಿ ವಾಹನಗಳು ಸಂಚರಿಸುತ್ತವೆ ಎಂದು ಗುರುತಿಸಲಾಗಿದೆ. ಖಾಸಗಿ ವಾಹನಗಳು ಗಾರ್ಮೆಂಟ್‌, ಕಾರ್ಖಾನೆ ಕಾರ್ಮಿಕರನ್ನು ಡ್ರಾಪ್‌ ಮಾಡಿದ ನಂತರ ಅನಧಿಕೃತ ಕಾರ್ಯಾಚರಣೆಗೆ ಇಳಿಯುತ್ತಿವೆ.

“ನಿಯಮಬಾಹಿರವಾಗಿ ಸಂಚರಿಸುವ ಖಾಸಗಿ ವಾಹನಗಳ ವಿರುದ್ಧ ನಿರಂತರವಾಗಿ ಒಂದೂವರೆ ತಿಂಗಳು ಕಾರ್ಯಾಚರಣೆ ನಡೆಸಿದರೆ, ಸುಲಭವಾಗಿ ಅವುಗಳಿಗೆ ಕಡಿವಾಣ ಬೀಳುತ್ತದೆ. ಇದರಿಂದ ಹೆಚ್ಚುವ ಆದಾಯವನ್ನು ಪ್ರಯಾಣಿಕರ ಅನುಕೂಲಕ್ಕೆ ಬಳಸಿಕೊಳ್ಳಬಹುದು ಇದಕ್ಕೆ ಮನಸ್ಸು ಬೇಕಷ್ಟೇ,’ ಎನ್ನುತ್ತಾರೆ ಬಿಎಂಟಿಸಿ ಬಸ್‌ ಪ್ರಯಾಣಿಕರ ವೇದಿಕೆ ಸದಸ್ಯ ವಿನಯ್‌ ಶ್ರೀನಿವಾಸ್‌. 

Advertisement

“ನಿಯಮಬಾಹಿರ ವಾಹನಗಳ ವಿರುದ್ಧದ ಕಾರ್ಯಾಚರಣೆ ಒಂದು ನಿರಂತರ ಪ್ರಕ್ರಿಯೆ. ಇದು ಈಗಾಗಲೇ ನಗರದ ವಿವಿಧೆಡೆ ನಡೆಯುತ್ತಿದ್ದು, ಹೀಗೇ ಮುಂದುವರಿಯಲಿದೆ. ಸಂಪೂರ್ಣವಾಗಿ ಕಡಿವಾಣ ಹಾಕಲು ಇಲಾಖೆ ಸರ್ವ ಪ್ರಯತ್ನ ನಡೆಸುತ್ತಿದೆ,’ ಎಂದು ಸಾರಿಗೆ ಇಲಾಖೆ ಆಯುಕ್ತ ಬಿ. ದಯಾನಂದ ಪ್ರತಿಕ್ರಿಯಿಸಿದ್ದಾರೆ

ನಗರದಲ್ಲಿ ನಿಯಮಬಾಹಿರವಾಗಿ ಸಂಚರಿಸುತ್ತಿರುವ ಖಾಸಗಿ ವಾಹನಗಳ ಬಗ್ಗೆ ಸಾರಿಗೆ ಇಲಾಖೆಗೆ ವೀಡಿಯೊ ಸಹಿತ ಮಾಹಿತಿ ನೀಡಿದ್ದರ ಪರಿಣಾಮ ಈಚೆಗೆ ಕಾರ್ಯಾಚರಣೆ ನಡೆಯಿತು. ಇದು ನಿರಂತರವಾಗಿ ನಡೆದು, ಸಂಪೂರ್ಣ ಕಡಿವಾಣ ಹಾಕಿದರೆ, ಸಂಸ್ಥೆಗೆ 75 ಲಕ್ಷರೂ.ಗಿಂತ ಹೆಚ್ಚು ಉಳಿತಾಯವಾಗಲಿದ್ದು, ಇದರ ಅನುಕೂಲ ಪ್ರಯಾಣಿಕರಿಗೆ ಸಿಗುವುದರಲ್ಲಿ ಅನುಮಾನವೇ ಇಲ್ಲ.
 ● ವಿ.ಪೊನ್ನುರಾಜ್‌, ವ್ಯವಸ್ಥಾಪಕ ನಿರ್ದೇಶಕರು, ಬಿಎಂಟಿಸಿ

ಬಸ್‌ ಹಿಂದೆ-ಮುಂದೆ ಸಿಸಿಟಿವಿ ಅಳವಡಿಸಲಿ ಬಿಎಂಟಿಸಿ ಬಸ್‌ಗಳ ಮುಂದೆ ಮತ್ತು ಹಿಂಭಾಗದಲ್ಲಿ ಸಿಸಿಟಿವಿಗಳನ್ನು ಅಳವಡಿಸಬೇಕು. ಇದರಿಂದ ನಿಯಮ ಬಾಹಿರವಾಗಿ ಸಂಚರಿಸುವ ವಾಹನಗಳ ಎಲ್ಲ ಮಾಹಿತಿ ಲಭ್ಯವಾಗುತ್ತದೆ. ಸಿಸಿ ಕ್ಯಾಮೆರಾದಿಂದ ಕೇವಲ ಖಾಸಗಿ ವಾಹನಗಳ ಮಾಹಿತಿ ಅಲ್ಲ, ಬಸ್‌ ಸಂಚರಿಸುವ ಮಾರ್ಗದಲ್ಲಿ ಯಾವುದೇ ಘಟನೆಗಳು ನಡೆದರೂ ಗೊತ್ತಾಗುತ್ತದೆ. ಇದಕ್ಕೆ ಸರ್ಕಾರ ಅನುದಾನ ನೀಡಬೇಕು. ಆಗ ಹೊರೆ ಆಗುವುದಿಲ್ಲ ಎಂದು ಸಾರಿಗೆ ತಜ್ಞರೊಬ್ಬರು ತಿಳಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next