Advertisement

ಹುಮನಾಬಾದನಲ್ಲಿ ನುಡಿ ಜಾತ್ರೆ

12:11 PM Feb 28, 2019 | |

ಹುಮನಾಬಾದ: ನಗರದಲ್ಲಿ ಎಲ್ಲಿ ನೋಡಿದಲ್ಲಿ ಕನ್ನಡ ಧ್ವಜ, ಸಾಹಿತ್ಯ ಕಲರವದ ಕಂಪು ಹರಡಿದೆ. ಎಲ್ಲೆಡೆ ಹಬ್ಬದ ವಾತಾವರಣ ಕಂಡುಬರುತ್ತಿದೆ. ಹೌದು. ಪಟ್ಟಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಫೆ.28ರಂದು ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಿದೆ. ಸರ್ವಾಧ್ಯಕ್ಷೆಯಾಗಿ ಹೈ.ಕ ಭಾಗದ ಲೇಖಕಿ ತಾಲೂಕಿನ ಗಡವಂತಿ ಗ್ರಾಮದ ನಿವಾಸಿ ಡಾ| ಪುಟ್ಟಮಣಿ ಪರಮೇಶ್ವರ ರೂಗನ್‌ ಆಯ್ಕೆಯಾಗಿದ್ದಾರೆ.

Advertisement

ಎಂ.ಎಲ್‌ ಪದವಿ: ಬೀದರ ಜಿಲ್ಲೆ ಭಾಲ್ಕಿಯ ರತ್ನಮ್ಮ ಹಾಗೂ ದೇವಿದಾಸ ಪ್ಯಾಗೆ ಅವರ ಉದರದಲ್ಲಿ 1972ರ ಡಿಸೆಂಬರ್‌ 7 ರಂದು ಜನ್ಮ ತಾಳಿದ ಡಾ| ಪುಟ್ಟಮಣಿ ಪ್ರಾಥಮಿಕ ಹಂತದಿಂದ ಪದವಿ ವರೆಗಿನ ಶಿಕ್ಷಣವನ್ನು ಬೀದರನಲ್ಲೇ ಪೂರೈಸಿದ್ದಾರೆ. ಕಲ್ಬುರ್ಗಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಅಧ್ಯಯನ ಪೂರೈಸಿರುವ ಅವರು ಡಾ| ವಿ. ಶಿವಾನಂದ ಮಾರ್ಗದರ್ಶನದಲ್ಲಿ ಹೈದ್ರಾಬಾದ ಕರ್ನಾಟಕ ಶಿಲಾ ಶಾಸನಗಳು ಒಂದು ಅಧ್ಯಯನ ವಿಷಯದಲ್ಲಿ ಎಂ.ಎಲ್‌ ಪದವಿ ಪಡೆದಿದ್ದಾರೆ.

ಪಿಎಚ್‌.ಡಿ ಪದವಿ: ಹೈದ್ರಾಬಾದ್‌ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ ದಂಪತಿಗಳ ಜೀವನ ಸಾಧನೆ ಒಂದು ಅಧ್ಯಯನ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್‌.ಡಿ ಪದವಿ ಪಡೆದಿದ್ದಾರೆ.

10ಕ್ಕೂ ಅಧಿಕ ಚಿಂತನ ಪ್ರಕಟ: ಡಾ| ರೂಗನ್‌ ಅವರು ಪ್ರಸ್ತುತ ಕಲ್ಬುರ್ಗಿ ಗೋದುತಾಯಿ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮ ಪ್ರತಿನಿಧಿಗಳ ಸಮ್ಮೇಳನದಲ್ಲಿ ಅನೇಕ ಪ್ರಬಂಧ ಮಂಡಿಸಿ ಜನಪ್ರಿಯರಾಗಿದ್ದಾರೆ. ಕಲ್ಬುರ್ಗಿ ಆಕಾಶವಾಣಿ ಕೇಂದ್ರದಿಂದ ಈ ವರೆಗೆ 10ಕ್ಕೂ ಅಧಿಕ ಚಿಂತನ ಪ್ರಕಟಗೊಂಡಿವೆ.

 ಬಿಚ್ಚಿದ ನೆನಪಿನ ಬುತ್ತಿ: ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದ ತಂದೆ ದೇವಿದಾಸ ಪ್ಯಾಗೆ ಅವರು ಬಹುಮುಖ ಪ್ರತಿಭೆ. ವೃತ್ತಿಯೊಂದಿಗೆ ನಾಟಕ ರಚನೆ, ನಿರ್ದೇಶನ ಮತ್ತು ಅಭಿನಯ ಕಲೆಯಲ್ಲಿ ನಿಪುಣತೆ ಹೊಂದಿದ್ದರು. ತಂದೆ ಹವ್ಯಾಸಗಳೆಲ್ಲವೂ ಬಹುತೇಕ ನಾನು 7ನೇ ತರಗತಿ ಇರುವಾಲೇ ನನ್ನನ್ನು ಆವರಿಸಿಕೊಂಡಿದ್ದವು. ಅದೇ ಕಾರಣಕ್ಕಾಗಿ 7ನೇ ವರ್ಗದವಲ್ಲಿರುವಾಗಲೇ ನಾಟಕ ಬರೆದು, ನಿರ್ದೇಶಿಸಿ, ಅಭಿನಯಿಸಿದ್ದೆ ಎಂದು ನೆನಪಿನ ಬುತ್ತಿ ಬಿಚ್ಚಿಡುತ್ತಾರೆ ಡಾ| ರೂಗನ್‌.

Advertisement

ಹೆಗಲಿಗೆ ಹೆಗಲು ಕೊಟ್ಟ ಪತಿ: ಸ್ನಾತ್ತಕೋತ್ತರ ಪ್ರಥಮ ವರ್ಷದಲ್ಲಿದ್ದಾಗಲೇ ಮದುವೆಯಾಯಿತು. ಇನ್ನೇನು ಓದು ನಿಂತು ಹೋಯಿತು ಎನ್ನುವಷ್ಟರಲ್ಲೇ ಬಾಳ ಸಂಗಾತಿಯಾದ ಪತಿ ಪರಮೇಶ್ವರ ಮುಂದಿನ ಓದಿಗೆ ಹೆಗಲಿಗೆ ಹೆಗಲು ಕೊಟ್ಟು ಪ್ರೋತ್ಸಾಹಿಸದಿದ್ದರೆ ಬಹುತೇಕ ನಾನು ಈ ಮಟ್ಟಕ್ಕೆ ಬೆಳೆಯುವುದು ಕಷ್ಟಸಾಧ್ಯವಾಗಿತ್ತು. ಪತಿ ಹೆಸರಿಗೆ ತಕ್ಕಂತೆ ನನ್ನ ಪಾಲಿನ ಪರಮೇಶ್ವರನೇ ಆಗಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಡಾ| ಪುಟ್ಟಮಣಿ.

ವಿಚಾರ ವಾಹಿನಿ (ವೈಚಾರಿಕ ಲೇಖನಗಳ ಸಂಗ್ರಹ), ಹೈದ್ರಾಬಾದ ಕರ್ನಾಟಕದ ಶಿಲಾ ಶಾಸನಗಳು, ಹೈದ್ರಾಬಾದ್‌ ಕರ್ನಾಟಕ ಭಾಗದ ಗಾದೆ ಮಾತುಗಳು, ಸಾಹಿತ್ಯ ಸನ್ನಿ, ಉರಿಲಿಂಗ ಪೆದ್ದಿ ಸೇರಿ ಈ ವರೆಗೆ 5ಕ್ಕೂ ಅಧಿಕ ಕೃತಿಗಳು ಪ್ರಕಟಗೊಂಡರೆ ಇನ್ನೂ ಹಲವು ವೈಚಾರಿಕ ಕೃತಿಗಳು ಅಚ್ಚಿನಲ್ಲಿವೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಜರ್ನಲ್ಸ್‌ಗಳಲ್ಲಿ 13ಕ್ಕೂ ಅಧಿಕ ವಿಶಿಷ್ಟ ಲೇಖನಗಳು ಪ್ರಕಟಗೊಂಡಿವೆ.

ಸಂಪಾದಿತ ಕೃತಿಗಳಲ್ಲಿ ಈ ವರೆಗೆ ಇವರ 19 ಲೇಖನಗಳು ಪ್ರಕಟಗೊಂಡಿವೆ. ನೂರಾರು ಕಡೆ ವಿಚಾರ ಸಂಕಿರಣಗಲ್ಲಿ ವಿಶೇಷ ಉಪನ್ಯಾಸ ನೀಡಿದ್ದಾರೆ. ಈ ವರೆಗೆ ನಡೆದ 25ಕ್ಕೂ ಅಧಿಕ ಸಮ್ಮೇಳನಗಳಲ್ಲಿ ಮೂಢನಂಬಿಕೆ ತೊಡೆದು ಹಾಕಿ, ವೈಜ್ಞಾನಿಕ ಮನೋಭಾವನೆ ಬೆಳೆಸುವ ವೈಚಾರಿಕ ಪ್ರಬಂಧ ಮಂಡಿಸಿದ ಖ್ಯಾತಿ ಡಾ| ರೂಗನ್‌ ಅವರಿಗಿದೆ. ಸಮುದಾಯದತ್ತ ರೇಡಿಯೋ ಕಾರ್ಯಕ್ರಮದಲ್ಲಿ ಇವರೇ ರಚಿಸಿ, ನಿರ್ದೇಶಿಸಿದ ನಾಟಕ ಪ್ರಸಾರಗೊಂಡಿದೆ.

ಕಲ್ಬುರ್ಗಿ ಆಕಾಶವಾಣಿಯಲ್ಲಿ ಪ್ರಸಾರಗೊಂಡ 15ಕ್ಕೂ ಅಧಿಕ ಚಿಂತನ ಕುರಿತು ಕೇಳುಗರ ಪ್ರಶಂಸೆಗೆ ಪತ್ರರಾಗಿದ್ದಾರೆ. ಅನೇಕ ವಿದ್ಯಾ ಸಂಸ್ಥೆ ಸೇರಿದಂತೆ ಅನೇಕ ಸಾಹಿತ್ಯ ಮತ್ತು ಸಮಾಜ ಸೇವಾ ಸಂಘಟನೆಗಳು ಡಾ| ಪುಟ್ಟಮಣಿ ರೂಗನ್‌ ಅವರನ್ನು ಸನ್ಮಾನಿಸಿ, ಗೌರವಿಸಿವೆ. ಶರಣಬಸವೇಶ್ವರ ಸಂಸ್ಥಾನ ಅಸಂಖ್ಯಾತ ಕಾರ್ಯಕ್ರಮಗಳಲ್ಲಿ ಉಪನ್ಯಾಸ ನೀಡಿದ್ದಾರೆ. 

ಒಬ್ಬ ಪ್ರಾಧ್ಯಾಪಕಿ, ಲೇಖಕಿಯಾಗಿ ಅನೇಕ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಪ್ರಬಂಧ ಮಂಡಿಸಿದ್ದೇನೆ. ಆದರೆ ಇಂದು ಕೊಟ್ಟೂರಿನಲ್ಲಿ ನಡೆಯುತ್ತಿರುವ ಕನ್ನಡ ಜಾತ್ರೆಯಲ್ಲಿ ಸಮ್ಮೇಳನ ಸರ್ವಾಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದ್ದು ಖುಷಿ ತಂದಿದೆ. ಅಂದು ಪತಿ ಓದಿಗೆ ಪ್ರೋತ್ಸಾಹಿಸಿದ್ದರ ಪರಿಣಾಮ
ಸರ್ವಾಧ್ಯಕ್ಷೆಯಾಗಿ ಆಯ್ಕೆಯಾಗಲು ಸಾಧ್ಯವಾಗಿದೆ. ಪರಿಷತ್‌ ಅಧ್ಯಕ್ಷರ ಪ್ರೋತ್ಸಾಹಕ್ಕೆ ಋಣಿಯಾಗಿರುವೆ.
 ಡಾ| ಪುಟ್ಟಮಣಿ ರೂಗನ್‌,

ಸಮ್ಮೇಳನ ಸರ್ವಾಧ್ಯಕ್ಷೆ ಸಮ್ಮೇಳನ ಸಂಬಂಧ 120*120 ಅಡಿ ಅಳತೆ ಮಹಾಮಂಟಪ ಅಳವಡಿಸಲಾಗಿದೆ. ಮುಖ್ಯ ವೇದಿಕೆಯಲ್ಲಿ 30 ಆಸನ, ಪ್ರೇಕ್ಷಕರ ಗ್ಯಾಲರಿಯಲ್ಲಿ 1500 ಆಸನ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ ಪ.ಪೂ ಕಾಲೇಜು ಪ್ರಾಂಗಣದಿಂದ ಸಮ್ಮೇಳನ ವೇದಿಕೆವರೆಗೆ ನಡೆಯುವ ಮೆರವಣಿಗೆಯಲ್ಲಿ ವೈವಿಧ್ಯಮಯ ಜಾನಪದ ಕಲಾತಂಡಗಳು ಪ್ರದರ್ಶನ ನೀಡಲಿವೆ.
 ಸಚ್ಚಿದಾನಂದ ಮಠಪತಿ, ಕಸಾಪ ಅಧ್ಯಕ್ಷ, ಹುಮನಾಬಾದ

„ಶಶಿಕಾಂತ ಕೆ.ಭಗೋಜಿ

Advertisement

Udayavani is now on Telegram. Click here to join our channel and stay updated with the latest news.

Next