Advertisement

ಹರಿಯಾಣ ಘಟನೆ; ಯುಪಿಯ ಮುಜಾಫರ್‌ನಗರ ಸೇರಿ ಸೂಕ್ಷ್ಮ ಜಿಲ್ಲೆಗಳಲ್ಲಿ ಕಟ್ಟೆಚ್ಚರ

08:02 PM Aug 02, 2023 | Team Udayavani |

ಸಹರಾನ್ಪುರ (ಯುಪಿ): ನೆರೆಯ ರಾಜ್ಯದಲ್ಲಿ ಕೋಮು ಹಿಂಸಾಚಾರದ ಹಿನ್ನೆಲೆಯಲ್ಲಿ ಹರಿಯಾಣದ ಗಡಿಯಲ್ಲಿರುವ ಉತ್ತರ ಪ್ರದೇಶದ ಸಹರಾನ್‌ಪುರ, ಶಾಮ್ಲಿ ಮತ್ತು ಮುಜಾಫರ್‌ನಗರ ಜಿಲ್ಲೆಗಳಲ್ಲಿ ಎಚ್ಚರಿಕೆ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

Advertisement

ಹರಿಯಾಣ-ಉತ್ತರ ಪ್ರದೇಶ ಗಡಿಯುದ್ದಕ್ಕೂ ಕಣ್ಗಾವಲು ಇಡಲಾಗಿದ್ದು ಬಿಗಿ ಭದ್ರತೆಯ ನಡುವೆ ತಪಾಸಣೆ ನಡೆಸಲಾಗುತ್ತಿದೆ ಎಂದು ಸಹರಾನ್‌ಪುರ ರೇಂಜ್‌ನ ಡಿಐಜಿ ಅಜಯ್ ಕುಮಾರ್ ಸಾಹ್ನಿ ಪಿಟಿಐಗೆ ತಿಳಿಸಿದ್ದಾರೆ. ಅಧಿಕಾರಿಗಳು ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ತಮ್ಮ ತಮ್ಮ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುವಂತೆ ತಿಳಿಸಲಾಗಿದೆ.

ಹರಿಯಾಣದ ನುಹ್‌ನಲ್ಲಿ ಪ್ರಾರಂಭವಾದ ಕೋಮು ಹಿಂಸಾಚಾರವು ಮಂಗಳವಾರ ನೆರೆಯ ಗುರುಗ್ರಾಮ್‌ನಲ್ಲಿ ಹರಡುತ್ತಿದ್ದಂತೆ ಉದ್ರಿಕ್ತ ಗುಂಪೊಂದು ಇಮಾಮ್ ಒಬ್ಬರನ್ನು ಹತ್ಯೆಗೈದು, ಉಪಹಾರ ಗೃಹವನ್ನು ಸುಟ್ಟುಹಾಕಿ ಅಂಗಡಿಗಳನ್ನು ಧ್ವಂಸಗೊಳಿಸಿತ್ತು. ಒಂದು ದಿನದ ಹಿಂದೆ ನುಹ್‌ನಲ್ಲಿ ವಿಶ್ವ ಹಿಂದೂ ಪರಿಷತ್ತಿನ ಮೆರವಣಿಗೆಯ ಮೇಲೆ ನಡೆದ ದಾಳಿಯ ಮೇಲೆ ಜನರು ರಸ್ತೆಯನ್ನು ತಡೆದುದು ಉದ್ವಿಗ್ನತೆಗೆ ಕಾರಣವಾಗಿದೆ.

ನುಹ್‌ನ ಹಿಂಸಾಚಾರದಲ್ಲಿ ಇದುವರೆಗೆ ಆರು ಜನರು ಸಾವನ್ನಪ್ಪಿದ್ದು, 116 ಜನರನ್ನು ಬಂಧಿಸಲಾಗಿದೆ ಮತ್ತು 90 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹರಿಯಾಣ ಸರಕಾರ ತಿಳಿಸಿದೆ.

ಹರಿಯಾಣಕ್ಕೆ ಹೊಂದಿಕೊಂಡಿರುವ ಎಲ್ಲಾ ಪ್ರದೇಶಗಳಲ್ಲಿ ತಪಾಸಣೆ ನಡೆಸಲಾಗುತ್ತಿದ್ದು, ಈ ಜಿಲ್ಲೆಗಳಲ್ಲಿ ಸಾಮಾನ್ಯ ಉಡುಪಿನಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next