Advertisement

ಅವ್ವನಿಗೆ ಕೊಟ್ಟ ಮಾತು ಪಾಲಿಸಲು ಗುಡಿ ಪ್ರವೇಶಿಸುತ್ತಿಲ್ಲ

01:33 AM Feb 10, 2019 | |

ವಿಜಯಪುರ: ‘ಬಾಲಕನಾಗಿದ್ದಾಗ ನನ್ನ ಅವ್ವನಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಇಂದಿಗೂ ನಾನು ದೇವಾಲಯ ಪ್ರವೇಶ ಮಾಡಿಲ್ಲ, ಮಾಡುವುದೂ ಇಲ್ಲ’ ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಹೇಳಿದ್ದಾರೆ.

Advertisement

ನಗರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ ಅವರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಬಾಲಕನಾಗಿದ್ದಾಗ ನಾನು ನಮ್ಮವ್ವನ ಜತೆ ದೇವಸ್ಥಾನಕ್ಕೆ ಹೋಗಿದ್ದ ಸಂದರ್ಭದಲ್ಲಿ ಅದೊಂದು ದಿನ ಗುಡಿ ಪ್ರವೇಶ ಮಾಡಿದ್ದೆ. ಇದನ್ನು ಕಂಡ ನನ್ನ ಅವ್ವ ನೀನು ಸೇರಿ ನಾವು ಎಂದೂ ದೇವರ ಗುಡಿ ಪ್ರವೇಶ ಮಾಡಬಾರದು. ಇದರಿಂದ ಕೆಲವರ ಮನಸ್ಸಿಗೆ ನೋವಾಗುತ್ತದೆ. ನಮ್ಮನ್ನು ಪಾಪ ಕಾಡುತ್ತದೆ. ಹೀಗಾಗಿ ಇತರರಿಗೆ ನೋವಾಗುವ ಕೆಲಸವನ್ನು ನಾವು ಎಂದೂ ಮಾಡಬಾರದು ಎಂದು ನನಗೆ ಹೇಳಿದ್ದಳು. ತಾಯಿಗೆ ಕೊಟ್ಟ ಮಾತು ಪಾಲಿಸುವ ಸಂಸ್ಕಾರ ಮುಂದುವರಿಸಲು ನಾನು ಅಂದಿನಿಂದಲೇ ಪಾಲಿಸಿಕೊಂಡು ಬರುತ್ತಿದ್ದೇನೆ. ಹಾಗಂತ ನಾನೇನು ಯಾವುದೇ ದಲಿತರು ದೇವಸ್ಥಾನ ಪ್ರವೇಶ ಮಾಡಬೇಡಿ ಎಂದು ಹೇಳಿಕೊಂಡು ಬಂದಿಲ್ಲ ಎಂದು ತಾವು ಯಾವುದೇ ದೇವಸ್ಥಾನ ಪ್ರವೇಶಿಸದ ಕುರಿತು ಮಾಡುತ್ತಿರುವ ಟೀಕೆಗಳಿಗೆ ಭಾವುಕರಾಗಿ ಹೇಳಿದರು.

ವಾಜಪೇಯಿ ಸಾಹೇಬರು ಪ್ರಧಾನಿ ಆಗಿದ್ದಾಗ ಮಂತ್ರಿ ಮಾಡುತ್ತೇನೆ ನಮ್ಮ ಪಕ್ಷಕ್ಕೆ ಬಂದು ಬಿಡು ಎಂದು ಕರೆದರೂ ನನ್ನ ರಾಜಕೀಯ ಆರಾಧ್ಯರಾಗಿದ್ದ ರಾಮಕೃಷ್ಣ ಹೆಗಡೆ ಅವರನ್ನು ಬಿಟ್ಟು ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೆ. ಹೆಗಡೆ ಸಾಹೇಬರು ತೀರಿದ ಬಳಿಕ ಬಿಜೆಪಿ ಸೇರಿದ್ದೇನೆ.

● ರಮೇಶ ಜಿಗಜಿಣಗಿ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next