Advertisement

Election Result 2024: 24 ವರ್ಷ ಬಳಿಕ ಒಡಿಶಾದ ಬಿಜೆಡಿ ಸಾಮ್ರಾಜ್ಯ ಪತನ

09:59 PM Jun 04, 2024 | Team Udayavani |

ಭುವನೇಶ್ವರ: ಒಡಿಶಾದಲ್ಲಿ ಬಿಜು ಜನತಾ ದಳ ನೇತೃತ್ವದ ಸರಕಾರವನ್ನು ಸೋಲಿಸಬೇಕು ಎಂಬ ಬಿಜೆಪಿ ಕನಸು ಈಡೇರಿದೆ. ಬರೋಬ್ಬರಿ 24 ವರ್ಷಗಳ ಕಾಲ ಆಡಳಿತ ನಡೆಸಿದ ನವೀನ್‌ ಪಟ್ನಾಯಕ್‌ ನೇತೃತ್ವದ ಸರಕಾರ ಈ ಬಾರಿಯ ಚುನಾವಣೆಯಲ್ಲಿ ಸೋಲು ಅನುಭವಿಸಿದೆ.

Advertisement

147 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 79 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಈ ಮೂಲಕ ದೇಶದ ಪೂರ್ವ ಭಾಗದ ರಾಜ್ಯದಲ್ಲಿ ಗೆದ್ದ ಹೆಗ್ಗಳಿಕೆಯನ್ನೂ ಬಿಜೆಪಿ ದಾಖಲಿಸಿದೆ.

2019ರ ವಿಧಾನಸಭೆ ಚುನಾವಣೆಯಲ್ಲಿ 117 ಕ್ಷೇತ್ರಗಳಲ್ಲಿ ಅಭೂತಪೂರ್ವ ಜಯಗಳಿಸಿದ್ದ ನವೀನ್‌ ಪಟ್ನಾಯಕ್‌ ನೇತೃತ್ವದ ಬಿಜೆಡಿ ಈ ಬಾರಿ 60ಕ್ಕಿಂತ ಕಡಿಮೆ ಅಂದರೆ 53 ಕ್ಷೇತ್ರಗಳನ್ನು ಮಾತ್ರ ಗೆದ್ದುಕೊಳ್ಳಲು ಯಶಸ್ವಿಯಾಗಿದೆ. ಬಿಜೆಪಿ ಕಳೆದ ಬಾರಿಗಿಂತ 53 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದು ಗಮನಾರ್ಹವಾಗಿದೆ.

ಹಾಲಿ ಚುನಾವಣೆಯಲ್ಲಿ ಬಿಜೆಪಿ 78, ಬಿಜೆಡಿ 51, ಕಾಂಗ್ರೆಸ್‌ 14, ಸಿಪಿಎಂ 1, ಪಕ್ಷೇತರ ಅಭ್ಯರ್ಥಿಗಳು 3 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದಾರೆ. 2019ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ನವೀನ್‌ ಪಟ್ನಾಯಕ್‌ ನೇತೃತ್ವದ ಬಿಜೆಡಿ 117 ಕ್ಷೇತ್ರಗಳಲ್ಲಿ ಗೆದ್ದು ಜಯ ಸಾಧಿಸಿತ್ತು. ಬಿಜೆಪಿ 23, ಕಾಂಗ್ರೆಸ್‌ 7 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಒಡಿಶಾದ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸುತ್ತಿರುವಂತೆಯೇ ಪಕ್ಷದ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ. ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌ ಸಂಪುಟದಲ್ಲಿನ 8 ಮಂದಿ ಸಚಿವರು ಮತ್ತು 10 ಇತರ ಪ್ರಮುಖ ಹಾಲಿ ಶಾಸಕರು ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ.

4 ಹಂತಗಳಲ್ಲಿ ಚುನಾವಣೆ: ಮೇ 13, ಮೇ 20, ಮೇ 25 ಮತ್ತು ಜೂ.1ರಂದು 4 ಹಂತಗಳಲ್ಲಿ ಲೋಕಸಭೆ ಚುನಾವಣೆ ಜತೆಗೆ ವಿಧಾನಸಭೆ ಚುನಾವಣೆಯೂ ನಡೆದಿತ್ತು. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಗಾಗಿ ಬಿಜೆಪಿ ಮತ್ತು ಬಿಜೆಡಿ ನಡುವೆ ಮೈತ್ರಿ ಮಾಡಿ ಕೊಳ್ಳುವ ಬಗ್ಗೆ ಹಲವು ಹಂತದ ಮಾತುಕತೆಗಳು ನಡೆದಿ ದ್ದವು. ಆದರೆ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿ ಸಿದಂತೆ ಸ್ಥಾನ ಹೊಂದಾಣಿಕೆ ವಿಚಾರದಲ್ಲಿ ಸಹಮತ ಏರ್ಪಡದೇ ಇದ್ದುದರಿಂದ ಮಾತುಕತೆಗಳು ಮುರಿದು ಬಿತ್ತು.

Advertisement

ಸಿಎಂ ಯಾರಾಗಬಹುದು?: ಒಡಿಶಾ ಇತಿಹಾಸದ ಲ್ಲಿಯೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಲು ಪ್ರಮುಖರ ಹೆಸರುಗಳು ಕೇಳಿ ಬರುತ್ತಿವೆ. ಈ ಪೈಕಿ ಮಾಜಿ ಸಚಿವ ಜುವಲ್‌ ಒರಾಂ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್‌ ಪಾಂಡಾ, ಡಾ| ಸಂಭಿತ್‌ ಪಾತ್ರಾ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಪ್ರಮುಖರು.

ಒಡಿಶಾದ 2ನೇ ಅತ್ಯಂತ ದೀರ್ಘಾವಧಿ ಸಿಎಂ
ಬಿಜು ಪಟ್ನಾಯಕ್‌ ಒಡಿಶಾದ ಅತ್ಯಂತ ದೀರ್ಘಾವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಮಾ.5, 2000ದಿಂದ 2024 ಜೂ.4ರ ವರೆಗೆ ಅಂದರೆ 24 ವರ್ಷ 91 ದಿನಗಳ ಕಾಲ ಮುಖ್ಯಮಂತ್ರಿ ಆಗಿದ್ದವರು. ಕಾಂಗ್ರೆಸ್‌ನ ಜಾನಕಿ ವಲ್ಲಭ್‌ ಪಟ್ನಾಯಕ್‌ ಅವರು 1980 ಜೂ.9ರಿಂದ 1989 ಡಿ.7ರ ವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

ಸಿಎಂ ಪಟ್ನಾಯಕ್‌ಗೆ ಸಿಹಿ-ಕಹಿ ಫ‌ಲಿತಾಂಶ
ಹಾಲಿ ಚುನಾವಣೆಯಲ್ಲಿ ಸಿಎಂ ನವೀನ್‌ ಪಟ್ನಾಯಕ್‌ ಕಾಂಟಾಬಾಂಜಿ ಮತ್ತು ಹಿಂಜಿಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ಪೈಕಿ ಕಾಂಟಾಬಾಂಜಿಯಲ್ಲಿ ಬಿಜೆಪಿ ಅಭ್ಯರ್ಥಿ ಲಕ್ಷ್ಮಣ್‌ ಬಾಗ್‌ ವಿರುದ್ಧ 14,299 ಮತಗಳ ಅಂತರದಿಂದ ಪಟ್ನಾಯಕ್‌ ಸೋತಿದ್ದಾರೆ. ಹಿಂಜಿಲಿಯಿಂದ ನವೀನ್‌ ಪಟ್ನಾಯಕ್‌ ಅವರು 4,649 ಮತಗಳ ಅಂತರದಿಂದ ಜಯ ಸಾಧಿಸಿ ತೃಪ್ತಿಪಟ್ಟುಕೊಂಡಿದ್ದಾರೆ.

ಪಟ್ನಾಯಕ್‌ ಸೋಲಿಗೆ ಕಾರಣ
– ಪ್ರಾಕೃತಿಕ ವಿಕೋಪಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ವಿಫ‌ಲ.
– ಪಟ್ನಾಯಕ್‌ ಬಿಟ್ಟು ಬಿಜೆಡಿಯಲ್ಲಿ ಇತರ ನಾಯಕರ ಕೊರತೆ
– ನಿವೃತ್ತ ಐಎಎಸ್‌ ಅಧಿಕಾರಿ ವಿ.ಕೆ.ಪಾಂಡ್ಯನ್‌ಗೆ ಬಿಜೆಡಿಯಲ್ಲಿ ಹೆಚ್ಚಿನ ಪ್ರಾಮುಖ್ಯ

ಒಡಿಶಾ ಬಿಜೆಪಿ ಗೆಲುವಿಗೆ ಕಾರಣ
– ನವೀನ್‌ ಪಟ್ನಾಯಕ್‌ ಒಡಿಯಾ ಮೂಲದವರು ಅಲ್ಲ ಎಂದು ಪ್ರಚಾರ
– ಜಗನ್ನಾಥ ದೇಗುಲದ ಆಡಳಿತ ಭದ್ರವಾಗಿಲ್ಲ, ರತ್ನಭಂಡಾರದ ಕೀಲಿ ಕೈ ಕಳೆದು ಹೋದ ವಿಚಾರ
– ಮಹಿಳೆಯರಿಗೆ 50,000 ರೂ.ವೋಚರ್‌, ರೈತರಿಗೆ ಎಂಎಸ್‌ಪಿ ಭರವಸೆ

Advertisement

Udayavani is now on Telegram. Click here to join our channel and stay updated with the latest news.

Next