ಉಡುಪಿ: ದಿನನಿತ್ಯ ಸಹಸ್ರಾರು ಮಂದಿ ಓಡಾಡುವ ಕಡಿಯಾಳಿಯಿಂದ ಮಣಿಪಾಲದ ಎಂಐಟಿ ವರೆಗಿನ ಬೀದಿದೀಪಗಳು ಉರಿಯುತ್ತಿಲ್ಲ. ದೀಪಗಳು ಉರಿಯದೆ ವರ್ಷಗಳೇ ಕಳೆದಿವೆ. ನಿತ್ಯ ಚಟುವಟಿಕೆಯಿಂದ ಕೂಡಿರುವ ನಗರ ಈಗ ಕತ್ತಲೆಯಲ್ಲಿದೆ ಹಾಗೂ ಉಡುಪಿ ನಗರದ ಬಹುತೇಕ ಕಡೆ ಬೀದಿದೀಪಗಳೇ ಇಲ್ಲ ಇರುವ ದೀಪಗಳು ಉರಿಯುತ್ತಿಲ್ಲ.
ಬೀದಿದೀಪಗಳು ಉರಿಯದೆ ಇರುವುದರಿಂದ ಪರಿಸರದವರಿಗೆ, ಸಾರ್ವ ಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಬಗ್ಗೆ ಪರಿಸರದ ನಾಗರಿಕರು ದೂರುತ್ತಿದ್ದಾರೆ. ವರ್ಷದ ಹಿಂದೆ ರಾ. ಹೆದ್ದಾರಿಯಲ್ಲಿ ರಸ್ತೆ ವಿಸ್ತರಣೆಯ ವೇಳೆ ಅಭಿವೃದ್ಧಿ ಕಾಮಗಾರಿಗೆಂದು ರಸ್ತೆಯನ್ನು ಅಗೆಯಲಾಗಿತ್ತು. ಆಗ ಬೀದಿದೀಪಗಳಿಗೆ ಹಾನಿಯುಂಟಾಗಿತ್ತು. ಕಾಮಗಾರಿ ಮುಗಿದ ಅನಂತರ ಅದನ್ನು ಮರು ಜೋಡಿಸಿಲ್ಲ.
ಮಣಿಪಾಲದಿಂದ ಅಲೆವೂರು ಮೂಲಕ ಹಾದುಹೋಗುವ ವೇಣುಗೋಪಾಲ ದೇವಸ್ಥಾನ, ದಶರಥ ನಗರ, ಕೈಗಾರಿಕಾ ಪ್ರದೇಶ ಮುಂತಾದ ಕಡೆಗಳಿಗೆ ಕತ್ತಲೆಯಲ್ಲೆ ಸಾಗಬೇಕು. ಆ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಪಾದಚಾರಿಗಳು, ವಾಹನ ಸವಾರರು ಇದ್ದು, ಅವರೆಲ್ಲ ಬೀದಿ ದೀಪ ಇಲ್ಲದೆ ಹಲವು ವಿಧದ ತೊಂದರೆ ಅನುಭವಿಸುತ್ತಿದ್ದಾರೆ. ಕತ್ತಲೆಯಲ್ಲೆ ಪಾದಚಾರಿಗಳು ನಡೆದು ಹೋಗುತ್ತಿರುತ್ತಾರೆ. ರಾತ್ರಿ ವೇಳೆ ವಾಹನಗಳಲ್ಲಿ ತೆರಳುವವರು ಕೂಡ ತೊಂದರೆ ಅನುಭವಿಸುತ್ತಾರೆ. ಇನ್ನೇನು ಮಳೆಗಾಲ ಆರಂಭವಾಗಲಿದೆ. ಅವಾಗ ತೊಂದರೆ ಮತ್ತಷ್ಟು ಹೆಚ್ಚುವ ಭೀತಿ ಇದೆ.
ಚತುಷ್ಪಥ ರಸ್ತೆ ಕಾಮಗಾರಿಯಿಂದ ಸಮಸ್ಯೆಯಾಗಿತ್ತು. ಕಾಮಗಾರಿ ಪೂರ್ಣಗೊಂಡರೂ ತಾಂತ್ರಿಕ ಕಾರಣಗಳಿಂದ ಬೀದಿ ದೀಪ ಅಳವಡಿಕೆ ಪೆಂಡಿಂಗ್ನಲ್ಲಿದೆ. ಈ ಬಗ್ಗೆ ಗಮನ ಹರಿಸುತ್ತೇವೆ.
-ಆನಂದ್ ಕಲ್ಲೋಳಿಕರ್, ಪೌರಾಯುಕ್ತ, ನಗರಸಭೆ