Advertisement

ಅವಕಾಶವಾದಿಯಲ್ಲ, ಬದಲಾವಣೆ ಅನಿವಾರ್ಯವಾಗಿತ್ತು: ಎ.ಮಂಜು

10:48 AM Apr 14, 2019 | keerthan |

ಹಾಸನ ಲೋಕಸಭಾ ಕ್ಷೇತ್ರದದಲ್ಲಿ ಬಿಜೆಪಿಯಿಂದ ಎ.ಮಂಜು ಹಾಗೂ ಕಾಂಗ್ರೆಸ್‌ -ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್‌ ರೇವಣ್ಣ ಅವರು ಸ್ಪರ್ಧಿಸಿದ್ದಾರೆ. ಇಬ್ಬರೂ ಅಭ್ಯರ್ಥಿಗಳು ತಮ್ಮದೇ ಆದ ತತ್ವ ಸಿದ್ಧಾಂತ ವನ್ನಿಟ್ಟುಕೊಂಡು ಪ್ರಚಾರ ನಡೆಸುತ್ತಿದ್ದಾರೆ. ತಮ್ಮ ಸ್ಪರ್ಧೆ ಹಾಗೂ ಮೂಂದಿನ ಯೋಜನೆಗಳ ಬಗ್ಗೆ ಉದಯವಾಣಿಯೊಂದಿಗೆ ಬಿಜೆಪಿ ಅಭ್ಯರ್ಥಿ ಎ.ಮಂಜು ಮಾತನಾಡಿದ್ದಾರೆ.

Advertisement

ಪ್ರಶ್ನೆ: ನೀವು ಪಕ್ಷಾಂತರ ಮಾಡುವ ಅವಕಾಶವಾದಿ ರಾಜಕಾರಣಿ ಎಂಬ ಆರೋಪವಿದೆ. ಇದನ್ನು ಮತದಾರೆದುರು ಹೇಗೆ ಎದುರಿಸುತ್ತೀರಿ?
* ಎ.ಮಂಜು: ನಾನು ಅವಕಾಶವಾದಿ ರಾಜಕಾರಣಿ ಅಲ್ಲ. ದಶಕಗಳ ಕಾಲ ಬದ್ಧ ವೈರಿಗಳಾಗಿದ್ದ ಕಾಂಗ್ರೆಸ್‌ – ಜೆಡಿಎಸ್‌ ಚುನಾವಣೆಯಲ್ಲಿ ಮಾಡಿಕೊಂಡ ಮೈತ್ರಿ ಸಮಾಜಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ. ಇದರಿಂದ 2ನೇ ಹಂತದ ನಾಯಕರು ಬೆಳೆಯಲು ಅವಕಾಶವೇ ಸಿಗಲ್ಲ. ಜೆಡಿಎಸ್‌ನ ಕುಟುಂಬ ರಾಜಕಾರಣಕ್ಕೆ ಚುನಾವಣಾ ಮೈತ್ರಿ ಪೂರಕವಾಗುವುದರಿಂದ ಅನಿವಾರ್ಯವಾಗಿ ನಾನು ಬಿಜೆಪಿ ಸೇರಿದ್ದೇನೆ.

* ಪ್ರಶ್ನೆ: ಕುಟುಂಬ ರಾಜಕಾರಣ ವಿಷಯದಲ್ಲಿ ದೇವೇಗೌಡರ ಕುಟುಂಬವನ್ನೇ ಟಾರ್ಗೆಟ್‌ಮಾಡುವುದು ಏಕೆ?
* ಎ.ಮಂಜು: ಅನುಭವಿಗಳಿದ್ದರೆ ಕುಟುಂಬ ರಾಜಕಾರಣ ತಪ್ಪಲ್ಲ. ಈಗ ನನ್ನ ಮಗನೂ ಜಿಲ್ಲಾ ಪಂಚಾಯಿತಿ ಸದಸ್ಯ. ಆದರೆ ಈಗ ನನ್ನ ಎದುರಾಳಿ ಯಾಗಿರುವ ಜೆಡಿಎಸ್‌ ಅಭ್ಯರ್ಥಿಗೆ ರಾಜಕೀಯದ ಅನುಭವವೇ ಇಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದಲ್ಲಿ ಸೂಟ್‌ಕೇಸ್‌ ಕೊಟ್ಟವರಿಗೆ ಟಿಕೆಟ್‌ ಕೊಡಲಾಗುತ್ತಿದೆ ಎಂದು ಹೇಳಿ ವಿವಾದ ಮಾಡಿಕೊಂಡಿದ್ದ. ಇಂತಹವರು ಪಾರ್ಲಿಮೆಂಟಿಗೆ ಹೋದರೆ ಏನು ಗತಿ ಎಂಬುದೇ ನನ್ನ ಆತಂಕ.

*ಪ್ರಶ್ನೆ: ನೀವು ಮಂತ್ರಿಯಾಗಿದ್ದಾಗ ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ ಎಂಬ ನಿಮ್ಮ ಎದುರಾಳಿಗಳ ಆರೋಪಕ್ಕೆ ಉತ್ತರವೇನು?
* ಎ.ಮಂಜು: ನಾನು ಮಂತ್ರಿಯಾಗಿದ್ದ ಎರಡು ವರ್ಷಗಳ ಅವಧಿಯಲ್ಲಿ ಹಾಸನ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಯ 160 ಕೋಟಿ ರೂ. ಅಂದಾಜಿನ ಅಮೃತ್‌ ಯೋಜನೆ, ರಸ್ತೆ, ಕುಡಿಯುವ ನೀರು, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಜಿಲ್ಲೆಯಲ್ಲಿ ಸುಮಾರು 6 ರಿಂದ 7 ಸಾವಿರ ಕೋಟಿ ರೂ. ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದೇನೆ. ಅರಕಲಗೂಡು ವಿಧಾನಸಭಾ ಕ್ಷೇತ್ರವೊಂದಕ್ಕೇ 2,500 ಕೋಟಿ ರೂ. ಅನುದಾನ ಬಂದಿತ್ತು. ನನ್ನ ವಿರೋಧಿಗಳು ಅಭಿವೃದ್ಧಿ ಸಹಿಸದೇ ಆರೋಪ ಮಾಡುತ್ತಾರೆ.

*ಪ್ರಶ್ನೆ: ಸಂಸದರಾದರೆ ನಿಮ್ಮ ಆದ್ಯತೆಗಳೇನು?
*ಎ.ಮಂಜು: ಜಿಲ್ಲೆಯ ಎಲ್ಲಾ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಪೂರೈಸಲು ಬಹುಗ್ರಾಮ ಯೋಜನೆಗೆ ಕೇಂದ್ರ ಸರ್ಕಾರ ದಿಂದ ಅನುದಾನ ಕೊಡಿಸುವುದು. ಏತ ನೀರಾವರಿ ಯೋಜನೆಗಳ ಮೂಲಕ ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳುವೆ.

Advertisement

* ಪ್ರಶ್ನೆ: ಹಾಸನಕ್ಕೆ ಐಐಟಿ ಅಗತ್ಯವೇ ಇಲ್ಲ ಎನ್ನಲು ಕಾರಣವೇನು?
*ಎ.ಮಂಜು: ಹಾಸನಕ್ಕೆ ಐಐಟಿ ಬೇಡ ಎಂದಲ್ಲ. ಒಂದು ದಶಕದಿಂದ ಐಐಟಿಗಾಗಿ ರೈತರ ಜಮೀನು ಸ್ವಾಧೀನಪಡಿಸಿ ಕೊಂಡು ಕಾಯ್ದಿರಿಸುವ ಅಗತ್ಯವಿಲ್ಲ. ಆ ಭೂಮಿ ರೈತರಿಗೆ ಕೊಡುವುದು ಸೂಕ್ತ ಎಂದು. ಅಧಿಕಾರವಿಲ್ಲ ದಿದ್ದಾಗ ಐಐಟಿಗಾಗಿ ಹೋರಾಡುವ ದೇವೇಗೌಡರು ಪ್ರಧಾನಿಯಾಗಿದ್ದಾಗಲೇ ಹಾಸನಕ್ಕೆ ಐಐಟಿ ಮಂಜೂರು ಮಾಡಿಲ್ಲ. ಮುಂದಿನ ದಿನಗಳಲ್ಲಿ ಹಾಸನಕ್ಕೂ ಐಐಟಿ ಬರಬಹುದು.

*ಪ್ರಶ್ನೆ: ಎರಡು ವಾರದಿಂದ ಬಿರುಸಿನ ಪ್ರಚಾರ ನಡೆಸುತ್ತಿದ್ದೀರಿ ಪರಿಸ್ಥಿತಿ ಹೇಗಿದೆ?
*.ಮಂಜು: ಇಡೀ ಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ.ಬಿಜೆಪಿಯ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ನ ಬಹುತೇಕ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿಯ ವಿರುದ್ಧವಿದ್ದು ನನ್ನ ಜೊತೆಗಿದ್ದಾರೆ. 2019ರಲ್ಲಿ ಮೋದಿ ಮತ್ತೆ ಪ್ರಧಾನಿಯಾಗಲು ಕ್ಷೇತ್ರದ ಬಹುತೇಕ ಮತದಾರರು ನನ್ನ ಪರವಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next