Advertisement

ಅಧಿಕಾರಿಗಳ ನಿರ್ಲಕ್ಷ್ಯ: ಆತಂಕದಲ್ಲಿ ನಗರದ ಜನತೆ

11:24 PM Aug 13, 2019 | Team Udayavani |

ನಗರ ವ್ಯಾಪ್ತಿಯ ನಾಗರಿಕ ಸಮಸ್ಯೆಗಳ ನಿಮ್ಮ ದನಿಗೆ ನಮ್ಮ ದನಿ ಸೇರಿಸುವ ಪ್ರಯತ್ನ ಈ ಸುದಿನ ಜನದನಿ. ಓದುಗರು ತಮ್ಮ ಪ್ರದೇಶದ ರಸ್ತೆ, ನೀರು, ಸ್ವಚ್ಛತೆ, ನೈರ್ಮಲ್ಯ, ಮಾಲಿನ್ಯ, ಸಂಚಾರ ವ್ಯವಸ್ಥೆ ಸೇರಿದಂತೆ ಯಾವುದೇ ಸಮಸ್ಯೆ ಕುರಿತು ತಿಳಿಸಬಹುದು. ಈ ಅಂಕಣ ಪ್ರತಿ ಬುಧವಾರ ಪ್ರಕಟವಾಗಲಿದೆ. ವೈಯಕ್ತಿಕ ಸಮಸ್ಯೆ, ಕಾನೂನು ವ್ಯಾಜ್ಯದ ದೂರು ಅಥವಾ ವಿವಾದದಲ್ಲಿರುವ ವಿಷಯಗಳನ್ನು ಪರಿಗಣಿಸುವುದಿಲ್ಲ. ನಾಗರಿಕರು ತಮ್ಮ ಪ್ರದೇಶದ ಸಮಸ್ಯೆಯನ್ನು ಸಂಕ್ಷಿಪ್ತವಾಗಿ ಬರೆದು ಪೂರಕವೆನಿಸುವ ಒಂದು ಫೋಟೊ ಜತೆ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಅಂಚೆ, ಇಮೇಲ್ ಅಥವಾ ವಾಟ್ಸಪ್‌ ಮೂಲಕ ಕಳುಹಿಸಬಹುದು. ಅರ್ಹ ದೂರುಗಳನ್ನು ಪ್ರಕಟಿಸಿ, ಸಂಬಂಧಪಟ್ಟ ಇಲಾಖಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನು ಸುದಿನ ಮಾಡಲಿದೆ.

Advertisement

ತೋಡು ಹೂಳೆತ್ತದೆ ಸಮಸ್ಯೆ
ಗರದ ಫಳ್ನೀರು ಬಳಿಯ ಇಂದಿರಾ ಆಸ್ಪತ್ರೆ ಬಳಿ ಮಳೆ ನೀರು ಹರಿಯುವ ತೋಡಿನಲ್ಲಿ ಹೂಳು, ಕಸ ತುಂಬಿಕೊಂಡಿರುವುದರಿಂದ ನೀರು ಸರಾಗವಾಗಿ ಹರಿಯದೆ ಮನೆಯ ಕಂಪೌಂಡ್‌ ಬಳಿ ಹರಿಯುತ್ತಿದೆ. ಇದರಿಂದಾಗಿ ಮನೆ ಮಂದಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಮಹಾನಗರ ಪಾಲಿಕೆಯು ಮಳೆಗಾಲಕ್ಕೂ ಮುನ್ನ ತೋಡಿನಲ್ಲಿ ಹೂಳು ತೆಗೆಯುವ ಕೆಲಸ ಮಾಡಬೇಕಿತ್ತು. ಆದರೆ, ಮಹಾನಗರ ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ.

ಜೋರಾಗಿ ಮಳೆ ಬಂದರೆ, ಮಳೆ ನೀರು ತೋಡಿನಿಂದ ಮೇಲ್ಭಾಗಕ್ಕೆ ಬರುತ್ತದೆ. ಇದರಿಂದಾಗಿ ಅಕ್ಕಪಕ್ಕದ ಮನೆಯಲ್ಲಿ ಸೊಳ್ಳೆ ಕಾಟ ಹೆಚ್ಚಾಗಿದೆ. ಮಹಾನಗರ ಪಾಲಿಕೆ ಈ ಬಗ್ಗೆ ಕೂಡಲೇ ಗಮನಹರಿಸಬೇಕಿದೆ.

-ಮೆಟಿಲ್ಡಾ ವೇಗಸ್‌, ಪಳ್ನೀರು

ಗೋಡೆ ತೆರವುಗೊಳಿಸಿ
ಸುರತ್ಕಲ್ನ ಹೊಸಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಕೆಲವು ವರ್ಷಗಳಿಂದ ಮುಚ್ಚಲ್ಪಟ್ಟ ಐಸ್‌ ಪ್ಲಾಂಟ್ವೊಂದರ ಮೇಲ್ಛಾವಣಿ ಮಳೆಗೆ ಕೆಳಗೆ ಬಿದ್ದಿದೆ. ಇದರಿಂದಾಗಿ ಗೋಡೆಯು ಯಾವುದೇ ಸಮಯದಲ್ಲಿ ರಸ್ತೆಗೆ ಬೀಳುವ ಸಂಭವವಿದೆ. ಈ ರಸ್ತೆಯಲ್ಲಿ ಹಲವಾರು ಶಾಲಾ ವಿದ್ಯಾರ್ಥಿಗಳು ಚಲಿಸುತ್ತಾರೆ. ಶಾಲಾ ವಾಹನ ಸೇರಿ ಹತ್ತಾರು ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತವೆ. ಬಿದ್ದಿರುವ ಗೋಡೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಸಂಬಂಧಪಟ್ಟವರು ಕೂಡಲೇ ಈ ಬಗ್ಗೆ ಗಮನಹರಿಸಬೇಕಿದೆ.
ಸುದೇಶ್‌, ಹೊಸಬೆಟ್ಟು

Advertisement

ಕಸದ ಸಮಸ್ಯೆ ಬಗೆಹರಿಸಿ
ಕಾವೂರು ಗಾಂಧೀನಗರದಲ್ಲಿನ ಮಲ್ಲಿ ಲೇಔಟ್‌ನಲ್ಲಿ ಕಳೆದ ಕೆಲ ದಿನಗಳಿಂದ ಕಸದ ಸಮಸ್ಯೆ ಇದೆ. ಈ ಪ್ರದೇಶಕ್ಕೆ ಪ್ರತೀದಿನ ಕಸದ ವಾಹನ ಬರದೆ ಇರುವುದರಿಂದ ಸಾರ್ವಜನಿಕರು ರಸ್ತೆ ಬದಿಯಲ್ಲೇ ಕಸ ಬಿಸಾಡುತ್ತಿದ್ದಾರೆ. ಕಸ ಹಾಕಲು ಈ ಪ್ರದೇಶದಲ್ಲಿ ಮಹಾನಗರಪಾಲಿಕೆಯು ಕಸದಬುಟ್ಟಿಯನ್ನು ಕೂಡ ಇಟ್ಟಿಲ್ಲ.

ಈ ಭಾಗದಲ್ಲಿ ನಾಯಿ ಕಾಟವೂ ಹೆಚ್ಚಾಗಿದ್ದು, ಕಸವನ್ನು ನಾಯಿಗಳು ಎಲ್ಲಾ ಕಡೆ ಹರಡುತ್ತವೆ. ಇದರಿಂದಾಗಿ ಡೆಂಗ್ಯೂ ಭೀತಿ ಉಂಟಾಗಿದೆ. ಕಸವನ್ನು ರಸ್ತೆ ಬದಿಗೆ ಎಸೆಯುವವರ ಮೇಲೆ ಮಹಾನಗರ ಪಾಲಿಕೆಯು ಕಠಿನ ಕ್ರಮ ಜರಗಿಸಬೇಕು. ಹಾಗೂ ಕಸ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
– ಲ್ಯಾನ್ಸಿ ಡಿ’ಕೋಸ್ತ, , ವೆಲಂಕಣಿ ಕಾವೂರು
ಕದ್ರಿ ಪಾರ್ಕ್‌ನಲ್ಲಿ ಡೆಂಗ್ಯೂ ಭೀತಿ
ನಗರದ ಕದ್ರಿ ಪಾರ್ಕ್‌ ಮಂಗಳೂರಿನ ಅತೀ ದೊಡ್ಡ ಪಾರ್ಕ್‌ ಆಗಿದ್ದು, ದ.ಕ. ಸೇರಿದಂತೆ ಹೊರ ಜಿಲ್ಲೆಗಳಿಂದ ಅನೇಕ ಮಂದಿ ಪಾರ್ಕ್‌ ವೀಕ್ಷಣೆಗೆ ಬರುತ್ತಾರೆ. ಆದರೆ, ಪಾರ್ಕ್‌ ಹೊರಗಡೆ ರಸ್ತೆ ಬದಿಯಲ್ಲಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಇಲ್ಲ. ಒಂದು ಬಾರಿ ಮಳೆ ಬಂದರೆ ಕೆಲ ದಿನಗಳ ಕಾಲ ಮಳೆ ನೀರು ಅಲ್ಲೇ ನಿಂತಿರುತ್ತದೆ. ನಗರವು ಈಗಾಗಲೇ ಡೆಂಗ್ಯೂ ಜ್ವರದ ಭೀತಿಯಲ್ಲಿದ್ದು, ಈ ರೀತಿ ನಿಂತ ನೀರಿನಿಂದ ಸೊಳ್ಳೆ ಉತ್ಪತ್ತಿಯಾಗುತ್ತಿದೆ. ಸುತ್ತಮುತ್ತಲಿನ ಮಂದಿ ಸೊಳ್ಳೆ ಕಾಟ ಅನುಭವಿಸುತ್ತಿದ್ದಾರೆ. ಇದರಿಂದ ಪಾರ್ಕ್‌ಗೆ ಆಗಮಿಸುವ ಮಂದಿಗೂ ಭೀತಿ ಉಂಟಾಗಿದೆ. ಸಂಬಂಧಪಟ್ಟ ಇಲಾಖೆ ಕೂಡಲೇ ಈ ಬಗ್ಗೆ ಗಮನಹರಿಸಬೇಕಿದೆ.-ಪೆಟ್ರೀಶಿಯಾ ಡಿ’ಸೋಜಾ, ಬಜ್ಪೆ

ಹದಗೆಟ್ಟ ರಸ್ತೆ; ಸಂಚಾರ ದುಸ್ತರ

ನಗರದಲ್ಲಿ ಹೆಚ್ಚಿನ ರಸ್ತೆಗಳು ಹದಗೆಟ್ಟಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ. ಮಂಗಳೂರು ನಗರ ಸ್ಮಾರ್ಟ್‌ಸಿಟಿ ಹೊಸ್ತಿಲಿನಲ್ಲಿದ್ದರೂ, ಇಲ್ಲಿನ ಕೆಲ ಮುಖ್ಯ ರಸ್ತೆಗಳು ಗುಂಡಿಯಿಂದ ಮುಕ್ತವಾಗಿಲ್ಲ. ಅದ ರಲ್ಲಿಯೂ ನಗರದ ಬಂಟ್ಸ್‌ಹಾಸ್ಟೆಲ್ ಬಳಿ ಕಾಂಕ್ರೀಟ್ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಕಷ್ಟವಾಗುತ್ತಿದೆ. ಕಾಂಕ್ರೀಟ್ ಮತ್ತು ನೆಲಕ್ಕೆ ಅಂತರವಿದ್ದು, ಇದರಿಂದಾಗಿ ವಾಹನ ಸವಾರರು ಅಪಘಾತಕ್ಕೀಡಾಗುವ ಸಾಧ್ಯತೆ ಹೆಚ್ಚು ಇದೆ. ಅದರಲ್ಲಿಯೂ ದ್ವಿಚಕ್ರ ವಾಹನ ಸವಾರರಿಗೆ ಹೆಚ್ಚು ತೊಂದರೆ ಉಂಟಾಗುತ್ತಿದೆ. ಬಂಟ್ಸ್‌ ಹಾಸ್ಟೆಲ್ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರತೀ ದಿನ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ. ಜತೆಗೆ ರಸ್ತೆ ಕೂಡ ಹದಗೆಟ್ಟಿರುವುದರಿಂದ ಸಂಚಾರಕ್ಕೆ ಹೆಚ್ಚಿನ ತೊಂದರೆ ಉಂಟಾಗುತ್ತಿದೆ.

-ಯತೀಶ್‌, ಬಲ್ಲಾಳ್‌ಬಾಗ್‌

ರಸ್ತೆಯಲ್ಲಿ ನೀರು ನಿಂತು ತೊಂದರೆ

ನಗರದ ಜನನಿಬಿಡ ರಸ್ತೆಗಳಲ್ಲಿ ಒಂದಾದ ಬಿಜೈ ಬಳಿ ಕೆಲವು ತಿಂಗಳುಗಳಿಂದ ಮಳೆ ನೀರು ಹರಿಯಲು ಜಾಗವಿಲ್ಲದೆ ರಸ್ತೆಯಲ್ಲೇ ನಿಲ್ಲುತ್ತಿದೆ. ಇದರಿಂದಾಗಿ ವಾಹನ ಸವಾರರು ಸಂಕಷ್ಟಕ್ಕೀಡಾಗಿದ್ದಾರೆ. ಈ ಪ್ರದೇಶದಲ್ಲಿ ಮಳೆ ನೀರು ಹರಿಯಲು ಯಾವುದೇ ತೋಡಿನ ವ್ಯವಸ್ಥೆ ಇಲ್ಲ. ಇದೇ ಕಾರಣಕ್ಕೆ ರಸ್ತೆಯಲ್ಲೇ ನೀರು ತುಂಬಿರುತ್ತದೆ.

ರಸ್ತೆಯ ಎದುರು ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣವಿದ್ದು, ಪಕ್ಕದಲ್ಲಿ ಮಾಲ್ ಒಂದಿದೆ. ಹೀಗಿರುವಾಗ ದಿನಂಪ್ರತಿ ನೂರಾರು ವಾಹನಗಳು ಅತ್ತಿಂದಿತ್ತ ಸಂಚರಿಸುತ್ತಿರುತ್ತದೆ. ಮಳೆ ಕೊನೆಗೊಂಡು ಗಂಟೆ ಕಳೆದರೂ ನೀರು ಹೋಗದೆ ರಸ್ತೆಯಲ್ಲೇ ತುಂಬಿಕೊಂಡಿರುತ್ತದೆ. ಇದರಿಂದಾಗಿ ವಾಹನಗಳು ಅಪಘಾತವಾಗುವ ಸಾಧ್ಯತೆ ಹೆಚ್ಚಿದೆ.

-ಪ್ರದೀಪ್‌, ಕೊಟ್ಟಾರ

ಇಲ್ಲಿಗೆ ಕಳುಹಿಸಿ

‘ಸುದಿನ-ಜನದನಿ’ ವಿಭಾಗ, ಉದಯವಾಣಿ, ಮಾನಸ ಟವರ್‌, ಮೊದಲ ಮಹಡಿ, ಎಂಜಿ ರಸ್ತೆ, ಪಿವಿಎಸ್‌ ವೃತ್ತ ಸಮೀಪ, ಕೊಡಿಯಾಲಬೈಲ್, ಮಂಗಳೂರು-575003. ವಾಟ್ಸಪ್‌ ನಂಬರ್‌-9900567000. ಇ-ಮೇಲ್: mlr.sudina@udayavani.com
Advertisement

Udayavani is now on Telegram. Click here to join our channel and stay updated with the latest news.

Next