Advertisement

ಅಧಿಕಾರಿಗಳು ಲಂಚಕ್ಕಾಗಿ ಕೆಲಸ ಮಾಡ್ತಾರೆ: ಹೈ ಬೇಸರ

12:09 PM Aug 31, 2018 | |

ಬೆಂಗಳೂರು: ಸರ್ಕಾರಿ ಅಧಿಕಾರಿಗಳು ಲಂಚಕ್ಕಾಗಿ ಕೆಲಸ ಮಾಡುವುದರಿಂದಲೇ ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ ಕಾರಣ ಎಂದು ಹೈಕೋರ್ಟ್‌ ಬೇಸರ ವ್ಯಕ್ತಪಡಿಸಿದೆ.

Advertisement

 ಕರ್ನಾಟಕ ವಿದ್ಯುತ್‌ ನಿಗಮದ ನಿವತ್ತ ಎಂಜಿನಿಯರ್‌ ಎನ್‌.ರಾಜೇಂದ್ರಪ್ರಸಾದ್‌ ರಾಜ್ಯಸರ್ಕಾರದ ವಿರುದ್ಧ  ಸಲ್ಲಿಸಿದ್ದ ಸಿವಿಲ್‌ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯನ್ನು ಗುರುವಾರ ನಡೆಸಿದ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್‌ ಹಾಗೂ ನ್ಯಾಯಮೂರ್ತಿ ಎಚ್‌.ಟಿ ನರೇಂದ್ರ ಪ್ರಸಾದ್‌ ಅವರಿದ್ದ ವಿಭಾಗೀಯ ಪೀಠ, ಈ ರೀತಿ ಬೇಸರ ವ್ಯಕ್ತಪಡಿಸಿತು. ವಿಚಾರಣೆ ವೇಳೆ ನಿಗಮದ ನಿರ್ದೇಶಕ ಜಿ. ಕುಮಾರ್‌ ನಾಯ್ಕ ಖುದ್ದು ಹಾಜರಿದ್ದರು.

ಅರ್ಜಿದಾರರಿಗೆ ವೇತನ ಪ್ರಮಾಣ ಪತ್ರ ಹಾಗೂ ಪಿಂಚಣಿಯನ್ನು ನೀಡುವ  ಹೈಕೋರ್ಟ್‌ ಆದೇಶ ಪಾಲಿಸದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಅಧಿಕಾರಿಗಳು ಲಂಚಕ್ಕಾಗಿ ಕೆಲಸ ಮಾಡಬಾರದು. ಮಾನವೀಯ ಸ್ಪರ್ಶದಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಡಬೇಕು. ಸುಮ್ಮನೆ ಜನರಿಗೆ ಹಿಂಸೆ ಕೊಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿತು. ಸಣ್ಣ-ಪುಟ್ಟ ವಿಚಾರಗಳಿಗೆಲ್ಲ ಜನರು ಕೋರ್ಟ್‌ ಮೆಟ್ಟಿಲೇರುವಂತೆ ಅಧಿಕಾರಿಗಳು ನಡೆದುಕೊಳ್ಳಬಾರದು ಎಂದು ತಾಕೀತು ಮಾಡಿತು. 

ನ್ಯಾಯಪೀಠದ ಮುಂದೆ ನಿರ್ದೇಶಕ ಕುಮಾರ್‌ ನಾಯಕ್‌, ” ಮುಂದಿನ 48 ಗಂಟೆಗಳಲ್ಲಿ ಅರ್ಜಿದಾರರ ಮನವಿ ಪರಿಗಣಿಸಿ ಆದೇಶ ಪಾಲಿಸುತ್ತೇವೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಮುಂದಿನ ಒಂದು ತಿಂಗಳಲ್ಲಿ ಅರ್ಜಿದಾರರ ಪಿಂಚಣಿ ಸೇರಿ ಇನ್ನಿತರೆ ಭತ್ಯೆಗಳನ್ನು ಮಂಜೂರು ಮಾಡುವಂತೆ ನಿರ್ದೇಶಿಸಿ ಅಕ್ಟೋಬರ್‌ 22ಕ್ಕೆ ವಿಚಾರಣೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next