Advertisement

ಬೆಳಗ್ಗೆ ಆರು ಗಂಟೆಗೆ ಕೆಲಸಕ್ಕೆ ಬರುವ ಅಧಿಕಾರಿಗಳು ಬೇಕು

09:58 PM Aug 29, 2019 | Sriram |

ಉಡುಪಿ: ನಗರಸಭೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ಬೆಳಗ್ಗೆ 6 ಗಂಟೆಯಿಂದಲೇ ಕೆಲಸ ಮಾಡುವ ಮನಸ್ಥಿತಿಯಲ್ಲಿ ಇರಬೇಕು. 10 ಗಂಟೆಗೆ ಕೆಲಸಕ್ಕೆ ಬರುವ ಅಧಿಕಾರಿಗಳು ಬೇಕಿಲ್ಲ. ಸ್ವತ್ಛತೆಯಲ್ಲಿ ಮೈಸೂರು ಜಿಲ್ಲೆಯನ್ನು ನಂಬರ್‌ ವನ್‌ ಮಾಡಿದಂತೆ ಉಡುಪಿಯನ್ನೂ ಮಾಡಲು ಸಾಧ್ಯವಿದೆ. ಇದಕ್ಕಾಗಿ ಅಧಿಕಾರಿಗಳು ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕಿದೆ ಎಂದು ನೂತನ ಜಿಲ್ಲಾಧಿಕಾರಿ, ನಗರಸಭೆಯ ಆಡಳಿತಾಧಿಕಾರಿ ಜಿ.ಜಗದೀಶ್‌ ಅಧಿಕಾರಿ ಗಳಿಗೆ ಖಡಕ್‌ ಸೂಚನೆ ನೀಡಿದರು.
ಗುರುವಾರ ಶಾಸಕ ರಘುಪತಿ ಕೆ.ಭಟ್‌ ನೇತೃತ್ವದಲ್ಲಿ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ನಗರಸಭಾ ಚುನಾಯಿತ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಎಚ್ಚರಿಕೆ ನೀಡಿದರು.

Advertisement

ವಿವಿಧೆಡೆ ಅಧಿಕಾರಿಯಾಗಿ ಕೆಲಸ ಮಾಡಿದ ಅನುಭವವಿದೆ. ಉಡುಪಿ ಜಿಲ್ಲೆಯಲ್ಲಿಯೂ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದೇನೆ. ನಗರಾಭಿವೃದ್ಧಿ ಬಗ್ಗೆ ಹಲವು ಅನುಭವಗಳಿವೆ. ಈ ನಗರವನ್ನು ಅಭಿವೃದ್ಧಿ ಮಾಡುವುದು ದೊಡ್ಡ ಸಂಗತಿಯೇ ಅಲ್ಲ. ಅಧಿಕಾರಿಗಳು ಒತ್ತಡ ನಿಭಾಯಿಸಿಕೊಂಡು ಕೆಲಸ ನಿರ್ವಹಿಸಿದರೆ ಎಲ್ಲವೂ ಸಾಧ್ಯ ಎಂದರು.

ಸಮಸ್ಯೆಗಳಿಗೆ ಸ್ಪಂದಿಸಿ
ನಗರದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಸಾಮಾನ್ಯ ಕೆಲಸಕಾರ್ಯ ಗಳಿಗೆ ಜನರಿಗಿಂತಲೂ ಯಂತ್ರೋಪಕರಣ ಗಳನ್ನು ಬಳಸಿಕೊಳ್ಳಬೇಕು. ನಗರ
ಸಭೆಯ ಅಧಿಕಾರಿಗಳು ಚುನಾಯಿತ ಜನಪ್ರತಿನಿಧಿಗಳು ಸಹಿತ ಸಾರ್ವಜನಿಕ ರೊಂದಿಗೆ ಔಚಿತ್ಯದಿಂದ ವರ್ತಿಸಬೇಕು. ಇದಕ್ಕೆ ಆಯುಕ್ತರು ವ್ಯವಸ್ಥೆ ಕಲ್ಪಿಸಬೇಕು. ನಗರವನ್ನು ಅಭಿವೃದ್ಧಿಗೊಳಿಸಲು ಹಲವಾರು ಯೋಜನೆಗಳನ್ನು ರೂಪಿಸ ಲಾಗುವುದು. ಮರಳು ಸಮಸ್ಯೆ ನಿವಾರ ಣೆಗೆ ಶ್ರಮಿಸಲಾಗುವುದು ಎಂದರು.

ಸಮಸ್ಯೆಗಳ ಸರಮಾಲೆ
ಚುನಾವಣೆಯಲ್ಲಿ ಆಯ್ಕೆಯಾಗಿದ್ದರೂ ನಮಗೆ ಇನ್ನೂ ಅಧಿಕಾರ ಸಿಕ್ಕಿಲ್ಲ. ನಗರದಾದ್ಯಂತ ಹಲವಾರು ಸಮಸ್ಯೆಗಳಿವೆ. ಬೇಸಗೆ ಕಾಲದಲ್ಲಿ ಈ ಬಾರಿ ಹಲವಾರು ಸಮಸ್ಯೆಗಳನ್ನು ಎದುರಿಸಿದ್ದೆವು. ನಗರಕ್ಕೆ ವಾರಾಹಿ ನೀರು ಪೂರೈಕೆಗೆ ಕನಿಷ್ಠ ಎಂದರೂ 2ರಿಂದ 3 ವರ್ಷಗಳು ಬೇಕಾಗಬಹುದು. ಅಲ್ಲಿಯವರೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಗಮನಹರಿಸುವಂತೆ ಗುಂಡಿಬೈಲು ವಾರ್ಡ್‌ ಸದಸ್ಯ ಪ್ರಭಾಕರ ಪೂಜಾರಿ ತಿಳಿಸಿದರು.

ಶಾಶ್ವತ ಪರಿಹಾರ ಕಲ್ಪಿಸಿ
ಬೈಲೂರು ವಾರ್ಡ್‌ ಸದಸ್ಯ ರಮೇಶ್‌ ಕಾಂಚನ್‌ ಮಾತನಾಡಿ, ವಾರ್ಡ್‌ನಲ್ಲಿ ಬೀದಿದೀಪಗಳ ಸಮಸ್ಯೆ, ದಾರಿದೀಪಗಳ ಸಮಸ್ಯೆ, ಡ್ರೈನೇಜ್‌ ಸಮಸ್ಯೆಗಳಿವೆ. ಹುಲ್ಲುತೆಗೆಯುವ ಕೆಲಸವೂ ಸಮರ್ಪಕ ವಾಗಿ ನಡೆಯುತ್ತಿಲ್ಲ. ಎಲ್ಲ ವಾರ್ಡ್‌ ಗಳಲ್ಲೂ ಬೀದಿನಾಯಿಗಳ ಸಮಸ್ಯೆ ಇದೆ. ಇದರ ಸಂತಾನಹರಣಕ್ಕೆ ನಗರಸಭೆ ಕ್ರಮ ಕೈಗೊಳ್ಳಬೇಕು. ಬಜೆಯಲ್ಲಿ ವಿದ್ಯುತ್‌, ಪಂಪ್‌ ಸಮಸ್ಯೆಯಿದ್ದರೆ ಪೂರ್ತಿ ನಗರಕ್ಕೆ ನೀರು ಇರುವುದಿಲ್ಲ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ನಮ್ಮ ವಾರ್ಡ್‌ನಲ್ಲಿ ಚರಂಡಿಯ ಹೂಳೆತ್ತುವ ಕೆಲಸ ಇನ್ನೂ ಆಗಿಲ್ಲ. ಪೌರಕಾರ್ಮಿಕರ ಕೊರತೆ ಇದೆ. ಇದನ್ನು ನಿವಾರಿಸಿ ಸಮರ್ಪಕ ರೀತಿಯಲ್ಲಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡಬೇಕು ಎಂದು ಪರ್ಕಳ ವಾರ್ಡ್‌ ಸದಸ್ಯೆ ಸುಮಿತ್ರಾ ಆರ್‌.ನಾಯಕ್‌ ತಿಳಿಸಿದರು.

Advertisement

ಸಿಬಂದಿಗಳ ಕೊರತೆ
ಚಿಟಾ³ಡಿ ವಾರ್ಡ್‌ ಸದಸ್ಯ ಶ್ರೀಕೃಷ್ಣ ರಾವ್‌ ಕೊಡಂಚ ಮಾತನಾಡಿ, ನಗರಸಭೆಯಲ್ಲಿ ಸಿಬಂದಿ ಕೊರತೆಯಿಂದ ಯಾವುದೇ ಕೆಲಸಗಳೂ ಸಮರ್ಪಕವಾಗಿ ನಡೆಯುತ್ತಿಲ್ಲ. ಅಧಿಕಾರಿಗಳು, ಎಂಜಿನಿಯರ್‌ಗಳ ಕೊರತೆ ಇದೆ. ಬೀದಿ ದೀಪ ಸಹಿತ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಈ ಹಿಂದೆ ಕರೆದ ಟೆಂಡರ್‌ನಂತೆ ವೇತನ ಪಾವತಿ ಆಗುತ್ತಿದೆ. ಆದರೆ ಜಿಎಸ್‌ಟಿ ಬಂದ ಅನಂತರ ತೆರಿಗೆ ಹೆಚ್ಚಳವಾಗಿದೆ. ಇದನ್ನು ಮತ್ತೂಮ್ಮೆ ಪರಿಷ್ಕರಿಸುವಂತೆ ತಿಳಿಸಿದರು.

ರೋಗಲಕ್ಷಣ
ನಿಟ್ಟೂರು ವಾರ್ಡ್‌ ಸದಸ್ಯ ಸಂತೋಷ್‌ ಜತ್ತನ್ನ ಮಾತನಾಡಿ, ವಾರ್ಡ್‌ನಲ್ಲಿ ಒಳಚರಂಡಿ, ಕುಡಿಯುವ ನೀರು, ರಸ್ತೆ ಸಮಸ್ಯೆ ಇದೆ. ಡ್ರೈನೇಜ್‌ ನೀರಿನಿಂದಾಗಿ ಕುಡಿಯುವ ನೀರು ಹಾಳಾಗಿದೆ. ಅಲ್ಲದೆ ವಾರ್ಡ್‌ನಲ್ಲಿ ಮಲೇರಿಯಾ, ಡೆಂಗ್ಯೂ ರೋಗ ಲಕ್ಷಣವೂ ಕಂಡುಬರುತ್ತಿದೆ ಎಂದರು.

ತ್ಯಾಜ್ಯ ನೀರು
ಮಲ್ಪೆ ಸೆಂಟ್ರಲ್‌ ವಾರ್ಡ್‌ನ ಸೆಲೆನಾ ಕರ್ಕಡ ಮಾತನಾಡಿ, ಹೋಟೆಲ್‌, ಅಂಗಡಿಯವರು ಡ್ರೈನೇಜ್‌ ನೀರು ಬಿಡುತ್ತಿರುವುದರಿಂದ ಜನರಿಗೆ ತೊಂದರೆಯುಂಟಾಗುತ್ತಿದೆ. ಈ ಬಗ್ಗೆ ಬೀಚ್‌ ಅಭಿವೃದ್ಧಿ ಸಮಿತಿ ಪರಿಶೀಲನೆ ನಡೆಸಬೇಕು ಎಂದರು. ಇದಕ್ಕೆ ಶಾಸಕ ಕೆ.ರಘುಪತಿ ಭಟ್‌ ಅವರು ಹೆಲ್ತ್‌ಇನ್‌ಸ್ಪೆಕ್ಟರ್‌ ಅವರೊಂದಿಗೆ ಭೇಟಿ ನೀಡಿ ಪರಿಶೀ ಲಿಸುವಂತೆ ಆಯುಕ್ತರಿಗೆ ಸೂಚಿಸಿದರು.

ಟೆಂಡರ್‌ಗೆ ವಿರುದ್ದವಾಗಿ ಕೆಲಸ
ವಡಂಭಾಂಡೇಶ್ವರ ವಾರ್ಡ್‌ನ ಯೋಗೀಶ್‌ ವಿ.ಸಾಲ್ಯಾನ್‌ ಮಾತನಾಡಿ, ಈ ವಾರ್ಡ್‌ನಲ್ಲಿ ನಿರಂತರ ಮಳೆ ಬಂದರೆ ಸಮಸ್ಯೆಉಂಟಾಗುತ್ತದೆ. ರಾಜಕಾಲುವೆಯ ಕೆಳಗೆ ಸಿಮೆಂಟ್‌ ಹಾಕಿ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ. ಅನಧಿಕೃತ ಅಂಗಡಿಗಳಿಗೆ ಎನ್‌ಒಸಿ ನೀಡಲಾಗಿದೆ. ಟೆಂಡರ್‌ಗೆ ವಿರುದ್ದವಾಗಿ ಕೆಲಸ ನಡೆಯುತ್ತಿದೆ ಎಂದರು.

ನಗರಸಭೆಯ ಪೌರಾಯುಕ್ತರಾದ ಆನಂದ ಕಲ್ಲೋಳಿಕರ್‌, ಅಧಿಕಾರಿಗಳು ಉಪಸ್ಥಿತರಿದ್ದರು.

600ರಷ್ಟು ಬಾವಿಗಳು ಕಲುಷಿತ
ಕೊಡವೂರು ವಾರ್ಡ್‌ನ ವಿಜಯ ಕೊಡವೂರು ಮಾತನಾಡಿ, ನಗರಸಭೆಯ ಅವ್ಯವಸ್ಥೆಯಿಂದಾಗಿ 600ರಷ್ಟು ಬಾವಿಗಳು ಕಲುಷಿತಗೊಂಡಿವೆ. ಕೃಷಿಕರು ಕಿಂಡಿ ಅಣೆಕಟ್ಟು ನಿರ್ಮಿಸಿ ಕೃಷಿ ಮಾಡುತ್ತಿದ್ದ ವ್ಯವಸ್ಥೆ ಇಲ್ಲದಂತಾಗಿದೆ. ಪ್ಲಾಸ್ಟಿಕ್‌ ತ್ಯಾಜ್ಯದಿಂದಾಗಿ ಇಲ್ಲಿನ ಸುಮಾರು 19 ಜನರಿಗೆ ಕ್ಯಾನ್ಸರ್‌ ರೋಗ ಇದೆ. ಈ ಬಗ್ಗೆ ಪರಿಶೀಲನೆ ನಡೆಸುವಂತೆ ತಿಳಿಸಿದರು.

ಜನಪ್ರತಿನಿಧಿಗಳಿಂದ ಕೇಳಿಬಂದ ದೂರುಗಳು
- ವಳಕಾಡು ವಾರ್ಡ್‌ನಲ್ಲಿ ಅನಧಿಕೃತ ಗೂಡಂಗಡಿಗಳಿವೆ. ಇಲ್ಲಿನ ಪವರಕಾರ್ಮಿಕರಿಗೆ ಮೂಲಸೌಲಭ್ಯ ಕಲ್ಪಿಸಬೇಕು.
- ಕಡಿಯಾಳಿ ದೇವಸ್ಥಾನದ ಗೇಟ್‌ ಮುಚ್ಚುವುದರಿಂದ ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತಿದೆ. ಕಸದ ಸಮಸ್ಯೆ ನಿವಾರಣೆಗೆ ಟೆಂಡರ್‌ ಕರೆಯಬೇಕು, ಪೌರಕಾರ್ಮಿಕರು ಯಾವುದೇ ಉಪಕರಣಗಳಿಲ್ಲದೆ ಕೆಲಸಕ್ಕೆ ಬರುತ್ತಾರೆ. ಇದಕ್ಕೆ ನಗರಸಭೆಯವರು ವ್ಯವಸ್ಥೆ ಕಲ್ಪಿಸಬೇಕು.
- ನೆಹರೂನಗರ ವಾರ್ಡ್‌ನಲ್ಲಿ ತೆರೆದ ಡ್ರೈನೇಜ್‌ನಿಂದಾಗಿ ಜಾನುವಾರುಗಳು ಕೆಳಕ್ಕೆ ಬೀಳುತ್ತಿವೆ. ಇದಕ್ಕೆ ಶೀಘ್ರ ಪರಿಹಾರ ಒದಗಿಸಬೇಕು.
- ಬನ್ನಂಜೆ ವಾರ್ಡ್‌ನಲ್ಲಿ ಡ್ರೈನೇಜ್‌ ಸಮಸ್ಯೆ.
- ಸುಬ್ರಹ್ಮಣ್ಯ ನಗರದಲ್ಲಿರುವ ಕೊರಗರ ಕಾಲನಿಯಲ್ಲಿ ವಿದ್ಯುತ್‌ ಸಮಸ್ಯೆ.
-  ಬಜೆ ಡ್ಯಾಂನ ಹೂಳೆತ್ತುವ ಕೆಲಸ ಆಗಬೇಕು.
- ಮೂಡುಪೆರಂಪಳ್ಳಿಯಲ್ಲಿ ಕಸದಿಂದ ಸಮಸ್ಯೆ ಉಂಟಾಗುತ್ತಿದೆ.
- ಮಣಿಪಾಲದಲ್ಲಿ ಮನೆ ಮನೆಯ ಕಸ ತೆಗೆದುಕೊಂಡು ಹೋಗಲು ವಾಹನದ ಕೊರತೆ ಇದೆ. ಕಸ ಹೊರಗಿಟ್ಟರೆ ಬೀದಿನಾಯಿಗಳು ತೊಂದರೆ ಮಾಡುತ್ತವೆ.
- ಸಂತೆಕಟ್ಟೆಯಲ್ಲಿ ತೋಡಿಗೆ ಡ್ರೈನೇಜ್‌ ನೀರು ಬಿಡಲಾಗುತ್ತಿದೆ.

ಜಾಹೀರಾತಿಗೆ ಸೀಮಿತವಾದ ಬೀದಿ ದೀಪಗಳು
ಕಿನ್ನಿಮೂಲ್ಕಿ ವಾರ್ಡ್‌ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಆಚಾರ್ಯ ಮಾತನಾಡಿ, ಮಳೆನೀರು ಹರಿದುಹೋಗುವ ಚರಂಡಿಯಲ್ಲಿ ತ್ಯಾಜ್ಯನೀರು ಹರಿಯುತ್ತಿದೆ. ನಗರಸಭೆಯಿಂದ ಸಮರ್ಪಕವಾಗಿ ನಿರ್ವಹಣೆ ಕೆಲಸ ಆಗುತ್ತಿಲ್ಲ. ಕಲ್ಸಂಕ, ಕಿನ್ನಿಮೂಲ್ಕಿಯ ನೀರು ಹರಿಯುವ ತೋಡು ಕುಸಿದಿದ್ದು ಎಲ್ಲ ನೀರು ತ್ಯಾಜ್ಯಮಯವಾಗಿದೆ. 1 ವರ್ಷದಿಂದಲೂ ರಸ್ತೆಬದಿಯೆಲ್ಲ ಕತ್ತಲು ಆವರಿಸಿದೆ. ಬೀದಿದೀಪಗಳು ಜಾಹೀರಾತು ಫ‌ಲಕಗಳಿಗೆ ಸೀಮಿತವಾಗಿವೆ. ಆದರೆ ಉರಿಯುತ್ತಿಲ್ಲ ಎಂದು ಅಸಮಾಧಾನ ತೋಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next