Advertisement

ಲೈಟ್‌ಹೌಸ್‌ನಲ್ಲಿ  ಇನ್ನೂ ಆಗಿಲ್ಲ  ನಾಡದೋಣಿ ಬಂದರು

01:00 AM Feb 04, 2019 | Team Udayavani |

ಗಂಗೊಳ್ಳಿ: ನಾಡದೋಣಿ ಮೀನುಗಾರಿಕೆ ನಡೆಯುವ ಪ್ರಮುಖ ಪ್ರದೇಶಗಳಲ್ಲಿ ಗಂಗೊಳ್ಳಿ ಕೂಡ ಒಂದಾಗಿದ್ದು, ಇಲ್ಲಿನ ಲೈಟ್‌ಹೌಸ್‌ ಬಳಿ ಅನೇಕ ವರ್ಷಗಳಿಂದ ನಾಡದೋಣಿಗಳ ನಿಲುಗಡೆಗೆ ಅನುಕೂಲವಾಗುವಂತೆ ಬಂದರು ನಿರ್ಮಾಣ ಬೇಡಿಕೆಯಿದ್ದರೂ, ಇನ್ನೂ ಕೂಡ ಸರಕಾರದಿಂದ ಮನ್ನಣೆ ಸಿಕ್ಕಿಲ್ಲ. 

Advertisement

ಗಂಗೊಳ್ಳಿಯಲ್ಲಿ ನಾಡದೋಣಿ ಹಾಗೂ ಯಾಂತ್ರೀಕೃತ ಎರಡೂ ವಿಧದ ಮೀನುಗಾರಿಕೆ ನಡೆಯುತ್ತಿದ್ದು, ಬೇಸಗೆಯಲ್ಲಿ ನಾಡದೋಣಿಗಳು ಕೂಡ ಗಂಗೊಳ್ಳಿಯ ಬಂದರಿನಲ್ಲಿ ನಿಲುಗಡೆ ಮಾಡಲಾಗುತ್ತದೆ. ಆದರೆ ಮಳೆಗಾಲದಲ್ಲಿ  ಲೈಟ್‌ಹೌಸ್‌ ಬಳಿಯೇ ಎಲ್ಲ ನಾಡದೋಣಿಗಳನ್ನು ನಿಲ್ಲಿಸುತ್ತಾರೆ. ಆದರೆ ಇಲ್ಲಿ ನಿಲುಗಡೆಗೆ ಬೇಕಾದ ಯಾವುದೇ ಸವಲತ್ತುಗಳಿಲ್ಲ. 

600 ನಾಡದೋಣಿಗಳು
ಗಂಗೊಳ್ಳಿಯಲ್ಲಿ 600 ನಾಡದೋಣಿಗಳಿದ್ದು, 1 ಜೋಡು (3 ದೋಣಿ )ನಲ್ಲಿ ತಲಾ 10 ಮಂದಿಯಂತೆ 30 ಜನ ಇರುತ್ತಾರೆ. ಇಲ್ಲಿ ಸರಿ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಈ ನಾಡದೋಣಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. 

ಜಾಗದ ಸಮಸ್ಯೆ
ಗಂಗೊಳ್ಳಿ ಬಂದರಿನಲ್ಲಿ ಪರ್ಸಿನ್‌, ಟ್ರಾಲ್‌ ಬೋಟ್‌ಗಳು, ಗಿಲ್‌ನೆಟ್‌, ಪಾತಿ ಹಾಗೂ ನಾಡದೋಣಿಗಳೆಲ್ಲ ಸೇರಿ ಒಟ್ಟು 3,700 ಕ್ಕೂ ಹೆಚ್ಚು ಬೋಟು ಹಾಗೂ ನಾಡದೊಣಿಗಳಿವೆ. ಈಗ ಇಲ್ಲಿನ ಬಂದರಿನಲ್ಲಿರುವ ಜೆಟ್ಟಿಯು ಕೂಡ 2-3 ಕಡೆ ಕುಸಿದಿರುವುದರಿಂದ ಇಲ್ಲಿ ದೋಣಿಗಳನ್ನು ನಿಲ್ಲಿಸಲು ಜಾಗದ ಸಮಸ್ಯೆಯಾಗುತ್ತಿದೆ. 

ಸಚಿವರಿಗೆ ಮನವಿ
ಗಂಗೊಳ್ಳಿಯ ಲೈಟ್‌ಹೌಸ್‌ ಬಳಿ ನಾಡದೋಣಿಗಳಿಗೆ ಅನುಕೂಲವಾಗುವಂತೆ ಜೆಟ್ಟಿ ನಿರ್ಮಿಸಲು 2-3 ವರ್ಷದ ಹಿಂದೆ ಆಗಿನ ಮೀನುಗಾರಿಕಾ ಸಚಿವರಿಗೆ ಮನವಿ ಸಲ್ಲಿಸಿದ್ದೆವು. ಈಗಿನ ಮೀನುಗಾರಿಕಾ ಸಚಿವರು ಇಲ್ಲಿಗೆ ಭೇಟಿ ಕೊಟ್ಟಾಗಲೂ ಅವರ ಗಮನಕ್ಕೆ ತರಲಾಗಿತ್ತು. ಆದರೆ ಇನ್ನೂ ಯಾವುದೇ ಬೆಳವಣಿಗೆಗಳು ನಡೆಯುತ್ತಿರುವುದು ಕಾಣುತ್ತಿಲ್ಲ. ಇಲ್ಲಿ ಜೆಟ್ಟಿ ಆದರೆ ಮಳೆಗಾಲದಲ್ಲಿ ನಾಡದೋಣಿ ಮೀನುಗಾರರಿಗೆ ತುಂಬ ಪ್ರಯೋಜನವಾಗಲಿದೆ. 
– ಮಂಜು ಬಿಲ್ಲವ,  ಅಧ್ಯಕ್ಷರು, ಗಂಗೊಳ್ಳಿ  ನಾಡದೋಣಿ ಮೀನುಗಾರರ ಸಂಘ

Advertisement

 ಪ್ರಾಮಾಣಿಕ ಪ್ರಯತ್ನ 
ಗಂಗೊಳ್ಳಿಯ ನಾಡದೋಣಿ ಮೀನುಗಾರರ ಈ ಬೇಡಿಕೆ ಬಗ್ಗೆ ಪರಿಶೀಲಿಸಿ ಜೆಟ್ಟಿ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಇದರೊಂದಿಗೆ ಗಂಗೊಳ್ಳಿ ಬಂದರಿನ ಅಭಿವೃದ್ಧಿ ಬಗ್ಗೆಯೂ ಈಗಾಗಲೇ ಬೆಂಗಳೂರಿನಲ್ಲಿ ಮಾತುಕತೆ ನಡೆಸಲಾಗಿದೆ. ಜತೆಗೆ ಗಂಗೊಳ್ಳಿ ಹಾಗೂ ಕುಂದಾಪುರವನ್ನು ಹತ್ತಿರವಾಗಿಸುವ ನಿಟ್ಟಿನಲ್ಲಿ ಕೋಡಿಯಲ್ಲಿ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಿದ್ದೇನೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. 
– ಬಿ.ಎಂ. ಸುಕುಮಾರ್‌ ಶೆಟ್ಟಿ, ಬೈಂದೂರು ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next