Advertisement

ಮುಂಡ್ಕೂರಿನಲ್ಲಿ ಇನ್ನೂ ಆಗದ ಹೊಸ ಮೀನು ಮಾರುಕಟ್ಟೆ

09:07 PM Nov 01, 2020 | mahesh |

ಬೆಳ್ಮಣ್‌: ಮುಂಡ್ಕೂರು ಗ್ರಾಮ ಪಂಚಾಯತ್‌ನ ಮೀನು ಮಾರ್ಕೆಟ್‌ ಕುಸಿದು ಬಿದ್ದು ವರ್ಷ ಕಳೆದರೂ ಇನ್ನೂ ದುರಸ್ತಿ ಅಥವಾ ಪುನರ್‌ ನಿರ್ಮಾಣವಾಗದ ಕಾರಣ ಮೀನು ಮಾರಾಟಗಾರರು ಮತ್ತು ಗ್ರಾಹಕರಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಕಟ್ಟಡ 2019ರ‌ ಆಗಸ್ಟ್‌ 31ರ ಸಂಜೆ ಏಕಾಏಕಿ ಧರಾಶಾಯಿಯಾಗಿತ್ತು. ಆ ಸಂದರ್ಭ ವ್ಯಾಪಾರಿಗಳು, ಗ್ರಾಹಕರು ಸ್ಥಳದಲ್ಲಿಲ್ಲದ ಕಾರಣ ಅವಘಡವೊಂದು ತಪ್ಪಿತ್ತು. ಮಳೆ-ಗಾಳಿ ಇಲ್ಲದೆ ಏಕಾಏಕಿ ಕಟ್ಟಡ ಕುಸಿದಿದ್ದುದರಿಂದ ಕಾಮಗಾರಿ ಗುಣಮಟ್ಟದ ಬಗ್ಗೆ ಸಂಶಯ ಮೂಡಿತ್ತು.

Advertisement

ಪಂಚಾಯತ್‌ ನಿರ್ಲಕ್ಷ್ಯ
ಕಟ್ಟಡಕ್ಕೆ 15 ವರ್ಷಗಳಾಗಿದ್ದು, ಕುಸಿದ ಬಳಿಕ ಮುಂಡ್ಕೂರು ಪಂಚಾಯತ್‌ ಆಡಳಿತ ಮುಗುಮ್ಮಾಗಿ ಕುಳಿತಿತ್ತು. ಈಗ ಆಡಳಿತಾಧಿಕಾರಿಗಳೂ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು ಗ್ರಾಹಕರು, ವ್ಯಾಪಾರಿಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಬ್ಯಾನರ್‌ ಮಾಡು!
ಹೊಸ ಮಾರುಕಟ್ಟೆ ನಿರ್ಮಾಣದ ನಿರೀಕ್ಷೆಯಲ್ಲಿರುವ ಮೀನು ಮಾರಾಟ ಗಾರರು ಬಿಸಿಲು, ಮಳೆಯಿಂದ ರಕ್ಷಣೆಗೆ ತಾತ್ಕಾಲಿಕ ಮಾಡಿಗೆ ಬ್ಯಾನರ್‌ ಹಾಕಿದ್ದಾರೆ. ಮುಂಡ್ಕೂರಿನ ಮೀನು ಮಾರುಕಟ್ಟೆಯ ಅವ್ಯವಸ್ಥೆಯಿಂದಾಗಿ ಮೀನು ಮಾರಾಟಗಾರರು ಎಲ್ಲೆಂದರಲ್ಲಿ ಮೀನು ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ. ಹಲವು ಜನೋಪಯೋಗಿ ಕಾರ್ಯಗಳ ಮೂಲಕ ಪಂಚಾಯತ್‌ ಹೆಸರು ಮಾಡಿದ್ದರೂ ವ್ಯವಸ್ಥಿತ ಮೀನುಮಾರುಕಟ್ಟೆ ವಿಚಾರದಲ್ಲಿ ದಿವ್ಯ ನಿರ್ಲಕ್ಷ್ಯ ವಹಿಸುತ್ತಿರುವುದು ಜನರಿಗೂ ಅಚ್ಚರಿ ತಂದಿದೆ.

ದುರಸ್ತಿಯ ಭರವಸೆ
ಈಗಾಗಲೇ ಈ ಮಾರ್ಕೆಟ್‌ ಕಟ್ಟಡ ದುರಸ್ತಿಯ ಬಗ್ಗೆ ಪಂಚಾಯತ್‌ನ ಗಮನಕ್ಕೆ ತರಲಾಗಿದೆ. ದುರಸ್ತಿ ಮಾಡುವ ಭರವಸೆ ನೀಡಿದ್ದಾರೆ. ಬೇಗ ಮಾಡಿದರೆ ಉತ್ತಮ.
-ರಝಾಕ್‌, ಮೀನು ವ್ಯಾಪಾರಿ

ಮರು ನಿರ್ಮಾಣ
ಪಂಚಾಯತ್‌ ಅನುದಾನ ಈ ಮಾರ್ಕೆಟ್‌ ನಿರ್ಮಾಣಕ್ಕೆ ಸಾಲದು. ವಿಶೇಷ ಅನುದಾನಕ್ಕೆ ಪ್ರಯತ್ನಿಸಿ ಮರು ನಿರ್ಮಾಣ ಮಾಡಲಾಗುವುದು. ಈಗಾಗಲೇ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿದ್ದು ಅಂದಾಜು ಪಟ್ಟಿ ತಯಾರಿಸಲಾಗಿದೆ. ಅನುದಾನದ ಭರವಸೆ ಸಿಕ್ಕಿದೆ.
-ರವಿರಾಜ್‌, ಮುಂಡ್ಕೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next