Advertisement

Consumer Commission: ಮೃತನ ಪತ್ನಿಗಲ್ಲ , ನಾಮಿನಿಯಾಗಿರುವ ತಂದೆಗೇ ವಿಮೆ ಹಣ

11:07 PM Oct 05, 2023 | Team Udayavani |

ಧಾರವಾಡ: ವಿಮೆ ಹಣವನ್ನು ಮೃತಪಟ್ಟ ವ್ಯಕ್ತಿಯ ಪತ್ನಿಗೆ ನೀಡಿರುವ ವಿಮಾ ಕಂಪೆನಿಯ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಜಿಲ್ಲಾ ಗ್ರಾಹಕರ ಆಯೋಗ, ಪಾಲಿಸಿಯ ನಾಮಿನಿದಾರರಾದ ಮೃತಪಟ್ಟ ವ್ಯಕ್ತಿಯ ತಂದೆಗೇ ಪಾವತಿಸುವಂತೆ ಸೂಚಿಸಿದೆ.

Advertisement

2017ರಲ್ಲಿ ಸರ್ವ ಸುರಕ್ಷಾ ಲಾಭದ ವಿಮೆ ಪಾಲಿಸಿಯನ್ನು ಎಚ್‌ಡಿಎಫ್‌ಸಿ ಎರ್ಗೋ ವಿಮಾ ಕಂಪೆನಿಯಿಂದ ಹುಬ್ಬಳ್ಳಿಯ ಆನಂದ ನಗರ ನಿವಾಸಿಯಾಗಿದ್ದ ಆಸೀಫ್‌ ಮುಲ್ಲಾ ಪಡೆದಿದ್ದರು. ಅದು 10 ಲಕ್ಷ ಮೌಲ್ಯದ ಪಾಲಿಸಿಯಾಗಿತ್ತು. ಅದಕ್ಕೆ ವಿಮಾದಾರ 7,646 ರೂ. ಪ್ರೀಮಿಯಂ ಕಟ್ಟಿದ್ದು, ತಂದೆ ಅಲ್ಲಾಭಕ್ಷ ಮುಲ್ಲಾ ಅವರನ್ನು ನಾಮಿನಿಯನ್ನಾಗಿ ಮಾಡಿದ್ದರು. 2019ರ ಡಿ.19ರಂದು ಗದಗ ಹುಲಕೋಟಿ ಹತ್ತಿರ ನಡೆದ ಅಪಘಾತದಲ್ಲಿ ವಿಮಾದಾರ ಆಸೀಫ್‌ ಮೃತರಾಗಿದ್ದರು. ಗದಗ ಠಾಣೆಯಲ್ಲಿ ಲಾರಿ ಚಾಲಕನ ಮೇಲೆ ಪ್ರಕರಣ ದಾಖಲಾಗಿತ್ತು. ಈ ಎಲ್ಲ ದಾಖಲೆಗಳನ್ನು ಪಡೆದು ನಾಮಿನಿ ಆಗಿದ್ದ ತಂದೆ ಅಲ್ಲಾಭಕ್ಷ ಮುಲ್ಲಾ ಅವರು, ಮೃತನ ವಿಮಾ ಕ್ಲೇಮ್‌ ಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಕ್ಲೇಮ್‌ ಅರ್ಜಿ ಪರಿಗಣಿಸದೆ ವಿಮಾ ಕಂಪೆನಿಯು ಮೃತನ ಪತ್ನಿ ನೂರಜಹಾನಬಿ ಅವರಿಗೆ 10 ಲಕ್ಷ ರೂ. ವಿಮೆ ಮೊತ್ತವನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ತಂದೆಯು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ದೂರಿನ ಬಗ್ಗೆ ವಿಚಾರಣೆ ನಡೆಸಿದ ಅಧ್ಯಕ್ಷರಾದ ಈಶಪ್ಪ ಭೂತೆ ಮತ್ತು ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ, ಪ್ರಭು ಹಿರೇಮಠ ಒಳಗೊಂಡ ಆಯೋಗವು, ದೂರುದಾರ ಅಲ್ಲಾಭಕ್ಷ ಮೃತ ಆಸೀಫ್‌ ಮುಲ್ಲಾ ಅವರ ತಂದೆ ಇದ್ದು, ವಿಮಾ ಪಾಲಿಸಿಗೆ ನಾಮಿನಿಯೂ ಆಗಿದ್ದಾರೆ. ವಿಮಾದಾರ ಮೃತನಾದಲ್ಲಿ ಪಾಲಿಸಿ ಹಣವನ್ನು ಪಡೆಯಲು ನಾಮಿನಿ ಮಾತ್ರ ಅರ್ಹರಿದ್ದಾರೆ. ನಾಮಿನಿಯನ್ನು ಬದಿಗಿಟ್ಟು ಮೃತನ ಪತ್ನಿಗೆ ಹಣ ಸಂದಾಯ ಮಾಡಿರುವುದು ವಿಮಾ ನಿಯಮಕ್ಕೆ ವಿರುದ್ಧವಾಗಿದೆ. ನಾಮಿನಿಯಾಗಿರುವ ದೂರುದಾರರು ಪಾಲಿಸಿ ಮೊತ್ತ 10 ಲಕ್ಷ ಪಡೆಯಲು ಅರ್ಹರಿದ್ದಾರೆ ಎಂದು ತೀರ್ಪಿನಲ್ಲಿ ತಿಳಿಸಿದೆ.

ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ದೂರುದಾರನಿಗೆ ವಿಮಾ ಮೊತ್ತ 10 ಲಕ್ಷ ರೂ. ನೀಡಬೇಕು. ದೂರುದಾರರಿಗೆ ಆಗಿರುವ ಅನನುಕೂಲ ಮತ್ತು ಮಾನಸಿಕ ತೊಂದರೆಗಾಗಿ 50 ಸಾವಿರ ರೂ. ಪರಿಹಾರ ಮತ್ತು 5 ಸಾ. ರೂ. ಅನ್ನು ಪ್ರಕರಣದ ಖರ್ಚು ಬಾಬ್ತು ನೀಡುವಂತೆ ಆಯೋಗ ತಿಳಿಸಿದೆ. ಒಂದು ತಿಂಗಳ ಒಳಗಾಗಿ ಹಣ ನೀಡದಿದ್ದಲ್ಲಿ ತೀರ್ಪು ನೀಡಿದ ದಿನಾಂಕದಿಂದ 10 ಲಕ್ಷ ರೂ. ಮೇಲೆ ಶೇ.8 ಬಡ್ಡಿ ಸಹಿತ ನೀಡಬೇಕು ಎಂದು ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next