Advertisement

ಕೈಗಾರಿಕೆ ಸ್ಥಾಪಿಸದ ಭೂಮಿ ವಶಪಡಿಸಿಕೊಳ್ಳಿ

11:01 AM Jun 18, 2019 | Team Udayavani |

ಚಿಕ್ಕಮಗಳೂರು: ಕೈಗಾರಿಕಾ ವಸಾಹತುಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ಪಡೆದು ಕೈಗಾರಿಕೆ ಸ್ಥಾಪನೆ ಮಾಡದಿರುವ ಪ್ರಕರಣಗಳಲ್ಲಿ ಭೂಮಿಯನ್ನು ಮುಟ್ಟುಗೋಲು ಹಾಕಿಕೊಂಡು ಯುವ ಉತ್ಸಾಹಿ ಕೈಗಾರಿಕೋದ್ಯಮಿಗಳಿಗೆ ಹಂಚಿಕೆ ಮಾಡಬೇಕೆಂದು ಶಾಸಕ ಸಿ.ಟಿ.ರವಿ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾ ಪಂಚಾಯತ್‌ ಸಮೀಪದ ಕೈಗಾರಿಕಾ ವಸಾಹತಿನಲ್ಲಿ ಮೂಲಭೂತ ಸೌಕರ್ಯ ಒದಗಿಸಲು ವಿವಿಧ ಕಾಮಗಾರಿಗಳಿಗೆ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಸರ್ಕಾರ ನಿಯಮಕ್ಕೆ ತಿದ್ದುಪಡಿ ತಂದು ಅಥವಾ ಕಾಯ್ದೆ ರೂಪಿಸಿ ಕೈಗಾರಿಕೆ ಆರಂಭದ ಹೆಸರಿನಲ್ಲಿ ಭೂಮಿ ಪಡೆದು ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ರಿಯಲ್ ಎಸ್ಟೇಟ್ ದಂಧೆಗೆ ಅವಕಾಶವಾಗದಂತೆ ತಕ್ಷಣ ಈ ಭೂ ಮಂಜೂರಾತಿಯನ್ನು ರದ್ದುಪಡಿಸಬೇಕೆಂದು ಹೇಳಿದರು.

ರಿಯಲ್ ಎಸ್ಟೇಟ್ ದಂಧೆ: ಈ ಹಿನ್ನೆಲೆಯಲ್ಲಿ ಮುಂದಿನ ಅಧಿವೇಶನದಲ್ಲಿ ವಿಷಯವನ್ನು ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದ ಶಾಸಕರು, ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ದಂಧೆ ತೀವ್ರವಾಗಿರದೇ ಇರಬಹುದು. ಆದರೆ, ಬೆಂಗಳೂರು ಹಾಗೂ ದೊಡ್ಡ ನಗರಗಳಲ್ಲಿ ಇದೊಂದು ದೊಡ್ಡ ದಂಧೆಯಾಗಿ ಮಾರ್ಪಟ್ಟಿದೆ ಎಂದು ಹೇಳಿದರು.

ಗುಣಮಟ್ಟ ಕಾಪಾಡದಿದ್ದರೆ ಕ್ರಮ: ನಗರದ ಕೈಗಾರಿಕಾ ವಸಾಹತಿನಲ್ಲಿ 2.42 ಕೋಟಿ ರೂ. ವೆಚ್ಚದಲ್ಲಿ 1,700 ಮೀಟರ್‌ ಡಾಂಬರು ರಸ್ತೆ ನಿರ್ಮಾಣ, 2,725 ಮೀಟರ್‌ ಚರಂಡಿ ದುರಸ್ತಿ, 820 ಮೀಟರ್‌ ಹೊಸ ಚರಂಡಿ ನಿರ್ಮಾಣ ಹಾಗೂ ನೀರು ಸರಬರಾಜು ವ್ಯವಸ್ಥೆಗೆ ಗುದ್ದಲಿ ಪೂಜೆ ನೆರವೇರಿಸಿದ್ದು, ಕಾಮಗಾರಿಯನ್ನು ಗುಣಮಟ್ಟದಲ್ಲಿ ಮಾಡದಿದ್ದರೆ ಕ್ರಮ ಕೈಗೊಳ್ಳುವುದಾಗಿ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು. ವಸಾಹತಿನಲ್ಲಿರುವ ಕೈಗಾರಿಕೋದ್ಯಮಿಗಳು ಕಾಮಗಾರಿ ಬಗ್ಗೆ ಗಮನ ಹರಿಸಿ ಲೋಪಗಳು ಕಂಡು ಬಂದಲ್ಲಿ ತಕ್ಷಣ ತಿಳಿಸಬೇಕೆಂದು ಹೇಳಿದರು.

Advertisement

ಜನಸಂಖ್ಯೆ ಪ್ರಗತಿಗೆ ವಿರೋಧವಲ್ಲ. ಆದರೆ, ಅದನ್ನು ಮಾನವ ಸಂಪನ್ಮೂಲವಾಗಿ ಪರಿವರ್ತಿಸಬೇಕಾಗಿದೆ. ಜನ ಒಂದು ಕಸುಬಿನಲ್ಲಿ ಪರಿಣತಿ ಪಡೆದರೆ ಆಗ ಅದು ಕೌಶಲ್ಯಪೂರ್ಣ ಸಂಪನ್ಮೂಲವಾಗುತ್ತದೆ. ಇಂದು ಕೇಂದ್ರ ಸರ್ಕಾರ ಯಾವುದೇ ಭದ್ರತೆ ಇಲ್ಲದೆ 5 ಸಾವಿರ ರೂ.ನಿಂದ 10 ಲಕ್ಷ ರೂ.ವರೆಗೆ ಮುದ್ರಾ ಯೋಜನೆಯಡಿ ಹಾಗೂ ಇನ್ನು ಕೆಲವು ಯೋಜನೆಗಳ ಮೂಲಕ 50 ಲಕ್ಷ ರೂ. ವರೆಗೆ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ನೀಡುವ ವ್ಯವಸ್ಥೆ ಜಾರಿಗೆ ತಂದಿದೆ. ಇದನ್ನು ಉಪಯೋಗಿಸಿಕೊಳ್ಳಬೇಕು. ಸಾಲಕ್ಕಾಗಿ ಕೈಗಾರಿಕಾ ಯೋಜನಾ ವರದಿ ರೂಪಿಸದೇ ಕೈಗಾರಿಕಾ ಯೋಜನಾ ವರದಿ ರೂಪಿಸಿ ಸಾಲ ಪಡೆದು ಕೈಗಾರಿಕೆಗಳನ್ನು ಸ್ಥಾಪಿಸಬೇಕೆಂದು ಸಲಹೆ ಮಾಡಿದರು.

ಚತುಷ್ಪಥ ರಸ್ತೆಗೆ ಮನವಿ: ಈ ಕೈಗಾರಿಕಾ ವಸಾಹತಿನಲ್ಲಿ ಡಿಸೆಂಬರ್‌ ತಿಂಗಳೊಳಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗುವುದು. ಜೂ.20ರಂದು ಚಿಕ್ಕಮಗಳೂರು-ಬೇಲೂರು-ಹಾಸನಕ್ಕೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸಂಪರ್ಕ ಖಾತೆ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಿ ಹಣ ಮಂಜೂರಾತಿಗೆ ಮನವಿ ಮಾಡಲಾಗುವುದು. ಚಿಕ್ಕಮಗಳೂರು-ಸಕಲೇಶಪುರ ರೈಲ್ವೆ ಮಾರ್ಗದ ಬದಲು ಯಾವುದೇ ಕಾಡು ನಾಶವಾಗದ, ಏರುತಿಟ್ಟುಗಳಿಲ್ಲದ ಸಮತಟ್ಟು ಭೂಮಿಯಲ್ಲಿ ಸಾಗುವ ಚಿಕ್ಕಮಗಳೂರು-ಬೇಲೂರು-ಹಾಸನ ರೈಲ್ವೆ ಮಾರ್ಗ ನಿರ್ಮಾಣಕ್ಕೆ ರೈಲ್ವೆ ಖಾತೆ ಸಚಿವ ಪಿಯೂಷ್‌ ಗೋಯೆಲ್ ಅವರನ್ನು ಸಂಸದರೊಂದಿಗೆ ಭೇಟಿ ಮಾಡಿ ಮಾರ್ಗ ಬದಲಾವಣೆಗೆ ಒತ್ತಾಯಿಸಲಾಗುವುದು ಎಂದು ಹೇಳಿದರು.

ಹೊಸ ವಸಾಹತಿಗೆ ಭೂಮಿ: ತಾಲೂಕಿನ ಕಳಸಾಪುರ, ಹಿರೇಗೌಜದಲ್ಲಿ ಅಥವಾ ಮಾಗಡಿ-ಕಳಸಾಪುರ ಮಧ್ಯದಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆಗೆ ಭೂಮಿ ಪಡೆಯಲು ಕೈಗಾರಿಕಾ ಇಲಾಖೆ ಆಲೋಚಿಸಬೇಕು. ಈಗಾಗಲೇ ದೇವನೂರು ಸಮೀಪ ಕೈಗಾರಿಕಾ ವಸಾಹತು ನಿರ್ಮಿಸಿ ಜವಳಿ ಪಾರ್ಕ್‌ ನಿರ್ಮಿಸಲು ಸರ್ವೆ ಕಾರ್ಯ ಕೈಗೊಳ್ಳಲಾಗಿದೆ. ಈ ಭಾಗದ 3 ರಿಂದ 4 ಸಾವಿರಕ್ಕೂ ಹೆಚ್ಚು ಯುವಜನರು ಬೆಂಗಳೂರಿನಲ್ಲಿ ಟೆಕ್ಸ್‌ಟೈಲ್ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲೇ ಪಾರ್ಕ್‌ ನಿರ್ಮಿಸಿದರೆ ಅವರಿಗೆ ಮನೆ ಸಮೀಪವೇ ಉದ್ಯೋಗ ನೀಡಬಹುದೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಕೈಗಾರಿಕೋದ್ಯಮಿ ಹಾಗೂ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಮುನೀರ್‌ ಅಹಮ್ಮದ್‌, ಕೈಗಾರಿಕೋದ್ಯಮಿ ಎಂ.ಎಸ್‌.ಜಯರಾಮ್‌, ನಾಸೀರ್‌, ಇಂದ್ರೇಶ್‌, ಸುಭಾಷ್‌ಚಂದ್ರ ಭಟ್, ಇಲಾಖೆಯ ಜಂಟಿ ನಿರ್ದೇಶಕ ಗಣೇಶ್‌, ಸಹಾಯಕ ನಿರ್ದೇಶಕ ರವಿಕುಮಾರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next