Advertisement

Mangaluru ಜೈವಿಕ ಕ್ರಿಮಿನಾಶಕವಾಗಲಿದೆ ಅಡಿಕೆ ಎಲೆಯ ದ್ರಾವಣ!

11:25 PM Jun 25, 2024 | Team Udayavani |

ಮಂಗಳೂರು: ಈಗ ಅಡಿಕೆ ಲಾಭದಾಯಕ ಕೃಷಿ. ಚಾಲಿ ಅಡಿಕೆ, ಕೆಂಪಡಿಕೆ, ಅಡಿಕೆ ಹಾಳೆ, ಅಡಿಕೆಯ ಸಿಂಗಾರ, ಅಡಿಕೆ ಮರದ ಕಾಂಡ, ಅಡಿಕೆ ಸಿಪ್ಪೆ ಎಲ್ಲವೂ ಉಪಯೋಗಕಾರಿ. ಈಗ ಅದಕ್ಕೆ ಹೊಸ ಸೇರ್ಪಡೆಯಾಗಿ ಅಡಿಕೆಯ ಎಲೆಗಳನ್ನೂ ಕ್ರಿಮಿನಾಶಕ-ಸೊಳ್ಳೆ ನಿರೋಧಕವಾಗಿ ಬಳಸಬಹುದು ಎನ್ನುವ ಕುತೂಹಲಕಾರಿ ಅಂಶ ಅಧ್ಯಯನದಲ್ಲಿ ತಿಳಿದುಬಂದಿದೆ. ಅದರಲ್ಲೂ ಮಲೇರಿಯಾ, ಡೆಂಗ್ಯೂ ಚಿಕುನ್‌ಗುನ್ಯ ಕಾರಕ ಸೊಳ್ಳೆಗಳ ಮೂಲಗಳನ್ನೇ ಈ ದ್ರಾವಣವನ್ನು ಬಳಸಿ ನಿಯಂತ್ರಿಸಬಹುದು.

Advertisement

ಅಲ್ಲಲ್ಲಿ ನಡೆದಿರುವ ಅಡಿಕೆ, ಅಡಿಕೆ ಎಲೆಯ ದ್ರಾವಣದ ಕ್ರಿಮಿನಾಶಕ ಗುಣಗಳನ್ನು ಅಡಿಕೆ ಸಂಶೋಧನ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ತಜ್ಞರು ಒಟ್ಟುಗೂಡಿಸಿ ಪ್ರಕಟಿಸಿದ್ದಾರೆ. ಇದರ ಮಾಹಿತಿ ನೋಡಿದರೆ ತೋಟದಲ್ಲಿ ಹಾಗೆಯೇ ಬಿದ್ದು ಕೊಳೆತು ಹೋಗುವ ಅಥವಾ ಒಲೆಗಳಲ್ಲಿ ಉರಿದು ಹೋಗುವ ಸೋಗೆ ಅಥವಾ ಅಡಿಕೆ ಎಲೆಗೆ ಉತ್ತಮ “ಜೈವಿಕ ಕ್ರಿಮಿನಾಶಕ’ದ ಮೂಲವಾಗುವ ಅವಕಾಶವಿದೆ. ಅಧ್ಯಯನದ ಮುಂದಿನ ಸ್ತರವನ್ನು ಅಭಿವೃದ್ಧಿಪಡಿಸಲು ಔಷಧ ಕಂಪೆನಿಗಳು ಮುಂದಾಗಬಹುದು.

ಹಿಂದಿನಿಂದಲೂ ಕಂಗಿನ ಸೋಗೆಯನ್ನು ಸುಟ್ಟರೆ ಸೊಳ್ಳೆಗಳನ್ನು ಓಡಿಸಬಹುದು ಎನ್ನುವುದನ್ನು ಹಿರಿಯರು ಅರಿತುಕೊಂಡಿದ್ದರು. ಆದರೆ ಈ ಹೊಗೆಯನ್ನು ನಿರಂತರ ಸೇವಿಸುವುದು ಹಿತಕರವಲ್ಲ, ಅದರ ಬದಲು ಅಡಿಕೆಯ ಎಲೆಯಿಂದ ಹೊರತೆಗೆದ ರಸವನ್ನು ಕ್ರಿಮಿನಾಶಕವಾಗಿ ಬಳಸುವುದು ಉತ್ತಮ ಎನ್ನುವುದು ಅಧ್ಯಯನಕಾರರ ಅನಿಸಿಕೆ.

ಅಡಿಕೆಯಿಂದ ಪ್ರತ್ಯೇಕಿಸಿದ ತೈಲವನ್ನು ಬಳಸಿಕೊಂಡು ಹಾಗೂ ಅಡಿಕೆಯ ಎಲೆಯ ರಸವನ್ನು ಕ್ರಿಮಿನಾಶಕವಾಗಿ ಪ್ರಯೋಗಕ್ಕೊಳಪಡಿಸಲಾಗಿತ್ತು. ಅದರಲ್ಲಿ ಅಡಿಕೆಯ ಎಲೆಯ ರಸ ಲಾರ್ವಗಳನ್ನು ಕೊಲ್ಲುವಲ್ಲಿ ಹೆಚ್ಚು ಪರಿಣಾಮಕಾರಿ ಎನ್ನುವುದು ಸಾಬೀತಾಗಿದೆ.

ಲಾರ್ವಗಳ ಮೇಲೆ ಅಧ್ಯಯನ
ಅಡಿಕೆ ಎಲೆಗಳ ಮೆಥನಾಲಿಕ್‌ ಎಕ್ಸ್‌ ಟ್ರಾಕ್ಟ್ ಅನ್ನು ಮಲೇರಿಯಾ ಕಾರಕ ಅನಾಲಫೀಸ್‌ ಸೊಳ್ಳೆ ಲಾರ್ವಗಳ ಮೇಲೆ ಪ್ರಯೋಗಿಸಿ ಅಧ್ಯಯನ ನಡೆಸಿದವರು ವಿನಾಯಗನ್‌ ಎನ್ನುವ ಸಂಶೋಧಕರು. ಡೆಂಗ್ಯುಕಾರಕ ಈಡಿಸ್‌ ಈಜಿಪ್ಟೆ$ç ಸೊಳ್ಳೆ ಲಾರ್ವಗಳ ಮೇಲೆ ಪ್ರಯೋಗ ನಡೆಸಿದವರು ಟೆನ್ನಿಸನ್‌. ಇವರ ಅಧ್ಯಯನದಲ್ಲೂ ಅಡಿಕೆ ಎಲೆಗಳ ದ್ರಾವಣದ ಪ್ರಯೋಗವು ಈ ಲಾರ್ವಗಳನ್ನು ಪರಿಪೂರ್ಣವಾಗಿ ಕೊಲ್ಲುತ್ತದೆ.

Advertisement

ಅಧ್ಯಯನದ ಮುಖ್ಯಾಂಶ
-ಎಲೆಗಳನ್ನು ಅರೆಯಾಗಿ ಸುಟ್ಟರೆ ಅದರ ಹೊಗೆಯಿಂದ ಸೊಳ್ಳೆಗಳು ದೂರವಾಗುತ್ತವೆ ಎನ್ನು ವುದು ಹಿಂದಿನಿಂದಲೂ ಗೊತ್ತಿದ್ದ ವಿಚಾರ. ಆದರೆ ಈ ಹೊಗೆಯ ನಿರಂತರ ಸೇವನೆ ಮನುಷ್ಯರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
– ಸ್ಟೀಮ್‌ ಡಿಸ್ಟಿಲೇಶನ್‌ ವಿಧಾನದಿಂದ ಹೊರ ತೆಗೆದ ಅಡಿಕೆಯ ತೈಲವನ್ನು ಬಳಸಿ ಅದನ್ನು
ಲಾರ್ವಗಳ ಮೇಲೆ ಪ್ರಯೋಗಿಸಿ ದಾಗ ಶೇ. 23ರಷ್ಟು ಲಾರ್ವಗಳನ್ನು ಕೊಲ್ಲುವುದು ಕಂಡುಬಂದಿದೆ.
– ಅಡಿಕೆಯ ಎಲೆಗಳಿಂದ ಪ್ರತ್ಯೇಕಿಸಿದ ದ್ರಾವಣವನ್ನು ಈಡಿಸ್‌ ಹಾಗೂ ಅನಾಲಫೀಸ್‌ ಸೊಳ್ಳೆಗಳ ಮೇಲೆ ಪ್ರಯೋಗಿಸಿದಾಗ ಅವು ಹೆಚ್ಚು ಪರಿಣಾಮಕಾರಿಯಾಗಿ ಅವುಗಳನ್ನು ಕೊಲ್ಲುತ್ತವೆ. ಹಾಗಾಗಿ ಅಡಿಕೆಯ ಎಣ್ಣೆಗಿಂತಲೂ ಎಲೆಗಳ ದ್ರಾವಣ ಹೆಚ್ಚು ಪ್ರಬಲ ಎನ್ನುವುದು ಅಧ್ಯಯನದಲ್ಲಿ ಸ್ಪಷ್ಟಗೊಂಡಿದೆ.
-ಅಡಿಕೆಯ ಮರವೊಂದ ರಿಂದ ಸರಾಸರಿ ವರ್ಷವೊಂದಕ್ಕೆ 5-6 ಸೋಗೆಗಳು ಕಳಚಿ ಬೀಳುತ್ತವೆ. ದೇಶದಲ್ಲಿ ಪ್ರಸ್ತುತ 8 ಲಕ್ಷ ಹೆಕ್ಟೇರ್‌ ಅಡಿಕೆ ತೋಟವಿದ್ದು, ಈ ಅಡಿಕೆ ಸೋಗೆಗಳು ಬಳಕೆಯಾಗುತ್ತಿಲ್ಲ. ಇದರ ಜೈವಿಕ ದ್ರಾವಣವನ್ನು ಸೊಳ್ಳೆ ನಿಯಂತ್ರಕ (ಬಯೋ ಪೆಸ್ಟಿಸೈಡ್‌)ವಾಗಿ ಬಳಸುವುದಕ್ಕೆ ಫಾರ್ಮಾ ಕಂಪೆನಿಗಳು ಮನಸ್ಸು ಮಾಡಬಹುದು.

ಹಲವು ವರ್ಷಗಳಿಂದ ಅನೇಕ ವಿಜ್ಞಾನಿಗಳು ಅಡಿಕೆಯ ಎಲೆಗಳ ಕ್ರಿಮಿನಾಶಕ ಗುಣಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಅವುಗಳನ್ನು ಎಆರ್‌ಡಿಎಫ್‌ ವತಿಯಿಂದ ಒಟ್ಟುಗೂಡಿಸಿ ಪ್ರಕಟಿಸುವ ಯತ್ನವನ್ನು ಮಾಡಲಾಗಿದೆ, ಇದು ಮುಂದಿನ ಸಂಶೋಧನೆಗೆ ಸಹಾಯಕ ವಾಗಬಹುದು. ಫಾರ್ಮಸಿ ಸಂಸ್ಥೆಯವರು, ಕಾಲೇಜಿನವರು ಮುಂದಿನ ಸಂಶೋಧನೆ ಕೈಗೊಳ್ಳಲಿ ಎನ್ನುವುದು ನಮ್ಮ ಆಶಯ.
– ಡಾ| ಸರ್ಪಂಗಳ ಕೇಶವ ಭಟ್‌,
ಎಕ್ಸಿಕ್ಯೂಟಿವ್‌ ಆಫೀಸರ್‌,
ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ

-ವೇಣುವಿನೋದ್‌ ಕೆ.ಎಸ್‌

Advertisement

Udayavani is now on Telegram. Click here to join our channel and stay updated with the latest news.

Next